Friday, August 28, 2009

ವೀಕೆಂಡ್ ಮಸ್ತಿ...

ವೀಕೆಂಡ್ ಮಸ್ತಿಯ ಅಸಲಿತನ ಗೊತ್ತಾಗಬೇಕಂದ್ರೆ ಬೆಂಗಳೂರಿಗೇ ಬರ್ಬೇಕು. ವಾರಾಂತ್ಯ ಆರಂಭವಾಗುವ ಮುನ್ನವೇ ಅದನ್ನು ಹೇಗೆ ಕಳೆಯಬೇಕೆಂದು ಪ್ಲಾನ್ ಮಾಡುವ ನೂರಾರು ಜನ ಇಲ್ಲಿದ್ದಾರೆ. ಅದರಲ್ಲೂ ವಾರವಿಡೀ ಪರರಾಷ್ಟ್ರಗಳಿಗಾಗಿ ಬೆವರು ಹರಿಸುವ ಐಟಿ ಉದ್ಯೋಗಿಗಳೇ ಹೆಚ್ಚು. ಹಾಗಾಗಿ ಇವರ ದೃಷ್ಟಿಯಲ್ಲಿ ಶನಿವಾರ ಮತ್ತು ಭಾನುವಾರಗಳಿಗೆ ಇನ್ನಿಲ್ಲದ ಮಹತ್ವ. ಇನ್ನು ಇತರೆ ಜನರೂ ಇದರಿಂದ ಹೊರತಲ್ಲ. ವಿಶೇಷವಾಗಿ ಬೆಂಗಳೂರಿನ ಎಂ.ಜಿ ರಸ್ತೆ, ಬ್ರಿಗೇಡ್ ಮತ್ತು ಕಮರ್ಷಿಯಲ್ ರಸ್ತೆಗಳು ವೀಕೆಂಡ್ ಸಂಭ್ರಮಕ್ಕೆ ಕೈಬೀಸಿ ಕರೆ ನೀಡುತ್ತವೆ. ನನಗೆ ಬೆಂಗಳೂರಿನ ವೀಕೆಂಡ್ ಪ್ರಪಂಚ ಮೊದಮೊದಲು ಇದೇನಪ್ಪಾ ಹೀಗೆ ಅನ್ನಿಸುತ್ತಿದ್ದಾದ್ರೂ ಈಗ ಮಾಮೂಲು ಅನ್ನಿಸಿಬಿಟ್ಟಿದೆ. ಆದ್ರೆ ಮುಂಚಿನಂತೆ ಪ್ರತಿ ವಾರಾಂತ್ಯದಲ್ಲೂ ಬೆಂಗಳೂರು ಅಲೆಯುವ ಭಾಗ್ಯ ನನಗಿಲ್ಲ. ನಮ್ಮ ಕಚೇರಿಯ ಅವಧಿ ಬೇರೆ ರೀತಿ ಇರುತ್ತಾದ್ದರಿಂದ ನಾನು ಸಾಮಾನ್ಯವಾಗಿ ಭಾನುವಾರ ಮತ್ತು ಶನಿವಾರಗಳಂದೂ ವಾರದ ದಿನದಂತೆ ಕೆಲಸ ಮಾಡಬೇಕಿರುತ್ತದೆ. ಆದ್ರೆ ರಾತ್ರಿ ಪಾಳಿ ಮಾಡಿಬಿಟ್ಟರೆ ವಾರಾಂತ್ಯದಲ್ಲಿ ರಜೆ ಖಾಯಂ.

ಈಸಲವೂ ಅಷ್ಟೇ ಅದೆಷ್ಟೋ ದಿನಗಳ ನಂತರ ನನಗೆ ಭಾನುವಾರ ರಜೆಯಿತ್ತು. ನನ್ನ ರೂಂ ಮೇಟ್ ಅನುಷಾ ಕೂಡ ಅಂದು ಆರಾಮಾಗಿದ್ದಳು. ಮನೆಗೆ ಅನುಷಾಳ ಲ್ಯಾಪ್ ಟಾಪ್ ಬಂದ ಮೇಲಂತೂ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಬಹಳ ದಿನಗಳಾಗಿದ್ದವು. ಸರಿ ಇಬ್ರೂ ಸೇರಿ ಕೆಲ ವಾರಗಳ ಹಿಂದಷ್ಟೇ ತೆರೆಕಂಡಿದ್ದ ಹ್ಯಾರಿ ಪಾಟರ್ ಅಂಡ್ ದ ಹಾಫ್ ಬ್ಲಡ್ ಪ್ರಿನ್ಸ್ನೋಡೋಣ ಅಂತಂದುಕೊಂಡ್ವಿ. ಮೊದಲು ಇದ್ದದ್ದರಲ್ಲಿ ಸ್ವಲ್ಪ ಹತ್ತಿರವಿದ್ದ ಪಿವಿಅರ್ ಮಲ್ಟಿಪ್ಲೆಕ್ಸ್ ಗೆ ಹೋದ್ರೆ ಅಲ್ಲಿ ಬೇಕಂದ್ರೂ ಒಂದೇ ಒಂದು ಟಿಕೇಟು ಬಾಕಿಯಿರಲಿಲ್ಲ. ನಾವೆಷ್ಟು ಎಕ್ಸೈಟ್ ಆಗಿದ್ವಿ ಅಂದ್ರೆ ಇವತ್ತು ಹ್ಯಾರಿ ಪಾಟರ್ ನೋಡೇಬಿಟ್ವಿ ಅಂದ್ಕೊಂಡು ಬಂದವ್ರಿಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಮತ್ಯಾವ್ಯಾವ ಥಿಯೇಟರ್ ಗಳಲ್ಲಿ ಸಿನಿಮಾ ಇದೆ ಅನ್ನೋದೂ ಗೊತ್ತಿಲ್ಲ. ಸ್ನೇಹಿತರಿಗೆ ಫೋನಾಯಿಸಿ ವಿಚಾರಿಸಿದಾಗ ಜಯನಗರದ ಗರುಡಾ ಸ್ವಾಗತ್ ನಲ್ಲಿ 2.30ಕ್ಕೆ ಶೋ ಇದೆ ಅಂತ ತಿಳಿಯಿತು. ತಕ್ಷಣ ಅತ್ತ ದೌಡಾಯಿಸಿದ್ವಿ. ಅಲ್ಲಿ ನಾನು ಗಾಡಿ ಪಾರ್ಕ್ ಮಾಡಿಬರೋವಷ್ಟರಲ್ಲಿ ಟಿಕೇಟ್ ತಗೊಂಡ್ರೆ ಸರಿ, ಅಲ್ಲೂ ಸೋಲ್ಡ್ ಔಟ್ ಆದ್ರೆ ಕಷ್ಟ ಅಂತ ಅನುಷಾ ನನ್ನನ್ನು ಬಿಟ್ಟು ಟಿಕೇಟ್ ಕೌಂಟರ್ ತಲುಪಿದ್ಲು. ಆದ್ರೆ ಪಾಪಿ ಸಮುದ್ರಕ್ಕೆ ಹೋದ್ರೂ ಮೊಳಕಾಲಷ್ಟು ನೀರು ಅನ್ನೋ ಹಾಗೆ ಅಲ್ಲಿ 2.30ಕ್ಕೆ ಹ್ಯಾರಿ ಪಾಟರ್ ನ ಯಾವ್ದೇ ಶೋ ಇರ್ಲಿಲ್ಲ. ಮಾಹಿತಿ ಕೊಟ್ಟ ಪುಣ್ಯಾತ್ಮನಿಗೆ ಫೋನ್ ಮಾಡಿ ಬಾಯಿ ತುಂಬಾ ಬೈಗುಳ ಕೊಟ್ಟಿದ್ದೂ ಆಯ್ತು. ಪಾಪ! ಬೆಂಗಳೂರು ಟೈಮ್ಸ್ ನವರು ಮುದ್ರಿಸಿದ ತಪ್ಪು ಮಾಹಿತಿಗದೆ ಅವರೇನು ತಾನೇ ಮಾಡಿಯಾರು?

ಈಗಾಗ್ಲೇ ಎರಡು ಥಿಯೇಟರ್ ಗಳಿಗೆ ಅಲೆದು ಸಾಕಾಗಿತ್ತು. ಕಡೆಯದಾಗಿ ಫೇಮ್ ಲಿಡೋ ನಲ್ಲಿ 3.30ರ ಶೋ ಇದೆ ಅಂತ ಗೊತ್ತಾಯ್ತು. ಕಡೆಯದಾಗಿ ಅಲ್ಲಿ ಚೆಕ್ ಮಾಡೋಣ ಅಂತ ದೇವರ ಜಪ ಮಾಡುತ್ತಲೇ ಅಲ್ಲಿ ಹೋದ್ವಿ. ನಿಜ ಹೇಳಬೇಕಂದ್ರೆ ಅವತ್ತು ಬೇರೆ ಕೌಂಟರ್ ಗಳಲ್ಲಿ ಟಿಕೇಟ್ ಖರೀದಿ ಮಾಡುತ್ತಿದ್ದವರೆಲ್ಲಾ ಹ್ಯಾರಿ ಪಾಟರ್ ಗಾಗೇ ನಿಂತಂತೆ ನಮಗನ್ನಿಸ್ತಿತ್ತು. ದೇವರೇ ಇಲ್ಲೂ ನಿರಾಸೆ ಮಾಡಬೇಡಪ್ಪಾ ಅಂತ ಬೇಡಿಕೊಂಡೇ ನಮ್ಮ ಸರದಿಗಾಗಿ ಕಾದ್ವಿ. ಅಲ್ಲೋ ನಮ್ಮ ಮುಂದೆ ನಿಂತಿದ್ದ ಹುಡುಗಿಯೂ ಅದೇ ಸಿನಿಮಾಗೆ ಟಿಕೇಟ್ ಖರೀದಿಸುತ್ತಿದ್ದಳೇನೋ, ಸೀಟಿಂಗ್ ವ್ಯವಸ್ಥೆ ಹೊಂದಿಕೆಯಾಗದೇ ಮುಖ ಬಾಡಿಸಿಕೊಂಡು ಹೋದ್ಳು. ಸರಿ ನಾವು ವಿಚಾರಿಸಿದಾಗ 3.30ರ ಶೋಗೂ ಎಳ್ಳುನೀರು ಬಿಡಬೇಕಾಯ್ತು. ಬಾಕಿಯಿದ್ದದ್ದು 6.15ರ ಶೋ. ಅದರಲ್ಲಿ ಮಿಕ್ಕಿದ್ದು ಕೇವಲ ನಾಲ್ಕೇ ಸೀಟುಗಳು. ಅವೂ ನಾಲ್ಕೂ ಒಂದೊಂದು ದಿಕ್ಕಿಗೆ! ವಿಧಿಬರಹ ಘೋರವಾದ್ರೂ ಇಲ್ಲಿ ಪರವಾಗಿಲ್ಲ ಅನ್ನಿಸ್ತು. ಮೊದಲ ಸಾಲಿನಲ್ಲಿ ಎಡ ಮತ್ತು ಬಲಭಾಗದ ಕೊನೆಗಿದ್ದ 2 ಟಿಕೇಟುಗಳೇ ಬೆಸ್ಟು ಅನ್ನಿಸಿ ಖರೀದಿ ಮಾಡಿದ್ವಿ. Atleast ಪಕ್ಕ ಕುಳಿತವರನ್ನು ಜರುಗಲು ಹೇಳಿ adjudst ಮಾಡಿಕೊಳ್ಳಬಹುದೆಂದು ಯೋಚಿಸಿದ್ವಿ.

ಆದ್ರೆ ಶೋ ಇದ್ದದ್ದು ಸಂಜೆ 6.15ಕ್ಕೆ. ಅಲ್ಲಿ ತನಕ ಏನು ಮಾಡೋದು? ಸರಿ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಸೆಂಟ್ರಲ್ ನತ್ತ ಹೋದ್ವಿ. ಅಲ್ಲಿ ಫುಲ್ ಫ್ರೆಂಡ್ ಶಿಪ್ ಡೇ ಫೀವರ್. ಹರೆಯದ ಹೃದಯಗಳು ಗೆಳೆಯರ ಬಳಗದೊಂದಿಗೆ ಸಂಭ್ರಮಿಸುತ್ತಿದ್ದವು. ಸಾಲದಕ್ಕೆ ಮಾಲ್ ನಲ್ಲಿ ಸಖತ್ ಆಫರ್ ಗಳು ಬೇರೆ. ಇತ್ತ ನಮ್ಮ ಹೊಟ್ಟೆ ಚುರುಗುಟ್ಟಲು ಶುರುಮಾಡಿ ಅದ್ಯಾವುದೋ ಕಾಲವಾಗಿತ್ತು. ಮಾಲ್ ಒಳಗಿದ್ದ ಭರ್ಜರಿ ಫುಡ್ ಕೋರ್ಟ್ ನಲ್ಲಿ ನಮ್ಮ ಹೊಟ್ಟೆಗೆ ಇಷ್ಟದ ತಿಂಡಿಗಳ್ಯಾವೂ ಕಾಣಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅಲ್ಲಿದ್ದ ಕ್ಯೂ ನೋಡಿದ್ರೆ ಕಾಯುವಷ್ಟು ತಾಳ್ಮೆ ನಮಗಿರ್ಲಿಲ್ಲ. ಸರಿ ಮಾಲ್ ಹೊರಗಿದ್ದ ಕ್ಯಾಂಟಿನ್ ಗಳತ್ತ ಬಂದ್ವಿ. ಅಲ್ಲಿ ತಿಂದ ಬಿಸಿಬಿಸಿ ಜಿಲೇಬಿ, ಆಹ್! ನಿಜಾರೀ ಸಖತ್ತಾಗಿತ್ತು. ಬೆಲೆ ಕೊಂಚ ಜಾಸ್ತಿ. ಒಂದ್ ಪ್ಲೇಟ್ ಗೆ ಬರೀ 25ರೂ! ಆದ್ರೆ ರುಚಿ ಮಾತ್ರ ಸೂಪರ್. ಆಗ ತಾನೇ ಸಕ್ಕರೆ ಪಾಕದಿಂದ ಅದ್ದಿ ತೆಗೆದ ಜಿಲೇಬಿಯನ್ನು ಕುರುಕುರು ಅಂತ ಕ್ಷಣಮಾತ್ರದಲ್ಲಿ ಗುಳುಂ ಮಾಡಬಹುದು. ಊಟ ಮುಗಿಸಿ ಅಲ್ಲೇ ನಡೆಸುತ್ತಿದ್ದ ಗೇಮ್ ನೋಡ್ತಾ ನಿಂತಿದ್ವಿ. ಫ್ರೆಂಡ್ ಶಿಪ್ ಡೇ ಆದ್ದರಿಂದ ಇಬ್ಬರು ಫ್ರೆಂಡ್ಸ್ ಒಬ್ಬರಿಗೊಬ್ರು ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಆಟ ಆಡಿಸ್ತಿದ್ರು. ಸಮೀಪದಲ್ಲೇ ನಿಂತಿದ್ದ ನಮ್ಮನ್ನೂ ಭಾಗವಹಿಸಲು ನಿರೂಪಕ ಆಹ್ವಾನಿಸಿದ. ಸರಿ, ಅನು ಒಲ್ಲೇ ಅನ್ನುತ್ತಲೇ ಬಂದ್ಲು. 30 ಸೆಕಂಡುಗಳಲ್ಲಿ ಎರಡೆರಡು ಬ್ಯಾಂಡ್ ಕಟ್ಟುವಷ್ಟಕ್ಕೇ ತೃಪ್ತಿಪಟ್ವಿ.

ಇನ್ನೇನು ಸಿನಿಮಾಗೆ ಸಮಯವಾಯ್ತು ಅಂತ ಲಿಡೋ ಮಾಲ್ ನತ್ತ ಹೆಜ್ಜೆ ಹಾಕಿದ್ವಿ. ಸಿನಿಮಾ ಆರಂಭವಾದ್ರೂ ಅನುಷಾಗೆ ಚಡಪಡಿಕೆ. ಯಾಕಂದ್ರೆ ನಮ್ಮ ಸಾಲಿನಲ್ಲಿ ಇನ್ನೆರಡು ಸೀಟುಗಳು ಖಾಲಿ ಇದ್ವು. ಅದೂ ಎಲ್ಲೆಲ್ಲೋ ಮಧ್ಯದಲ್ಲಿ. ಆ ಸೀಟಿಗೆ ಬರಬೇಕಿದ್ದವರು ನಾಪತ್ತೆ. ಮಿಕ್ಕ ಆ ಎರಡು ಸೀಟಿನವರು ಕನ್ಫ್ಯೂಸ್ ಆದ್ರೆ ಅಂತ ಅನ್ಕೊಳ್ಳೋವಷ್ಟರಲ್ಲೇ ಅವರ ಆಗಮನವೂ ಆಯ್ತು. ಸರಿ ಕುಳಿತಿದ್ದವರಿಗೆಲ್ಲಾ ಸ್ವಲ್ಪ ಪಕ್ಕದ ಸೀಟಿಗೆ ಜರುಗಲು ರಿಕ್ವೆಸ್ಟ್ ಮಾಡಿ ಅಂತೂ ಇಂತೂ ನೆಮ್ಮದಿಯಾಗಿ ಸಿನಿಮಾ ನೋಡಲು ಕೂತ್ವಿ. ಹ್ಯಾರಿ ಪಾಟರ್ ಸಿನಿಮಾಗಳು ಒಂದಕ್ಕೊಂದು ಮುಂದುವರಿಕೆ ಇರುತ್ತವಾದ್ದರಿಂದ ನಾವು ನೋಡಿದ ಭಾಗ ತೀರಾ ಕೌತುಕವಲ್ಲದ್ದಿದ್ರೂ ಮುಂದಿನ ಸಿನಿಮಾಗೆ ಲಿಂಕ್ ಕೊಡುವಂತಿತ್ತು. ಹೇಗೋ ವೀಕೆಂಡ್ ನಲ್ಲಿ ಹರಸಾಹಸ ಮಾಡಿ ಒಂದು ಸಿನಿಮಾ ನೋಡೋಹಾಗಾಯ್ತು. ಇಡೀ ದಿನ ಪಟ್ಟ ಅವಸ್ಥೆಗಳನ್ನು ಮೆಲುಕು ಹಾಕುತ್ತಾ ಇಬ್ರೂ ಮನೆ ಸೇರಿದ್ವಿ.

Wednesday, June 17, 2009

ಬಿಸಿಲೆ...ನಿನ್ನ ಸೊಬಗಿಗೆ ನೀನೆ ಸಾಟಿ!





ಅದೆಷ್ಟೋ ದಿನಗಳಿಂದ ನಮ್ಮ ಗ್ಯಾಂಗು ಎಲ್ಲಾದ್ರೂ ಹೊರಗೆ, ಈ ಬೆಂಗಳೂರಿನ ಗಡಿಬಿಡಿ ಪರಿಸರದಿಂದ ದೂರ ಹೋಗಿ ನಿಸರ್ಗದ ಮಡಿಲಲ್ಲಿ ತುಸು ಹೊತ್ತು ವಿರಮಿಸಲು ಹಾತೊರೆಯುತ್ತಿತ್ತು. ಆದ್ರೆ ಎಲ್ಲರಿಗು ಒಂದೇ ದಿನ ರಜೆ ಸಿಗದೇ ನಮ್ಮ ಪ್ಲಾನ್ ಮುಂದಕ್ಕೆ ಹೋಗ್ತಾನೇ ಇತ್ತು. ಆದ್ರೆ ಈ ಸಲ ಯಾರಾದ್ರು ಬರಲಿ ಬಿಡ್ಲಿ ಹೋಗೆ ಹೋಗ್ಬೇಕು ಅನ್ನೋ ಹಠ ಎಲ್ರಿಗೂ ಇದ್ದದಕ್ಕೋ ಏನೋ ಜಾಗ ಹಾಸನ ಸುಬ್ರಹ್ಮಣ್ಯ ವದುವೆ ಸಿಗುವ ಬಿಸಿಲೆ ಫಾರೆಸ್ಟ್ ಅಂತ ಫೈನಲ್ ಆಗಿದ್ದೇ ತಡ ನಮ್ಮ ಮನಸ್ಸಲ್ಲಿ ಆಗಲೇ ಬಿಸಿಲೆಯ ಅದ್ಭುತ ನಿಸರ್ಗ ಸಿರಿ ಕಣ್ಣಮುಂದೆ ಸುಳಿದಾಡಲು ಶುರುವಾಗಿತ್ತು. ಆದ್ರೆ ಆರಂಭದಿಂದಲೂ ನನ್ದೊಂದೇ ಕಿರಿಕ್ಕು. ಬಿಸಿಲೆ ಬೇಡ ಅಲ್ಲಿ ಮಳೆ ಜಾಸ್ತಿ ಇದೆ , ಹಾಗಾಗಿ ಜಿಗಣೆಗಳ ಕಾಟ ಅಂತ. ಆದ್ರೆ ನೀತು ಮತ್ತು ಅನುಷ ಲೇ ಅದೇನೂ ಅಷ್ಟೊಂದು ಕೆಟ್ಟ ಜೀವಿ ಅಲ್ಲ ಅಂತೆಲ್ಲ ಹೇಳಿ ಒಪ್ಪಿಸಿದರು. ಕಾಡು ಹೊಕ್ಕ ಮೇಲೇನೆ ಗೊತ್ತಾಗಿದ್ದು ಅಸಲಿಯತ್ತು ಏನು, ನನ್ನ ಅಚ್ಚು ಮೆಚ್ಚಿನ ಗೆಳತಿಯರು ಟ್ರೆಕ್ಕಿಂಗ್ ಹೋಗೋ ಜೋಶ್ನಲ್ಲಿ ನನ್ನ ಎಷ್ಟ್ ಚನ್ನಾಗಿ ಯಾಮಾರ್ಸಿದ್ರು ಅಂತ!
ಅವತ್ತು ರಾತ್ರಿ ೧೦ ಗಂಟೆಗೆ ಮೆಜೆಸ್ಟಿಕ್ ನಲ್ಲಿ ಎಲ್ರು ಸೇರಿದ್ವಿ. ನಮ್ಮ ಟ್ರೆಕ್ಕಿಂಗ್ ಅನ್ನು ಅರೆಂಜ್ ಮಾಡಿದ್ದ ದೇವ್ ಬಾಲಾಜಿ ನಮಗಿಂತ ತಡವಾಗಿ ಬಂದು ಸೇರಿಕೊಂಡರು! ಅವರ ಜೊತೆಗೆ ಬಂದಿದ್ದ ದಿನೇಶ್ ಓವರ್ ಲೋಡ್ ಆಗಿದ್ದ ನಮ್ಮ ಲಗೇಜುಗಳನ್ನು ನೋಡಿ ಮುಸಿ ಮುಸಿ ನಗುತ್ತಿದ್ರೆ ನಾವೆಲ್ಲ ಇವನ್ಯಾರೋ ಪೊರ್ಕಿ ಅಂತ ಕಮೆಂಟು ಕೊಟ್ಟು ಸುಮ್ಮನಾದ್ವಿ. ನಂತರ ಶುರುವಾದದ್ದೇ ನಮ್ಮ ನಿಸರ್ಗದತ್ತ ಪಯಣ . ಈ ಬೆಂಗಳೂರಿನ ಟ್ರಾಫಿಕ್ ದಾಟಿ ಮುಂದೆ ಸಾಗುವುದೇ ದೊಡ್ಡ ಸವಾಲು ಅನ್ನಿಸಿಬಿಡ್ತು. ಬೆಳಗ್ಗೆ ತುಂಬ ನಡೆಯಬೇಕು ಅಂತ ನಾನು ಕುಳಿತಲ್ಲೇ ನಿದ್ರಿಸಲು ಯತ್ನಿಸಿದೆ. ಆದ್ರೆ ಅಡಗೋಲಜ್ಜಿಗಳಂತೆ ನೀತು ಮತ್ತೆ ಛಬ್ಬಿ ಏನೇನೋ ಮಾತಾಡುತ್ತ ಕುಳಿತ್ತಿದ್ದರು. ಹಿಂದಿನ ಸೀಟಲ್ಲಿ ಕುಳಿತಿದ್ದ ಅನುಷ , ಗಾಯನ , ಶ್ವೇತ ತಣ್ಣಗೆ ಕುಳಿತು ಹಾಗೆ ನಿದ್ರೆಗೆ ಜಾರಿದ್ದರು. ಆದ್ರೆ ಸುಬ್ರಹ್ಮಣ್ಯ ಬರುವವರೆಗೂ ನಮ್ಮ ಅಜ್ಜಿಗಳ ಚರ್ಚೆ ನಡೆದೇ ಇತ್ತು. ಆಗ ಮುಂಜಾವು ೫ರ ಸಮಯ. ತುಂತುರು ಮಳೆ, ಚುಮುಚುಮು ಚಳಿ ನಮ್ಮನ್ನು ಸ್ವಾಗತಿಸಲೆಂದೇ ಕಾದಂತೆ ಭಾಸವಾಗುತ್ತಿತ್ತು.
ಫ್ರೆಶ್ ಆಗಲು ದೇವ್ ಬಾಲಾಜಿ ಲಾಡ್ಜ್ ಗಳಲ್ಲಿ ರೂಂ ಸಿಗದೇ ಪಬ್ಲಿಕ್ ಟಾಯ್ಲೆಟ್ ನಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳಿ ಅಂದಾಗ ನಂಗೆ ಬಂದ ಕೋಪ ಅಷ್ಟಿಷ್ಟಲ್ಲ. ಆ ಕೋಪಕ್ಕೆ ನಾನು ಚಬ್ಬಿ ಯಾವ್ದಾದ್ರು ರೂಂ ಸಿಗಬಹುದ ಅಂತ ಪ್ರಯತ್ನಿಸಿ ಜೋಲು ಮುಖ ಹೊತ್ತು ವಾಪಸ್ಸಾದೆವು. ನಂತರ ಬೆಳಗಿನ ಉಪಹಾರಕ್ಕೆ ನಾನು ಅನುಷ ಮೊದಲೇ ಅಂದುಕೊಂಡಂತೆ ರುಚಿಕಟ್ಟಾದ ಅವಲಕ್ಕಿ ಮೊಸರು ಮತ್ತು ಬನ್ಸ್ ಸವಿದರೆ ಅದರ ಮಜಾ ಗೊತ್ತಿಲ್ಲದ ಚಬ್ಬಿ ಮಾಮೂಲಿ ಇಡ್ಲಿ ವಡೆಗೆ ತೃಪ್ತಿ ಪಟ್ಟಳು. ನಂತರ ಶುರುವಾದದ್ದೇ ಆಪರೇಶನ್ ಜಿಗಣೆ ! ಹೇಗಾದರು ಮಾಡಿ ಜಿಗಣೆಗಳಿಗೆ ಬ್ರಹ್ಮಾಸ್ತ್ರ ರೆಡಿ ಮಾಡಬೇಕೆಂದು ೧ಕೆಜಿ ಉಪ್ಪು ಖರೀದಿಸಿದ್ದು ಆಯ್ತು. ನಂತರ ಫಾರೆಸ್ಟ್ ರೇಂಜರ್ ಗೆ ಮೀಸಲಾದ ಸಣ್ಣ ಮನೆಯಲ್ಲಿ ಟ್ರೆಕ್ಕಿಂಗ್ ಗೆ ಅಣಿಯಾದೆವು. ಆದರೆ ಅದಕ್ಕೂ ಮುನ್ನ ಪಯಣಿಸಿದ ೨೦-೨೫ ನಿಮಿಷಗಳ ಪ್ರಯಾಣ ಅದೆಷ್ಟು ಹಿತಕರವಾಗಿತ್ತಂದ್ರೆ ಕಿರಿದಾದ ರಸ್ತೆಯ ಇಕ್ಕೆಲಗಳಲ್ಲೂ ಹಬ್ಬಿದ್ದ ಹಸಿರ ರಾಶಿ ಕಣ್ಣಿಗೆ ಹಬ್ಬ ತರುತ್ತಿತ್ತು. ಇನ್ನು ನನಗೆ ,ಛಬ್ಬಿ ,ಕಡ್ಡಿ ತಲೆ ತುಂಬ ಕೊರಿತಿದ್ದ ಹುಳ ಅಂದ್ರೆ ಈ ಜಿಗಣೆಗಳನ್ನು ಹೇಗೆ ನಿಭಾಯಿಸೋದು ಅಂತ.
ಕಾಡಿನೆಡೆಗೆ ಅತ್ಯುತ್ಸಾಹದಿಂದ ಹೆಜ್ಜೆ ಹಾಕಿದ್ದ ನಮಗೆ ಆರಂಭದಲ್ಲೇ ಕಾಡಲು ಶುರು ಮಾಡಿದವು ನೋಡಿ ಈ ಜಿಗಣೆಗಳು ನಮಗಂತೂ ಆ ಕ್ಷಣದ ಮಟ್ಟಿಗೆ ಪ್ರಪಂಚದಲ್ಲಿರುವ ಏಕೈಕ ಶತ್ರುಗಳು ಇವೆ ಇರಬೇಕು ಅನ್ನಿಸಲು ಶುರುವಾಯಿತು . ಕಣ್ಣು ಮಿಟುಕಿಸುವಷ್ಟರಲ್ಲಿ ಅದೆಲ್ಲಿಂದಲೋ ಬಂದು ರಕ್ತ ಹೀರಲು ಶುರು ಮಾಡುತ್ತಿದ್ದವು. ಹಿಂದಿನ ದಿನ ಬಿದ್ದ ಮಳೆಗೆ ತುಂಬಿ ಹರಿಯುತ್ತಿದ್ದ ನದಿ ದಾಟಲು ಎಲ್ಲರು ದೇವ್ ಬಾಲಾಜಿ ಒದಗಿಸಿದ ರೋಪ್ ಸಹಾಯದೊಂದಿಗೆ ನೀರಿಗಿಳಿದೆವು. ನಮ್ಮೆಲ್ಲರಿಗಿಂತ ಸಕತ್ ಹುರುಪಿನಲ್ಲಿದ್ದ ನೀತು ಅದ್ಯಾಕೋ ಬ್ಯಾಲೆನ್ಸ್ ತಪ್ಪಿ ನೀರಿಗೆ ಬಿದ್ದದ್ದೇ ಬಂತು. ಹಿಂದೆ ಇದ್ದ ನಾನು ಗಾಯನ ನೀರು ಪಾಲು! ಅಂತು ಇಂತೂ ನದಿ ದಾಟಿ ಕಿನಾರೆ ಮುಟ್ಟಿದಾಗಲೇ ಅರಿವಾದದ್ದು ನಮ್ಮ ಮೊಬೈಲುಗಳು ನೀರಿನಲ್ಲಿ ಮುಳುಗಿ ಸತ್ತಿವೆ ಅಂತ! ಮತ್ತೆ ಶುರು ಕಾಡಿನೊಳಗಿನ ಯಾನ....
ಎಲ್ಲರು ಯುದ್ದಕ್ಕೆ ಹೊರಟ ಸೇನಾನಿಗಳಂತೆ ಕಾಲಿಗೆ ಹರಳೆಣ್ಣೆ ನಶ್ಯ ಪುಡಿ ಲೇಪಿಸಿಕೊಂಡು ಜಿಗಣೆಗಳನ್ನು ಶಪಿಸುತ್ತ ಮುನ್ನಡೆದೆವು. ಕಾಡಿನೊಳಗಿನ ಆ ಪ್ರಶಾಂತತೆ ಮನಸ್ಸಿಗೆ ಖುಷಿ ಕೊಟ್ಟರೆ ಹಕ್ಕಿಗಳು ಅಗೋ ಯಾರೋ ಬರ್ತಿದ್ದಾರೆ ಅಂತ ತಮ್ಮಲ್ಲೇ ಚಿಲಿಪಿಲಿ ಮೂಲಕ ಸಂದೇಶ ರವಾನಿಸುತ್ತಿದ್ದವು. ಮಾರ್ಗ ಮಧ್ಯೆ ಅಲ್ಲಲ್ಲಿ ಸಿಗುತ್ತಿದ್ದ ಆನೆಯ ಲದ್ದಿ ನೋಡಿ ಸದ್ಯ ಹಳೆಯದ್ದು ಅಂತ ನಿಟ್ಟುಸಿರು ಬಿಡುತ್ತಿದ್ದೆವು. ಮೊದಲೇ ಮಳೆ ಬಿದ್ದದ್ದಕ್ಕೋ ಏನೋ ಕಾಲಿಟ್ಟ ಕಡೆಯೆಲ್ಲ ಬರೀ ಜಿಗಣೆಗಳು! ಅವನ್ನು ಮೊದಲು ನಾನು ನೋಡಿರದ ಕಾರಣ ನನ್ನ ಶೂಗಳ ಮೇಲೆ ಅವು ಹತ್ತುತ್ತಿದ್ರೆ ಕಿಟಾರನೆ ಕಿರುಚಿ ಸಹಾಯಕ್ಕಾಗಿ ಕೈಲಿದ್ದ ಕೋಲಿಂದ ಅವನ್ನು kittuvudakke ವಿಫಲ ಯತ್ನ ನಡೆಸುತ್ತಿದ್ದೆ. ಆರಂಭದಿಂದಲೂ ನನಗೆ ಜಿಗಣೆ ಹತ್ತಿದಾಗ ನೆರವಿಗೆ ಬರ್ತಿದ್ದ ದಿನೇಶ್ ಗೆ ಅದೆಷ್ಟು ಥ್ಯಾಂಕ್ಸ್ ಹೇಳಿದ್ರು ಕಮ್ಮಿ . ಈ ಜಿಗಣೆಗಳು ಬಿಸಿಲೆಯ ಆ ಅದಮ್ಯ ನಿಸರ್ಗ ಸಿರಿಯನ್ನು ಸವಿಯಲು ಬಿಡದೆ ಅದೆಷ್ಟು ಕಾಟ ನೀಡಿದವೆಂದ್ರೆ ರಾತ್ರಿ ಕನಸಲ್ಲೂ ಅವುಗಳದ್ದೇ ಕಾರುಬಾರು! ಮದ್ಯಾಹ್ನ ೧೨ರ ಹೊತ್ತಿಗೆ ನಾವು ಕಾಡಿನ ನಡುವೆ ವಿಶ್ರಮಿಸಲು ಇದ್ದ ಹಳೆಯ ಪುಟ್ಟ ಕಟ್ಟಡವನ್ನು ಹೊಕ್ಕೆವು. ಅಲ್ಲಿ ಮದ್ಯಾಹ್ನದ ಊಟ ಮುಗಿಸಿದೆವು. ಅಷ್ಟರಲ್ಲೇ ಶುರುವಾಯ್ತು ಜಡಿ ಮಳೆ. ನದಿ ದಾಟಿದರೆ ಜಿಗಣೆ ಕಾಟ ಕಮ್ಮಿ ಅಂತ ದೇವ್ ಅಂದಾಗ ಅದಕ್ಕೆ ಸಮ್ಮತಿಸಿದ್ದ ನಮಗೆ ಮಳೆ ಅಡ್ಡಿಪಡಿಸಿತು. ಹಾಗಾಗಿ ಮತ್ತೊಮ್ಮೆ ಕಾಡಿನ ನಡುವೆ ಹೆಜ್ಜೆ ಹಾಕಲೇ ಬೇಕಾಯಿತು.
ಬಿಸಿಲೆಯ ವೈಶಿಷ್ಟ್ಯ ಅಂದ್ರೆ ಇಲ್ಲಿನ ಗಗನ ಚುಂಬಿ ಮರಗಳು. ದಿನಕರನ ಅಷ್ಟೂ ಬಿಸಿಲನ್ನು ಹೊಟ್ಟೆ ಬಾಕಗಳಂತೆ ಹೀರಿಕೊಂಡು ಬಾನೆತ್ತರಕ್ಕೆ ಬೆಳೆಯುತ್ತವೆ ಇಲ್ಲಿನ ಮರಗಳು. ಪಶ್ಚಿಮ ಘಟ್ಟಕ್ಕೆ ಸೇರುವ ಈ ಕಾಡಿನ ಮರಗಳ ಕಾಂಡ ಬೃಹತ್ ಗಾತ್ರದವು. ಕಾಲಿಟ್ಟ ಕಡೆಯೆಲ್ಲ ಕಾಡುವ ಜಿಗಣೆಗಳು ಒಂದೆಡೆಯಾದರೆ ಬಣ್ಣ ಬಣ್ಣದ ಕ್ರ್ಯಾಬ್ ಗಳು ಅಚ್ಚರಿ ಹುಟ್ಟಿಸುತ್ತಿದ್ದವು. ಮತ್ತೆ ನಮ್ಮ ಪಯಣ ಮಳೆಯ ನಡುವೆಯೇ ಶುರುವಾಯಿತು. ತಗ್ಗಿನಿಂದ ಎತ್ತರ ಪ್ರದೇಶಕ್ಕೆ ಸಾಗುತ್ತಿದ್ದುದರಿಂದ ಮಳೆ ನೀರು ಸಣ್ಣ ಜಲಪಾತದಂತೆ ನಮ್ಮ ಎದುರು ಹರಿದು ಬರುತ್ತಿತ್ತು. ಪುಟ್ಟ ಝರಿಯ ಮೇಲೆ ಹೆಜ್ಜೆ ಹಾಕುತ್ತ ೩ ಗಂಟೆ ಪ್ರಯಾಣ ಮಾಡಿದ್ದು ಅರಿವಿಗೆ ಬರಲಿಲ್ಲ. ಅದರಲ್ಲೂ ಮಳೆಗೆ ಹೊಮ್ಮುವ ಮಣ್ಣಿನ ಘಮ, ಕಾಡಿನ ತಂಪಾದ ಪರಿಸರದಲ್ಲಿ ನಾವೆಲ್ಲ ಅಕ್ಷರಶಃ ಸ್ವರ್ಗ ಸುಖ ಅನುಭವಿಸುತ್ತಿದ್ದೆವು! ಕಾಡಿನಿಂದ ರಸ್ತೆಯ ಮಾರ್ಗ ಸಿಕ್ಕಾಗ ಎಲ್ಲರು ಕೊಂಚ ಸುಸ್ತಾಗಿದ್ದೆವು.. ದೇವ್ ಕೊಟ್ಟ ಕಡ್ಲೆ ಮಿಠಾಯಿ ತಿಂದು ಅಲ್ಲೇ ಪಕ್ಕದಲ್ಲೇ ಹರಿಯುತ್ತಿದ್ದ ನೈಸರ್ಗಿಕ ಜರಿಯೊಂದರಿಂದ ಕುಡಿದ ನೀರಿನ ಆ ಸ್ವಾದವನ್ನು ಹೇಗೆ ವರ್ಣಿಸಲಿ? ಅಂದು ಸಂಜೆ ಬಿಸಿಲೆ ಚೆಕ್ಪೋಸ್ಟ್ ನಲ್ಲಿನ ಹೋಟೆಲೊಂದರಲ್ಲಿ ಬಂದಿಳಿದೆವು. ಮೊದಲೇ ಮಳೆಯಲ್ಲಿ ನೆಂದು ನಡುಗುತ್ತಿದ್ದ ನಮಗೆ ಅಲ್ಲಿ ಸಿಕ್ಕ ಬಿಸಿಬಿಸಿ ಕಾಫಿ ಮತ್ತು ಆಮ್ಲೆಟ್ ಕೊಂಚ ನೆಮ್ಮದಿ ತಂದವು. ಆದ್ರೆ ಬಿಡದೆ ಸುರಿಯುತ್ತಿದ್ದ ಮಳೆಯಿಂದ ಟೆಂಟ್ ಹಾಕಿ ಮಲಗುವ ಯೋಜನೆ ಕ್ಯಾನ್ಸಲ್ ಆಗಿ ಎಲ್ಲರಿಗು ಬೇಸರ ತಂದಿತ್ತು. ಅಂದು ರಾತ್ರಿ ನಾವು ತಂಗಿದ ಮನೆಯೊಡತಿ ರುಚಿಯಾದ ಅನ್ನ ಬೆಳೆ ಸಾರು ಮಾಡಿದ್ದರು. ಬಿಸಿನೀರಿನ ಸ್ನಾನ ಮುಗಿಸಿ ನಾವೆಲ್ಲ ಹರಟೆಯಲ್ಲಿ ತೊಡಗಿದರೆ ದೇವ್ ಬಾಲಾಜಿ ಸ್ಲೀಪಿಂಗ್ ಬ್ಯಾಗ್ ಒಳಹೊಕ್ಕಿ ನಿದ್ರಿಸುತ್ತಿದ್ದರು! ಜೊತೆಗಿದ್ದ ದಿನೇಶ್ ತನ್ನ ಟ್ರೆಕ್ಕಿಂಗ್, ಫೋಟೋಗ್ರಫಿ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡಿದ. ಅವನ ನಾಲೆಡ್ಜ್ ಕಂಡ ನಮಗಂತೂ ಅಚ್ಚರಿ. ನಿಜಕ್ಕೂ ದಿನೇಶ್ ನಮ್ಮ ಟ್ರೆಕ್ಕಿಂಗ್ ನಲ್ಲಿ ಬೇಸರವಾಗದಂತೆ ಮಾಹಿತಿ ಜೊತೆಗೆ ತನ್ನ ಎಕ್ಸಲೆಂಟ್ ಫೋಟೋಗ್ರಫಿಯಿಂದ ಆಶ್ಚರ್ಯ ಮೂಡಿಸಿದ್ದು ಸುಳ್ಳಲ್ಲ. ಅಂದು ರಾತ್ರಿ ಗೂಡು ಹೊಕ್ಕ ಮರಿಗಳಂತೆ ಸ್ಲೀಪಿಂಗ್ ಬ್ಯಾಗ್ ನೊಳಗೆ ಮಲಗಿದ್ದಾಯಿತು.
ಮರುದಿನ ಮುಂಜಾನೆ ಮೈ ನಡುಗಿಸುವ ಚಳಿ ಜೊತೆಗೆ ದಾರಿ ಕಾಣದಷ್ಟು ಗಾಢವಾದ ಮಂಜು ಕಣ್ಣಿಗೆ ಮನಸ್ಸಿಗೆ ಹಬ್ಬ ತಂದಿತ್ತು. ಬೆಳಗ್ಗೆ ನಾವು ತಂಗಿದ್ದ ಮನೆಯ ಆಂಟಿ ಮಾಡಿದ್ದ ಬಿಸಿಬಿಸಿ ಕೈ ರೊಟ್ಟಿ ಕಾಯಿ ಚಟ್ನಿ ರುಚಿ ಸೂಪರ್ ! ನಂತರ ಬೆಚ್ಚನೆ ಜಾಕೆಟ್ ಶೂಗಳೊಂದಿಗೆ ಬ್ಯೂಟಿ ಸ್ಪಾಟ್ ನತ್ತ ಪಯಣ! ಅಲ್ಲಂತೂ ಮುಂಜಾನೆಯ ಮಂಜು ಗಿರಿ ಶಿಖರಗಳನ್ನು ಅದ್ಯಾವ ಪರಿ ಆವರಿಸಿತ್ತಂದ್ರೆ ಅದರ ಬಣ್ಣನೆ ಅಕ್ಷರಗಳಲ್ಲಿ ಅಸಾಧ್ಯ ! ಮಳೆ ಬರಲಿ ಮಂಜೂ ಇರಲಿ ಅನ್ನೋ ಹಾಗೆ ಇತ್ತು ಅಲ್ಲಿನ ವಾತಾವರಣ. ಬಳಿಕ ಮಂಜರಬಾದ್ ಕೋಟೆಯತ್ತ ಚಿತ್ತ ನೆಟ್ಟ ನಾವು ಬಿಸಿಲೆಯ ಚೆಲುವನ್ನು ಬಿಟ್ಟು ಬರಲು ಅನುಭಬಿಸಿದ ಸಂಕಟ ನಮಗೆ ಗೊತ್ತು! ಕೋಟೆಯನ್ನು ನೋಡಿ ಬರಲು ೧ ಗಂಟೆ ಸಮಯ ಅಷ್ಟೆ ಅಂತ ದೇವ್ ಹೇಳಿದರು ನಾವು ಗಂಟೆ ಕಾಲ ಅಲ್ಲಿ ಕಳೆದೆವು. ಸಕತ್ ಫೋಟೋ ಸೆಶನ್ ಕೂಡ ಮಾಡಿದೆವು. ಸವಾರಿ ಸಿನೆಮಾದಲ್ಲಿ ಶೂಟ್ ಮಾಡಿರುವ ಜಾಗಗಳಲ್ಲೇ ಫೋಟೋ ತೆಗೆದು ಖುಷಿ ಪಟ್ಟೆವು! ಬಳಿಕ ಸಕಲೇಶಪುರದ ಹೋಟೆಲೊಂದರಲ್ಲಿ ಅಕ್ಕಿ ರೊಟ್ಟಿ ಊಟ ಮಾಡಿ ಬೆಂಗಳೂರಿನತ್ತ ಪಯಣ ಬೆಳೆಸಿದೆವು. ಅಯ್ಯೋ ವೀಕೆಂಡ್ ಮೋಜು ಇಷ್ಟೇ ,ಮತ್ತೆ ಬೆಂಗಳೂರಿನ ಗಿಜಿ ಬಿಜಿ ಜೊತೆಗೆ ಆಫೀಸಿಗೆ ಹೋಗಬೇಕಾದನ್ನು ನೆನೆದು ಆಗುತ್ತಿದ್ದ ಸಂಕಟ ಹೇಳತೀರದು . ಆದ್ರೆ ಬೆಂಗಳೂರಿಗೆ ಬರುವ ದಾರಿಯಲ್ಲಿ ಮಾಡಿದ ಸಕ್ಕತ್ ಕೀಟಲೆ ಕಿತ್ತಾಟಗಳನ್ನೂ ಮರೆಯಲು ಸಾದ್ಯವೇ ಇಲ್ಲ.
ರಾತ್ರಿ ೯-೩೦ಕ್ಕೆ ಬೆಂಗಳೂರು ತಲುಪಿದೆವು. ಒಬ್ಬರಿಗೊಬ್ಬರು ವಿದಾಯ ಹೇಳಲು ಸಂಕಟ. ಬೇಸರದೊಂದಿಗೆ ಬಿಸಿಲೆಯ ಸವಿಸವಿ ನೆನಪನ್ನು ಮನಸಲ್ಲೇ ಚಪ್ಪರಿಸುತ್ತ ಮನೆಯತ್ತ ಹೆಜ್ಜೆ ಹಾಕಿದೆವು. ಅಂದು ರಾತ್ರಿ ಪಾಳಿ ಇದ್ದ ಕಾರಣ ನನ್ನ ದಾರಿ ಆಫೀಸಿನ ಕಡೆ. ಅನುಷ , ನೀತು, ಛಬ್ಬಿ, ಗಾಯನ, ಕಡ್ಡಿ ವಾವ್ ! ಎಷ್ಟ್ ಮಜಾ ಇತ್ತಲ್ವ ಟ್ರೆಕ್ಕಿಂಗ್? ನಾವೆಲ್ಲ ಹಿಡಿ ಶಾಪ ಹಾಕಿ ಕಚ್ಚಿಸಿಕೊಂಡ ಜಿಗಣೆ ಕಡಿತ ಈಗಲೂ ಬಿಸಿಲೆಯ ಸುಂದರ ಪ್ರಕೃತಿಯ ಗಿಫ್ಟು ಅಂದುಕೊಂಡು ಕುಶಿ ಪಡುತ್ತೇವೆ! ಅದೇ ನಿಸರ್ಗದ ಅಸಲಿ ಮಜಾ!!!

Monday, February 16, 2009

ಸಿಕ್ಕಿ ಬಿದ್ದ ಕಳ್ಳ...!

ಅಬ್ಬ ಮತ್ತೆ ಬ್ಲಾಗ್ ಅಪ್ ಡೇಟ್ ಮಾಡುವ ಸವಿಘಳಿಗೆ ಬಂದಿದೆ ನಂಗೆ! ಮೊನ್ನೆ ಮೊನ್ನೆ ನಡೆದ ಒಂದು ಘಟನೆಯನ್ನ ನಿಮ್ ಜೊತೆ ಹಂಚಿಕೊಳ್ಳಲೇಬೇಕು ಗೆಳೆಯರೇ. ನಮ್ಮನೇಲಿ ಈ ವೊಡಾಫೋನ್ ಗ್ರಾಹಕರು ತುಂಬ ಪರದಾಡೋ ಸ್ಥಿತಿ ರೀ. ಸರ್ಯಾಗ್ ನೆಟ್ವರ್ಕ್ ಸಿಗಲ್ಲ. ಅದಕ್ಕೆ ನಡುಮನೆಯಲ್ಲಿ ಕಿಟಕಿ ಹತ್ತಿರ ನೆಟ್ವರ್ಕ್ ಸಿಗುತ್ತೆ ಅನ್ನೋ ಕಾರಣಕ್ಕೆ ಅಲ್ಲಿ ತಮ್ಮ ಮೊಬೈಲ್ ಫೋನ್ ಇಡ್ತಾರೆ. ಹಾಗೇ ಅವತ್ತು ಆಯ್ತು. ಮನೆ ಬಳಿ ಯಾರೋ ಇಬ್ಬರು ಮಲೆಯಾಳಿಗಳು ಬಂದು ಏನೂ ಕೇಳಿದ್ರು. ನಂಗೆ ಆ ಭಾಷೆ ಅರ್ಥವಾಗದೆ ನಮ್ಮ ಆಂಟಿಯನ್ನು ಕರೆದು ಟಿವಿ ನೋಡೋದ್ರಲ್ಲಿ ಮಗ್ನಳಾದೆ. ನನಗೆ night shift ಇತ್ತಾದ್ರಿಂದ ಟಿವಿ ನೋಡಿದ್ಮೇಲೆ ಮಲಗೋ plan ನನ್ನದಾಗಿತ್ತು. ಅಷ್ಟರಲ್ಲಿ ಮತ್ಯಾರೋ ಬಂದು ಅದೇ ಅರ್ಥವಾಗದ ಭಾಷೆಯಲ್ಲಿ ಏನೇನೋ ಮಾತಾಡಿದ. ನಾನು ಕಳೆದ ಬಾರಿ ಮಾಡಿದ ಕೆಲಸವನ್ನೇ ಈ ಸಲವೂ ಮಾಡಿದೆ. ಮಾತಿನ ಮಧ್ಯೆ Tom ಅಂತ ಅಂದದ್ದು ಮಾತ್ರ ನೆನಪು. ಕೆಲಸ ಕೇಳುವ ನೆಪದಲ್ಲಿ ಬಂದಿದ್ದ ಆ ಭೂಪ ಏನೂ ಗಿಟ್ಟದೆ ಜಾಗ ಖಾಲಿ ಮಾಡಿದ.

ನನ್ನ ಗೆಳತಿ ಅಂಜಲಿ ಅವತ್ತು ಆಫೀಸಿಗೆ ಭಾರಿ ಆತುರದಲ್ಲಿ ರೆಡಿ ಆಗ್ತಿದ್ಲು. ಎಷ್ಟೊತ್ತಾದ್ರು ಆಫೀಸಿನ ಕ್ಯಾಬ್ ನವ್ನ ಕರೆ ಬಂದೇ ಇಲ್ವಲ್ಲಾ ಅಂತ ಕಂಗಾಲಾಗಿದ್ಲು. ಫೋನಿಗಾಗಿ ಹುಡುಕಿ ಹುಡುಕಿ ಸಾಕಾಗಿ ಎಲ್ಲರನ್ನೂ ಕಾಡಿ ಬೇಡಿದ್ರೂ ಫೋನಿನ ತಂಟೆಗೆ ಯಾರೂ ಹೋಗಿಲ್ಲ ಅನ್ನೋದು ಖಾತರಿಯಾಯ್ತು. ೨ನೇ ಸಲ ಬಂದವನೇನಾದ್ರು ಫೋನ್ ಕದ್ದನಾ ಅನ್ನೋ ಅನುಮಾನ ಕಾಡಲು ಶುರುವಾಯ್ತು. ನನಗಲ್ಲ ಅಂಜಲಿಗೆ...! ಯಾಕಂದ್ರೆ ನಾನ್ ಅವಾಗ ಟಿವಿಯೊಳಗೆ ಮುಳುಗಿದ್ದೆ. ಕೋಪದಲ್ಲಿ ಕಿಡಿಕಿಡಿಯಾಗಿದ್ದ ಅಂಜಲಿ ನನ್ನ ಮೇಲೆ ರೇಗಿದಾಗಲೇ ನಾನು ಅವಳ ಮೊಬೈಲ್ ಹುಡುಕಲು ಮನಸ್ಸು ಮಾಡಿದ್ದು. ಮನೆಯಲ್ಲಂತು ಅದರ ಪತ್ತೆ ಇಲ್ಲ. ಕರೆ ಮಾಡಿದ್ರೆ no respnse. ಇನ್ನು ಕದ್ದ ಮಹಾಶಯ ಸಿಗುತ್ತಾನೆಂಬ ನಂಬಿಕೆ ಹೊಂದದಿರುವುದೇ ಲೇಸು ಅನಿಸಿತು. ಆದ್ರು ಅಂಜಲಿ ಬಲವಂತಕ್ಕೆ ಮಟ ಮಟ 12ರ ಹೊತ್ತಲ್ಲಿ ಹೊರಗೆ ಬಂದವರೇ ಅವನು ಸ್ವಲ್ಪ ಕುಡಿದು ಬಂದಿದ್ದ ಅನ್ನೊ ಆಂಟಿಯ ಅಭಿಪ್ರಾಯಕ್ಕೆ ಮನ್ನಣೆ ಕೊಟ್ಟು ನಮ್ಮ ಏರಿಯಾದ ೨-೩ ವೈನ್ ಶಾಪ್ ಗಳಿಗೆ ಹೋಗಿ "ಯಾರಾದ್ರು ಮೊಬೈಲ್ ಮಾರಲು ಕಪ್ಪು ಜಾಕೆಟ್ ತೊಟ್ಟು ಬಂದಿದ್ದರೇ? ಅಥವಾ ಬಂದ್ರೆ ತಿಳಿಸಿ" ಅಂತ ಮನವಿ ಮಾಡಿ ಬಂದದ್ದಾಯ್ತು. ಸಾಲದಕ್ಕೆ "ಅಂತಹವರನ್ನೇಕೆ ಮನೆಯೊಳಗೆ ಬಿಟ್ಟದ್ದೆಂಬ" ಪ್ರಶ್ನೆಗೆ ಉತ್ತರಿಸಬೇಕಾಯ್ತು. ಹೀಗೆ ಒಂದು ಸುತ್ತು ಬರುವಷ್ಟರಲ್ಲಿ ಅವನನ್ನು ಹಿಡಿಯಲೇ ಬೇಕೆಂಬ ಸಂಕಲ್ಪ ಮಾಡಿದ್ದೆ. ಅದೂ ಸಿಕ್ಕರೇ ತಾನೇ ಹಿಡಿಯೋದು?

ಹಾಗಂತ ಬರುವಾಗಲೇ ನಮ್ಮನೆಗೆ ಬಂದವನ ಥರಾನೇ ಒಬ್ಬನನ್ನು ನೋಡಿದ ಹಾಗಾಯ್ತು. ಆ ವ್ಯಕ್ತಿಯನ್ನು ನಾನು ಮತ್ತು ಆಂಟಿ ಬಿಟ್ರೆ ಮತ್ಯಾರು ನೋಡಿರಲಿಲ್ಲ. ಸರಿ ಬ್ಯಾಗೊಂದನ್ನು ತಗಲುಹಾಕಿಕೊಂಡಿದ್ದವನು ಅಮಾಯಕನಂತೆ ನಮ್ಮೆದುರೇ ನಡೆದು ಹೋದ. ಸಂಶಯಕ್ಕೆ ಆಸ್ಪದವೇ ಬರಲಿಲ್ಲ. ಕಳ್ಳನಂತೆ ಕಾಣಲಿಲ್ಲ. ನಾನೇನಾದ್ರು ತಪ್ಪು ವ್ಯಕ್ತಿಯನ್ನು ಕಳ್ಳ ಅಂತ ಭಾವಿಸಿ ಧರ್ಮದೇಟು ಕೊಡಿಸಿದ್ರೆ ಆ ಪಾಪ ನನಗೆ ಯಾಕೆ ಅಂತ ಯೋಚಿಸಿ, ಸ್ವಲ್ಪ ದೂರ ಫಾಲೋ ಮಾಡೋಣ, ಓಡಲು ಯತ್ನಿಸಿದ್ರೆ ಇವ್ನೇ ಕಳ್ಳ ಅಂತ ನಿರ್ಣಯಿಸಿ ಹಿಂಬಾಲಿಸಿದೆವು. ಆತ ಮಾತ್ರ ಕೂಲ್ ಆಗಿ ನಡೆಯುತ್ತಲೇ ಹೋದ. ದೇವರ ದಯೆಯೆಂಬಂತೆ ಅಲ್ಲೇ ಒಬ್ರು ಪೊಲೀಸ್ ನಿಂತಿದ್ರು. ಅವರಲ್ಲಿ ನಡೆದದ್ದನ್ನು ವಿವರಿಸಿ ಆ ವ್ಯಕ್ತಿಯನ್ನು ಸ್ವಲ್ಪ ವಿಚಾರಿಸಿ ಅಂತ ವಿನಂತಿಸಿದೆವು. ಆದ್ರೆ ಆ ಮಹಾಶಯರಿಗೆ ಇದ್ಯಾಕೋ interesting case ಅಂತ ಅನ್ನಿಸಲಿಲ್ವೇನೋ. ಯಾರನ್ನೋ ಮಾತಾಡಿಸೋ ನೆಪದಲ್ಲಿ ಪೇರಿ ಕಿತ್ತರು. ನಮ್ಮ ಕೆಟ್ಟ ನಸೀಬಿಗೆ ಹಿಡಿಶಾಪ ಹಾಕುತ್ತಾ ಮನೆಕಡೆ ಹೆಜ್ಜೆ ಹಾಕುವಾಗ ಪಕ್ಕದ ಅಂಗಡಿಯವರನ್ನೊಮ್ಮೆ ನಮ್ಮ ಮನೆ ಅಡ್ರಸ್ ಕೇಳಿ ಯಾರದ್ರೂ ಬಂದಿದ್ರಾ? ಅಂತ ಕೇಳಿದೆವು. ತಕ್ಷಣ ಸ್ಪಂದಿಸಿದ ಅವರು ಆ ವ್ಯಕ್ತಿಯ ಹೇಗಿದ್ದ ಅಂತ ವಿವರಿಸಿದ್ರು. ಅವನ ಕೈಲಿದ್ದ ಕಪ್ಪು ಬಿಳುಪು ಬ್ಯಾಗಿನ ಕುರುಹನ್ನು ಕೇಳಲು ನಾನು ಮರೆಯಲಿಲ್ಲ. ಆಗ್ಲೆ ನಮ್ಮ investigationಗೆ ಹೊಸ ತಿರುವು ಸಿಕ್ಕದ್ದು.

ಅವನನ್ನು ಮತ್ತೆ ಹುಡುಕಲು ಆಟೋ ಕರೆಯಲು ಹೋದ ಅಂಜಲಿಯನ್ನು ನನ್ನ ಟೂ ವ್ಹೀಲರ್ ಏರಲು ಹೇಳಿ ಮತ್ತೆ ಆತ ನಡೆದು ಹೋದ ಹಾದಿಯಲ್ಲೇ ಎಲ್ಲರನ್ನೂ ವಿಚಾರಿಸುತ್ತಾ ಹೋದೆವು. ಹಾಗೆ ಸಿಕ್ಕವರೇ ನಮ್ಮ great Tom ಅಂಕಲ್ ಗೆಳೆಯರು. ನಾವು ಅವರ ಕೆಳಗಿನ ಮನೆಯ ಮಕ್ಕಳು ಅಂತ ತಿಳಿದವರೇ ನಮ್ಮ investigationಗೆ ಕೈಜೋಡಿಸಿದ್ರು. ನಾವಿಬ್ಬರೂ ಹಿಂದೆಂದೂ ನೋಡಿರದ ಗಲ್ಲಿಗಳನ್ನೆಲ್ಲಾ ಅವರ ದೆಸೆಯಿಂದ ಸುತ್ತಿದೆವು. ಯಾಕೊ ಆ ಖದೀಮ ಸಿಗಲಾರನೇನೋ ಅಂತ ಅಂಜಲಿ ಉಸುರುತ್ತಿದ್ದಳು, ಬಾಯಿ ಮುಚ್ಚಿಕೊಂಡು ಕೂರು ಅಂತ ನಾನು ಗದರಿಸಿದೆ. ಪಿಂಕ್ ಶರ್ಟ್, ಕಪ್ಪು ಪ್ಯಾಂಟ್, ಕೈಲಿ ಬ್ಯಾಗು ಇದಿಷ್ಟೆ ನನ್ನ ಕಣ್ಣ ತುಂಬ. ಹಾಗೇ ಮುಂದಿನ ತಿರುವಿಗೆ ಬಂದ್ವಿ, ಅಲ್ಲಿತ್ತು ಮಿಕ. ತೀರಾ ಪೆದ್ದನಂತೆ, ಸ್ವಲ್ಪ ಅಮಾಯಕನಂತೆ ನಟಿಸುತ್ತ ನಡೆದು ಬರುತ್ತಿದ್ದ. ಅಂಕಲ್ ಅವ್ನೇ ಅವ್ನೇ ಅಂತ ಕೂಗಿದ್ದೇ ತಡ, ನಮ್ಮ ಜೊತೆ ಬಂದವರು ಆ ವ್ಯಕ್ತಿಯನ್ನು ಹಿಂದು ಮುಂದು ವಿಚಾರಿಸದೇ ಪಕ್ಕಕ್ಕೆ ಕರೆತಂದು ಕಪಾಳಕ್ಕೆರಡು ಬಿಗಿಯೋದಾ? ಇತ್ತ ಅಂಜಲಿ plz dont hit ಅಂತಿದ್ರೆ ಕೇಳೋರ್ಯಾರು?



ಮೊದಲು ಕೈಲಿದ್ದ ಬ್ಯಾಗ್ ಕೊಡಲು ಒಪ್ಪದ ಆತ ವಿಧಿಯಿಲ್ಲದೆ ಕೊಡಬೇಕಾಯ್ತು. ಆದ್ರೆ ಅದರಲ್ಲಿದ್ದದ್ದು ಯಾವ್ದೊ ಹಳೇ ನೋಕಿಯಾ ಮೊಬೈಲ್ ಸೆಟ್. ಅಷ್ಟರಲ್ಲಿ ಜನರ ಹಿಂಡು ನೆರೆದಿತ್ತು. ಇಷ್ಟೆಲ್ಲಾ scene create ಆದ್ಮೇಲೆ ಏನಪ್ಪ ಗ್ರಹಚಾರ ಅನ್ಕೊಳ್ವಾಗ್ಲೇ ಅಂಜಲಿ ಮೊಬೈಲ್ ಕಳ್ಳನ ಬ್ಯಾಗಿಂದ ಆಚೆ ಬಂತು. ನಾನಂತೂ ಒಂದು ಕ್ಷಣ ಅವಾಕ್ಕಾದೆ. ಸಿಮ್ ಇದ್ಯಾ ನೋಡ್ಕೋ ಅಂದೆ. ಅದು ಅವನ ಜೇಬು ಸೇರಿತ್ತು. ಆಮೇಲೆ ಅಂಜಲಿ ಕೈಗೆ ಬಂತು. ಆಮೇಲೆ ಆದದ್ದೇ Tom uncle entry. ನಮ್ಮ ಏರಿಯಾದಲ್ಲೇ ತಮ್ಮದೇ ಆದ ಖದರ್ರ್ ಇಟ್ಟುಕೊಂಡಿರೋ uncle ಅಲ್ಲಿ ಬಹುತೇಕ ಎಲ್ಲರಿಗೂ ಪರಿಚಿತರು. ಅವರಾ....ತನ್ನನ್ನು ಕೇಳಿಕೊಡು ಬಂದು ಫೋನ್ ಕದ್ದನಲ್ಲ ಅಂತ ಬಂದಿದ್ದ ಕೋಪಕ್ಕೆ ಎರಡು ಬಾರಿಸಿ ಮನೆ ಹತ್ರ ಆ ವ್ಯಕ್ತಿಯನ್ನು ತಮ್ಮ ಕಾರಿನಲ್ಲೇ ಕರೆದು ತಂದ್ರು. ಮೊದಲು policeಗೆ ಹಿಡಿದು ಕೊಡ್ತೀನಿ ಅಂದವರು ಆಮೇಲೆ ಆ ಮೊಬೈಲ್ ಚೋರನಿಗೆ ಬುದ್ಧಿ ಹೇಳಿ ಉಪದೇಶ ಕೊಟ್ಟು ನಮ್ಮೇರಿಯಾದಲ್ಲಿ ಮತ್ತೆ ಕಂಡರೆ ಹುಷಾರ್ ಅಂತ ಎಚ್ಚರಿಸಿ ಬಿಟ್ಟು ಬಿಟ್ಟ್ರು.

ಅಷ್ಟರಲ್ಲಾಗ್ಲೇ ನಮ್ಮೆಲ್ಲ friends ಗೆ ಸುದ್ದಿ BBC News ಥರಾ ತಿಳಿದುಹೋಗಿತ್ತು. ಒಂದು ಕ್ಷಣ ಯಾಮಾರಿದ್ದಕ್ಕೆ ಇಷ್ಟೆಲ್ಲಾ ಆಯ್ತು. ಇದೊಂದು ಮೊಬೈಲ್ ಕಳ್ಳತನ ಅಷ್ಟೆ ಸರಿ. ಆದ್ರೆ, ಬೆಂಗಳೂರಲ್ಲಿ ಎಷ್ಟೇ ಹುಷಾರಲ್ಲಿದ್ರು ಟೊಪ್ಪಿ ಹಾಕುವವರು ಬಿಡಲಾರರು. ನೀವೂ ಹುಷಾರು, ಸಲ್ಲದ ನೆಪ ಹೇಳಿ ಮನೆ ಬಾಗಿಲಿಗೆ ಬಂದವರನ್ನು ಎಚ್ಚರಿಕೆಯಿಂದ handle ಮಾಡಿ.

Monday, December 15, 2008

ಹಲೋ ಗೆಳೆಯರೇ, ತುಂಬಾ ದಿನಗಳಾಗಿದ್ವು ನನ್ನ ಬ್ಲಾಗ್ ಅಪ್ಡೇಟ್ ಮಾಡಿ, thank god ಕಡೆಗೂ ಈಗ ಸಮಯ ಸಿಕ್ಕಿದೆ. ಕೆಲ ದಿನಗಳಿಂದ ಒಂದು ಮಾತು ಮನಸಲ್ಲಿ ಉತ್ತರ ಸಿಗದೆ ಗೊಂದಲದ ಗೂಡಾಗಿದೆ ರೀ. ಈ ಸಾರಿ ಏನು ಬರೆಯೋದು ಅಂತಾನೆ ಗೊತ್ತಾಗ್ತಿರ್ಲಿಲ್ಲ, ಆದ್ರೆ ಒಂದ್ ವಿಷ್ಯ ನಿಮ್ ಹತ್ರ ಹೇಳಲೇ ಬೇಕು. ಎನ್.ಡಿಟಿವಿ ಇಮ್ಯಾಜಿನ್ ನಲ್ಲಿ 'ಜಸುಬೇನ್ ಜಯಂತಿ ಲಾಲ್ ಜೋಷಿ ಕಿ ಜಾಯಿಂಟ್ ಫ್ಯಾಮಿಲಿ' ಅನ್ನೋ ಧಾರಾವಾಹಿ ಪ್ರಸಾರವಾಗುತ್ತೆ. ಅದೊಂದು ತುಂಬು ಕುಟುಂಬದ ಸುತ್ತ ಸುತ್ತುವ ಕಥೆ. ಈಗಲೂ ಅವಿಭಕ್ತ ಕುಟುಂಬಗಳಿವೆ ಅನ್ನೋದನ್ನ, ಕೂಡಿ ಬಾಳಿದರೆ ಸ್ವರ್ಗ ಸುಖ ಅನ್ನೋದನ್ನ ಪದೇ ಪದೇ ನಿರ್ದೇಶಕರು ಪ್ರೂವ್ ಮಾಡ್ತಾನೆ ಇರ್ತಾರೆ. ಕೆಲವೊಮ್ಮೆ ತೀರಾ ಅತಿ ಅನ್ನಿಸಿದ್ರೂ 'ಜಸುಬೇನ್...' ತನ್ನ ಲವಲವಿಕೆಯಿಂದ ನೋಡುಗರಿಗೆ ಇಷ್ಟ ಆಗುತ್ತೆ.
ಪೀಠಿಕೆ ಜಾಸ್ತಿ ಆಯ್ತೇನೋ, ಆದ್ರೆ ಹೇಳ್ತೀನಿ ಕೇಳಿ.

ಇತ್ತೀಚಿನ ಎಪಿಸೋಡ್ ಗಳಲ್ಲಿ ಇದರಲ್ಲಿ ಬರುವ ನಂದಿನಿ ಪಾತ್ರಧಾರಿಗೆ ಆಕೆಯ ಲಂಗ್ಸ್ ಶೇ೯೫ ರಷ್ಟು ಫೇಲ್ ಆಗುತ್ತೆ. ಆಕೆ ಬದುಕುವ ಸಂಭವ ತೀರಾ ಕಮ್ಮಿ ಅಂತಾರೆ ವೈದ್ಯರು. ಇದನ್ನೇ ಸುಮಾರು ೨-೩ ವಾರ ಎಳೆದು ಎಳೆದು ಅಂತು ದೇವರ ದಯೆಯಿಂದ ಆಕೆ ಹುಶಾರಾಗೆ ಬಿಡ್ತಾಳೆ. ಇದೆ ಕಾರಣಕ್ಕೆ ಮುರಿದು ಬೀಳಲಿದ್ದ ಮದುವೇನು ಸಾಂಗವಾಗಿ ನೆರವೇರುತ್ತೆ. ನಿನ್ನೆಯಂತೂ ಇದೆಲ್ಲ ವಾಸ್ತವ ಆಗಿದ್ರೆ ಎಷ್ಟು ಚೆನ್ನ ಆಲ್ವಾ ಅನ್ನಿಸ್ತಿತ್ತು. ಯಾಕೆ ಅಂತೀರಾ? ಸುಮಾರು ೨ ವಾರಗಳ ಹಿಂದಷ್ಟೇ ನಮ್ಮ ಮನೆಗೆ ಸಿಬಿಲ್ ಅನ್ನೋ ಹುಡುಗಿ ಬಂದಿದ್ದಳು. ನಮ್ಮ ಪಿಜಿ ಮಾಲೀಕರ ಸಂಬಂಧಿ. ನೋಡೋಕೆ ಅದೆಷ್ಟು ಚೆನ್ನ ಅವಳು. ಚೆನ್ನಾಗಿ ಭರತ ನಾಟ್ಯ ಮಾಡ್ತಾಳೆ, ನರ್ಸಿಂಗ್ ಮಾಡಿದ್ದಾಳೆ. ಒಳ್ಳೆ ಕಡೆ ಕೆಲಸ ಸಿಕ್ಕರೆ ಅಪ್ಪ ಅಮ್ಮನ್ನ ಚೆನ್ನಾಗಿ ನೋಡ್ಕೊಳೋ ಆಸೆ ಜವಾಬ್ದಾರಿ ಈಡೇರುತ್ತೆ ಅಂತ ಹೇಳ್ತಾ ಇದ್ಲು. ಅವಳ ಮುಖದಲ್ಲಿದ್ದ ಮುಗ್ಧತೆ ನಂಗೆ ತುಂಬಾ ಇಷ್ಟ ಆಯ್ತು. ಆದ್ರೆ ಈ ವಿಧಿ ಅನ್ನೋದಿದ್ಯಲ್ಲ? ಅದು ತುಂಬಾ ಕೆಟ್ಟದ್ದು. ಯಾವಾಗಲೂ ಒಳ್ಳೆವ್ರಂದ್ರೆ ಅದಕ್ಕೆ ತುಂಬಾ ಇಷ್ಟ ಇರ್ಬೇಕು. ಮೊನ್ನೆ ಮೊನ್ನೆ ತಾನೆ ನೋಡಿದ್ದ ಈ ಮುದ್ದು ಹುಡುಗಿ ಮಲೇರಿಯಾ ಬಂದು ಆಸ್ಪತ್ರೆ ಸೇರಿದಳು. ಅಲ್ಲಿ ೩ ದಿನ ಕಳೆದ ಮೇಲೆ ಗೊತ್ತಾಯ್ತು ಅದು ಬರೀ ಮಲೇರಿಯಾ ಅಲ್ಲ, ಡೆಂಗ್ಯೂ, ಮತ್ತು ನ್ಯುಮೋನಿಯಾ ಕೂಡ ಆ ದೇಹವನ್ನು ಕಿತ್ತು ತಿನ್ನ ತೊಡಗಿವೆ ಅಂತಾ. ಅಬ್ಬಾ, ವೈದ್ಯರು ಬದುಕುವ ಸಂಭವ ಕಮ್ಮಿ ಅಂದ್ರು.

ಅಕ್ಷರಶಃ ಬೆಳದಿಂಗಳ ಬಾಲೆಯ ಹಾಗಿದ್ದ ಆಕೆ ಈಗ ಹೇಗಿದ್ದಾಳೆ ಗೊತ್ತಾ? ನಮಗೆಲ್ಲ ಉಳಿದಿದ್ದ ಒಂದೇ ದಾರಿ ಆ ದೇವ್ರು. ಒಂದು ಕ್ಷಣ ಬಿಡದೆ ಪ್ರಾರ್ಥನೆ ಮಾಡಿದ್ವಿ. ಸಿಕ್ಕ ಸಿಕ್ಕವರಿಗೆಲ್ಲ ದೇವರಲ್ಲಿ ಬೇಡಿ ಅಂತ ಎಸ್ಸೆಮ್ಮೆಸ್ಸು ಕಳಿಸ್ದೆ ನಾನು. ಕೆಲವು ಸಹೃದಯಿಗಳು ಅದಕ್ಕೆ ಸ್ಪಂದಿಸಿದರು ಕೂಡ. ಆಗ ನನ್ನ ಮನಸ್ಸಿಗೆ ಇದೆ ನಂದಿನಿ ಬಂದಳು. ಇನ್ನೇನು ಸಾವಿನ ಮನೆ ಕದ ತಟ್ಟಿ ನಿಂತವಳು ಅದೆಷ್ಟು ಚೆನ್ನಾಗಿ ಗುಣವಾದಳು? ಸಿಬಿಲ್ ಗೂ ಹಾಗೆ ಆದ್ರೆ? ಛೆ! ತಿಳಿದು ತಿಳಿದು ನಾನ್ಯಾಕೆ ಒಳ್ಳೆ ಫಿಲ್ಮಿ ಆಗಿ ಯೋಚಿಸ್ತಿದ್ದಿನಿ? ವಾಸ್ತವ ಬೇರೆ ತಾನೆ? ಹೇಳಿ ಕೇಳಿ ಆಕೆ ನನ್ನ ಹತ್ತಿರದ ಗೆಳತಿಯಲ್ಲ, ನನ್ನ ಸಂಬಂಧಿಯಲ್ಲ. ಆದ್ರೆ ಅದೊಂದು ಜೀವ ತಾನೆ? ಅದನ್ನು ನಂಬಿ ಕುಳಿತ ಮತ್ತಿಬ್ಬರು ಅಮಾಯಕರು ಕೈಲಿ ಜಪ ಸರ ಹಿಡಿದು ಹಗಲು ರಾತ್ರಿ ದೇವರಲ್ಲಿ ಮೊರೆ ಇಡುತ್ತಿದ್ದಾರೆ ( ಆಕೆಯ ತಂದೆ ತಾಯಿ). ದೇವರ ದಯೆ ನಮ್ಮ ಕಡೆ ಇದ್ಯೇನೋ ಆಕೆ ಆಶ್ಚರ್ಯವೆಂಬಂತೆ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ. ಇದೊಂದು ಮಾತು ನಮ್ಮಲ್ಲಿ ಉತ್ಸಾಹ ಮೊಡಿಸಿದೆ. ಸಿನಿಮಾ ಸೀರಿಯಲ್ ಗಳಲ್ಲಿ ಡೈರೆಕ್ಟರುತನಗೆ ಬೇಕಾದ ಹಾಗೆ ಪಾತ್ರಗಳನ್ನು ಸಾಯಿಸಿ ಮತ್ತೆ ಬದುಕಿಸುವುದು ಅವರಿಗೆ ರೀಲ್ ಕತ್ತರಿಸಿದಷ್ಟೇ ಸುಲಭ. ಆದ್ರೆ ರಿಯಲ್ ಲೈಫ್ ಹಾಗಲ್ಲವಲ್ಲ? ಎಲ್ಲಕ್ಕೂ ಸೂತ್ರಧಾರ ಅವನೇ ತಾನೆ? ಸದ್ಯ ದೇವರ ಕೃಪೆಯಿಂದ ಎಲ್ಲಾ ಒಳ್ಳೆದಾಗಲಿ ಅನ್ನೋದು ನಮ್ಮೆಲ್ಲರ ಆಶಯ. ನೀವು ಈ ಲೇಖನ ನೋಡಿದ್ರೆ ಆ ಜೀವಕ್ಕಾಗಿ ಒಂದೇ ಒಂದು ಶುಭ ಹಾರೈಕೆಯನ್ನ ಕೊಡ್ತಿರಾ. ಅದಕ್ಕೆ ಕಾಸು ಖರ್ಚು ಮಾಡಬೇಕಿಲ್ಲ. ಮನಸ್ಸು ಮಾಡಬೇಕು ಅಷ್ಟೆ.

Friday, November 7, 2008

ಅತ್ತೆಗೊಂದು ಕಾಲ...ಸೊಸೆಗೊಂದು ಕಾಲ

ದೇನೇ ವಾಲಾ ಜಬ್ಬೀ ದೇತಾ, ದೇತಾ ಚಪ್ಪಡ್ ಫಾಡ್ ಕೇ ಅಂತಾರೆ. ಈ ಮಾತನ್ನ ನೀವೂ ಬಹಳಷ್ಟು ಸಾರಿ ಕೇಳಿರ್ತೀರಿ. ದೇವರು ವರವನು ಕೊಡೋದೇ ಹಾಗೆ, ನೋಡೋರ ಹೊಟ್ಟೆಯಲ್ಲೊಮ್ಮೆ ಕಿಚ್ಚು ಹೊತ್ತಿಕೊಳ್ಳಬೇಕು ಹಾಗಿರುತ್ತೆ ಅವನು ಕೊಡುವ ವರ. ನಮ್ಮ 'ಸೀರಿಯಲ್ ಕ್ವೀನ್' ಏಕ್ತಾ ಕಪೂರ್ ಳನ್ನೇ ನೋಡಿ. ಯಾವ ಚಾನೆಲ್ ಹಾಕಿದ್ರೂ ಬರೀ K ಸೀರಿಯಲ್ ಗಳದ್ದೇ ದರ್ಬಾರು. ಅದರಲ್ಲೂ ಕಳೆದ ೮ ವರ್ಷಗಳಿಂದ ಪ್ರಸಾರವಾಗುತ್ತಾ ಟೆಲಿವಿಷನ್ ಪ್ರಪಂಚದಲ್ಲೇ ಇತಿಹಾಸ ಬರೆದ 'ಕ್ಯೂಂ ಕೀ ಸಾಸ್ ಭೀ ಕಭೀ ಬಹೂ ಥೀ' ಒಂದು ಕಾಲದಲ್ಲಿ ಗಳಿಸಿದ ಜನಪ್ರಿಯತೆ ನಿಮಗೇ ಗೊತ್ತುಂಟು. ಇದಷ್ಟೇ ಅಲ್ಲ, ಹೆಚ್ಚು ಕಡಿಮೆ ಏಕ್ತಾಳ ಎಲ್ಲಾ ಸೀರಿಯಲ್ ಗಳೂ ಜನಪ್ರಿಯತೆ ಪಡೆದಿವೆ. ಆದ್ರೆ ಕ್ಯೂ ಕೀಯನ್ನು ಕಣ್ಣಿಗೆ ಎಣ್ಣೆ ಬಿಟ್ಟು ನೋಡುತ್ತಿದ್ದ ಅತ್ತೆ ಸೊಸೆಯರು ಈಗೇನಾದ್ರು? ಟಿಆರ್ ಪಿ ಗ್ರಾಫ್ ಇನ್ನಿಲ್ಲದಂತೆ ಏರಿಸಿಕೊಂಡ ಧಾರಾವಾಹಿ ಹೀಗೆ ನೆಲ ಕಚ್ಚಲು ಕಾರಣ ಆದ್ರೂ ಏನು? ಏನು? ಏನು!

ಅಬ್ಬಬ್ಬಾ! ನನ್ನ ಈ ಅಸಂಬದ್ಧ ಪ್ರಶ್ನೆಗಳಿಗೆ ಉತ್ತರಿಸೋದಕ್ಕಿಂತ ಆ soap much better ಅಂತೀರಾ? ಖಂಡಿತ ಇಲ್ಲ. ಯಾಕೆ ಗೊತ್ತಾ? ಈ ಸಿನಿಮಾ ಸೀರಿಯಲ್ ಅನ್ನೋ ಮಾಯಾ ಪ್ರಪಂಚವೇ ಹಾಗೆ ರೀ. ಇಲ್ಲಿ ಖ್ಯಾತಿ, ಯಶಸ್ಸು ಯಾರಪ್ಪನ ಸೊತ್ತೂ ಅಲ್ಲ. ಪ್ರತಿಭೆ ಮತ್ತು ನಸೀಬು ಚೆನ್ನಾಗಿದ್ರೆ ಸಾಕು ಅಷ್ಟೇ. ಇದಕ್ಕೆ ಸರಿಯಾದ ಸದ್ಯದ ಉದಾಹರಣೆ ಬೇಕಂದ್ರೆ colours channel ನ ಒಮ್ಮೆ ತಿರುಗಿಸಿ. ರಾತ್ರಿ ೮ ಗಂಟೆಗೆ ಪ್ರಸಾರವಾಗೋ 'ಬಾಲಿಕಾ ವಧು' ಸೀರಿಯಲ್ ನ ಒಮ್ಮೆ ನೋಡಿ. ರಾಜಸ್ಥಾನದಲ್ಲಿ ಸಾಮಾನ್ಯವಾದ ಬಾಲ್ಯ ವಿವಾಹ ಈ ಧಾರಾವಾಹಿಯ ಕಥಾವಸ್ತು.

ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ಬರುವ ಆನಂದಿ( ಅವಿಕಾ ಘೋರ್) ಪಾತ್ರಧಾರಿಯನ್ನೊಮ್ಮೆ ನೋಡ್ರಿ. ಯಾಕಂತೀರಾ? ಈ ಮುದ್ದು ಹುಡುಗಿಯ ಅಭಿನಯ ಬರೀ ಎಲ್ಲರ ಮನಗೆದ್ದಿರೋದಷ್ಟೇ ಅಲ್ಲ, ಏಕ್ತಾಳ ಕ್ಯೂಂ ಕೀಗೆ ಫುಲ್ ಸ್ಟಾಪ್ ಬೀಳಲು ಬಾಲಿಕ ವಧು ಸೀರಿಯಲ್ ಒಂದು ಕಾರಣ ಅನ್ನುತ್ತೆ ಒಂದು ಮೂಲ. ವಯಸ್ಸು ಅಬ್ಬಬ್ಬಾ ಅಂದ್ರೆ ೧೨-೧೩ ಇರಬಹುದು. ತನ್ನ ಅಭಿನಯದಿಂದ ಎಲ್ಲರನ್ನೂ ಕಟ್ಟಿ ಹಾಕಿಬಿಡ್ತಾಳೆ ಈ ಪೋರಿ. ಆನಂದಿ ನಕ್ಕರೆ ಅದೇ ನಮ್ಮೂರ ಕೆರೆಗಳಲ್ಲಿ ನೋಡಿರ್ತೀವಲ್ಲಾ? ಪುಟ್ಟ ಪುಟ್ಟ ಕೆಂದಾವರೆಗಳು ಹಾಗೇ ಕಾಣ್ತಾಳೆ. ಅತ್ತರಂತೂ ನಮಗೂ ಬೇಜಾರು, ಆದ್ರೂ ನೋಡೋಕೆ ಮುದ್ದು ಮುದ್ದು. ಇನ್ನು ಅವಳ ಮಾತುಗಳೋ ಮರಿ ಹಕ್ಕಿಗಳು ಕಿಚಿಪಿಚಿಗುಟ್ಟುತ್ತವಲ್ಲ ಅಷ್ಟು ಮಧುರ. ಆದ್ರೆ ವಿಪರ್ಯಾಸ ನೋಡಿ ಶಾಲೆಗೆ ಹೋಗಿ ಅಕ್ಷರ ತಿದ್ದುವ ವಯಸ್ಸಲ್ಲಿ ಸೌಟು ಹಿಡಿಯಬೇಕಾದ ಪರಿಸ್ಥಿತಿ. ಇದು ಕೇವಲ ಆನಂದಿಯ ಕಥೆ ಮಾತ್ರ ಅಲ್ಲ. ಅಂತಹ ಅದೆಷ್ಟು ಲಕ್ಷ ಲಕ್ಷ ಆನಂದಿಯರ ಕಣ್ಣೀರ ಧಾರೆ ರಾಜಸ್ಥಾನದ ಮರಳು ಭೂಮಿಯ ತಹತಹಿಸುವ ಈ ಬಾಲ್ಯ ವಿವಾಹವೆಂಬ ಪಿಡುಗಿನ ದಾಹವನ್ನು ತಣಿಸುತ್ತಿದೆಯೋ? ಈ ವ್ಯವಸ್ಥೆ ಹೀಗೇ ಇರುವುದಾದರೆ ಕಣ್ಣೀರ ಕೋಡಿ ಹರಿಸುತ್ತಲೇ ಇರುವ ಆನಂದಿಯರು ಇನ್ನು ಮುಂದೆಯೂ ಇರುತ್ತಾರೆ. ಇನ್ನು ಈ ಸೀರಿಯಲ್ ನಲ್ಲಿ ಬರುವ ಪ್ರತಿಯೊಬ್ಬ ಪಾತ್ರಧಾರಿಯೂ ಇಷ್ಟ ಆಗ್ತಾರೆ. ಸಂಪ್ರದಾಯದ ಭೂತ, ಶ್ರೀಮಂತಿಕೆಯ ಸೊಕ್ಕು ಹೊಕ್ಕ ದಾದಿ ಅಂತೂ ಅಬ್ಬಬ್ಬಾ...ಒಟ್ಟಿನಲ್ಲಿ ಮಿಸ್ ಮಾಡದೆ ಈ ಧಾರಾವಾಹಿ ನೋಡಿ. ಮಣಭಾರದ ಆಭರಣ, ಡಿಸೈನರ್ ಉಡುಗೆ ತೊಟ್ಟ ಅತ್ತೆ ಸೊಸೆಯರ ಕಾದಾಟಕ್ಕಿಂತ ಇದು ನಿಮ್ಮ ಮನಮೆಚ್ಚದಿದ್ದರೆ ಕೇಳಿ.

Wednesday, October 22, 2008

ಝಣ ಝಣ ಕಾಂಚಾಣ...

ಚಿಕ್ಕವರಿದ್ದಾಗ ಸಿನಿಮಾ ನಟರನ್ನ ನೋಡೋದಂದ್ರೆ ಅಬ್ಬಬ್ಬಾ ಅದೇನ್ ಖುಷಿ ಅದೇನ್ ಕಥೆ? ರಾಜ್ ಕುಮಾರ್ ಬರ್ತಾರಂತೆ! ಅವ್ರು ಹಾಡ್ ಹಾಡಿ ಹೆಜ್ಜೇನೂ ಹಾಕ್ತಾರಂತೆ? ಇಂತಹ ಪ್ರಶ್ನೆಗಳೇ ಸಾಕಿದ್ದವು, ಸಿನಿಮಾ ನಟರ ಬಗೆಗಿನ ಹುಚ್ಚು ಅದೆಷ್ಟಿತ್ತು ಅನ್ನೋದನ್ನ ಹೇಳೋದಕ್ಕೆ. ನಾನೊಮ್ಮೆ ಪುಟ್ಟವಳಿದ್ದಾಗ ಮನೆಯವ್ರ ಜೊತೆಗೆ ಜಾತ್ರೆಗೆ ಹೋದಾಗ ಅಲ್ಲಿಗೆ ಅಂದಿನ ಖ್ಯಾತ ತಾರಾ ಜೋಡಿ ಮಾಲಾಶ್ರೀ ಮತ್ತು ಶಶಿ ಕುಮಾರ್ ಬಂದಿದ್ದ ನೆನಪು. ಅದೆಷ್ಟು ಜನ ಸೇರಿದ್ದರು? ಮತ್ಯಾವಾಗಲೋ ಡಾ.ರಾಜ್ ಕುಮಾರ್ ಅವರನ್ನು ಕಂಡಿದ್ದ ನೆನಪಿದೆ. ಆಗೆಲ್ಲಾ ಎಷ್ಟು ಥ್ರಿಲ್ ಆಗಿದ್ದೆ? ಮಾರನೆ ದಿನ ಕ್ಲಾಸಿಗೆ ಹೋಗಿ "ನೀನೂ ಬಂದಿದ್ದೇನೇ ನಿನ್ನೆ? ನಾನಂತೂ ಹೋಗಿದ್ನಪ್ಪಾ!" ಅಂತ ಜಂಭ ಕೊಚ್ಚಿಕೊಳ್ತಿದ್ದು ನೆನಪಾದ್ರೆ ಈಗ ನಗು ಬರುತ್ತೆ.

ಆದ್ರೀಗ ಪರಿಸ್ಥಿತಿ ತೀರಾ ಭಿನ್ನ. ನಮಗ್ಯಾವ ಸಿನಿಮಾ ತಾರೆ ಬೇಕೋ ಅವರೇ ಖುದ್ದು ಮನೆಗೆ ಬರಬಹುದು! ಮತ್ತೆ ನಾನು ರಿಯಾಲಿಟಿ ಶೋಗಳ ಬಗ್ಗೆ ಬರೀತಿದ್ದೀನಿ ಅಂತ ಕೋಪ ಮಾಡ್ಕೋಬೇಡಿ. ವಿಷಯಕ್ಕೆ ಬರ್ತೀನಿ. ಹಾಂ, ಎಲ್ಲಿದ್ದೆ? ಅದೇ ಸ್ಟಾರ್ ಗಳು ನಮ್ಮ ಮನೆಗ್ ಬರೋ ವಿಷಯ ತಾನೇ? ಕಾರಣ ಈ ರಿಯಾಲಿಟಿ ಶೋಗಳೇ ನೋಡಿ. ಯಾವ ವಾಹಿನಿಯೇ ಆಗಲೀ ಅದರಲ್ಲಿ ರಿಯಾಲಿಟಿ ಶೋ ಇಲ್ಲದಿರುವ ಮಾತೇ ಇಲ್ಲ. ಹಾಗಂತ ಜನ ಸುಮ್ನೆ ಆ ಕಾರ್ಯಕ್ರಮಗಳನ್ನ ನೋಡ್ತಾರ? ಅದಕ್ಕಾಗೇ ದೊಡ್ಡ ದೊಡ್ಡ ಸಿನಿಮಾ ತಾರೆಯರನ್ನು ತೆಕ್ಕೆಗೆ ಹಾಕಿಕೊಂಡು ಅವರಿಗೆ ಲಕ್ಷಾಂತರ ರೂಪಾಯಿಗಳನ್ನ ತೆತ್ತು ಆಯೋಜಕರು ಈ ಶೋಗಳನ್ನು ನಡೆಸುತ್ತಾರೆ.

ಟ್ರೆಂಡ್ ಹುಟ್ಟಿದ್ದು ಸ್ಟಾರ್ ಪ್ಲಸ್ ಚಾನೆಲ್ ನ ಕೌನ್ ಬನೇಗಾ ಕರೋಡ್ ಪತಿಗಾಗಿ ಅಮಿತಾಬ್ ಬಚ್ಚನ್ ಹಾಟ್ ಸೀಟ್ ನಲ್ಲಿ ಕುಳಿತಾಗ. ಹೌದು, ಬಿಗ್ ಸ್ಕ್ರೀನ್ ನಲ್ಲಿ ಮೆರೆದಾಡಿದ ಮೇರು ನಟನೊಬ್ಬ ಟೆಲಿವಿಶನ್ ನ ಪುಟ್ಟ ಪರದೆ ಮೇಲೆ ಬಂದು ಜನ ಮನ ಗೆಲ್ಲೋದು ಚಿಕ್ಕ ಸಂಗತಿಯೇನಲ್ಲ. ಆದ್ರೆ ಅಮಿತಾಬ್ ಸಿನಿಮಾಗಳು ಮೇಲಿಂದ ಮೇಲೆ ತೋಪೆದ್ದು ಕೈ ಖಾಲೀ ಇದ್ದಾಗ ಕೈ ಹಿಡಿದು ಕಾಪಾಡಿದ್ದು ಕೆಬಿಸಿ ಕಾರ್ಯಕ್ರಮ. ಕ್ರಮೇಣ ಇದೊಂಥರ ಸಾಮೂಹಿಕ ಸನ್ನಿಯ ಹಾಗೆ ಹಬ್ಬತೊಡಗಿತು. ನಂತರ ಸೋನಿ ಟೆಲಿವಿಶನ್ ನಲ್ಲಿ ಪ್ರಸಾರವಾದ ಜಿತೋ ಚಪ್ಪಡ್ ಫಾಡ್ ಕೆ ಗಾಗಿ ನಟ ಗೋವಿಂದ ಬಂದರು. ನಮ್ಮ ನೃತ್ಯ ಚತುರೆ ಮಾಧುರಿ ದೀಕ್ಷಿತ್ ಅಂತು ಒಂದ್ ಹೆಜ್ಜೆ ಮುಂದೆ ಹೋಗಿ ಅವಿವಾಹಿತ ವಧು ವರರಿಗೆ ಟಿವಿ ಯಲ್ಲಿ ಸಂದರ್ಶನ ಮಾಡಿಸಿ ಮದುವೆ ಮಾಡಿಸುವ ಕೆಲಸಾನು ಮಾಡಿದ್ದಾಯ್ತು. ಆಗೆಲ್ಲಾ ಇದು ಹೊಸತು ಅನ್ನಿಸಿದ್ದಕ್ಕೋ ಏನೋ ಜನಕ್ಕೂ ಟಿವಿಯಲ್ಲಿ ತಮ್ಮ ನೆಚ್ಚಿನ ನಟರನ್ನು ನೋಡೋಕೆ ಇಷ್ಟವು ಆಗ್ತಿತ್ತು.


ಆದರೀಗ ನೋಡಿ ಯಾವ ಸ್ಥಿತಿ ಬಂದಿದೆ ಅಂತ. ಅಂತ ಎಲ್ಲೆಲ್ಲು ನಾವೇ ಎಲ್ಲೆಲ್ಲು ನಾವೇ ಅಂತ ಟೀವಿ ತುಂಬಾ ಬರೀ ಸಿನಿಮಾ ಸ್ಟಾರ್ ಗಳೇ ತುಂಬಿ ಹೋಗಿದ್ದಾರೆ. ಈ ಕಾರ್ಯಕ್ರಮಗಳ ಪಟ್ಟಿಯನ್ನೇ ನೋಡಿ. ಬಾದ್ ಷಾ ಶಾರುಖ್ ಖಾನ್ ( ಕ್ಯಾ ಆಪ್ ಪಾನ್ಚ್ವಿ ಪಾಸ್ ಸೆ ತೇಜ್ ಹೇ) , ಉರ್ಮಿಳಾ ಮಾತೊಂದ್ಕರ್ (ವಾರ್ ಪರಿವಾರ್ ) , ಅಕ್ಷಯ್ ಕುಮಾರ್ ( ಖಾತ್ರೊಂ ಕೆ ಖಿಲಾಡಿ) , ಹೃತಿಕ್ ರೋಶನ್ ( ಜುನೂನ್ ಕುಚ್ ಕರ್ ದಿಖಾನೇ ಕಾ) , ಸೊನಾಲಿ ಬೇಂದ್ರೆ (ಇಂಡಿಯನ್ ಐಡಲ್), ಕಾಜೋಲ್-ಅಜಯ್ ದೇವಗನ್ (ರಾಕ್ ಎನ್ ರೋಲ್ - ಫ್ಯಾಮಿಲಿ) ,ಸುಷ್ಮಿತಾ ಸೇನ್ ( ಏಕ್ ಆಗಿದ್ದೆ ಏಕ ಹಸೀನಾ) , ಶೆಟ್ಟಿ ( ಬಿಗ್ ಬಾಸ್ ) ಹೀಗೆ ಪಟ್ಟಿ ಹನುಮಂತನ ಬಾಲದ ಹಾಗೆ ಬೆಳೆಯುತ್ತಲೇ ಹೋಗುತ್ತೆ.

ಅದೆಲ್ಲಾ ಬಿಡಿ, ಇಲ್ಲಿ ಕೇಳಿ...ಈ ಕಾರ್ಯಕ್ರಮಗಳನ್ನೆಲ್ಲಾ ನೋಡಿ ಚೆನ್ನಾಗಿದ್ರೆ ಓಕೆ, ಇಲ್ದಿದ್ರೆ ಹಿಗ್ಗಾ ಮುಗ್ಗಾ ಉಗೀತಿವಲ್ಲಾ? ಇವುಗಳಿಗೆ ಕಾರ್ಯಕ್ರಮದ ಆಯೋಜಕರು ಎಷ್ಟೆಲ್ಲ ಕಸರತ್ತು ಮಾಡ್ತಾರೆ ಗೊತ್ತಾ? (ಅಯ್ಯೋ ಹಾಗಂತ ಕಾರ್ಯಕ್ರಮ ಚೆನ್ನಾಗಿಲ್ದಿದ್ರೆ ಉಗೀಬೇಡಿ ಅಂತ ನಾನ್ ಹೇಳ್ತಿಲ್ಲಪ್ಪಾ!) ಸೋನಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ 'ದಸ್ ಕಾ ದಮ್' ನ ಪ್ರತಿ ಕಂತಿಗೆ ಆಯೋಜಕರು ಖರ್ಚು ಮಾಡುವ ಹಣ ೧.೨ರಿಂದ ೧.೫ ಕೋಟಿ. ಒಟ್ಟು ೩೬ ಕಂತುಗಳನ್ನು ಪ್ರಸಾರ ಮಾಡುವ ಗುರಿ ಸೋನಿ ಸಂಸ್ಥೆಯದ್ದು. ಲಂಡನ್ನಿನಲ್ಲಿ ಜನಪ್ರಿಯವಾಗಿರುವ 'ಬಿಗ್ ಬ್ರದರ್' ಈಗ ಭಾರತದಲ್ಲಿ 'ಬಿಗ್ ಬಾಸ್' ಆಗಿದೆ. ಈ ಕಾರ್ಯಕ್ರಮವನ್ನು ನಡೆಸಿಕೊಡುವ ನಟಿ ಶಿಲ್ಪಾ ಶೆಟ್ಟಿ ಒಂದು ಎಪಿಸೋಡ್ ಗೆ ಪಡೆಯೋ ಸಂಭಾವನೆ ೮೦ ಲಕ್ಷ. ಇದರರ್ಥ ಜನರು ಟಿವಿ ನೋಡಲೇ ಬೇಕು ಅಂದ್ರೆ ಯಾವುದು ಅವರನ್ನು ಥಟ್ ಅಂತ ಆಕರ್ಷಿಸುತ್ತೋ ಅದನ್ನೇ ಈ ಶೋಗಳು ನೀಡಲು ತಯಾರಿರುತ್ತವೆ ಅಂದಾಯ್ತು. ಅಷ್ಟೇ ಅಲ್ಲ, ತನ್ನ ಪ್ರತಿ ಸ್ಪರ್ಧಿ ಚಾನೆಲ್ ಗಿಂತ ಒಂದು ಹೆಜ್ಜೆ ಮುಂದೆ ಇರ್ಬೇಕು ಅನ್ನೋ ಉದ್ದೇಶ, ಕಾರ್ಯಕ್ರಮದ ಕ್ವಾಲಿಟಿ ಹೆಚ್ಚಿರಬೇಕೆಂಬ ಹಂಬಲ ಖರ್ಚು ಹೆಚ್ಚುವಂತೆ ಮಾಡುತ್ತೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಪ್ರತಿ ಚಾನೆಲ್ ನ ಅಜೆಂಡಾ ಕೂಡಾ ಆಗಿದೆ. ಬಿಗ್ ಬಿ ನಂತರ ಹಾಟ್ ಸೀಟ್ ಅಲಂಕರಿಸಿದ ಶಾರೂಖ್ ಪಡೆಯುತ್ತಿದ್ದ ಸಂಭಾವನೆ ಪ್ರತಿ ಎಪಿಸೋಡ್ ಗೆ ೭೫ ಲಕ್ಷ. ಆದ್ರೆ 'ಕ್ಯಾ ಆಪ್ ಪಾಂಚ್ ವೀ ಪಾಸ್ ಸೇ ತೇಝ್ ಹೇ' ಗೆ ಪಡೆದದ್ದು ೧ ಕೋಟಿ. ಆದ್ರೆ ಕೆಬಿಸಿ ೩ ಮತ್ತು ಈ ಕಾರ್ಯಕ್ರಮಗಳು ತೀರಾ ಹೀನಾಯ ಪ್ರತಿಕ್ರಿಯೆ ಪಡೆದದ್ದು ವಿಪರ್ಯಾಸ.

ದಸ್ ಕಾ ದಮ್ ಕಾರ್ಯಕ್ರಮ ನಿರೂಪಿಸುವ ಸಲ್ಲೂ ಶಾರೂಖ್ ಗಿಂತ ಕಡಿಮೆ ಸಂಭಾವನೆ ಪಡೆಯಲು ಸುತಾರಾಂ ಒಪ್ಪುವುದಿಲ್ಲ ಅನ್ನೋ ಮಾತುಗಳಿವೆ. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಪ್ರತಿ ಎಪಿಸೋಡ್ ಗೆ ೮೦ ಲಕ್ಷ ಪಡೆಯುತ್ತಾರಂತೆ. (ಅಂದ್ರೆ ಶಾರೂಖ್ ಕೆಬಿಸಿ ಗೆ ಪಡೆದಷ್ಟು. ಎಲ್ಲಾ ಬಿಡಿ ಮಾತೆತ್ತಿದರೆ ಮೂಗು ತುದಿಯಲ್ಲಿ ಕೋಪ ಮಾಡಿಕೊಳ್ಳೋ ಈ ಪುಣ್ಯಾತ್ಮ {ಸಲ್ಮಾನ್} ರಿಯಾಲಿಟಿ ಶೋವೊಂದನ್ನು ಯಶಸ್ವಿಯಾಗಿ ನಿಭಾಯಿಸ್ತಿರೋದೇ ದೊಡ್ಡ ವಿಷಯ ಅನ್ಸುತ್ತೆ)


ನೀವು ಕಲರ್ಸ್ ನಲ್ಲಿ fear factor ಖತ್ರೋಂ ಕಿ ಖಿಲಾಡಿ ನೋಡಿರ್ತೀರಾ, ೧೩ ಮಂದಿ ಸುಂದರಾತಿ ಸುಂದರಿಯರಿಗೆ ನಮ್ಮ ಖಿಲಾಡಿಯೋಂ ಕಾ ಖಿಲಾಡಿ ಅಕ್ಕಿ ಭಯಾನಕ actionಗಳನ್ನ ಮಾಡಿಸಿ ಜನರಿಗೆ ಥ್ರಿಲ್ ಮಾಡಿಸಿ ತಾನೂ ಮಜಾ ತಗೊಂಡಿದ್ದು ಬೇರೆ ವಿಷಯ ಬಿಡಿ. ಇದು ಒಟ್ಟು ಪ್ರಸಾರವಾಗಿದ್ದು ೧೬ ಎಪಿಸೋಡ್ ಗಳು. South Africaದಲ್ಲಿ ಚಿತ್ರೀಕರಿಸಲ್ಪಟ್ಟ ಈ ಶೋನ ಪ್ರತಿ ಎಪಿಸೋಡ್ ಗೆ ಅಕ್ಷಯ್ ಪಡೆದದ್ದು ೧.೫ ಕೋಟಿ. ಒಂದು ಎಪಿಸೋಡ್ ನ ಖರ್ಚು ಕಡಿಮೆ ಅಂದ್ರೂ ೨.೨ಕೋಟಿ. ಏನು? ಕೇಳಿ ಬೇಸ್ತು ಬಿದ್ರಾ? ಸ್ವಲ್ಪ ಸುಧಾರಿಸಿಕೊಳ್ಳಿ. ಇದು ಬಿಗ್ ಬಿ ತಮ್ಮ ಮೊದಲ ಕರೋಡ್ ಪತಿ ಶೋಗೆ ಪಡೆದ ಸಂಭಾವನೆಗಿಂತ ೩ ಪಟ್ಟು ಹೆಚ್ಚು. ಈ ಮಾತು ಸುಳ್ಳಾಗಿದ್ರೆ ಆ ರಿಯಾಲಿಟಿ ಶೋ ಮೇಲಾಣೆ!
ಇದೆಲ್ಲಾ ದೊಡ್ಡ ದೊಡ್ಡ ಸ್ಟಾರ್ ಗಳ ದುನಿಯಾ ಆಯ್ತು. ಮಿನಿ ಮಾಥುರ್ ಗೊತ್ತಿರ್ಬೇಕಲ್ಲಾ? ಅದೇ ಸೋನಿ ಚಾನೆಲ್ ನಲ್ಲಿ ಇಂಡಿಯನ್ ಐಡಲ್ ೧ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಿದ್ದ ಬೆಡಗಿ (ಕ್ಷಮಿಸಿ ಈಕೆಗೆ ಮದುವೆ ಆಗಿ ಮಗುವಿದೆ, ನಿಮಗೆ ಆಕೆ ಬೆಡಗಿ ಅನ್ನಿಸ್ತಾರೋ ಇಲ್ವೋ, ಆದ್ರೂ ನೋಡೋಕೆ ಮಿನಿ ಚೆಂದಾನೇ) ಪ್ರತಿ ಕಂತಿಗೆ ೪೦=೫೦ಸಾವಿರ ಪಡೆಯುತ್ತಿದ್ದವಳು ಇಂಡಿಯನ್ ಐಡಲ್-೨ಗೆ ಏಕಾಏಕಿ ತನ್ನ ಸಂಭಾವನೆ ಏರಿಸಿದ್ದು (ಪಡೆದದ್ದು) ೧.೫ ಲಕ್ಷ . ಝೀಯಲ್ಲಿ ಪ್ರಸಾರವಾಗುವ ಸಾ ರೆ ಗ ಮ ಗೆ ಗಾಯಕ ಶಾನ್ ೧.೫ ಲಕ್ಷ ತೆಗೆದೊಕೊಳ್ಳೋರು. ಆದ್ರೆ ಏಕಾಏಕಿ ೨.೫ ಲಕ್ಷ ಕೊಡಲು ಮುಂದೆ ಬಂದ ಸ್ಟಾರ್ ಚಾನೆಲ್ ಗೆ ಜಿಗಿದ್ರು ಶಾನ್. ಇದೇ ಝೀಯಲ್ಲಿ ಪ್ರಸಾರವಾದ ಫ್ಯಾಮಿಲಿ ಶೋ ರಾಕ್ n ರೋಲ್ ಫ್ಯಾಮಿಲಿ ಕಾರ್ಯಕ್ರಮಕ್ಕೆ ಕಾಜೋಲ್ ಅಜಯ್ ದೇವಗನ್ ದಂಪತಿ ಎಷ್ಟು ಸಂಭಾವನೆ ಪಡೆಯುತ್ತಿದ್ರೋ ಗೊತ್ತಿಲ್ಲ. ಆದ್ರೆ ಕಾರ್ಯಕ್ರಮ ಪಲ್ಟಿ ಹೊಡೆದಿದ್ದಂತೂ ಗೊತ್ತು.

ರಿಯಾಲಿಟಿ ಶೋಗಳ ಭೂತ ಪ್ರಾದೇಶಿಕ ಚಾನೆಲ್ ಗಳನ್ನೂ ಬಿಟ್ಟಿಲ್ಲ. ಕನ್ನಡದಲ್ಲೇ ನೋಡಿ, ನಟಿ ಅನುಪ್ರಭಾಕರ್,ತಾರಾ, ಸುಧಾರಾಣಿ, ವಿಜಯ ಲಕ್ಷ್ಮಿ ಎಲ್ಲರೂ ಸಿನಿಮಾದ ದೊಡ್ಡ ಪರದೆ ಬಿಟ್ಟು ಹೆಂಗಳೆಯರ ಮನಕ್ಕೆ ರಿಯಾಲಿಟಿ ಶೋಗಳ ಮೂಲಕ ಲಗ್ಗೆ ಇಡಲು ಒಂದು ಕೈ ನೋಡಿದವ್ರೇ. ಕಾಗೆ ಹಾರಿಸಿ ಜಗ್ಗೇಶ್, ಪ್ರೀತಿಯಿಂದಲೇ ವೀಕ್ಷಕರ ಪ್ರೀತಿ ಗಳಿಸಿದ ರಮೇಶ್ ಕೂಡ ಇದರಿಂದ ಹೊರತಲ್ಲ. ಗಾಯನ ಪ್ರತಿಭೆಗಳಿಗೆ ಗಾಳ ಹಾಕುವ ಕಾರ್ಯಕ್ರಮವನ್ನು ಎಸ್ಪಿಬಿ ಎದೆ ತುಂಬಿ ಹಾಡಿದಂದಿನಿಂದ ಇಂದಿಗೂ ಎಲ್ಲಾ ಚಾನೆಲ್ ಗಳೂ ದಿನಚರಿಯಂತೆ ಪಾಲಿಸುತ್ತಿವೆ.



(ನೆನಪಿರಲಿ ಇಂತಹ ಕಾರ್ಯಕ್ರಮಗಳಿಂದ ಎಷ್ಟೋ ಕಾರ್ಮಿಕರ ಜೇಬಿಗೆ ಕಾಸು ಬೀಳುತ್ತಿದೆ. ಇಲ್ಲಿ ಲೈಟ್ ಬಾಯ್, ಮೇಕಪ್ ಕಲಾವಿದರು, ಸಹಾಯಕರು, ಸಂಕಲನಕಾರರು ಹೀಗೆ ಸಾವಿರಾರು ಮಂದಿಯ ಶ್ರಮ ಇಂತಹ ರಂಗು ರಂಗಿನ ಕಾರ್ಯಕ್ರಮಗಳ ಹಿಂದೆ ಇರುತ್ತದೆ. ಅವರೆಲ್ಲಿ ಬಹುತೇಕರಿಗೆ ಈ ಕಾರ್ಯಕ್ರಮಗಳೇ ಹೊಟ್ಟೆಹೊರೆಯುವ ಮೂಲ)



ಹಾಗಂತ ಇವರೆಲ್ಲ ಸಿನಿಮಾದ ದೊಡ್ಡ ಪರದೆ ಬಿಟ್ಟು ಹೀಗೆ ಟೆಲಿವಿಶನ್ ಗೆ ಯಾಕೆ ಲಗ್ಗೆ ಇಟ್ರು ಅಂತ ಅನ್ನಿಸೋದು ಸಹಜ. ತಿಂಗಳಾನುಗಟ್ಟಲೆ ಒಂದು ಸಿನಿಮಾ ಮಾಡಿ ಗಳಿಸುವ ಹಣವನ್ನು ಕೆಲವೇ episodeಗಳಲ್ಲಿ ರಿಯಾಲಿಟಿ ಶೋಗಳು ಕೊಟ್ರೆ ಯಾರ್ ತಾನೇ ಬೇಡ ಅಂತಾರೆ? ಹೇಳಿ ಕೇಳಿ ಇದು computer ಯುಗ. ಎಲ್ಲಾ ಥಟ್ ಅಂತ ಆಗೋ ಮತ್ತು ಬಯಸೋ ಜಾಯಮಾನ ನಮ್ಮ ಜನರದ್ದು. ಎಲ್ಲಕ್ಕೂ ಮಿಗಿಲಾಗಿ ಈ ಸ್ಟಾರ್ ಗಳನ್ನ ನೋಡೋಕೆ ಜನ ಕಾಸು ಕೊಟ್ಟು ಥಿಯೇಟರ್ ಗೆ ಹೋಗ್ಬೇಕು. ಆದ್ರೆ ವೇಗವಾಗಿ ಅಂದ್ರೆ ready to eat ಅನ್ನೋ ಹಾಗೆ ಪುಟ್ಟ ಪರದೆಯಲ್ಲೇ ಇವರನ್ನು ನೋಡೋ ಮತ್ತು ಈ ಸ್ಟಾರ್ ಗಳು ವೀಕ್ಷಕರನ್ನು ಇಷ್ಟೂ ಸುಲಭವಾಗಿ ತಲುಪೋ ಅವಕಾಶವನ್ನು ಯಾಕ್ ತಾನೇ ಬಿಡ್ತಾರೆ? ಚಾನೆಲ್ ಗಳು ಕೋಟಿ ಕೋಟಿ ಸುರಿದು ಕೋಟಿ ಕೋಟಿ ಬಾಚಿಕೊಳ್ಳೋ ತರಾತುರಿಯಲ್ಲಿವೆ. ಒಟ್ಟಾರೆ ಇದೆಲ್ಲಾ ನೋಡಿದ್ರೆ ಜನ ಮರುಳೋ ಜಾತ್ರೆ ಮರುಳೋ ಎಂಬಂತಾಗಿದೆ.

Friday, October 17, 2008

ಎಷ್ಟು ರಿಯಲ್...? ಎಷ್ಟು ರೀಲ್...?

ಸಮೂಹ ಮಾಧ್ಯಮಗಳಲ್ಲಿ ದೂರದರ್ಶನಕ್ಕಿರುವ ಸ್ಥಾನ ಬಹುದೊಡ್ಡದು. ಹಿಂದೆಲ್ಲಾ ರಾಮಾಯಣ, ಮಹಾಭಾರತಗಳಂತಹ ಸಭ್ಯ ಸದಭಿರುಚಿಯ ಕಾರ್ಯಕ್ರಮಗಳಿಂದ ದೂರದರ್ಶನ ಮನೆಮನ ಸೂರೆಗೊಂಡಿತ್ತು. ಆದ್ರೆ ಟಿವಿ ಯಲ್ಲಿ ಬರುವ ಈಗಿನ ಕಾರ್ಯಕ್ರಮಗಳ ಬಗ್ಗೆ ಮಾತಾಡೋದು ಸ್ವಲ್ಪ ಅಲ್ಲ, ತುಂಬಾನೇ ಕಷ್ಟ ಅನ್ನಬಹುದು. ಮನರಂಜನೆ, ಮ್ಯೂಸಿಕ್, ಸ್ಪೋರ್ಟ್ಸ್, ನ್ಯೂಸ್, ಫ್ಯಾಷನ್, ಕಾರ್ಟೂನ್, ಕಾಮಿಡಿ, ಬಿಸಿನೆಸ್ ನಿಂದ ಹಿಡಿದು ದೇವರಿಗೆ ಅಂತಲೇ ಪ್ರತ್ಯೇಕ ಚಾನೆಲ್ ಇರುವವರೆಗೆ ಹಬ್ಬಿದೆ ಈ ಮಾಯಾಜಾಲ. ಒಂದು ಚಾನೆಲ್ ಯಶಸ್ವಿ ಆಗಬೇಕಂದ್ರೆ ಅದರಲ್ಲಿ ಪ್ರಸಾರ ಆಗೋ ಕಾರ್ಯಕ್ರಮಗಳು ನೋಡುಗರನ್ನು ಆಕರ್ಷಿಸಬೇಕು. ಇದರಿಂದ ಕಾರ್ಯಕ್ರಮದ ಟಿಆರ್ ಪಿ ರೇಟಿಂಗ್ ಏರಬೇಕು, ಜೊತೆಗೆ ಹಣದ ಹೊಳೆ ಹರಿದು ಬರಬೇಕು.

ಇಷ್ಟೆಲ್ಲಾ ನಾನು ಹೇಳಬೇಕಾಗಿ ಬಂದ ಕಾರಣ ಅಂದ್ರೆ ರಿಯಾಲಿಟಿ ಶೋ ಎಂಬ ಮಾಯಾಬಜಾರು. ಯಾವ ಚಾನೆಲ್ ಹಾಕಿದ್ರೂ ಅಲ್ಲಿ ರಿಯಾಲಿಟಿ ಶೋಗಳದ್ದೇ ದರ್ಬಾರು. ಇಂತಹ ಕಾರ್ಯಕ್ರಮಗಳಿಲ್ಲದಿದ್ರೆ ಚಾನೆಲ್ ನಡೆಯೋದೇ ಇಲ್ಲ ಎಂಬಷ್ಟು ನಡೆದಿದೆ ಅವುಗಳ ಕಾರುಬಾರು. ರಿಯಾಲಿಟಿ ಹೆಸರಲ್ಲಿ ಟಿ.ವಿ ನೋಡುವ ಮಂದಿ ಮಂಡೆ ಬಿಸಿ ಆಗಿ ಮೂರ್ಖರ ಪೆಟ್ಟಿಗೆ ಆಗದಿರಲಿ ಚೂರು ಚೂರು!
ಈ ರಿಯಾಲಿಟಿ ಶೋಗಳು ಎಷ್ಟರ ಮಟ್ಟಿಗೆ ಜನರ ತಲೆ ಹೊಕ್ಕಿವೆ ಅಂದ್ರೆ ಆ ಕಾರ್ಯಕ್ರಮಗಳಲ್ಲಿ ಪ್ರಸಾರವಾಗುವುದೆಲ್ಲಾ ಕಟು ಸತ್ಯ ಎಂದು ಜನ ನಂಬುವಷ್ಟು . ಕೆಲದಿನಗಳಿಂದ ಖಾಸಗಿ ವಾಹಿನಿ ಕಲರ್ಸ್ ನಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್-೨ ವನ್ನೇ ತಗೊಳ್ಳಿ. ಹೊರಜಗತ್ತಿನೊಡನೆ ಯಾವುದೇ ಸಂಪರ್ಕವಿಲ್ಲದೆ ಸ್ಪಧಿಗಳು 2-3 ತಿಂಗಳು ಬಿಗ್ ಬಾಸ್ ಮನೆಯಲ್ಲಿರಬೇಕು. ಈ ಅವಧಿಯಲ್ಲಿ ಮೇಲ್ನೋಟಕ್ಕೆ ಜೊಳ್ಳು ಕಾಳು ಗಟ್ಟಿ ಕಾಳು ಸ್ಪರ್ಧೆ ನಡೆದ್ರೂ ಅಲ್ಲಿ ನಡೆಯುವ ಘಟನೆಗಳು ಚಿತ್ರ ವಿಚಿತ್ರ . ಹೇಳಿ ಕೇಳಿ ಅಲ್ಲಿ ಬರಿ ಸೆಲಿಬ್ರಿಟಿಗಳದ್ದೆ ಪಾರುಪತ್ಯ . ಆರಂಭದಲ್ಲಿ ದೋಸ್ತಿಗಳಾಗಿದ್ದವ್ರು ದಿನೇ ದಿನೇ ದಿನೇ ದುಶ್ಮನ್ಗಳಾಗೋದು ಇಲ್ಲಿ ಕಾಮನ್. ಸುತ್ತಲೂ ಹದ್ದಿನ ಕಣ್ಣಿನಂತೆ ಕ್ಯಾಮೆರಾಗಳಿದ್ರೂ ಅವರ ಅಬ್ಬರದ ಆಟೋಪ, ಕೋಪ-ತಾಪ, ಪ್ರೀತಿ-ಸಲ್ಲಾಪ, ಆರೋಪ-ಪ್ರತ್ಯಾರೋಪ, ಕಣ್ಣೀರು-ಸಂತಾಪಗಳಿಗೆ ಬರವಿರೋದಿಲ್ಲ। ವಾರದ ಆರಂಭದಲ್ಲಿ ನಡೆಯೋ nomination ಪ್ರಕ್ರಿಯೆ ಮತ್ತು ವಾರಾಂತ್ಯದಲ್ಲಿ ನಡೆಯೋ elimination ಪ್ರಕ್ರಿಯೆ ಬಿಗ್ ಬಾಸ್ ಮನೆಯಲ್ಲಿರೋರ ಬಣ್ಣ ಬಯಲು ಮಾಡೋ ರಂಗ ಮಂದಿರ. ಇಷ್ಟೆಲ್ಲ ಆದ್ರೂ ವೀಕ್ಷಕರಿಗೆ ಮಾತ್ರ ಇದೊಂಥರ ರಸಗವಳ, ಚಾನೆಲ್ ನವರಿಗೆ TRP ಕಾ ಮಾಮ್ಲಾ, ಒಟ್ಟಾರೆ ಪೈಸೆ ಕೇ ಲಿಯೇ ಕುಛ್ ಭೀ ಕರೇಗಾ...!
ಇನ್ನು ಸಿನಿಮಾ, ಧಾರಾವಾಹಿಗಳ ಕಲಾವಿದರನ್ನು ವೇದಿಕೆ ಹತ್ತಿಸಿ ಹೆಜ್ಜೆ ಹಾಕಿಸೋ ಕಾರ್ಯಕ್ರಮಗಳಿಗಂತೂ ಲೆಕ್ಕವೇ ಇಲ್ಲ. ಒಂದಷ್ಟು ಮಸ್ತಿ, ಮತ್ತಷ್ಟು ಕುಸ್ತಿ ಮಾಡಿಸಿ ( pre planned ಮನಸ್ತಾಪ!) TRP ಹೆಚ್ಚಿಸಿಕೊಳ್ಳೋ ತಂತ್ರಗಳಂತೂ ದೇವರಿಗೇ ಪ್ರೀತಿ.
ರಿಯಾಲಿಟಿ ಶೋ ಅನ್ನೋ ಮಾಯಾಬಜಾರ್ ಕಥೆ ಇಷ್ಟಕ್ಕೇ ಮುಗಿಯಲ್ಲ. ಖ್ಯಾತ ಚಿತ್ರ ನಟ ನಟಿಯರಿಂದ ಕ್ವಿಝ್ಝೋ, ಗೇಮ್ ಶೋವನ್ನೋ ಮಾಡಿಸುವ ಪರಿಪಾಠ ನಿಲ್ಲುವ ಸೂಚವೆ ಸದ್ಯಕ್ಕಂತೂ ಇಲ್ಲ. ಉದಯೋನ್ಮುಖ ಗಾಯಕ-ಗಾಯಕಿಯರ ಶೋಧದ ಹೆಸರಲ್ಲೂ ಈ 'ವ್ಯಾಪಾರ' ಜನಪ್ರಿಯ. ಇಲ್ಲಿ ಕಾಲೇಜು ಹುಡುಗ ಹುಡುಗಿಯರೊಂದಿಗೆ ಮುಗ್ಧ ಮನಸ್ಸಿನ ಮಕ್ಕಳೂ ಸರಕಾಗುತ್ತಿರೋದು ವಿಷಾದನೀಯ. ಜೊತೆಗೆ ಪೋಷಕರ 'ಅಭೂತಪೂರ್ವ' ಬೆಂಬಲ. ಇವೆಲ್ಲದರ ಜೊತೆಗೆ ಮಹಿಳಾ ಮಣಿಗಳಿಗೆ ಸೀರೆ, ಚಿನ್ನ, ವಿದೇಶ ಪ್ರವಾಸದ ಆಸೆ ತೋರಿಸಿ TRP ಹೆಚ್ಚಿಸಿಕೊಳ್ಳುವ ಶೋಗಳೂ ಬಹಳಷ್ಟು ಸಿಕ್ತವೆ.
ಾಗಂತ ರಿಯಾಲಿಟಿ ಶೋಗಳು ಮಾಡೋದೆಲ್ಲಾ ಬರೀ TRP ಗಾಗಿ, ಮತ್ತು ಅವುಗಳ ಕಾರ್ಯಕ್ರಮದ ರೀತಿ ರಿವಾಜುಗಳೆಲ್ಲಾ ತಪ್ಪು ಅನ್ನೋದು ಸ್ವಲ್ಪ ಮಟ್ಟಿಗೆ ತಪ್ಪು. ಹ್ಹಾಂ, ಖಂಡಿತ ಇವುಗಳಿಂದ ಸಾಕಷ್ಟು ಪ್ರತಿಭೆಗಳು ಬೆಳಕಿಗೆ ಬಂದಿವೆ. ಆದ್ರೆ ರಿಯಾಲಿಟಿ ಹೆಸರಲ್ಲಿ ಶೋ ನಾಟಕೀಯ ಆಗದಿದ್ರೆ ಅದು ಚೆನ್ನ. ಮತ್ತೊಂದು ದೃಷ್ಟಿಯಲ್ಲಿ ನೋಡಿದ್ರೆ ತೀರ್ಪುಗಾರರ ಟೀಕೆಗಳಿಂದ ಎಷ್ಟೋ ಪ್ರತಿಭಾವಂತ ಮತ್ತು ಮಹತ್ವಾಕಾಂಕ್ಷಿಗಳು ಇರುವ ಅಲ್ಪ ಉತ್ಸಾಹವನ್ನು ಕಳೆದುಕೊಳ್ಳುವ ಸಂಭವವೂ ಇದೆ. ಪ್ರತಿಷ್ಟಿತ ಚಾನೆಲ್ ಒಂದರ ರಿಯಾಲಿಟಿ ಶೋ ನಲ್ಲಿ ಕಾಣಿಸಿಕೊಂಡ ಬೆಂಗಾಲಿ ಹುಡುಗಿ ಶಿಂಜಿನಿ ಇದಕ್ಕೆ ಪ್ರತ್ಯಕ್ಷ ಉದಾಹರಣೆ. ಆದ್ರೆ ಇದಕ್ಕೆ ತದ್ವಿರುದ್ಧ ಜೈಪುರದ ಭಾನು ಪ್ರತಾಪ್ ಸಿಂಗ್. ಇಂಡಿಯನ್ ಐಡಲ್ ನಲ್ಲಿ ಭಾಗವಹಿಸಬೇಕೆಂಬ ಅದಮ್ಯ ಆಸೆ ಚಿಗುರುವ ಮುನ್ನವೇ ಅದಕ್ಕೆ ಕೊಡ್ಲಿ ಪೆಟ್ಟು ಪಡೆದಾತ ಇವ. ೩ ಬಾರಿ ಸತತವಾಗಿ ಸ್ಪರ್ಧೆಯ ಮೊದಲ ಸುತ್ತಿನಲ್ಲೆ ಹೊರ ನಡೆದ ಭಾನು ಎದೆಗುಂದದೆ ಈಗ ಯಶಸ್ಸಿನ ಪಯಣದತ್ತ ಮುಖ ಮಾಡಿ ಹೊರಟಿದ್ದಾನೆ. ಇಂತಹ ಪ್ರಕರಣಗಳಿಗೆ ತೀರ್ಪುಗಾರರನ್ನು ನೇರಹೊಣೆ ಮಾಡುವವರೂ ಇದ್ದಾರೆ, ಅದನ್ನು ಸಮರ್ಥಿಸಿಕೊಳ್ಳುವವರೂ ಸಿಕ್ತಾರೆ. ಒಟ್ಟಾರೆ ಇವೆಲ್ಲಾ ರಿಯಾಲಿಟಿ ಶೋಗಳ ರಿಯಾಲಿಟಿ ಅಷ್ಟೇ.

ಪ್ಪು ಒಪ್ಪುಗಳೇನೇ ಇದ್ರೂ ನಮ್ಮ ಜನ ಮಾತ್ರ ಇವುಗಾಳ ಮಾಯಾಜಾಲದಲ್ಲಿ ಬಂಧಿಗಳಾಗಿರೋದಂತೂ ಸತ್ಯ, ಸತ್ಯ, ಸತ್ಯ. ಇನ್ನು ಈ ಶೋಗಳು ವಾರಾಂತ್ಯದಲ್ಲಿ ಮಾಡುವ ಎಲಿಮಿನೇಷನ್ ಮತ್ತು ನಾಮಿನೇಷನ್ ಗಳ ಎಸ್ಸೆಮ್ಮೆಸ್ ಪ್ರಕ್ರಿಯೆಯಿಂದಂತೂ ಹಣದ ಹೊಳೆಯೇ ಹರಿದು ಬರುತ್ತೆ. ಆದ್ರೆ ಮನರಂಜನೆಯ ಹೆಸರಲ್ಲಿ ಹಣ ಹೊಡಿಯೋ, ಮುಗ್ಧ ಮನಸ್ಸುಗಳನ್ನು ಮುರಿಯೋ ರಿಯಾಲಿಟಿ ಶೋಗಳಲ್ಲಿ ಎಷ್ಟು ರಿಯಲ್? ಎಷ್ಟು ರೀಲ್? ಇದಕ್ಕೆ ಉತ್ತರ ಹೇಳೋರ್ಯಾರು?