Thursday, February 25, 2010

ಇಟ್ಸ್ ದ ಟೈಮ್ ಟು ಸೀರಿಯಲ್...!


ಅಬ್ಬಾ ಈ ಟೀವಿಯ ಠೀವಿ ಅದೇನ್ರೀ...? ಚಾನೆಲ್ಲುಗಳನ್ನು ತಿರುಗಿಸಿದಷ್ಟೂ ಮುಗಿಯದ ಕಾರ್ಯಕ್ರಮಗಳ ಸರಮಾಲೆ. ಒಂದಕ್ಕಿಂತ ಮತ್ತೊಂದರದ್ದು ಭಿನ್ನ, ವಿಭಿನ್ನ. ಅದಕ್ಕೇ ನಮ್ ಜನ ಬಿಟ್ಟ ಕಣ್ಣು ಬಿಟ್ಟಂಗೇ ಟಿವಿ ನೋಡ್ತಾ ಕೂರೋದು. ನನಗಂತೂ ಇತ್ತೀಚೆಗೆ ಇದ್ರ ಪ್ರತ್ಯಕ್ಷ ದರ್ಶನ ಪದೇ ಪದೇ ಆಗ್ತಿರೋದ್ರಿಂದ ಈ ಬಗ್ಗೆ ಹೇಳ್ಲೇಬೇಕು.

ನಾನು ಮೊದಲಿದ್ದ ಪಿಜಿಯಲ್ಲಿ ಟಿವಿ ಇಟ್ಟ ಕೋಣೆ ರಾತ್ರಿ 10ಕ್ಕೆಲ್ಲಾ ಬಂದ್ ಆಗ್ತಿದ್ರಿಂದ ಅಲ್ಲಿ ಟಿವಿ ನೋಡೋಕೆ ಹೆಚ್ಚಿನವರ್ಯಾರೂ ಹೋಗ್ತಿರ್ಲಿಲ್ಲ. ಸಂಜೆ ವೇಳೆ ಸಮಯ ಸಿಕ್ಕಾಗ ಕೆಲವು ಸೀರಿಯಲ್ ಗಳನ್ನು ನೋಡೋಕೆ ಹುಡುಗೀರು ಬರ್ತಿದ್ರು. ಆದ್ರೆ ಒಬ್ಬೊಬ್ಬರದ್ದು ಒಂದೊಂದು ಟೈಮ್ ಅಂತ ಅವರವರಲ್ಲೇ ಮ್ಯೂಚುಯಲ್ ಅಂಡರ್ಸ್ಟ್ಯಾಂಡಿಂಗ್ ಇದ್ದಿದ್ರಿಂದ ಅಲ್ಲಿ ಟಿವಿ ನೋಡೋಕೆ ಹೆಚ್ಚಿನ ಜಗಳಗಳು ಇರ್ತಾನೇ ಇರ್ಲಿಲ್ಲ. ಆದ್ರೆ ಈಗಿರೋ ಪೇಯಿಂಗ್ ಗೆಸ್ಟ್ ನಲ್ಲಿ ನೋಡ್ಬೇಕು. ಅಯ್ಯಪ್ಪಾ! ಇಲ್ಲಿ ರಿಮೋಟ್ ಅನ್ನೋದು ನಮ್ಮ ರಾಜಕಾರಣಿಗಳ ಅಧಿಕಾರದ ಕುರ್ಚಿಗೆ ಸಮ! ನಾನ್ಹೇಳೋದು ಅತಿಯಾಯ್ತು ಅಂತ ಅನ್ನಿಸಿದ್ರೆ ನೀವೇ ಒಮ್ಮೆ ಬಂದು ನೋಡಬಹುದು!

ತೀರಾ ಸೀರಿಯಸ್ ಆಗಿ ಸೀರಿಯಲ್ ಗಳನ್ನು ನೋಡೋ ಅಭ್ಯಾಸ ಇಲ್ಲವಾದ್ದರಿಂದ ನಾನು ಈ ಸಮರದಲ್ಲಿ ಭಾಗಿಯಲ್ಲ. ದಿನದ ಬಹುತೇಕ ಸಮಯ ಟಿವಿ ಆನ್ ಇದ್ದೇ ಇರುತ್ತೆ ನಮ್ ಪಿಜಿಯಲ್ಲಿ. ಅದರಲ್ಲೂ ಪ್ರೈಮ್ ಟೈಮ್ ನಲ್ಲಿ ರಿಮೋಟ್ ಗಾಗಿ ನಡೆಯೋ ರಾಜಕೀಯ ನೋಡ್ಬೇಕು! ಇಲ್ಲಿ 3 ಟೀಮು. ಒಂದು ಅತಿ ಪ್ರಭಾವಿ ತಂಡ, ಹೇಳ್ಕೊಳ್ಳೋಕೆ ಅಚ್ಚ ಕನ್ನಡಿಗರು! ಇವ್ರೆಲ್ಲಾ ಸ್ಟಾರ್ ಪ್ಲಸ್ ಫ್ಯಾನುಗಳು. 2ನೇದು ಆಂಧ್ರ ಮೂಲದ ಮೂರ್ನಾಲ್ಕು ಹುಡುಗೀರ ಟೀಮು. ಪ್ರೈಮ್ ಟೈಮ್ ಗಿಂತ ಮುಂಚಿನ ಸ್ಲಾಟ್ ಇವರಿಗೇ ಕೊಡ್ದಿದ್ರೆ ಮುಗೀತು ಕಥೆ! ಇನ್ನು 3ನೇ ಟೀಮಲ್ಲಿ ಇಬ್ರೇ. ನಾರ್ಥ್ ಇಂಡಿಯನ್ಸ್. ಬೇಕಾದಾಗ ಮಾತ್ರ ಹಲ್ಲು ಕಿಸಿದು ಮಾತಾಡಿಸೋ ಇವ್ರ ರಿಮೋಟ್ ಬೇಡಿಕೆಗೆ ಕನ್ನಡಿಗರ ಗ್ಯಾಂಗು ಸೊಪ್ಪು ಹಾಕದ್ದರಿಂದ ಮೊದಲ ಗ್ಯಾಂಗ್ ಸಾಕಪ್ಪಾ ಅಂತ ರಿಮೋಟ್ ಇಟ್ಮೇಲೇನೇ ಇವ್ರಿಗೆ ನೆಚ್ಚಿನ ಚಾನೆಲ್ ವೀಕ್ಷಿಸೋ ಸೌಭಾಗ್ಯ.

ಊಟದ ತಟ್ಟೆ ಖಾಲಿ ಆದ್ರೆ ಮತ್ತೆ ಅನ್ನ, ಸಾರು ಹಾಕ್ಕೊಳ್ಳೋಕೋ ಅಥವಾ ಊಟ ಮುಗಿಸಿ ಕೈತೊಳೆಯೋಕೆ ಹೋಗೋದಕ್ಕು ಮುಂಚೆ ತಮ್ಮ ಟೀಮಿನವರಲ್ಲೇ ಒಬ್ರ ಸುಪರ್ದಿಗೆ ರಿಮೋಟ್ ಕೊಟ್ಟೇ ಹೋಗೋದು. ಅದೇನಾದ್ರೂ ಬೇರೇಯವ್ರ ಕೈ ಸೇರಿತೋ ಮುಗೀತು ಕಥೆ, ರಿಮೋಟ್ ಬಿಟ್ಟು ಕೊಟ್ಟವರಿಗೆ ತಪರಾಕಿ ಶುರು!

ನಾನು ಮೊದಲು ಈ ಪಿಜಿಯಲ್ಲಿ ಇಷ್ಟೊಂದು ಆರಾಮವಾಗಿ ಟಿವಿ ನೋಡ್ಬಹುದಲ್ಲಾ ಸದ್ಯ. ಇನ್ಮೇಲೆ ನ್ಯೂಸ್ ಚಾನೆಲ್ ಗಳ ವೀಕ್ಷಣೆಗೆ ನೋ ಪ್ರಾಬ್ಲಮ್ ಅಂತ ಒಳಗೊಳಗೇ ಅದೆಷ್ಟು ಖುಷಿ ಪಟ್ಟಿದ್ದೆ?.. ! ಛೇ...ನನ್ನ ಆಸೆಗೆ ಕೆಲವೇ ದಿನಗಳಲ್ಲಿ ಒಂದು ಲೋಡು ಮಣ್ಣು ಹಾಕಿ ಸಮಾಧಿ ಮಾಡ್ಬಿಟ್ರು ಅಲ್ಲಿನ ಹುಡುಗೀರು. ಮೊದ ಮೊದಲು ಡಿಸ್ಕಷನ್ನು ಅದು ಇದು ಅಂತ ಹಾಕಿದ್ರೆ ಹೋಗ್ಲಿ ಪಾಪ ಅಂತ ನಂಜೊತೆ ಒಂದಿಬ್ರು ನೋಡ್ತಿದ್ರು. ನಮ್ಗೂ ನ್ಯೂಸ್ ಇಷ್ಟಾನಪ್ಪಾ ಅಂತ ರೈಲು ಹತ್ತಿಸಿದ್ರು. 10 ನಿಮಿಷ ಬಿಟ್ಟು ತಿರುಗಿ ನೋಡಿದ್ರೆ ಇಡೀ ಕೋಣೆ ಖಾಲಿ ನಾನೊಬ್ಳೇ ಟಿವಿ ಮುಂದೆ ಇರ್ತಿದ್ದೆ! ಯಾವಾಗ ನನ್ನ ನ್ಯೂಸ್, ಚರ್ಚೆಗಳ ವೀಕ್ಷಣೆ ದಿನಾ ಸಂಜೆ ಶುರುವಾಯ್ತೋ ಇವ್ರಿಗೆ ಪೀಕಲಾಟ! ನನಗೂ ಗೊತ್ತಾಯ್ತು. ಓಹ್! ಅವರಲ್ಲಿ ಒಬ್ರಿಗಾದ್ರೂ ಸುದ್ದಿ, ಮಾಹಿತಿ ತಿಳಿಯೋ ಕುತೂಹಲವಿರ್ಲೀ ಸಾಸಿವೆ ಕಾಳಷ್ಟು ಇಂಟ್ರೆಸ್ಟೂ ಇಲ್ಲ ಅಂತ ತಿಳಿಯೋಕ್ಕೆ ಜಾಸ್ತಿ ಟೈಮ್ ಹಿಡೀಲಿಲ್ಲ. ಆಮೇಲೆ ಹೇಳ್ತಾರೆ ಲೇ ನೀನು ಬಂದ್ಮೇಲೇನೇ ನಾವು ನ್ಯೂಸ್ ನೋಡ್ತಿರೋದು ಅಂತ. ಧನ್ಯೋಸ್ಮಿ.

ಇವ್ರಿಗೆಲ್ಲಾ ಮೆಗಾ ಸೀರಿಯಲ್ ಗಳನ್ನ ನೋಡೋ ಭೂತ ಅದ್ಯಾವ ಪರಿ ಮೆಟ್ಟಿಕೊಂಡಿದೆ ಅಂದ್ರೆ ಆ ದೇವ್ರೇ ಬಂದ್ರೂ ಆ ದೆವ್ವ ಬಿಡಿಸೋದು ಕಷ್ಟಾ ರೀ ಕಷ್ಟ ಕಷ್ಟ. ಈ ಸೀರಿಯಲ್ ಗಳನ್ನು ನೋಡೋವಾಗ ಯಾರಾದ್ರೂ ನಮ್ ಪಿಜಿ ಅಕ್ಷತಾನ ಕೂಗಿ ನೋಡಿ. ಬಿಟ್ಟ ಬಾಯಿ ಮುಚ್ಚೋದೂ ಇಲ್ಲ, ತೆರೆದ ಕಿವಿ ಕೇಳೋದೂ ಇಲ್ಲ. ನಾಲ್ಕೈದು ಸಲ ಕೂಗಿ ಸಾಕಾಗಿ ಎದುರಲ್ಲಿ ಹೋಗಿ ನಿಂತ್ಮೇಲೇನೆ ಅವಳು ರೆಸ್ಪಾನ್ಸ್ ಮಾಡೋದು. ಎಷ್ಟೋ ಸಲ ನಾನು ಆಫೀಸ್ ಮುಗಿಸಿಕೊಂಡು ವಾಪಸ್ಸಾದಾಗ ಊಟ ಶುರು ಮಾಡಿ, ಊಟ ಮುಗಿಸೋ ಹೊತ್ತಾದ್ರೂ ಅವಳಿಗೆ ನಾನು ಬಂದದ್ದೇ ಗೊತ್ತಾಗಿರೋಲ್ಲ. ಧಾರಾವಾಹಿ ನಡುವೆ ಬ್ರೇಕ್ ಬಂದಾಗಲೇ ಅವಳು ಕಣ್ಣು ಮಿಟುಕಿಸೋದು!

ಇನ್ನು ಗಾನ. ಈ ಕೂರ್ಗಿ ಹುಡುಗಿ ನಾನ್ ಹೇಳಿದ್ ಫಸ್ಟ್ ಟೀಮಿನ ಅಧಿನಾಯಕಿ ಅಂತಾನೇ ತಿಳ್ಕೊಳ್ಳಿ. ಅಕಸ್ಮಾತ್ ಆಂಧ್ರ ಹುಡುಗೀರ ಟೈಮ್ ಅಪ್ ಆದ್ಮೇಲೂ ರಿಮೋಟ್ ಕೈಗೆ ಸಿಗ್ದಿದ್ರೆ ಇವಳ ವರಸೆ ನೋಡ್ಬೇಕು! ತನ್ನ ನೆಚ್ಚಿನ ಸೀರಿಯಲ್ ‘ಬಿದಾಯಿ’ ಟೈಮ್ ಗೆ ಸರ್ಯಾಗಿ ಕರೆಂಟ್ ಕೈಕೊಟ್ರೆ ನೋಡ್ಬೇಕು ಇವ್ಳ ಪೀಕಲಾಟಾನಾ. ಊಟ ತಿಂಡೀಲಿ ಏರುಪೇರಾದ್ರೆ ಅಡ್ಜೆಸ್ಟ್ ಮಾಡ್ಕೊಂಡಾರು, ಆದ್ರೆ ಸೀರೀಯಲ್ ಮಿಸ್ ಮಾಡ್ಕೊಳ್ಳೋರಲ್ಲಾ ಇವ್ರು.

ಮೊನ್ನೆ ಕರೆಂಟ್ ಹೋಗಿದ್ದು ಒಂದೂವರೆ ಗಂಟೆ ಕಳೆದ್ರೂ ಬರ್ಲೇ ಇಲ್ಲ. ‘ಬಿದಾಯಿ’ ಮುಗಿಯೋಕೆ 3 ನಿಮಿಷ ಬಾಕಿ ಇರೋವಾಗ ಬಂತು. ಈ ಹುಡುಗೀರ ಚಡಪಡಿಕೆ ಅದ್ಯಾವ ರೇಂಜಿಗಿತ್ತು ಅಂದ್ರೆ ಬೆಸ್ಕಾಂನವರು ಪಾಪ ಪ್ರಜ್ಞೆಯಿಂದ ನರಳದಿದ್ದದ್ದೇ ದೊಡ್ಡ ವಿಷಯ! ಹಿಂದಿನ ರಾತ್ರಿ ಆದ ‘ಭಾರೀ ನಷ್ಟ‘ವನ್ನು ಸರಿದೂಗಿಸಲು ಗಾನ ಬೆಳಗ್ಗೆ ಆಫೀಸಿಗೆ 5ರೂ. ಕೊಟ್ಟು ಬಸ್ಸಲ್ಲಿ ಹೋಗಬೇಕಿದ್ದವಳು ಸೀರಿಯಲ್ ನ ಮರುಪ್ರಸಾರ ನೋಡಿ 50ರೂ. ದಂಡ ಪಾವತಿಸಿ ಆಟೋದಲ್ಲಿ ಹೋದಳು. ಸೀರಿಯಲ್ ನೋಡಿದ್ಮೇಲೆ ಅವಳ ಮುಖದಲ್ಲಿ ಅದೆಂಥಾ ‘ಧನ್ಯತಾ ಭಾವ’?...!

ಸಂಜೆ ಟೀ ಕುಡಿಯೋಕಂತ ಬಂದ್ರೆ ಆಗ್ಲೇ ರಿಮೋಟ್ ಅಕ್ಷತಾ ಕೈಲಿ ವಿರಾಜಮಾನವಾಗಿತ್ತು. ಅರೇ ಇದೇನು ಇಷ್ಟು ಬೇಗ ಬಂದಿರೋದು ಇವತ್ತು? ಅಂತ ಕೇಳಿದ್ರೆ ತಲೆ ನೋವು ಅಂತ ಬೇಗ ಬಂದೆ ಅಂದ್ಲು. ಅದೂ ಸುಳ್ಳು ಅಂತ ನಂಗೊತ್ತಿಲ್ವಾ? ರಾತ್ರಿ ಮತ್ತು ಬೆಳಗ್ಗೆ ನೋಡಲಾಗದೆ, ಮರುದಿನ 3-30ಕ್ಕೆ ರಿಪೀಟ್ ಆಗಲಿದ್ದ ಅದೇ ಸೀರಿಯಲ್ ನೋಡೋಕೆ ಧಾವಂತದಿಂದ ಬಂದಿದ್ದಳು ಅಕ್ಷತಾ. ಕೇಳಿ ನಾನು ಸುಸ್ತು.

ನಿಜವಾಗ್ಲೂ ನಮ್ ಹುಡ್ಗೀರು ಈ ಧಾರಾವಾಹಿಗಳನ್ನು ಅದೆಷ್ಟು ಸೀರಿಯಸ್ಸಾಗಿ ನೋಡ್ತಾರೆ ಅಂದ್ರೆ ಅಲ್ಲಿನ ಒಂದೊಂದು ಪಾತ್ರಗಳನ್ನೂ ತಮ್ಮ ಜೊತೆಯವರಂತೆ ಟ್ರೀಟ್ ಮಾಡ್ತಾರೆ. ಸೀರಿಯಲ್ ನ ಮುಖ್ಯಪಾತ್ರಧಾರಿಗೆ ಪದೇ ಪದೇ ಕಷ್ಟ ಕೊಡ್ತಿದ್ರೆ ಇವ್ರೂ ಹಿಡಿಶಾಪ ಹಾಕ್ತಾ ಕೂತಿರ್ತಾರೆ. ಕಥಾನಾಯಕಿಗೆ ಖುಷಿ ಆದ್ರೆ ಇವರೂ ಹಿರಿಹಿರಿ ಹಿಗ್ಗಿದ ಹೀರೇಕಾಯಿಯಂತಾಗಿರ್ತಾರೆ. ಅದೇನ್ ಜಾದೂನಪ್ಪಾ ಈ ಮಾಯಾಪೆಟ್ಟಿಗೆಯಲ್ಲಿ. ರಬ್ಬರ್ ಬ್ಯಾಂಡ್ ಥರ ಎಳೆದು ಟಿ.ಆರ್.ಪಿ ರೇಸಲ್ಲಿ ಮುನ್ನುಗ್ಗೋ ಇಂಥ ಸೀರಿಯಲ್ ಗಳು ಸುಮ್ನೇ ವರ್ಷಾನುಗಟ್ಟಲೆ ಪ್ರಸಾರವಾಗ್ತವಾ ಹೇಳಿ? ಎಲ್ಲಾ ಇಂತಹ ವೀಕ್ಷಕ ಪ್ರಿಯರ ಕೃಪೆಯಿಂದಲೇ ತಾನೇ?

Monday, February 22, 2010

ತಾತ ಮಾಡಿದ ಅವಾಂತರ...!

ಬಹಳ ದಿನಗಳ ಬಳಿಕ ಬ್ಲಾಗ್ ಅಪ್ಡೇಟ್ ಮಾಡೋ ಮನಸ್ಸಾಗಿದೆ!

ಕಳೆದ ತಿಂಗಳು ಊರಿಗೆ ಹೋಗಿದ್ದೆ. ನಾನು ಬರ್ತಿದ್ದೇನೆ ಅಂತ ನನ್ನ ಆಂಟಿಯ ಮಗ ಕಾರ್ತಿಕ್ ಕೂಡ ಬಂದಿದ್ದ. ಇನ್ನು ನನ್ನ ತಂಗಿ. ನಾವೆಲ್ಲಾ ಸೇರಿಬಿಟ್ರೆ ಮುಗೀತು ಕಥೆ! ಸರಿ ೩ ದಿನ ರಜೆ ಇತ್ತು. ಎಲ್ಲಾದ್ರೂ ಸುತ್ತಕ್ ಹೋಗೋಣ. ಏನಾದ್ರು ಪ್ಲಾನ್ ಮಾಡು ಅಂತ ಮೊದ್ಲೇ ಹೇಳಿದ್ರು. ನಾನು ಕೂಡ ಧರ್ಮಸ್ಥಳಕ್ಕೆ ಹೋಗ್ಬೇಕು ಅಂತ ತುಂಬಾ ದಿನಗಳಿಂದ ಅನ್ಕೊಂಡಿದ್ದೆ. ಸರಿ ಮನೆಯವರೆಲ್ಲ ಹೊರಡೋದು ಅಂತ ಆಯ್ತು. ಸಂಜೆನೇ ಅಪ್ಪ ಗಾಡಿ ಬುಕ್ ಮಾಡ್ಸಿ, ಬರೋಕೆ ಹೇಳಿದ್ರು. ಆದ್ರೆ ನಾವು ಹೊರಡೋ ದಿನ ಮಾಮನ ಮಗ ಬಂದ ಅವನನ್ನು ಸಖತ್ ಫೋರ್ಸ್ ಮಾಡಿ ಹೊರ್ಡ್ಸಿದ್ ಆಯ್ತು. ಅವ್ನು ಮನೇಗ್ ಬಂದಾಗ ನಮ್ ತಾತ ಕೂಡ ಇದ್ರು. ನೀವೂ ಬನ್ನಿ ತಾತ ಅಂತ ಗಂಟು ಬಿದ್ವಿ. ನಮ್ ತಾತನ್ನ ಒಪ್ಪಿಸೋವಷ್ಟ್ರಲ್ಲಿ ಸಾಕು ಸಾಕಾಯ್ತು. ಅವ್ರು ಯಾರಿಗೋ ಏನೋ ಮಾಲು ಕೊಡ್ಬೇಕು ಅಂತ ಗೊಣಗುಡಲು ಶುರುಮಾಡಿದ್ರು. ನಾಳೆ ತಲುಪಿಸಿದರೆ ಆಯ್ತು ಬನ್ನಿ ಅಂತ ಸಮಾಧಾನ ಮಾಡಿದ್ವಿ. ಮನೆಗೆ ಹಿರಿಯರು. ಅವ್ರೆದುರೆ ನಾವು ನಾವೇ ಹೊರಟರೆ ಚೆನ್ನಾಗಿರಲ್ಲ. ಬೇಸರ ಮಾಡ್ಕೋಬಹುದು ಅನ್ನೋದು ನಮ್ ಉದ್ದೇಶ ಆಗಿತ್ತು ಅಷ್ಟೇ.


ಸರಿ ಸಂಜೆ ೭ರ ವೇಳೆಗೆ ಮನೆ ಮುಂದೆ ಗಾಡಿ ರೆಡಿ ಇತ್ತು. ದಾರಿ ಮಧ್ಯೆ ನಮ್ಮ ಬಾಲಿವುಡ್ ಹಾಡುಗಳ ಮಸ್ತಿ ಜೋರಾಗೆ ಇತ್ತು ಅನ್ನಿ. ಸಕಲೇಶಪುರದಲ್ಲಿ ತಾತನ ಮಾಮೂಲಿ ಅಡ್ಡ ಇದೆ. ಅಲ್ಲಿ ಬಿಸಿ ಬಿಸಿ ಅಕ್ಕಿ ರೊಟ್ಟಿ ಬೆಣ್ಣೆ ಚಪ್ಪರಿಸಿ ಬರೋದು ಅವ್ರಿಗೆ ಇಷ್ಟ. ಅವತ್ತು ರಾತ್ರಿ ನಮಗೆಲ್ಲ ಅಲ್ಲೇ ಊಟ. ಸರಿಯಾಗಿ ಬ್ಯಾಟಿಂಗ್ ಮಾಡಿದ್ವಿ. ರಾತ್ರಿ ಧರ್ಮಸ್ಥಳ ತಲುಪಿ ರೆಸ್ಟ್ ಮಾಡಿದ್ಮೆಲೇನೆ ಸ್ವಲ್ಪ ನೆಮ್ದಿ ಅನ್ಸಿದ್ದು. ಸರಿ ಬೆಳಗ್ಗೆ ೬-೪೫ಕ್ಕೆ ಸರಿಯಾಗಿ ದೇವಸ್ಥಾನದಲ್ಲಿ ದರ್ಶನ ಮಾಡೋದು ನಮ್ ಪ್ಲಾನ್ ಆಗಿತ್ತು. ಆದ್ರೆ ನಮ್ ತಾತ ಎದ್ದು ನಿಧಾನವಾಗಿ ರೆಡಿ ಆದ್ರು. ಟೈಮು ೭-೧೫! :( ದೇವರ ದಯೆ, ಬೇಗ ದರ್ಶನ ಆಯ್ತು. ಆದ್ರೆ ಆ ನೂಕು ನುಗ್ಗಲಲ್ಲಿ ನಮಗೆಲ್ಲ ನಮ್ ತಾತನ ಮೇಲೆ ನಿಗಾ ಇಡೋದೇ ದೊಡ್ಡ ಕೆಲಸ ಆಗ್ಬಿಟ್ಟಿತ್ತು.


ಅಷ್ಟೊತ್ತಿಗಾಗಲೇ ಬಿಸಿಲು ತನ್ನ ಕಾವು ಹೆಚ್ಚು ಮಾಡಿತ್ತು. ರಸ್ತೆಯಲ್ಲಿ ಕಾಲಿಟ್ರೆ ಸುಡು ಸುಡುವ ಅನುಭವ. ಮಧ್ಯಾಹ್ನ ಊಟಕ್ಕೆ ಹೋದಾಗಲೂ ನಮ್ ತಾತ ಆ ಗುಂಪಿನಲ್ಲಿ ನಮಗಿಂತ ೨-೩ ಸಾಲು ಹಿಂದೇನೆ ಸೇರಿ ಕುಳಿತಿದ್ರು. ಕೈ ತೊಳೆದು ಹೊರಡುವಾಗ ಅವ್ರು ನಮ್ ಜೊತೇನೆ ಇರ್ಬೇಕು ಕಣ್ರೋ. ಹುಷಾರು ಅಂತ ನಾವೆಲ್ಲ ಮೊದ್ಲೇ ತಾತನ ಮೇಲೊಂದು ಕಣ್ಣಿಟ್ಟೇ ಪ್ರಸಾದ ಸ್ವೀಕಾರ ಮುಗಿಸಿದ್ವಿ. ಆದ್ರೆ ನಮ್ ತಾತ ಇದ್ದಾರಲ್ಲ? ಅವ್ರು ಈ ಜಗತ್ತಿನ ಅತಿ ಕಿರಿಕ್ ವ್ಯಕ್ತಿಗಳಲ್ಲಿ ಟಾಪ್ ೧೦ ನಲ್ಲಿ ನಿಸ್ಸಂಶಯವಾಗಿ ಸ್ಥಾನ ಗಿಟ್ಟಿಸೋ ಅರ್ಹತೆ ಇರುವಂತಹವರು! ಅಲ್ಲೂ ಹೊರಗೆ ಹೋಗಲು ಎಲ್ಲರಿಗೂ ಇರುವ ಮಾರ್ಗ ಬಿಟ್ಟು ಕಾವಲಿನವರ ಹತ್ತಿರ ಹೋಗಿ short cut root ನಲ್ಲೆ ಹೊರ ನಡೆದರು. ನಾನು ಓಡಿ ಹೋಗಿ ಅವ್ರು ನಮ್ ತಾತ ಸ್ವಲ್ಪ ನಂಗು ಬಿಡಿ ಇಲ್ದಿದ್ರೆ ಮಿಸ್ ಆಗ್ತಾರೆ ಅಂದ್ರೆ, ಆತ ಇಲ್ರಿ ಆಗಲ್ಲ ಅಂತ ಖಡಕ್ ಆಗಿ ಹೇಳ್ಬಿಟ್ಟ . ಸರಿ ಬೇಗ ಹೊರ ನಡೆದು ತಾತನ್ನ ಕರ್ಕೊಂಡು ನಮ್ vehicle ಇದ್ದ ಕಡೆ ಹೊರಟ್ವಿ.


ಮೊದಲೇ ಚಪ್ಪಲಿ ಧರಿಸದೆ ಕಾಲು ಸುಡುತ್ತಿದ್ವು. ನೆರಳಿರೋ ಕಡೆ ಹಾಗೆ ಎಲ್ರು ಹೊರಟ್ವಿ. ಹಿಂದೇನೆ ಬರ್ತಿದ್ದ ತಾತ ನಾಪತ್ತೆ! ಇನ್ನೇನು ಇಲ್ಲೇ ಎಲ್ಲೋ ಇರ್ತಾರೆ ಅಂತ ಹುಡುಕೋಕೆ ನನ್ನ cousin ಹೋದ. ಎಲ್ಲೂ ಸಿಗ್ಲಿಲ್ಲ
ಅಂತ ಬರೋದಾ?...! ಇದೇನ್ ಹೀಗ್ ಹೇಳ್ತಿದಾನೆ ಅಂತ ನಮಪ್ಪ ಹೊರಟ್ರು ಹುಡ್ಕೋಕೆ. ಅವ್ರ ಕಣ್ಣಿಗೂ ನಮ್ ತಾತ ಕಾಣಲೊಲ್ಲರು!

ಹೇಳಿ ಕೇಳಿ ನಮ್ ತಾತ ಯಾವ್ದಾದ್ರು functions ಅಂತ ಒಟ್ಟಾಗಿ ಹೋದ್ರೆ ಊಟ ಮುಗ್ಸಿ ಕಾಲಿಗೆ ಬುದ್ಧಿ ಹೇಳೋ ಆಸಾಮಿ! ಆದ್ರೆ ತಮ್ಮ commitments ಅಂತ ಏನಾದ್ರು ಇದ್ರೆ ಮರೆಯೋ ಜಾಯಮಾನವೇ ಅಲ್ಲ ಅವ್ರದ್ದು. ಇದು ಕೆಲವೇ ವರ್ಷಗಳ ಹಿಂದಿನ ಮಾತು. ಪಟಪಟ ನಡೆಯುತ್ತಿದ್ರೆ ಬಿಸಿರಕ್ತದ ನಾವೂ ಅವ್ರನ್ನ ನಡಿಗೆಯಲ್ಲಿ ಸೋಲಿಸಲು ಉಸ್ಸಪ್ಪಾ ಅಂತಿದ್ವಿ. ಯಾಕೋ ಅವರನ್ನು ಹುಡುಕುತ್ತಾ ನಮ್ಗೆ ಇವೆಲ್ಲಾ ನೆನಪಾಯ್ತು. ನನ್ನ ಆಂಟಿ ಮಗ ಕಾರ್ತಿಕ್ ಅಂತೂ ಲೇ ಅವ್ರು ಬರೋದಿಲ್ಲಾ ಅಂತ ಎಷ್ಟು ಹೇಳಿದ್ರು ನಾವೇ ಬಲವಂತ ಮಾಡಿ ಕರ್ಕೊಂಡು ಬಂದ್ವಿ. ಈಗ ಹೀಗಾಯ್ತಲ್ಲೇ? ಥೂ ಅಂತ ತಲೆ ಚೆಚ್ಕೊಂಡ್ ಕೂತ! ಇದೆಲ್ಲಾ ಸಾಲ್ದು ಅಂತ ನನ್ನ ಸಹೋದ್ಯೋಗಿ ದಾಮು ತಮ್ಮ ಬೇರೆ ನಮ್ ಸ್ಥಿತಿ ಕೇಳಿ ಓಡೋಡಿ ಬಂದ್ರು ಸಹಾಯ ಮಾಡೋಕೆ. ಅವ್ರು ದೇವಸ್ಥಾನದ ಬಳಿ ಕಳೆದು ಹೋದವ್ರ ಪತ್ತೆಗೆ announce ಮಾಡೋವಲ್ಲಿಗೆ ಹೋಗಿ ಅದನ್ನೂ ಮಾಡ್ಸಿದ್ರು. ಆದ್ರೆ ನಮ್ ತಾತ ಕೇಳಿಸ್ಕೊಂಡ್ರೆ ತಾನೇ ಬರೋಕೆ?

ಸರಿ ನಾವು 3-30ರ ತನಕ ನೋಡಿದ್ವಿ. ನಮ್ ತಾತ ಬಿಲ್ ಕುಲ್ ಸಿಗೋ ಹಾಗೇ ಕಾಣ್ಲಿಲ್ಲ. ಏನೇ ಆಗ್ಲಿ ನಾವು ಅಂಥ ತಾತನ ಮೊಮ್ಮಕ್ಕಳು. ಹುಟ್ಟಿದಾಗಿಂದ ಇಲ್ಲಿವರ್ಗೂ ಅವರ ಇಂಥ ಅದೆಷ್ಟೋ ವರಸೆಗಳನ್ನು ನೋಡಿದ್ದೀವಿ! ಯಾಕೋ ಅವ್ರು ಈ ಧರ್ಮಸ್ಥಳದಲ್ಲಿ ಇರೋದೇ ಡೌಟು ಅನ್ಸೋಕ್ ಶುರುವಾಯ್ತು. ನನ್ cousins ಅಂತೂ ತಾತನ್ನ ನೆನಪು ಮಾಡ್ಕೊಂಡು ಬಿದ್ದು ಬಿದ್ದು ನಗ್ತಾರೆ ಬೇರೆ. ಇನ್ನು ಹುಡ್ಕಿ ಪ್ರಯೋಜನ ಇಲ್ಲಾ ಅನ್ಸಿ ನಾವು ವಾಪಸ್ ಹೊರಟೇ ಬಿಟ್ವಿ. ಅದೂ ಒಲ್ಲದ ಮನಸಲ್ಲಿ. ನಮ್ ಅಪ್ಪನಿಗೆ ಬಂದಿದ್ದ ಕೋಪ ಅಷ್ಟಿಷ್ಟಲ್ಲ. ನಿಮ್ ತಾತ ಕೈಗೆ ಸಿಕ್ರೆ.... ಅಂತ ಗೊಣಗುತ್ತಿದ್ದದ್ದು ಕೇಳಿಸಿದ್ರೂ ತೆಪ್ಪಗೆ ಕೂತಿದ್ವಿ. ಊರಿಗ್ ಹೋದ್ಮೇಲೆ ಅಲ್ಲೂ ನಮ್ ತಾತ ಬಂದಿಲ್ಲ ಅಂದ್ರೆ ಏನ್ ಉತ್ತರ ಕೊಡೋದು ಅಂತ ನಮ್ ಚಿಂತೆ. ಮಾರ್ಗ ಮಧ್ಯೆ ಸುರ್ಯ ದೇವಾಲಯಕ್ಕೊಂದು ವಿಸಿಟ್ ಕೊಟ್ವಿ. ಆದ್ರೆ ಯಾಕೋ ಮನಸ್ಸಿಗೆ ನೆಮ್ಮದಿ ಅನ್ನಿಸದು.

ಅಂತೂ ಸಂಜೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ದರ್ಶನ ಮುಗಿಸಿ ದೇವಾಲಯದ ಆವರಣದಲ್ಲಿ ಕುಳಿತ್ವಿ. ಯಾಕೋ ಬೇಜಾರು, ಹೀಗಾಯ್ತಲ್ಲಾ ಅಂತ. ಆದ್ರೆ ನನ್ ಕಸಿನ್ಸು ಲೇ ತಲೆ ಕೆಡಿಸ್ಕೋಬೇಡ ಕಣೇ. ನಮ್ ತಾತ ನಮ್ಗಿಂತಾ ಮುಂಚೇನೇ ಮನೆ ಸೇರೋ ಗಿರಾಕಿ. ಕೈಲಿ ದುಡ್ಡಿತ್ತು. ಯಾರಿಗೋ ಅದೇನೋ ತಲುಪಿಸ್ಬೇಕು ಅಂತ ಹಾರಾಡ್ತಿರ್ಲಿಲ್ವಾ? ಎಲ್ಲಿ ತನ್ ವ್ಯವಹಾರ ಕೈ ತಪ್ಪುತ್ತೋ ಅಂತ ಬೇಗ ಹೇಳ್ದೆ ಕೇಳ್ದೆ ಓಡೋಗಿದೆ ಅಷ್ಟೇ ಅಂತ ನಗೋಕೆ ಶುರು ಮಾಡಿ ರಿಲ್ಯಾಕ್ಸ್ ಮಾಡ್ತಿದ್ರು. ಸರಿ ಸಂಜೆ 5-30 ವೇಳೆಗೆ ಸುಮ್ನೆ ಮನೇಗೊಂದು ಕಾಲ್ ಮಾಡು ಅಂತ ಮಾಮನ ಮಗನಿಗೆ ಹೇಳ್ದೆ. ಅವ್ನು ಡೌಟಲ್ಲೇ ಫೋನ್ ಮಾಡಿ ಅವರಮ್ಮನ್ನ ವಿಚಾರಿಸಿದ್ರೆ ನಿಮ್ ತಾತ ಅರ್ಧ ಗಂಟೆ ಮೊದಲೇ ಬಂದು ಆರಾಮಾಗಿ ನಿದ್ರೆ ಮಾಡ್ತಿದ್ದಾರೆ ಅಂತ ಹೇಳಿದ್ರು ಅತ್ತೆ!

ಇದು ತಾನೇ ವರಸೆ? ನಮ್ ಸಂಕಟ ನಮ್ಗೆ, ನಮ್ ತಾತ ಕೊಟ್ಟ ತಾಪತ್ರಯಕ್ಕೆ ಬಂದಿದ್ದ ಕೋಪವೆಲ್ಲ ಮಂಗಮಾಯ! ಆದ್ರೂ ಊರಿಗ್ ಹೋದ್ಮೇಲೆ ನಮ್ದೇ ತಪ್ಪು ಅಂತ ವಾದಿಸೋ ನಮ್ ತಾತನ ಮತ್ತೊಂದು ಮುಖ ನೆನಪಿಸಿಕೊಂಡು ನಾವೆಲ್ಲಾ ಹೊಟ್ಟೆ ಹುಣ್ಣಾಗುವಷ್ಟು ನಕ್ಕುಬಿಟ್ವಿ. ಮತ್ತಿನ್ನೆಲ್ಲೂ ಅವ್ರನ್ನ ಕರ್ಕೊಂಡು ಹೋಗೋ ಉಸಾಬರಿಗೆ ಕೈ ಹಾಕೋದು ಬೇಡ ಅಂತ ಸುಬ್ರಹ್ಮಣ್ಯದಲ್ಲಿ ಆಣೆ ಮಾಡಿಬಿಟ್ವಿ.