Saturday, May 15, 2010

ಜೇನು ತಂದ ಟೆನ್ಷನ್ನು!

ಪ್ರಕೃತಿ ಮಾತೆ ತನ್ನೊಡಲೊಳಗೆ ಅದೆಷ್ಟು ರಹಸ್ಯಗಳನ್ನು ಅಡಗಿಸಿಕೊಂಡಿದ್ದಾಳಲ್ವಾ? ನಿಸರ್ಗದತ್ತವಾಗಿ ಸಿಗುವ ಪ್ರತಿಯೊಂದು ವಸ್ತುವಿನ ಸೃಷ್ಟಿಯೂ ಅದೆಷ್ಟು ವಿಸ್ಮಯ ಅನ್ನಿಸದಿರದು. ನನಗಂತೂ ಈ ಜೇನುತುಪ್ಪ ನೋಡಿದ್ರೆ ಬಹಳ ಸಲ ಹಾಗನ್ನಿಸಿದ್ದುಂಟು. ಎಷ್ಟು ಸೋಜಿಗ ಅಲ್ವಾ? ಎಲ್ಲಿಂದಲೋ ಬರುವ ಜೇನುಹುಳುಗಳು ಸೂರ್ಯನ ಕಿರಣಗಳಿಗೆಂದೇ ಕಾದು ಅರಳಿ ನಳನಳಿಸುವ ಕುಸುಮಗಳಿಂದ ಮಕರಂದ ಹೀರುವುದು, ಬಳಿಕ ಅವುಗಳೇ ನಿರ್ಮಿಸಿದ ಮೇಣದ ಗೂಡು, ಅದರ ಒಂದೊಂದು ತೂತು ಯಾರೋ ಕುಳಿತು ಅಡಿಪಟ್ಟಿಯಿಟ್ಟು ನಿರ್ಮಿಸಿದಷ್ಟು ವ್ಯವಸ್ಥಿತ. ಅದರೊಳಗೆ ಜೇನುಹುಳುಗಳು ತುಂಬಿದ ಮಕರಂದವನ್ನು ಅವು ಹೀರುವ ಮುನ್ನವೇ ಸಮಯ ನೋಡಿ ಹೊಂಚು ಹಾಕಿ ಬೆಂಕಿ ಕೊಟ್ಟು ಜೇನು ಗಿಟ್ಟಿಸೋದು ನಾವು!



ಆದ್ರೂ ನೋಡಿ, ಈ ಜೇನು ಅದೆಷ್ಟು ಸಿಹಿ. ಚಿಕ್ಕಮಕ್ಕಳಿಗೆ ಬುದ್ಧಿ ಚುರುಕಾಗಲೆಂದು ಇದನ್ನು ಕೊಡೋದುಂಟು. ಚಪ್ಪರಿಸಿದಷ್ಟು ಮತ್ತಷ್ಟು ಬೇಕು ಅನ್ನಿಸುತ್ತೆ. ನಾನಂತೂ ಚಿಕ್ಕವಳಿದ್ದಾಗ ಅಪ್ಪ ದೊಡ್ಡ ಬಾಟಲಿಯಲ್ಲಿ ತಂದಿಟ್ಟಿರುತ್ತಿದ್ದ ಜೇನುತುಪ್ಪವನ್ನು ಎಷ್ಟು ತಿಂತಿದ್ದೆ ಗೊತ್ತಾ? ಅಮ್ಮ ಏನಾದರೂ ಬೇಕಂತ ಬೀರು ಬಾಗಿಲು ತೆರೆದರೆ ನಾನಲ್ಲಿ ಹಾಜರ್. ಪುಟ್ಟ ಅಂಗೈ ಒಡ್ಡುತ್ತಾ 'ಅಮ್ಮ ಜೇನ್ತುಪ್ಪ...' ಅಂತ ಕಣ್ಣರಳಿಸಿ ನಿಂತುಬಿಡ್ತಿದ್ದೆ. ನಮ್ಮಮ್ಮ ಪುಟಾಣಿ ಬಟ್ಟಲಿನಲ್ಲಿ ಸುರಿದು ಕೊಟ್ರೆ ಇಷ್ಟಿಷ್ಟೇ ನೆಕ್ಕುತ್ತಾ ಆಸ್ವಾದಿಸುತ್ತಿದ್ದದ್ದು ಈಗ್ಲೂ ನೆನಪು. ಎಲ್ಲಕ್ಕಿಂತ ಹೆಚ್ಚಾಗಿ ಈ ಜೇನುತುಪ್ಪವನ್ನು ತುಂಬಾ ದಿನ ಇಟ್ರೆ ಬಾಟಲಿಯೊಳಗೆ ಸಕ್ಕರೆ ಕಟ್ಟುತ್ತೆ. ಅದೆಷ್ಟು ಚೆಂದ ಗೊತ್ತಾ ತಿನ್ನೋಕೆ? ಬಾಯಿಗಿಟ್ರೆ ಕರಗುವುದೇ ಗೊತ್ತಾಗದು!



ಹೀಗೆ ರುಚಿಯಾದ ಜೇನುತುಪ್ಪವನ್ನು ಕೊಡೋ ಜೇನುಗೂಡು ಕಟ್ಟಿದ್ರೆ ಮನೆಗೆ ಶುಭ, ಲಕ್ಷ್ಮಿ ಬಂದ ಸಂಕೇತ ಅಂತೆಲ್ಲಾ ಹೇಳೋದು ಕೇಳಿದ್ದೇನೆ. ಮೊನ್ನೆ ಹೀಗೇ ಆಯ್ತು. ಸಂಜೆ 7ಕ್ಕೆ ಆಫೀಸಿಂದ ಆಗ ತಾನೇ ಬಂದೆ. ಇನ್ನೂ ಗೇಟ್ ಸಮೀಪಿಸಿದೆ ಅಷ್ಟೇ. ನಮ್ ಪಿಜಿಯಲ್ಲಿರೋ ಗಾನಾ ಗೇಟ್ ಹತ್ರ ಇದ್ಲು. ನಾನ್ ಬಂದ ತಕ್ಷಣ ತನ್ನ ಮಾಮೂಲಿ ಸ್ಚೈಲಲ್ಲಿ ' ಚಿನ್ನಾ, ಅಲ್ನೋಡು ಚಿನ್ನಾ! ನಮ್ ರೂಮ್ ಬಾಲ್ಕನಿಗೆ ಹೆಂಗ್ ಜೇನ್ ಕಟ್ಟಿದೆ' ಅಂತ ತೋರಿಸಿದ್ಲು. ನಾನು 'ವಾವ್!' ಅಂದೆ. 'ಏನ್ ಚಿನ್ನಾ ಖುಷಿ ಪಡ್ತೀಯಾ. ನನ್ ಸಂಕಟ ನಂಗೆ' ಅಂತ ಮುಖ ಕೆಂಪಗೆ ಮಾಡಿಕೊಂಡ್ಲು. ನಮ್ ಪಿಜಿ ಮಾಲೀಕ ಕೇಶವನ ಬೆನ್ನು ಬಿಡದೆ ಇವತ್ತು ರಾತ್ರಿನೇ ಶತಾಯಗತಾಯ ಜೇನುಹುಳಗಳನ್ನು ಅಲ್ಲಿಂದ ವಾಶ್ ಔಟ್ ಮಾಡ್ಬೇಕು ಅನ್ನೋ ಶಪಥ ಮಾಡಿದ್ದಳು ಗಾನ. ಯಾರನ್ನೋ ವಿಚಾರಿಸಿದ್ದಕ್ಕೆ ಜೇನುಗೂಡು ತೆಗೆಯೋಕೆ 750ರೂ ಕೊಡಬೇಕು ಅಂದ್ರು. ಮೊದಲೇ ಜ್ವರ, ಲೂಸ್ ಮೋಷನ್ ಅಂತ ಬೆಸವಳಿದಿದ್ದ ಕೇಶವ್ ಮುಖ ರೇಟ್ ಕೇಳಿ ಇನ್ನೂ ಬಾಡಿಹೋಯ್ತು! ಆದ್ರೆ ಗಾನಾ ಯಾಕೋ ಬಿಡೋಹಾಗೆ ಕಾಣ್ಲಿಲ್ಲ. ಅಷ್ಟು ಹೊತ್ತು ನಿಂತು ಕಾಲು ನೋವು, ಈ ಬ್ಯಾಗ್ ಬೇರೆ, ನಿಲ್ಲು ನನ್ನ ಬ್ಯಾಗ್ ರೂಮಿನಲ್ಲಿ ಇಟ್ಟು ಬರ್ತೀನಿ ಅಂದ್ರೂ ಬಿಡಲೊಲ್ಲಳು. 'ಇಲ್ಲಾ ಚಿನ್ನಾ, ನೀನೂ ನಂಜೊತೇನೇ ಇರು' ಅಂತ ಸುಮ್ನೇ ಕಿರಿಕ್ ಶುರುಮಾಡಿದ್ಲು.


ಕೊನೆಗೆ ನಮ್ ಪಿಜಿ ಎದುರಿನ ಹೊಟೇಲ್ ನವರು ಇವಳ ಕಾಟ ತಡೀಲಾಗದೆ, ಒಂದು ತಗಡಿನ ಡಬ್ಬಕ್ಕೆ ಒಂದಷ್ಟು ಕೆಂಡ, ಮೆಣಸಿನ ಪುಡಿ, ಅದೆಂಥದೋ ಜೆಲ್ ತುಂಬಿಸಿ ತಂದ್ರು. ನನ್ನ ಲೈಫಲ್ಲೇ ಮೊದಲ ಸಲ ಈ ರೀತಿ ಜೇನುಗೂಡು ತೆಗೆಯೋದನ್ನ ನೋಡಿದ್ದು ನಾನು. ಎಲ್ರಿಗೂ ಮೊದಲೇ ಅವರವರ ರೂಮಿನ ಬಾಗಿಲು ಲೈಟು ಬಂದ್ ಮಾಡೋಕೆ ಹೇಳಿದ್ದಾಯ್ತು. ಅಂತೂ ಒಂದು ಸ್ಟೂಲ್ ಮೇಲೆ ಈ ಡಬ್ಬ ಇಟ್ಟು ಹೊಗೇ ಹಾಕೇ ಬಿಟ್ರು. ಜೇನುಗಳೆಲ್ಲಾ ಎದ್ದೇನೋ ಬಿದ್ದೇನೋ ಅಂತ ಹಾರಿಹೋದ್ವು. ಅದಲ್ಲಾ ಅಸಲಿ ರಾದ್ಧಾಂತ. ಇಟ್ಟ ಬೆಂಕಿ, ಗೂಡಿಗೆ ತಾಕಿ ಕೆಳಗೆಲ್ಲಾ ಚೆಲ್ಲಾಡಿತು. ತಾವು ಧರಿಸೋ ರಂಗ್ ಬಿರಂಗಿ ಬಟ್ಟೆಗಳಿಗೆಲ್ಲಾ ಮ್ಯಾಚಿಂಗ್ ಚಪ್ಪಲಿಗಳನ್ನು ಈ ಗಾನಾ ಮತ್ತೆ ಅವಳ ರೂಮ್ ಮೇಟ್ ಇಟ್ಕೊಂಡಿದ್ರು. ಸರಿ ಸುಮಾರು ಒಂದ್ ಮೂಟೆ ಚಪ್ಪಲಿಗಳು, ಬ್ರಾಂಡೆಡ್ ಶೂಗಳು ಸೇರಿ ಸಾವಿರಾರು ರೂಪಾಯಿ ಪಾದರಕ್ಷೆಗಳು ಈ ಬೆಂಕಿ ಕೆಂಡಕ್ಕೆ ಸುಟ್ಟು ಭಸ್ಮ!

ಅವಳಿಗೋ ಹೇಗಾದ್ರೂ ಮಾಡಿ ಅವುಗಳನ್ನು ನಮ್ ಪಿಜಿ ಯಿಂದ ಗಡಿಪಾರು ಮಾಡ್ಲೇಬೇಕು ಅನ್ನೋ ಹಟ. ಸಾಲದಕ್ಕೆ ಜೇನುಗಳಿದ್ರೆ ಈ ಸೆಕೆಯಲ್ಲಿ ಬಾಲ್ಕನಿ ಬಾಗಿಲೂ ತೆಗೆಯುವಂತಿಲ್ಲ ಅನ್ನೋ ಸಂಕಟ. ಅಲ್ಲಾ...ಬೆಂಕಿ ಹಾಕಿಸೋ ಮುಂಚೆ ಒಂದೇ ಒಂದು ಕ್ಷಣ ಗಾನ ಅವುಗಳ ಬಗ್ಗೆ ಯೋಚಿಸಿದ್ರೆ ಉಳ್ಕೋತಿದ್ವೇನೋ. ರಾತ್ರಿ ಅವಳ ರೂಮ್ ಮೇಟ್ ಬಂದು ನೋಡ್ತಾಳೆ ಪಾಪ! ಅವ್ಳ ಬ್ರಾಂಡ್ ನ್ಯೂ adidas ಮಸಿ ಬಳಿದುಕೊಂಡು ಕೂತಿದ್ದು ನೋಡಿ ಹೊಟ್ಟೆ ಉರ್ಕೊಂಡ್ಳು. ಅರ್ಧಂಬರ್ಧ ಸುಟ್ಟಿದ್ದ ಒಂದೊಂದು ಚಪ್ಪಲಿಯನ್ನೂ ನೋಡುತ್ತಾ ಬೇಜಾರು ಮಾಡ್ಕೊಂತಿದ್ರೆ, 'ನಾನು ಮಾಡಿದ್ದು ಸರಿಯಾಗೇ ಇತ್ತು ಚಿನ್ನ' ಅನ್ನೋ ಗಾನಾ ಬಜಾನಾ ಮುಂದುವರಿದಿತ್ತು!


ತಮಾಷೆಯೋ, ವಿಷಾದವೋ.........ಮರುದಿನ ಅದೇ ಜಾಗದಲ್ಲಿ ಇನ್ನೂ ದೊಡ್ಡ ಗಾತ್ರದ ಗೂಡು ಕಟ್ಟಿಕೊಂಡು ಜೇನುಗಳು ಗುಂಯ್ ಗುಡುತ್ತಿದ್ವು!

Sunday, April 11, 2010

ಮೌನ...ಬಂಗಾರ!


ಮೌನ...ಮೌನ ಅಂದಾಕ್ಷಣ ದೊಡ್ಡೋರು ಹೇಳ್ತಾರಲ್ಲ, ಮಾತು ಬೆಳ್ಳಿ ಮೌನ ಬಂಗಾರ ಅಂತ ಆ ಮಾತು ನೆನಪಾಗ್ದೇ ಇರೋಲ್ಲ. ಆದ್ರೆ ಈ ಮಾತು ಎಷ್ಟು ನಿಜ ಅಲ್ವಾ? ಮಾತು ಬೆಳ್ಳಿಯಷ್ಟು ಶುಭ್ರವಾಗಿದ್ರೆ ಆ ವ್ಯಕ್ತಿಯ ಮೌಲ್ಯ ಹೆಚ್ಚುತ್ತೆ. ಇನ್ನು ಮೌನವನ್ನು ಬಂಗಾರ ಅಂತಾರೆ. ಯಾಕಿರಬಹುದು? ಬಂಗಾರಕ್ಕೆ ಬೆಳ್ಳಿಗಿಂತ ಬೆಲೆ ಹೆಚ್ಚು. ಹಾಗಾಗಿ ಏನೇನೋ ಮಾತಾಡಿ ನಮ್ಮ ಮೌಲ್ಯ ಕಡಿಮೆ ಮಾಡಿಕೊಳ್ಳುವುದಕ್ಕಿಂತ ಮೌನವಾಗಿದ್ದು ನಮ್ಮ ವ್ಯಾಲ್ಯೂ ಹೆಚ್ಚಿಸಿಕೊಳ್ಳಬೇಕೆಂದು ಹೀಗೆ ಹೇಳಿರಬಹುದೇನೋ...ಆದ್ರೆ ಯಾವಾಗಲೂ ಮಾತನಾಡುತ್ತ ಇದ್ದರೂ ಒಳ್ಳೆಯದಲ್ಲ, ತೀರಾ ಮೌನವಾಗಿದ್ದರೂ ಕ್ಷೇಮವಲ್ಲ. ಯಾಕಂದ್ರೆ ತುಂಬಾ ಮೌನವಾಗಿದ್ರೆ ಬೇರೆಯವರು ನಮ್ಮ ವೀಕ್ನೆಸ್ ಅಂತ ತಿಳಿಯುವ ಸಾಧ್ಯತೆಯೂ ಉಂಟು. ಹಾಗಾಗಿ ನಾವು ಆಡುವ ಮಾತು ಹಿತವಾಗಿದ್ದು, ಮೌನವೂ ಮಿತವಾಗಿದ್ರೆ ಒಳ್ಳೆಯದೇನೋ.

ಮೌನ ಅನ್ನೋ ಪದದ ಬಗ್ಗೆ ಇಷ್ಟೇ ಹೇಳಿದ್ರೆ ಹೇಗೆ. ಹೆಣ್ಣಿಗೆ ಮೌನವೇ ಆಭರಣ ಅಂತ ಬೇರೆ ಹೇಳ್ತಾರೆ. ಸುಮ್ನೇ ಯೋಚಿಸ್ತಾ ಹೋಗಿ ಮೌನ ಅನ್ನೋ ಈ ಎರಡಕ್ಷರದ ಪದವೇ ಸದ್ದಿಲ್ಲದೇ ಸಾವಿರ ನೆನಪುಗಳ ಬುತ್ತಿ ಬಿಚ್ಚಿಡುತ್ತಾ ಹೋಗುತ್ತೆ. ನನಗಂತೂ ಮೌನ ಅನ್ನೋ ಪದದ ಬಗ್ಗೆ ಹೇಳುವುದಾದರೆ ನೆನಪಾಗೋದೇ ನನ್ನ ಶಾಲಾ ದಿನಗಳು. ಯಾಕಂದ್ರೆ ನಾನು ಕಲಿತದ್ದು ಕ್ರಿಶ್ಚಿಯನ್ ಕಾನ್ವೆಂಟನಲ್ಲಿ. ಅಂದ್ಮೇಲೆ ಸ್ಕೂಲಿನ ತುಂಬಾ ಬಿಳಿ ಅಂಗಿ ತೊಟ್ಟ ಸಿಸ್ಟರ್ ಗಳೇ ಹೆಚ್ಚೆಚ್ಚು ಕಾಣಸಿಗುತ್ತಿದ್ದರು. ಇನ್ನು ಅಲ್ಲಿನ ಬಹುಪಾಲು ಶಿಕ್ಷಕಿಯರು ಕ್ರೈಸ್ತರೇ. ಅವರದ್ದು ಶುದ್ಧ ಮಂಗಳೂರು ಕನ್ನಡ. ನಾನು ಆ ಕನ್ನಡ ಕೇಳ್ತಿದ್ರೆ, ಓಹ್ ಟೀಚರ್ ಅಂದ್ರೆ ಹೀಗೇ ಮಾತಾಡಬೇಕೇನೋ ಅಂತ ತಿಳಿದುಕೊಂಡಿದ್ದೆ! ಚಿಕ್ಕಮಕ್ಕಳು ಅಂದ್ರೆ ಗೊತ್ತಲ್ಲ? ಶಿಕ್ಷಕಿ ತರಗತಿಯಲ್ಲಿಲ್ಲ ಅಂದ್ರೆ ಮಣಮಣ ಗಲಾಟೆ ಶುರುವಾಗೋದು ಇಧ್ದದ್ದೇ. ಆಗ ಟೀಚರ್ ಬಂದು ಮಕ್ಕಳೇ ಮೌನವಾಗಿರಿ ಅಂತ ಹೇಳುತ್ತಿದ್ದರು. ಎಲ್ಲರೂ ಮೌನವಾಗಿ ಪುಸ್ತಕ ತೆರೆದು ಓದಿ ಅಂತ ಆದೇಶಿಸುತ್ತಿದ್ದರು. ನಾವು ಪ್ರೈಮರಿಯಲ್ಲಿದ್ದಾಗ ಬಹುಪಾಲು ನೋಟ್ಸನ್ನು ಕರಿಹಲಗೆ ಮೇಲೇ ಬರೆಯುತ್ತಿದ್ದರು. ಅದನ್ನು ನೋಡಿಕೊಂಡು ನಾವು ನಮ್ಮ ನೋಟ್ಸಲ್ಲಿ ಬರೆದುಕೊಳ್ಳುತ್ತಿದ್ದೆವು. ಆಗಲೂ ಅಷ್ಟೇ ಟೀಚರ್ ಒಮ್ಮೆ 'ಶ್' ಅಂದು ಬರೆಯಲು ಅತ್ತ ತಿರುಗಿದರೇ ಮುಗೀತು. ಕೆಲವೇ ನಿಮಿಷದಲ್ಲಿ ಇಡೀ ಕ್ಲಾಸಲ್ಲಿ ಕಪ್ಪೆಗಳು ಸದ್ದು ಮಾಡಿದಂತೆ ವಟವಟ ಸದ್ದು. ಮತ್ತೆ ಟೀಚರ್ ತಿರುಗಿ ಡೆಸ್ಕ್ ಮೇಲೆ ಡಸ್ಟರ್ ನಿಂದ ಧಡ್ ಅಂತ ಸದ್ದು ಮಾಡಿದಾಗಲೇ ನಿಶ್ಯಬ್ಧ. ಆಗಂತೂ ನಮಗೆಲ್ಲಾ ಮೌನ ಅಂದ್ರೆ ಅಸಹನೀಯ.

ಕ್ಲಾಸಿಗೆ ಶಿಕ್ಷಕಿ ಬರೋದು ಕೊಂಚ ತಡವಾದ್ರೂ ಅಲ್ಲಿ ನಮ್ಮದೇ ಲೋಕ ಸೃಷ್ಟಿಯಾಗಿಬಿಡ್ತಿತ್ತು. ಹೋಮ್ ವರ್ಕ್ ಮಾಡಿದ್ಯಾ? ಟೀಚರ್ ಆ ಲೆಕ್ಕ ಕೊಟ್ಟಿದ್ರಲ್ಲಾ ಅದಕ್ಕೆ ಸರಿ ಉತ್ತರ ಬಂತಾ? ಹೀಗೆ ಚರ್ಚೆಗಳು ಶುರುವಾಗ್ತಿದ್ವು. ಇವಿಷ್ಟೇ ಅಲ್ಲ, ಆ ದಿನ ಸೋಮವಾರವಾಗಿದ್ರಂತೂ ಹಿಂದಿನ ದಿನ ಟಿವಿಯಲ್ಲಿ ಬಂದಿದ್ದ ಸಿನಿಮಾ ನೋಡಿದ್ಯೋ ಇಲ್ವೋ ಅನ್ನೋ ವಿಷಯಾನೂ ನಮ್ಮ ಹರಟೆಯ ಕೇಂದ್ರಬಿಂದುವಾಗ್ತಿತ್ತು. ಈ ಹರಟೆ ಕೊಚ್ಚುವಿಕೆಗೆ ಫುಲ್ ಸ್ಟಾಪ್ ಬೀಳಬೇಕಿದ್ರೆ ನಮ್ಮ ಟೀಚರ್ ಬಂದು ಬಾಯಿ ಮುಚ್ಚಿ ಅಂತ ರೇಗಲೇಬೇಕಿತ್ತು.


ಈ ಮಾತು ಬೆಳ್ಳಿ ಮೌನ ಬಂಗಾರ ಅನ್ನೋ ಗಾದೆ ಕೇಳಿದ್ರೆ ನಂಗೆ ಒಂದು ಘಟನೆ ಚೆನ್ನಾಗಿ ನೆನಪಾಗುತ್ತೆ. ಹೈಸ್ಕೂಲು ದಿನಗಳಲ್ಲಿ ನಮಗೆ ಸಿಸ್ಟರ್ ಪ್ರಮಿಳಾ ಡ್ರಾಯಿಂಗ್ ಕ್ಲಾಸ್ ತೆಗೆದುಕೊಳ್ತಿದ್ರು. ಕ್ಲಾಸ್ ನಲ್ಲಿರೋ ಬಹುತೇಕ ಹುಡ್ಗೀರ್ಗೆ ನೀಡಲ್ ವರ್ಕ್ ಮತ್ತು ಡ್ರಾಯಿಂಗ್ ಕ್ಲಾಸ್ ಅಂದ್ರೆ ಅಲರ್ಜಿ. ನಂಗೆ ಮಾತ್ರ ಅದೆಷ್ಟು ಇಂಟ್ರೆಸ್ಟು ಅಂದ್ರೆ ಸಿಸ್ಟರ್ ಬರೋಕೆ ಸ್ವಲ್ಪ ತಡ ಆದ್ರೂ ಆವ್ರ ಕ್ಯಾಬಿನ್ ಗೆ ಹೋಗಿ ಕರೆದುತರ್ತಿದ್ದೆ. ಆಗೊಮ್ಮೆ ಬ್ಯಾನರ್ ನಲ್ಲಿ ಬರೆಯುವ ಮಾದರಿ ಕನ್ನಡ ಅಕ್ಷರಗಳನ್ನು ನಮಗೆ ಸಿಸ್ಟರ್ ಕಲಿಸಿದ್ದರು. ಎಲ್ಲರಿಗೂ ಈ 'ಮಾತು ಬೆಳ್ಳಿ ಮೌನ ಬಂಗಾರ' ಅನ್ನೋ ಸಾಲುಗಳನ್ನು ನೀಟಾಗಿ ಬರೆದು ಪೇಂಟ್ ಮಾಡಿ ನೆಕ್ಸ್ಟ್ ಕ್ಲಾಸಿನಲ್ಲಿ ತರಲು ಹೇಳಿದ್ರು. ಎಲ್ಲರಂತೆ ಮಾಮೂಲಾಗಿ ಮಾಡಿಕೊಂಡು ಹೋಗೋದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಏನಾದ್ರೂ ಕೊಂಚ ಭಿನ್ನವಾಗಿ ಮಾಡಲು ಯೋಚಿಸುತ್ತಿದ್ದೆ. ಆಗ ನಂಗೊಂದು ಐಡಿಯಾ ಹೊಳೆದಿತ್ತು. ಈ ಮಾತು ಬೆಳ್ಳಿ ಮೌನ ಬಂಗಾರ ಅನ್ನೋ ಸಾಲನ್ನ ಅಂದವಾಗಿ ಬರೆದು ಬೆಳ್ಳಿ ಪದಕ್ಕೆ ಸಿಲ್ವರ್ ಪೌಡರ್ ಮತ್ತು ಬಂಗಾರ ಅನ್ನೋ ಪದಕ್ಕೆ ಚಿನ್ನದ ಬಣ್ಣದ ಪೌಡರ್ ಮಿಕ್ಸ್ ಮಾಡಿ ಪೇಂಟ್ ಮಾಡಿದ್ದೆ. ಸಿಸ್ಟರ್ ನನ್ನ ಬುಕ್ ಗೆ ಗುಡ್ ಅಂತ ಬರೆದಾಗ ಆದ ಖುಷಿ ಅಷ್ಟಿಷ್ಟಲ್ಲ. ನಾನು ಹೈಸ್ಕೂಲಿಗೆ ಕಾಲಿಟ್ಟಾಗ ನನಗೆ ಅಷ್ಟೊಂದು ಫ್ರೆಂಡ್ಸ್ ಇರ್ಲಿಲ್ಲ. ಇದ್ದವರೆಲ್ಲಾ ಇಂಗ್ಲಿಷ್ ಮೀಡಿಯಂಗೆ ಜಿಗಿದಿದ್ರೆ ನಾನೊಬ್ಬಳು ಕನ್ನಡ ಮೀಡಿಯಂ ಸೇರಿದೆ. ಹಾಗಾಗಿ ಕ್ಲಾಸಿನಲ್ಲಿ ಹತ್ತಿರದ ಗೆಳತಿಯರು ಅಂತ ಇದ್ದವರು ನೆನಪೇ ಇಲ್ಲ. ಆದ್ರೆ ನಮ್ಮ ಗ್ಯಾಂಗು ಗೈಡ್ಸ್ ಕ್ಲಾಸಿನಲ್ಲಿ ಒಟ್ಟಾಗುತ್ತಿದ್ದರಿಂದ ನಮ್ಮ ತಂಟೆ ತರಲೆಗಳು ಅಬಾಧಿತವಾಗಿ ನಡೆದಿದ್ದವು.


ಕಾಲೇಜಿಗೆ ಬಂದಾಗ ನಾನಿನ್ನೂ ಮೌನಿ. ಯಾಕಂದ್ರೆ ಅಲ್ಲಿ ನಂಗೆ ಯಾರೂ ಗೊತ್ತಿಲ್ಲ! ಎಲ್ಲೊ ಅಲ್ಲೊಬ್ರು ಇಲ್ಲೊಬ್ರು ನಮ್ಮ ಶಾಲೆಯವರು ಕಂಡ್ರೆ ಅವರೇ ಬಂಧುಗಳು! ಆದ್ರೆ ಅವರಿಗೆ ನನ್ನ ಕಂಡು ಹಾಗೆ ಅನಿಸಬೇಕಲ್ಲ? ನಾನು ಪಿಯು ಕಾಲೇಜಿನಲ್ಲಿ ಮೊದಲ ವರ್ಷವಂತೂ ಕ್ಲಾಸಿನಲ್ಲಿ ಅದೆಷ್ಟು ಸೈಲೆಂಟಾಗಿ ಕೂರ್ತಿದ್ದೆ ಅಂದ್ರೆ ಕ್ಲಾಸಿನ ಹುಡುಗೀರು ನಂಗೆ ಸಖತ್ ಕೊಬ್ಬು ಅಂತ ತಿಳ್ಕೊಳ್ಳೋರು! ಮೊದಮೊದಲಂತೂ ಸ್ವಲ್ಪ ಬಾಯಿ ಜೋರಿರೋ ಹುಡುಗೀರು ಫಸ್ಟ್ ಬೆಂಚನ್ನು ಆಕ್ರಮಿಸಿಕೊಂಡುಬಿಡ್ತಿದ್ರು.

ನಾನು ಯಾರೂ ಕೂರದ ಕಡೇ ಬೆಂಚಿಗೆ ಹೆಚ್ಚು ಪ್ರಿಫರ್ ಮಾಡ್ತಿದ್ದೆ. ಕೆಲವು ಹುಡುಗೀರು ನನ್ನ ಮೇಲೆ ಕರುಣೆ ತೋರಿ ಯಾಕೆ ಒಬ್ಳೆ ಕೂರ್ತೀಯಾ ಬಾ ನಮ್ಮ ಜೊತೆ ಅಂತ ಕರೀತಿದ್ರು. ಆಗಲೂ ನನ್ನ ಮೌನ ಅವರನ್ನು ಅಸಹನೆಗೀಡುಮಾಡ್ತಿತ್ತು. ಆದ್ರೆ ಒಂದ್ಸಲ ನಂಗ್ಯಾರಾದ್ರೂ ಹಿಡಿಸಿದ್ರೆ ನಾನೆಷ್ಟು ಮಾತಾಡ್ತೀನಿ ಅಂತ ಪಾಪ ಅವರೀಗೇನು ಗೊತ್ತಿತ್ತು!!

ಇನ್ನು ಕೇಳಿದ ಪ್ರಶ್ಲೆಗಳಿಗೆ ತಪ್ಪಾದ್ರೂ ಸರಿ ಕಾನ್ಪಿಡೆಂಟಾಗಿ ಉತ್ತರಿಸೋದನ್ನು ಕಲಿಸಿತ್ತು ಶಾಲಾಜೀವನ. ಎಲ್ಲಕ್ಕೂ ಮಿಗಿಲಾಗಿ ನನ್ನ ಗೈಡ್ಸ್ ದಿನಗಳು. ಹಾಗಾಗಿ ಲೆಕ್ಚರರ್ ಗಳು ಏನಾದ್ರೂ ಕೇಳಿದ್ರೆ ನನಗೆ ತಿಳಿದಷ್ಟನ್ನು ಎಕ್ಸ್ ಪ್ಲೇನ್ ಮಾಡುತ್ತಿದ್ದ ರೀತಿ ಅವರಿಗೆ ಇಷ್ಟವಾಗ್ತಿತ್ತು. ದಿನ ಕಳೆದಂತೆ ಮೊದಲ 3 ಬೆಂಚುಗಳ ಸಾಲುಗಳಲ್ಲಿ ನಾನಿರುತ್ತಿದ್ದೆ. ದ್ವಿತೀಯ ಪಿಯುಸಿಗೆ ಬರುವಷ್ಟರಲ್ಲಿ ನಾನು ಮೌನದ ಚಿಪ್ಪನ್ನು ಕಳಚಿ ಹೊರಬಂದಿದ್ದೆ. ಎಲ್ಲಾ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ನನ್ನ ಹೆಸರು ತಾನಾಗೇ ಸೇರಿಕೊಳ್ತಿತ್ತು. ಮೊದಲ ವರ್ಷದಲ್ಲಿ ನನ್ನ ವಿರುದ್ಧ ಒಂದು ಶತ್ರು ಪಡೆಯೇ ಸಂಘಟಿತವಾಗಿತ್ತು. ಅಸಲಿಗೆ ನಾನು ಯಾರಿಗೂ ಏನೂ ತೊಂದರೆ ಮಾಡ್ತಿರ್ಲಿಲ್ಲ. ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡುವ ಕೆಟ್ಚಚಟ ಮೊದಲೇ ಇಲ್ಲ. ನನಗೇ ಗೊತ್ತಿಲ್ದೇ ಇದೆಲ್ಲಾ ಆಗ್ತಿತ್ತು. ಆದ್ರೆ 2ನೇ ವರ್ಷ ಬರುವಷ್ಟರಲ್ಲಿ ನನಗೆ ಚೆನ್ನಾಗಿ ನೆನಪಿರುವಂತೆ ಬಹಳಷ್ಟು ಹುಡುಗೀರು ನನ್ನ ಪಕ್ಕ ಕೂತರೆ ಮೆಲ್ಲಗೆ ಕ್ಷಮೆ ಕೇಳಿಬಿಡ್ತಿದ್ರು. ನಂಗಾಗ ಅಚ್ಚರಿ, ಜೊತೆಗೆ ಅರೇ ನನಗೇ ಅರಿವಿಲ್ಲದೆ ನನ್ನ ಸುತ್ತ ಇಷ್ಟೆಲ್ಲಾ ನಡೆದಿತ್ತಾ ಅಂತ ನಗು ಬರ್ತಿತ್ತು. ಆದ್ರೆ ಆ ದಿನಗಳು ಮಾತ್ರ ವಂಡರ್ ಫುಲ್.

ನಾನು ಪದವಿ ವ್ಯಾಸಂಗಕ್ಕೆ ಮತ್ತೆ ಕಾಲೇಜು ಬದಲಿಸಬೇಕಾಯ್ತು. ಆಗ ಮತ್ತೆ ಹಳೇ ಕಾಲೇಜಿನ ಗೆಳತಿಯರೆಲ್ಲಾ ದೂರಾದರು. ಹೊಸ ಕಾಲೇಜಿನಲ್ಲಿ ನನ್ನ ಪಾಡಿಗೆ ನಾನಿರುವುದು ನನಗೆ ಅಭ್ಯಾಸವಾಗಿಬಿಟ್ಟಿತ್ತು. ಹಾಗಾಗಿ ಇಲ್ಲಿ ಅದೇನು ಕಷ್ಟವಾಗ್ಲಿಲ್ಲ. ಓಡಾಡಲು ನನ್ನದೇ ಟೂ ವ್ಹೀಲರ್ ಇತ್ತು. ಹಾಗಾಗಿ ನಾನಯ್ತು ನನ್ನ ಪಾಡಾಯ್ತು. ಆದ್ರೂ ನೋಡೋ ಕಣ್ಣುಗಳು ಸುಮ್ನಿರ್ತಿರ್ಲಿಲ್ಲ. ನನ್ನ ಬೆನ್ನ ಹಿಂದಿನ ಮಾತುಗಳು ಎಷ್ಟೋ ಸಲ ಮೌನ ಮುರಿದು ಮಾತಾಡಲು ಪ್ರೇರೇಪಿಸುತ್ತಿದ್ರೂ ಮನಸ್ಸಾಗುತ್ತಿರ್ಲಿಲ್ಲ. ಕಾರಣ ನಾನಾಗ ಕೇಬಲ್ ಟಿವಿಯೊಂದರಲ್ಲಿ ನಿರೂಪಕಿ ಮತ್ತು ವಾರ್ತಾವಾಚಕಿಯಾಗಿ ಕೆಲಸ ಮಾಡ್ತಿದ್ದೆ. ಹಾಗಾಗಿ ನನಗೆ ಅಹಂಕಾರ, ಜಂಭ ಅನ್ನೋ ಭಾವ ಅವರಿಗೆಲ್ಲಾ. ಹಾಗಾಗಿ ನನಗೆ ಸಮಜಾಯಿಷಿ ನೀಡೋ ಅಗತ್ಯವೇ ಬರ್ತಿರ್ಲಿಲ್ಲ. ಅವರಿಗೇ ಗೊತ್ತಾಗಲಿ ಬಿಡು ಅಂತ ಸುಮ್ನಿರ್ತಿದ್ದೆ. ಕಾಲೇಜು ಸ್ಕೂಲು ಅಂದ್ಮೇಲೆ ಇದೆಲ್ಲಾ ಪ್ರತಿಯೊಬ್ಬರಿಗೂ ಅನುಭವವಾದ ಸಂಗತಿಗಳೇ. ಆದ್ರೆ ಸುಮ್ಮನೆ ಕುಳಿತು ನೆನಪಿಸಿಕೊಂಡ್ರೆ ಇವೆಲ್ಲಾ ಈಗ ಸಖತ್ ಮಜಾ ಕೊಡೋ ಸನ್ನಿವೇಶಗಳೇ ಬಿಡಿ.

ನನಗಂತೂ ಗಲಾಟೆ ಅಂದ್ರೆ ಆಗಲ್ಲ. ಸದಾ ಗಿಜಿಗಿಜಿ ಅನ್ನೋ ಜಾಗದಲ್ಲಿರೋದೇ ಒಂಥರಾ ಕಿರಿಕಿರಿ. ನಮ್ಮ ಮನೆ ಹತ್ರ ಅಂತೂ ಅದೆಷ್ಟು ಪ್ರಶಾಂತ ವಾತಾವರಣ ಗೊತ್ತಾ. ಮನೆ ಪಕ್ಕದಲ್ಲೇ ಇರುವ ಹಸಿರು ಗಿಡಮರಗಳು ಮನಸ್ಸಿಗೆ ಸದಾ ಆಹ್ಲಾದ ಅನುಭವ ನೀಡುತ್ತವೆ. ಮನೆ ಮುಂದೆ ಇದ್ದ ವಿಶಾಲವಾದ ಜಾಗದಲ್ಲಿ ಒಬ್ಬಳೇ ಕುಳಿತೆ ಅಂದ್ರೆ ನನ್ನದೇ ಲೋಕ, ನನ್ನದೇ ಕಲ್ಪನೆಗಳು ಜೀವತಳೆಯುತ್ತಿದ್ದವು. ಆಗ ಮೌನವೇ ನನ್ನ ಸಂಗಾತಿ. ನಿಜಕ್ಕೂ ಇಂತಹ ಸುಂದರ ವಾತಾವರಣದಲ್ಲಿ ನಮ್ಮ ಸಂಗಾತಿ ಮೌನವೇ ಆಗಿದ್ದರೆ ಆ ಕ್ಷಣಗಳನ್ನು ಯಾರೇ ಆದ್ರೂ ಎಂಜಾಯ್ ಮಾಡಬಲ್ಲರೇನೋ. ಇನ್ನು ರಾತ್ರಿ ಹೊತ್ತಂತೂ ನಾನು ಅದೆಷ್ಟೋ ಸಲ ಒಬ್ಬಳೇ ತಾಸುಗಟ್ಟಲೆ ಹೊರಗೆ ಕುಳಿತು ನಕ್ಷತ್ರಗಳನ್ನು ನೋಡುತ್ತಿದ್ದೆ. ಅದ್ಯಾಕೋ ಗೊತ್ತಿಲ್ಲ. ಪಕ್ಕದಲ್ಲಿ ತಂಗಿ ಕುಳಿತು ತಲೆಕೊರೀತಿದ್ರೆ ಅವಳಿಗೂ ಮೌನವಾಗಿ ಆಕಾಶವನ್ನೇ ದಿಟ್ಟಿಸು ಅಂತ ಹೇಳ್ತಿದ್ದೆ. ಕಾರಣ ನನಗೆ ಈಗಲೂ ಗೊತ್ತಿಲ್ಲ. ಆದ್ರೆ ಹಾಗೆ ಮಾಡುವುದು ನನಗೆ ಒಂಥರಾ ಖುಷಿ, ನೆಮ್ಮದಿ ಕೊಡ್ತಿತ್ತು. ಎಷ್ಟೋ ಸಲ ನಾನು ತುಂಬಾ ಬೇಜಾರಾದಾಗ ನಕ್ಷತ್ರಗಳನ್ನು ನೋಡುತ್ತಾ ಮನಸಲ್ಲೇ ಮಾತಾಡಿದ್ದುಂಟು. ಕಣ್ಣಂಚಲ್ಲಿ ನೀರು ತುಂಬಿಕೊಂಡದ್ದುಂಟು. ಆದ್ರೆ ಸುಮ್ಮನೆ ಕುಳಿತು ಪ್ರಕೃತಿಯನ್ನು ಅನುಭವಿಸುವುದಿದೆಯಲ್ಲ ಅದು ಒಂಥರಾ ಚೆಂದ. ಈಗಲೂ ಅವಕಾಶ ಸಿಕ್ಕರೆ ಹಾಗೆ ಮಾಡ್ತೀನಿ. ಆದ್ರೆ ನನಗೆ ನೆನಪಿರುವಂತೆ ಇತ್ತೀಚೆಗೆ ತಾಸುಗಟ್ಟಲೆ ರಾತ್ರಿ ಆಕಾಶ ವೀಕ್ಷಿಸಿದ್ದು ನನಗೆ ನೆನಪೇ ಇಲ್ಲ.

ಈಗಂತೂ ಬಿಡಿ. ಇರೋದು ಬೆಂಗಳೂರೆಂಬ ಬಿಜಿ ಸಿಟಿಯಲ್ಲಿ. ಇಲ್ಲಿ ಹಗಲು ರಾತ್ರಿ ಬದಲಾಗುವುದೇ ಗೊತ್ತಾಗುವುದಿಲ್ಲ. ನಿತ್ಯವೂ ಒಂದೊಂಥರಾ ಶಿಫ್ಟ್ ಟೈಮು. ಹೋಗೋದೊಂದು ಹೊತ್ತು ಬರೋದೊಂದು ಹೊತ್ತು. ಉಣ್ಣೋದೊಂದು ಹೊತ್ತು ಮಲಗೋದೊಂದು ಹೊತ್ತು. ಎಲ್ಲರಂತೆ ಪ್ರತಿನಿತ್ಯ ಒಂದೇ ಸಮಯದ ಕೆಲಸ ಮಾಡಿದ್ದು ಗೊತ್ತೇ ಇಲ್ಲ. ಎಷ್ಟೋ ಸಲ ಎಲ್ಲಾ ಮಲಗಿ ಕನಸಿನ ಲೋಕದಲ್ಲಿರುವಾಗ ಮನೆಗೆ ಬರುವುದುಂಟು. ಎಲ್ಲಾ ಎದ್ದು ಆಫೀಸಲ್ಲಿ ಕೆಲಸ ಮಾಡೋವಾಗ ನಾನು ಹಾಸಿಗೆ ಬಿಟ್ಟಿರ್ತೀನಿ. ರಾತ್ರಿ ನಾನು ಮನೆ ತಲುಪಿದರೆ ನನಗಾಗಿ ಕಾಯುವ ಏಕೈಕ ಸಂಗಾತಿ ನೀರವ ಮೌನ. ಅಫ್ಕೋರ್ಸ್ ಬೆಂಗಳೂರಲ್ಲಿ ನಿಮಗೆ ನೀರವ ಮೌನ ಬಿಟ್ರೆ ಸಿಗುವ ಮತ್ತೊಂದು ಸಂಗತಿ, ಸಂಗಾತಿ ಅಂದ್ರೆ ಕೆಟ್ಟ ಟ್ರಾಫಿಕ್ ಮತ್ತು ಕಿವಿಗಡಚಿಕ್ಕುವ ಗದ್ದಲ. ಊರಲ್ಲಿ ಒಂಟಿಯಾಗಿ ಕೂತು ಅನುಭವಿಸಿದ ಮೌನಯಾನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಇದ್ರೂ ಮನಸ್ಸಿಗೆ ತೃಪ್ತಿ ಸಿಗೋಲ್ಲ ಬಿಡಿ. ನೋಡನೋಡುತ್ತಿದ್ದ ಹಾಗೇ ಈ ಪರಿಸರಕ್ಕೆ ಹೊಂದಿಕೊಂಡಿದ್ದೇನೆ. ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆಯಲ್ಲ? ಈಗಲೂ ಒಂದೆರಡು ದಿನ ಊರಿಗೆ ಅಂತ ಹೋದ್ರೆ ಅಲ್ಲಿನ ವಾತಾವರಣ ತುಂಬಾ ಆಹ್ಲಾದಕರ ಅನ್ನಿಸುತ್ತದೆ. ನನಗೆ ಹೆಚ್ಚಾಗಿ ಊರು ಸುತ್ತೋಕೆ ಹೋಗದೆ ಮನೆಯಲ್ಲೇ ಇರೋದೆ ಇಷ್ಟ. ನೆಮ್ಮದಿಯಾಗಿ ನಿದ್ರೆ ಬರುತ್ತೆ. ಬೆಂಗಳೂರಲ್ಲಿ ಆ ವಾಹನಗಳ ಸದ್ದಿನ ಜೋಗುಳದಲ್ಲೇ ನಿದ್ದೆ ಮಾಡಿ ಅದೇ ವಾಹನಗಳ ಹಾರ್ನ್ ಅಬ್ಬರದ ಅಲಾರ್ಮ್ ಸದ್ದು ತಾಳಲಾರದೆ ಎದ್ದು ಅಭ್ಯಾಸವಾಗಿ, ಮನೆಯ ಬಳಿಯ ಶುದ್ಧ ಮೌನ ಖುಷಿ ನೀಡುತ್ತದೆ. ಮೌನದ ಮಡಿಲಲ್ಲಿ ತಣ್ಣಗೆ ಮಲಗಿ ಬೆಳಗಿನ ಮುಂಜಾವಲ್ಲೂ ಬೆಚ್ಚಗೆ ಹೊದಿಕೆ ಸುತ್ತಿ ಸುತ್ತಿ ಮಲಗಿ ಎದ್ರೆ, ಅಮ್ಮನ ಬಿಸಿಬಿಸಿ ಕೈ ತಿಂಡಿ ತಿನ್ನೋದಿದೆಯಲ್ಲ ಅದು ರಾಜಭೋಗ!

ಮೌನಕ್ಕೆ ಅದೆಷ್ಟು ಮುಖಗಳು, ಬರೆದಷ್ಟು ಮುಗಿಯಲ್ಲ. ಮೌನ ಹೊಮ್ಮಿಸುವ ಭಾವಗಳು ಅನುಭವಿಸಿದರಷ್ಟೇ ಗೊತ್ತಾಗುವುದು. ಅದಕ್ಕೇ ಹೇಳೋದು ಮೌನ ಬಂಗಾರ ಅಂತ ಅಲ್ವಾ?

Monday, March 29, 2010

ಕೀ ಕಳೆದು ಹೋದಾಗ...


ನೀವು ಯಾರಿಗಾದ್ರೂ ಏನಾದ್ರೂ ಸಹಾಯ ಮಾಡಿ. ಮನಸ್ಸಿಗೆ ಅದೆಷ್ಟು ಖುಷಿ ಅನ್ಸುತ್ತೆ ಅಲ್ವಾ? ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಸಹಾಯದಿಂದ ಸಿಗುವ ಆತ್ಮತೃಪ್ತಿ ಇದ್ಯಲ್ಲಾ? ಅದು ಮತ್ತೆಲ್ಲೂ ಸಿಗೋಲ್ಲ. ನಾನು ಇವತ್ತು ನಿನಗೆ ಈ ನೆರವು ಕೊಟ್ಟಿದ್ದೇನೆ. ನಾಳೆ ನನಗೂ ನಿನ್ನಿಂದ ಏನಾದ್ರೂ ಸಿಗಬಹುದಲ್ವಾ ಅಂತ ಅನ್ಕೊಂಡ್ರೋ ನೀವ್ ಕೆಟ್ರಿ! ಜಮಾನಾ change ಆಗಿದೆ, ಜೊತೆಗೆ ಜನರೂ ಕೂಡ. ಅಪ್ಪಿ ತಪ್ಪಿ ನಮ್ಮ ಕಷ್ಟಕ್ಕೆ ಯಾರಾದ್ರೂ ನೆರವಾದ್ರೆ ಒಂದೋ ನಮ್ಮ ಪುಣ್ಯ, ದೇವರ ದಯೆ ಅಥವಾ ಹಿಂದೆಂದೋ ನಾವು ಮಾಡಿದ ಒಳ್ಳೆ ಕೆಲಸಕ್ಕೆ ಸಿಕ್ಕ ಪ್ರತಿಫಲ ಅಷ್ಟೇ.

ಅದಕ್ಕೊಂದು example ಹೇಳ್ತೀನಿ. ಕೆಲ ತಿಂಗಳುಗಳ ಹಿಂದೆ ನಾನು ಮತ್ತು ನನ್ ಫ್ರೆಂಡ್ ನೀತು ಜಯನಗರಕ್ಕೆ ಹೋಗಿದ್ವಿ. ನೀತು ಮನೆ ಶಿಫ್ಟಿಂಗ್ ಕೆಲ್ಸ ನಡೀತಿದ್ರಿಂದ ಕೆಇಬಿ, ಬಿಎಸ್ಎನ್ಎಲ್ ಆಫೀಸ್ ಮೊದಲಾದ ಕಡೆ ಸುಮಾರು ಕೆಲಸ ಬಾಕಿಯಿತ್ತು. ಸುತ್ತಿ ಸುತ್ತಿ ಸಾಕಾಗಿತ್ತು. ಏನಾದ್ರೂ ತಿನ್ನೋಣ ಅನ್ಕೊಂಡ್ರೆ ಕಾಸು ಖಾಲಿ. ಸರಿ ಇಬ್ರೂ ಎಟಿಎಮ್ ಸರ್ಚ್ ಮಾಡ್ತಾ ಅಲ್ಲೊಂದು ಕಾಂಪ್ಲೆಕ್ಸ್ ಹತ್ರ ಹೋದ್ವಿ. ಅಲ್ಲಿ ಗಾಡಿ ಪಾರ್ಕ್ ಮಾಡಿ ಎಟಿಎಮ್ ನಲ್ಲಿ ಹಣ ತೆಗೆದು ಹೊರಗೆ ಬಂದ್ವಿ. ನಮ್ಮ ಗಾಡಿ ಪಕ್ಕ ಒಂದು activa ನಿಂತಿತ್ತು. ಆದ್ರೆ ಅದ್ಯಾವ ಆತುರದಲ್ಲೋ ವಾಹನದಲ್ಲೇ ಕೀ ಬಿಟ್ಟು ಹೋಗಿದ್ದರು ಅದರ ಒಡೆಯರು. ಸಾಮಾನ್ಯವಾಗಿ ಹೆಲ್ಮೆಟ್ ತೆಗೆದು ಸೀಟ್ ಬಾಕ್ಸ್ ನಲ್ಲಿ ಇಟ್ಮೇಲೆ ಬಹುತೇಕ ವಾಹನ ಸವಾರರು ಇಂತಹ ಪ್ರಮಾದ ಮಾಡ್ಬಿಡ್ತಾರೆ. ಇಲ್ಲೂ ಅದೇ ಆಗಿತ್ತು ಅನ್ಸುತ್ತೆ. ನಾವು ಪಕ್ಕದಲ್ಲೇ ಇದ್ದ ಅಂಗಡಿಯವರಿಗೆ ಕೀ ತಲುಪಿಸಿ ಸಂಬಂಧಪಟ್ಟವರಿಗೆ ದಯವಿಟ್ಟು ತಲುಪಿಸಿ ಅಂತ ಹೇಳಿ ಬಂದ್ವಿ.

ಅದೇನೋ ಒಂಥರಾ ಖುಷಿ. ಸದ್ಯ ಯಾರೋ ಕಳ್ಳರ ಕೈಗೆ ಸಿಗಲಿಲ್ವಲ್ಲಾ. ಅದ್ಯಾರೋ ಏನೋ ಕೀ ಜೊತೆ ಗಾಡೀನೂ ಕಳಕೊಂಡು ಪರದಾಡ್ಬೇಕಿತ್ತು ಅಂತ ನಮಗೆ ನಾವೇ ಅನ್ಕೊಂಡ್ವಿ. ದುರಂತ ಅಂದ್ರೆ ಹೀಗೆ ಕೀ ಯನ್ನು ಗಾಡಿ ಸೀಟ್ ಬಾಕ್ಸ್ ನಲ್ಲೇ ಬಿಟ್ಟು ಹೋಗೋ ಕಾಯಿಲೆ ನಂಗೂ ಉಂಟು! ಎಷ್ಟೋ ಸಲ ಹಾಗೆ ಬಿಟ್ಟು ಹೋದ ಕೀ ಅಲ್ಲೇ ಇದ್ದು ವಾಪಸ್ಸು ಗಾಡಿ ತೆಗೆಯಲು ಬಂದಾಗ ನೋಡಿದ್ದಿದೆ. ಮನಸಲ್ಲೇ 'ಸದ್ಯ ದೇವರೇ' ಅಂತ ಅಂದುಕೊಂಡದ್ದಿದೆ. ಹೊಸ activa ಕೊಂಡ ಮೇಲೆ ಗಾಂಧಿಬಜಾರಿನಲ್ಲೊಮ್ಮೆ ಹೀಗೆ ಆಗಿತ್ತು. ಮತ್ತೊಮ್ಮೆ ಸಿನಿಮಾಗೆ ಅಂತ ಮಾಲ್ ಒಂದಕ್ಕೆ ಹೋದಾಗ ಪಾರ್ಕಿಂಗ್ ಸ್ಥಳದಲ್ಲಿ ಕತ್ತಲಿದ್ರಿಂದ ಬಿಟ್ಟು ಹೋದ ಕೀ ಅಲ್ಲೇ ಸಿಕ್ಕಿತ್ತು. ಹೀಗಾದ್ರೆ ಓಕೆ. ನೂರಾರು ಮಂದಿ ಓಡಾಡೋ ಮಾಲ್ ಒಳಗೆಲ್ಲೋ ಕೈಬಿಟ್ರೆ ದೇವರೇ ಗತಿ.


ಮೊನ್ನೆ ನಾನು ಮತ್ತು ಅನುಷಾ ಕನ್ನಡ ಸಿನಿಮಾವೊಂದನ್ನು ನೋಡೋಣ ಅಂತ ಫೋರಂಗೆ ಹೋದ್ವಿ. ಶೋ ಶುರುವಾಗಲು ಅರ್ಧ ಗಂಟೆ ಇತ್ತು ಅಷ್ಟೇ. ಸರಿ ಟಿಕೆಟ್ ಏನೋ ಸಿಕ್ತು. ಹೊಟ್ಟೆ ಚುರ್ ಅಂತಿತ್ತು. ಇಬ್ರೂ ಮೆಕ್ ಡೀ ಗೆ ಹೋಗಿ ನೂರಾರು ರೂಪಾಯಿ ದಂಡ ತೆತ್ತು ಬನ್ನು ತಿಂದ್ವಿ! ಭರ್ತಿ 2ವರೆ ಗಂಟೆ ಸಿನಿಮಾನ ಎಂಜಾಯ್ ಮಾಡಿ ಹೊರಬಂದಾಗ ಯಾಕೋ ಬ್ಯಾಗಿಗೆ ಕೈ ಹಾಕ್ದೆ. ನನ್ ಗಾಡಿ ಕೀ ಪತ್ತೆನೇ ಇಲ್ಲ. ಪ್ಯಾಂಟ್ ಪಾಕೆಟ್ ಗಳೂ ಖಾಲಿ ಖಾಲಿ! ಪೀಕಲಾಟ ಶುರುವಾಯ್ತು. ತಕ್ಷಣ ಮೆಕ್ ಡೀ ಕಡೆ ಓಡಿದ್ವಿ. ಅಲ್ಲೋ ನಮ್ ಸಂಕಟ ಕೇಳೋರೇ ಗತಿ ಇಲ್ಲ. ನಿಮಿಷದಲ್ಲಿ ಸಾವಿರಾರು ರೂಪಾಯಿ ವ್ಯವಹಾರ ಮಾಡೋ ಅವ್ರಿಗೆ ನಮ್ಮ ವೆಹಿಕಲ್ ಕೀ ಕಳೆದೋದ್ರೆ ಏನ್ ಆಗ್ಬೇಕ್ ಅಲ್ವಾ? ಅಕಸ್ಮಾತ್ ಯಾರಾದ್ರೂ ವಾಪಸ್ಸು ತಂದ್ಕೊಟ್ರೆ ದಯವಿಟ್ಟು ತಿಳಿಸ್ತೀರಾ ಅಂತ ಕೇಳಿಕೊಂಡ್ರೆ ಕಡೇಪಕ್ಷ ಸೌಜನ್ಯಕ್ಕೂ ಅವರು ನಮ್ಮ ವಿಳಾಸ ದೂರವಾಣಿ ಸಂಖ್ಯೆ ಕೇಳೋ ಗೋಜಿಗೇ ಹೋಗ್ಲಿಲ್ಲ. ಅಫ್ಕೋರ್ಸ್ ಅವರ ಕೆಲಸ ಅವರಿಗೆ ತುಂಬಾ ಇಂಪಾರ್ಟೆಂಟ್. ಆದ್ರೆ ಗ್ರಾಹಕರ ಹಣ ಬೇಕು ಸಮಸ್ಯೆ ಮಾತ್ರ ಅವರಿಗೆ ಬೇಕಿಲ್ಲವಲ್ಲ ಅನ್ನಿಸಿಬಿಡ್ತು. ಬಿಟ್ಟಾಕು, ಸಮಸ್ಯೆ ನಮ್ಮದಾದಾಗಲೇ ನಮಗದು ದೊಡ್ಡದು ಅನ್ನಿಸೋದು ಅನ್ಕೊಂಡು, ನನ್ನ ತಪ್ಪಿಗೆ ನನ್ನನ್ನೇ ಶಪಿಸಿಕೊಂಡೆ.

ಥಿಯೇಟರ್ ನಲ್ಲೇನಾದ್ರೂ....? ಅಂತ ಹೊಳೆದು ಅಲ್ಲಿಗೆ ದೌಡಾಯಿಸಿದ್ವಿ. ಆದ್ರೆ ಮತ್ತೊಂದು ಶೋ ಆಗ್ಲೇ ಶುರುವಾಗಿತ್ತು. ಅಲ್ಲಿನವರು ನಮ್ಮ ಸಮಸ್ಯೆಗೆ ತಕ್ಷಣ ಸ್ಪಂದಿಸಿ ನಾವು ಕುಳಿತಿದ್ದ ಸೀಟ್ ನಂಬರ್ ಕೇಳಿ ಥಿಯೇಟರ್ ಒಳಗೆ ಕರ್ಕೊಂಡು ಹೋದ್ರು. ಟಾರ್ಚ್ ಬಿಟ್ಟು ಹುಡುಕಿದ್ರೆ ಅಲ್ಲಿ ಏನೂ ಇರ್ಲಿಲ್ಲ. ಶೋ ಮುಗಿದ ಮೇಲೆ ಥಿಯೇಟರ್ ಚೆಕ್ ಮಾಡಿದ್ದ ವ್ಯಕ್ತಿ ಕೂಡ ಅಂತಹ ಯಾವ್ದೇ ವಸ್ತು ಸಿಗ್ಲಿಲ್ಲ ಅಂತ ಹೇಳಿದ್ರು. ಕಡೆಗೆ ನನ್ contact numbr ತಗೊಂಡು ಸಿಕ್ಕಿದ ತಕ್ಷಣ ತಿಳಿಸುವುದಾಗಿ ಭರವಸೆ ಕೊಟ್ರು. ಆದ್ರೆ ಕೀ ಸಿಗಲಿಲ್ಲ :( ಲೇ ಅನುಷಾ ನಾವೆಷ್ಟು ಸಲ ಈ ಥರ ಕೀ ಕಳ್ಕೊಂಡೋರಿಗೆ ಸಹಾಯ ಮಾಡಿದ್ದೀವಿ, ನಮ್ಗೇ ಯಾಕೆ ಈ ಥರ ಅಂತ ಕೇಳ್ದೆ.

ಹೀಗಾಯ್ತಲ್ಲಾ ಅಂತ ನಾನು ಸಖತ್ worried ಆಗಿದ್ರೆ, ಅನುಷಾ ಮಾತ್ರ as usual ತನ್ನ ಆರ್ಟ್ ಆಫ್ ಲಿವಿಂಗ್ ಸ್ಟೈಲಲ್ಲಿ ತಲೆ ಕೆಡ್ಸ್ಕೋಬೇಡ ಬಿಡೇ. ನಂಗೊತ್ತು ಅದು ಸಿಕ್ಕೇ ಸಿಗುತ್ತೆ ಅಂತ ಹೆಗಲ ಮೇಲೆ ಕೈ ಹಾಕಿ ನಗ್ತಿದ್ಲು. ಅಯ್ಯೋ ನನ್ನ ಸಂಕಟ ಯಾರಿಗೆ ಹೇಳ್ಲಿ? ಸರಿ ಹಿಂದಿನಂತೆ ಗಾಡಿಯಲ್ಲೇ ಇರ್ಬುಹುದಾ ಅಂತ ನೋಡಿದ್ರೆ..............ನೋ...:( ಅಲ್ಲಿರ್ಲಿಲ್ಲ. ಕಡೇ ಚಾನ್ಸು ಅಂತ ಅಲ್ಲಿದ್ದ ಸೆಕ್ಯೂರಿಟಿಯನ್ನ ಕೇಳಿದ್ರೆ ಅಂಡರ್ ಗ್ರೌಂಡ್ ನತ್ತ ಬೊಟ್ಟು ಮಾಡಿ ಹೋಗಲು ಹೇಳಿದ. ಅಲ್ಲೋ ಬರೀ ಕಾರ್ ಪಾರ್ಕಿಂಗು. ಅಲ್ಲಿದ್ದ ಮೂರ್ನಾಲ್ಕು ಸೆಕ್ಯೂರಿಟಿಗಳಿಗೆ ಭಯ್ಯಾ ಹಮಾರಾ ಗಾಡಿ ಕೀ...ಅನ್ನೋವಷ್ಟರಲ್ಲೇ ಮತ್ತೊಂದು ಕಡೆ ದಾರಿ ತೋರಿಸಿದರು. ಅಲ್ಲಿದ್ದ ಗ್ಲಾಸ್ ಚೇಂಬರ್ ನೊಳಗಿದ್ದ ಮಹಿಳೆಗೆ ನಮ್ ಗಾಡಿ ಕೀ...ಅಂತಿದ್ದ ಹಾಗೇ ಒಂದು ಕೀ ತೋರಿಸದ್ಲು. ಆಹಾ! ದೇವ್ರೇ ದೇವ್ರೇ ಅನ್ಕೊಂಡು ನೋಡಿದ್ರೆ ಅದ್ಯಾವ್ದೋ ಬೇರೆ :( ಮತ್ತೊಂದು ಕೀ ತೋರಿಸಿದ್ರು. ನಾನೆಷ್ಟು ಜೋರಾಗಿ ಖುಷಿಯಿಂದ ಕೂಗಿದೆ ಅಂದ್ರೆ ಬಾಡಿ ಹೋಗಿದ್ದ ತರಕಾರಿಯಂತಿದ್ದ ಮುಖ ಫ್ರೆಷ್ ಆದ ಹೂವಂತೆ ನಳನಳಿಸಿತು. ನೋಡ್ದಾ? ಸಿಗಲ್ಲ ಸಿಗಲ್ಲ ಅಂತ ಅಳೋ ಬದ್ಲು, ಸಿಗುತ್ತೆ ಅಂತ ಪಾಸಿಟಿವ್ ಆಗಿ ಯೋಚ್ನೆ ಮಾಡು ಕೋತಿ ಅಂದ್ಲು ನಮ್ ತತ್ವಜ್ಞಾನಿ!

ಸಿಕ್ಕ ಸಿಕ್ಕ ಸೆಕ್ಯೂರಿಟಿಗಳಿಗೆಲ್ಲಾ ಥ್ಯಾಂಕ್ಸ್ ಹೇಳ್ಕೊಂಡು ಬಂದ್ವಿ.. ಅವರಿಗೆ ನಮ್ ಖುಷಿ ಹೊಸತೇನಲ್ಲ. ಹಾಗೇ ಇತ್ತು ಅವರ ಮುಖಭಾವ. ಆದ್ರೆ ಆ ಕ್ಷಣದಲ್ಲಿ ಅವರ ಪ್ರಾಮಾಣಿಕತೆ ನಮಗೆ ಅಷ್ಟು ಖುಷಿ ಕೊಟ್ಟಿತ್ತು. ಅದ್ಯಾರು ಕೀ ಅವರಿಗೆ ತಲುಪಿಸಿದ್ರೋ ಅಥವಾ ಸ್ವತಃ ಸೆಕ್ಯೂರಿಟಿ ಕಣ್ಣಿಗೇ ಬಿದ್ದು ಅದನ್ನು ಸಂಬಂಧಪಟ್ಟೆಡೆ ತಲುಪಿಸಿದ್ರೋ ಗೊತ್ತಿಲ್ಲ. ಆದ್ರೆ ಉಪಕಾರ ಯಾರದ್ದೇ ಇರ್ಲಿ, ಅವರಿಗೆ ಮನಸಾರೆ ಕೃತಜ್ಞತೆಗಳನ್ನು ಹೇಳಿದ್ದಾಯ್ತು. ಕಲಿಗಾಲದಲ್ಲೂ ಪ್ರಾಮಾಣಿಕತೆಗೆ ಬೆಲೆ ಇದೆ ಅನ್ನೋದು ನಿಜ ಅಲ್ವಾ?

Thursday, February 25, 2010

ಇಟ್ಸ್ ದ ಟೈಮ್ ಟು ಸೀರಿಯಲ್...!


ಅಬ್ಬಾ ಈ ಟೀವಿಯ ಠೀವಿ ಅದೇನ್ರೀ...? ಚಾನೆಲ್ಲುಗಳನ್ನು ತಿರುಗಿಸಿದಷ್ಟೂ ಮುಗಿಯದ ಕಾರ್ಯಕ್ರಮಗಳ ಸರಮಾಲೆ. ಒಂದಕ್ಕಿಂತ ಮತ್ತೊಂದರದ್ದು ಭಿನ್ನ, ವಿಭಿನ್ನ. ಅದಕ್ಕೇ ನಮ್ ಜನ ಬಿಟ್ಟ ಕಣ್ಣು ಬಿಟ್ಟಂಗೇ ಟಿವಿ ನೋಡ್ತಾ ಕೂರೋದು. ನನಗಂತೂ ಇತ್ತೀಚೆಗೆ ಇದ್ರ ಪ್ರತ್ಯಕ್ಷ ದರ್ಶನ ಪದೇ ಪದೇ ಆಗ್ತಿರೋದ್ರಿಂದ ಈ ಬಗ್ಗೆ ಹೇಳ್ಲೇಬೇಕು.

ನಾನು ಮೊದಲಿದ್ದ ಪಿಜಿಯಲ್ಲಿ ಟಿವಿ ಇಟ್ಟ ಕೋಣೆ ರಾತ್ರಿ 10ಕ್ಕೆಲ್ಲಾ ಬಂದ್ ಆಗ್ತಿದ್ರಿಂದ ಅಲ್ಲಿ ಟಿವಿ ನೋಡೋಕೆ ಹೆಚ್ಚಿನವರ್ಯಾರೂ ಹೋಗ್ತಿರ್ಲಿಲ್ಲ. ಸಂಜೆ ವೇಳೆ ಸಮಯ ಸಿಕ್ಕಾಗ ಕೆಲವು ಸೀರಿಯಲ್ ಗಳನ್ನು ನೋಡೋಕೆ ಹುಡುಗೀರು ಬರ್ತಿದ್ರು. ಆದ್ರೆ ಒಬ್ಬೊಬ್ಬರದ್ದು ಒಂದೊಂದು ಟೈಮ್ ಅಂತ ಅವರವರಲ್ಲೇ ಮ್ಯೂಚುಯಲ್ ಅಂಡರ್ಸ್ಟ್ಯಾಂಡಿಂಗ್ ಇದ್ದಿದ್ರಿಂದ ಅಲ್ಲಿ ಟಿವಿ ನೋಡೋಕೆ ಹೆಚ್ಚಿನ ಜಗಳಗಳು ಇರ್ತಾನೇ ಇರ್ಲಿಲ್ಲ. ಆದ್ರೆ ಈಗಿರೋ ಪೇಯಿಂಗ್ ಗೆಸ್ಟ್ ನಲ್ಲಿ ನೋಡ್ಬೇಕು. ಅಯ್ಯಪ್ಪಾ! ಇಲ್ಲಿ ರಿಮೋಟ್ ಅನ್ನೋದು ನಮ್ಮ ರಾಜಕಾರಣಿಗಳ ಅಧಿಕಾರದ ಕುರ್ಚಿಗೆ ಸಮ! ನಾನ್ಹೇಳೋದು ಅತಿಯಾಯ್ತು ಅಂತ ಅನ್ನಿಸಿದ್ರೆ ನೀವೇ ಒಮ್ಮೆ ಬಂದು ನೋಡಬಹುದು!

ತೀರಾ ಸೀರಿಯಸ್ ಆಗಿ ಸೀರಿಯಲ್ ಗಳನ್ನು ನೋಡೋ ಅಭ್ಯಾಸ ಇಲ್ಲವಾದ್ದರಿಂದ ನಾನು ಈ ಸಮರದಲ್ಲಿ ಭಾಗಿಯಲ್ಲ. ದಿನದ ಬಹುತೇಕ ಸಮಯ ಟಿವಿ ಆನ್ ಇದ್ದೇ ಇರುತ್ತೆ ನಮ್ ಪಿಜಿಯಲ್ಲಿ. ಅದರಲ್ಲೂ ಪ್ರೈಮ್ ಟೈಮ್ ನಲ್ಲಿ ರಿಮೋಟ್ ಗಾಗಿ ನಡೆಯೋ ರಾಜಕೀಯ ನೋಡ್ಬೇಕು! ಇಲ್ಲಿ 3 ಟೀಮು. ಒಂದು ಅತಿ ಪ್ರಭಾವಿ ತಂಡ, ಹೇಳ್ಕೊಳ್ಳೋಕೆ ಅಚ್ಚ ಕನ್ನಡಿಗರು! ಇವ್ರೆಲ್ಲಾ ಸ್ಟಾರ್ ಪ್ಲಸ್ ಫ್ಯಾನುಗಳು. 2ನೇದು ಆಂಧ್ರ ಮೂಲದ ಮೂರ್ನಾಲ್ಕು ಹುಡುಗೀರ ಟೀಮು. ಪ್ರೈಮ್ ಟೈಮ್ ಗಿಂತ ಮುಂಚಿನ ಸ್ಲಾಟ್ ಇವರಿಗೇ ಕೊಡ್ದಿದ್ರೆ ಮುಗೀತು ಕಥೆ! ಇನ್ನು 3ನೇ ಟೀಮಲ್ಲಿ ಇಬ್ರೇ. ನಾರ್ಥ್ ಇಂಡಿಯನ್ಸ್. ಬೇಕಾದಾಗ ಮಾತ್ರ ಹಲ್ಲು ಕಿಸಿದು ಮಾತಾಡಿಸೋ ಇವ್ರ ರಿಮೋಟ್ ಬೇಡಿಕೆಗೆ ಕನ್ನಡಿಗರ ಗ್ಯಾಂಗು ಸೊಪ್ಪು ಹಾಕದ್ದರಿಂದ ಮೊದಲ ಗ್ಯಾಂಗ್ ಸಾಕಪ್ಪಾ ಅಂತ ರಿಮೋಟ್ ಇಟ್ಮೇಲೇನೇ ಇವ್ರಿಗೆ ನೆಚ್ಚಿನ ಚಾನೆಲ್ ವೀಕ್ಷಿಸೋ ಸೌಭಾಗ್ಯ.

ಊಟದ ತಟ್ಟೆ ಖಾಲಿ ಆದ್ರೆ ಮತ್ತೆ ಅನ್ನ, ಸಾರು ಹಾಕ್ಕೊಳ್ಳೋಕೋ ಅಥವಾ ಊಟ ಮುಗಿಸಿ ಕೈತೊಳೆಯೋಕೆ ಹೋಗೋದಕ್ಕು ಮುಂಚೆ ತಮ್ಮ ಟೀಮಿನವರಲ್ಲೇ ಒಬ್ರ ಸುಪರ್ದಿಗೆ ರಿಮೋಟ್ ಕೊಟ್ಟೇ ಹೋಗೋದು. ಅದೇನಾದ್ರೂ ಬೇರೇಯವ್ರ ಕೈ ಸೇರಿತೋ ಮುಗೀತು ಕಥೆ, ರಿಮೋಟ್ ಬಿಟ್ಟು ಕೊಟ್ಟವರಿಗೆ ತಪರಾಕಿ ಶುರು!

ನಾನು ಮೊದಲು ಈ ಪಿಜಿಯಲ್ಲಿ ಇಷ್ಟೊಂದು ಆರಾಮವಾಗಿ ಟಿವಿ ನೋಡ್ಬಹುದಲ್ಲಾ ಸದ್ಯ. ಇನ್ಮೇಲೆ ನ್ಯೂಸ್ ಚಾನೆಲ್ ಗಳ ವೀಕ್ಷಣೆಗೆ ನೋ ಪ್ರಾಬ್ಲಮ್ ಅಂತ ಒಳಗೊಳಗೇ ಅದೆಷ್ಟು ಖುಷಿ ಪಟ್ಟಿದ್ದೆ?.. ! ಛೇ...ನನ್ನ ಆಸೆಗೆ ಕೆಲವೇ ದಿನಗಳಲ್ಲಿ ಒಂದು ಲೋಡು ಮಣ್ಣು ಹಾಕಿ ಸಮಾಧಿ ಮಾಡ್ಬಿಟ್ರು ಅಲ್ಲಿನ ಹುಡುಗೀರು. ಮೊದ ಮೊದಲು ಡಿಸ್ಕಷನ್ನು ಅದು ಇದು ಅಂತ ಹಾಕಿದ್ರೆ ಹೋಗ್ಲಿ ಪಾಪ ಅಂತ ನಂಜೊತೆ ಒಂದಿಬ್ರು ನೋಡ್ತಿದ್ರು. ನಮ್ಗೂ ನ್ಯೂಸ್ ಇಷ್ಟಾನಪ್ಪಾ ಅಂತ ರೈಲು ಹತ್ತಿಸಿದ್ರು. 10 ನಿಮಿಷ ಬಿಟ್ಟು ತಿರುಗಿ ನೋಡಿದ್ರೆ ಇಡೀ ಕೋಣೆ ಖಾಲಿ ನಾನೊಬ್ಳೇ ಟಿವಿ ಮುಂದೆ ಇರ್ತಿದ್ದೆ! ಯಾವಾಗ ನನ್ನ ನ್ಯೂಸ್, ಚರ್ಚೆಗಳ ವೀಕ್ಷಣೆ ದಿನಾ ಸಂಜೆ ಶುರುವಾಯ್ತೋ ಇವ್ರಿಗೆ ಪೀಕಲಾಟ! ನನಗೂ ಗೊತ್ತಾಯ್ತು. ಓಹ್! ಅವರಲ್ಲಿ ಒಬ್ರಿಗಾದ್ರೂ ಸುದ್ದಿ, ಮಾಹಿತಿ ತಿಳಿಯೋ ಕುತೂಹಲವಿರ್ಲೀ ಸಾಸಿವೆ ಕಾಳಷ್ಟು ಇಂಟ್ರೆಸ್ಟೂ ಇಲ್ಲ ಅಂತ ತಿಳಿಯೋಕ್ಕೆ ಜಾಸ್ತಿ ಟೈಮ್ ಹಿಡೀಲಿಲ್ಲ. ಆಮೇಲೆ ಹೇಳ್ತಾರೆ ಲೇ ನೀನು ಬಂದ್ಮೇಲೇನೇ ನಾವು ನ್ಯೂಸ್ ನೋಡ್ತಿರೋದು ಅಂತ. ಧನ್ಯೋಸ್ಮಿ.

ಇವ್ರಿಗೆಲ್ಲಾ ಮೆಗಾ ಸೀರಿಯಲ್ ಗಳನ್ನ ನೋಡೋ ಭೂತ ಅದ್ಯಾವ ಪರಿ ಮೆಟ್ಟಿಕೊಂಡಿದೆ ಅಂದ್ರೆ ಆ ದೇವ್ರೇ ಬಂದ್ರೂ ಆ ದೆವ್ವ ಬಿಡಿಸೋದು ಕಷ್ಟಾ ರೀ ಕಷ್ಟ ಕಷ್ಟ. ಈ ಸೀರಿಯಲ್ ಗಳನ್ನು ನೋಡೋವಾಗ ಯಾರಾದ್ರೂ ನಮ್ ಪಿಜಿ ಅಕ್ಷತಾನ ಕೂಗಿ ನೋಡಿ. ಬಿಟ್ಟ ಬಾಯಿ ಮುಚ್ಚೋದೂ ಇಲ್ಲ, ತೆರೆದ ಕಿವಿ ಕೇಳೋದೂ ಇಲ್ಲ. ನಾಲ್ಕೈದು ಸಲ ಕೂಗಿ ಸಾಕಾಗಿ ಎದುರಲ್ಲಿ ಹೋಗಿ ನಿಂತ್ಮೇಲೇನೆ ಅವಳು ರೆಸ್ಪಾನ್ಸ್ ಮಾಡೋದು. ಎಷ್ಟೋ ಸಲ ನಾನು ಆಫೀಸ್ ಮುಗಿಸಿಕೊಂಡು ವಾಪಸ್ಸಾದಾಗ ಊಟ ಶುರು ಮಾಡಿ, ಊಟ ಮುಗಿಸೋ ಹೊತ್ತಾದ್ರೂ ಅವಳಿಗೆ ನಾನು ಬಂದದ್ದೇ ಗೊತ್ತಾಗಿರೋಲ್ಲ. ಧಾರಾವಾಹಿ ನಡುವೆ ಬ್ರೇಕ್ ಬಂದಾಗಲೇ ಅವಳು ಕಣ್ಣು ಮಿಟುಕಿಸೋದು!

ಇನ್ನು ಗಾನ. ಈ ಕೂರ್ಗಿ ಹುಡುಗಿ ನಾನ್ ಹೇಳಿದ್ ಫಸ್ಟ್ ಟೀಮಿನ ಅಧಿನಾಯಕಿ ಅಂತಾನೇ ತಿಳ್ಕೊಳ್ಳಿ. ಅಕಸ್ಮಾತ್ ಆಂಧ್ರ ಹುಡುಗೀರ ಟೈಮ್ ಅಪ್ ಆದ್ಮೇಲೂ ರಿಮೋಟ್ ಕೈಗೆ ಸಿಗ್ದಿದ್ರೆ ಇವಳ ವರಸೆ ನೋಡ್ಬೇಕು! ತನ್ನ ನೆಚ್ಚಿನ ಸೀರಿಯಲ್ ‘ಬಿದಾಯಿ’ ಟೈಮ್ ಗೆ ಸರ್ಯಾಗಿ ಕರೆಂಟ್ ಕೈಕೊಟ್ರೆ ನೋಡ್ಬೇಕು ಇವ್ಳ ಪೀಕಲಾಟಾನಾ. ಊಟ ತಿಂಡೀಲಿ ಏರುಪೇರಾದ್ರೆ ಅಡ್ಜೆಸ್ಟ್ ಮಾಡ್ಕೊಂಡಾರು, ಆದ್ರೆ ಸೀರೀಯಲ್ ಮಿಸ್ ಮಾಡ್ಕೊಳ್ಳೋರಲ್ಲಾ ಇವ್ರು.

ಮೊನ್ನೆ ಕರೆಂಟ್ ಹೋಗಿದ್ದು ಒಂದೂವರೆ ಗಂಟೆ ಕಳೆದ್ರೂ ಬರ್ಲೇ ಇಲ್ಲ. ‘ಬಿದಾಯಿ’ ಮುಗಿಯೋಕೆ 3 ನಿಮಿಷ ಬಾಕಿ ಇರೋವಾಗ ಬಂತು. ಈ ಹುಡುಗೀರ ಚಡಪಡಿಕೆ ಅದ್ಯಾವ ರೇಂಜಿಗಿತ್ತು ಅಂದ್ರೆ ಬೆಸ್ಕಾಂನವರು ಪಾಪ ಪ್ರಜ್ಞೆಯಿಂದ ನರಳದಿದ್ದದ್ದೇ ದೊಡ್ಡ ವಿಷಯ! ಹಿಂದಿನ ರಾತ್ರಿ ಆದ ‘ಭಾರೀ ನಷ್ಟ‘ವನ್ನು ಸರಿದೂಗಿಸಲು ಗಾನ ಬೆಳಗ್ಗೆ ಆಫೀಸಿಗೆ 5ರೂ. ಕೊಟ್ಟು ಬಸ್ಸಲ್ಲಿ ಹೋಗಬೇಕಿದ್ದವಳು ಸೀರಿಯಲ್ ನ ಮರುಪ್ರಸಾರ ನೋಡಿ 50ರೂ. ದಂಡ ಪಾವತಿಸಿ ಆಟೋದಲ್ಲಿ ಹೋದಳು. ಸೀರಿಯಲ್ ನೋಡಿದ್ಮೇಲೆ ಅವಳ ಮುಖದಲ್ಲಿ ಅದೆಂಥಾ ‘ಧನ್ಯತಾ ಭಾವ’?...!

ಸಂಜೆ ಟೀ ಕುಡಿಯೋಕಂತ ಬಂದ್ರೆ ಆಗ್ಲೇ ರಿಮೋಟ್ ಅಕ್ಷತಾ ಕೈಲಿ ವಿರಾಜಮಾನವಾಗಿತ್ತು. ಅರೇ ಇದೇನು ಇಷ್ಟು ಬೇಗ ಬಂದಿರೋದು ಇವತ್ತು? ಅಂತ ಕೇಳಿದ್ರೆ ತಲೆ ನೋವು ಅಂತ ಬೇಗ ಬಂದೆ ಅಂದ್ಲು. ಅದೂ ಸುಳ್ಳು ಅಂತ ನಂಗೊತ್ತಿಲ್ವಾ? ರಾತ್ರಿ ಮತ್ತು ಬೆಳಗ್ಗೆ ನೋಡಲಾಗದೆ, ಮರುದಿನ 3-30ಕ್ಕೆ ರಿಪೀಟ್ ಆಗಲಿದ್ದ ಅದೇ ಸೀರಿಯಲ್ ನೋಡೋಕೆ ಧಾವಂತದಿಂದ ಬಂದಿದ್ದಳು ಅಕ್ಷತಾ. ಕೇಳಿ ನಾನು ಸುಸ್ತು.

ನಿಜವಾಗ್ಲೂ ನಮ್ ಹುಡ್ಗೀರು ಈ ಧಾರಾವಾಹಿಗಳನ್ನು ಅದೆಷ್ಟು ಸೀರಿಯಸ್ಸಾಗಿ ನೋಡ್ತಾರೆ ಅಂದ್ರೆ ಅಲ್ಲಿನ ಒಂದೊಂದು ಪಾತ್ರಗಳನ್ನೂ ತಮ್ಮ ಜೊತೆಯವರಂತೆ ಟ್ರೀಟ್ ಮಾಡ್ತಾರೆ. ಸೀರಿಯಲ್ ನ ಮುಖ್ಯಪಾತ್ರಧಾರಿಗೆ ಪದೇ ಪದೇ ಕಷ್ಟ ಕೊಡ್ತಿದ್ರೆ ಇವ್ರೂ ಹಿಡಿಶಾಪ ಹಾಕ್ತಾ ಕೂತಿರ್ತಾರೆ. ಕಥಾನಾಯಕಿಗೆ ಖುಷಿ ಆದ್ರೆ ಇವರೂ ಹಿರಿಹಿರಿ ಹಿಗ್ಗಿದ ಹೀರೇಕಾಯಿಯಂತಾಗಿರ್ತಾರೆ. ಅದೇನ್ ಜಾದೂನಪ್ಪಾ ಈ ಮಾಯಾಪೆಟ್ಟಿಗೆಯಲ್ಲಿ. ರಬ್ಬರ್ ಬ್ಯಾಂಡ್ ಥರ ಎಳೆದು ಟಿ.ಆರ್.ಪಿ ರೇಸಲ್ಲಿ ಮುನ್ನುಗ್ಗೋ ಇಂಥ ಸೀರಿಯಲ್ ಗಳು ಸುಮ್ನೇ ವರ್ಷಾನುಗಟ್ಟಲೆ ಪ್ರಸಾರವಾಗ್ತವಾ ಹೇಳಿ? ಎಲ್ಲಾ ಇಂತಹ ವೀಕ್ಷಕ ಪ್ರಿಯರ ಕೃಪೆಯಿಂದಲೇ ತಾನೇ?

Monday, February 22, 2010

ತಾತ ಮಾಡಿದ ಅವಾಂತರ...!

ಬಹಳ ದಿನಗಳ ಬಳಿಕ ಬ್ಲಾಗ್ ಅಪ್ಡೇಟ್ ಮಾಡೋ ಮನಸ್ಸಾಗಿದೆ!

ಕಳೆದ ತಿಂಗಳು ಊರಿಗೆ ಹೋಗಿದ್ದೆ. ನಾನು ಬರ್ತಿದ್ದೇನೆ ಅಂತ ನನ್ನ ಆಂಟಿಯ ಮಗ ಕಾರ್ತಿಕ್ ಕೂಡ ಬಂದಿದ್ದ. ಇನ್ನು ನನ್ನ ತಂಗಿ. ನಾವೆಲ್ಲಾ ಸೇರಿಬಿಟ್ರೆ ಮುಗೀತು ಕಥೆ! ಸರಿ ೩ ದಿನ ರಜೆ ಇತ್ತು. ಎಲ್ಲಾದ್ರೂ ಸುತ್ತಕ್ ಹೋಗೋಣ. ಏನಾದ್ರು ಪ್ಲಾನ್ ಮಾಡು ಅಂತ ಮೊದ್ಲೇ ಹೇಳಿದ್ರು. ನಾನು ಕೂಡ ಧರ್ಮಸ್ಥಳಕ್ಕೆ ಹೋಗ್ಬೇಕು ಅಂತ ತುಂಬಾ ದಿನಗಳಿಂದ ಅನ್ಕೊಂಡಿದ್ದೆ. ಸರಿ ಮನೆಯವರೆಲ್ಲ ಹೊರಡೋದು ಅಂತ ಆಯ್ತು. ಸಂಜೆನೇ ಅಪ್ಪ ಗಾಡಿ ಬುಕ್ ಮಾಡ್ಸಿ, ಬರೋಕೆ ಹೇಳಿದ್ರು. ಆದ್ರೆ ನಾವು ಹೊರಡೋ ದಿನ ಮಾಮನ ಮಗ ಬಂದ ಅವನನ್ನು ಸಖತ್ ಫೋರ್ಸ್ ಮಾಡಿ ಹೊರ್ಡ್ಸಿದ್ ಆಯ್ತು. ಅವ್ನು ಮನೇಗ್ ಬಂದಾಗ ನಮ್ ತಾತ ಕೂಡ ಇದ್ರು. ನೀವೂ ಬನ್ನಿ ತಾತ ಅಂತ ಗಂಟು ಬಿದ್ವಿ. ನಮ್ ತಾತನ್ನ ಒಪ್ಪಿಸೋವಷ್ಟ್ರಲ್ಲಿ ಸಾಕು ಸಾಕಾಯ್ತು. ಅವ್ರು ಯಾರಿಗೋ ಏನೋ ಮಾಲು ಕೊಡ್ಬೇಕು ಅಂತ ಗೊಣಗುಡಲು ಶುರುಮಾಡಿದ್ರು. ನಾಳೆ ತಲುಪಿಸಿದರೆ ಆಯ್ತು ಬನ್ನಿ ಅಂತ ಸಮಾಧಾನ ಮಾಡಿದ್ವಿ. ಮನೆಗೆ ಹಿರಿಯರು. ಅವ್ರೆದುರೆ ನಾವು ನಾವೇ ಹೊರಟರೆ ಚೆನ್ನಾಗಿರಲ್ಲ. ಬೇಸರ ಮಾಡ್ಕೋಬಹುದು ಅನ್ನೋದು ನಮ್ ಉದ್ದೇಶ ಆಗಿತ್ತು ಅಷ್ಟೇ.


ಸರಿ ಸಂಜೆ ೭ರ ವೇಳೆಗೆ ಮನೆ ಮುಂದೆ ಗಾಡಿ ರೆಡಿ ಇತ್ತು. ದಾರಿ ಮಧ್ಯೆ ನಮ್ಮ ಬಾಲಿವುಡ್ ಹಾಡುಗಳ ಮಸ್ತಿ ಜೋರಾಗೆ ಇತ್ತು ಅನ್ನಿ. ಸಕಲೇಶಪುರದಲ್ಲಿ ತಾತನ ಮಾಮೂಲಿ ಅಡ್ಡ ಇದೆ. ಅಲ್ಲಿ ಬಿಸಿ ಬಿಸಿ ಅಕ್ಕಿ ರೊಟ್ಟಿ ಬೆಣ್ಣೆ ಚಪ್ಪರಿಸಿ ಬರೋದು ಅವ್ರಿಗೆ ಇಷ್ಟ. ಅವತ್ತು ರಾತ್ರಿ ನಮಗೆಲ್ಲ ಅಲ್ಲೇ ಊಟ. ಸರಿಯಾಗಿ ಬ್ಯಾಟಿಂಗ್ ಮಾಡಿದ್ವಿ. ರಾತ್ರಿ ಧರ್ಮಸ್ಥಳ ತಲುಪಿ ರೆಸ್ಟ್ ಮಾಡಿದ್ಮೆಲೇನೆ ಸ್ವಲ್ಪ ನೆಮ್ದಿ ಅನ್ಸಿದ್ದು. ಸರಿ ಬೆಳಗ್ಗೆ ೬-೪೫ಕ್ಕೆ ಸರಿಯಾಗಿ ದೇವಸ್ಥಾನದಲ್ಲಿ ದರ್ಶನ ಮಾಡೋದು ನಮ್ ಪ್ಲಾನ್ ಆಗಿತ್ತು. ಆದ್ರೆ ನಮ್ ತಾತ ಎದ್ದು ನಿಧಾನವಾಗಿ ರೆಡಿ ಆದ್ರು. ಟೈಮು ೭-೧೫! :( ದೇವರ ದಯೆ, ಬೇಗ ದರ್ಶನ ಆಯ್ತು. ಆದ್ರೆ ಆ ನೂಕು ನುಗ್ಗಲಲ್ಲಿ ನಮಗೆಲ್ಲ ನಮ್ ತಾತನ ಮೇಲೆ ನಿಗಾ ಇಡೋದೇ ದೊಡ್ಡ ಕೆಲಸ ಆಗ್ಬಿಟ್ಟಿತ್ತು.


ಅಷ್ಟೊತ್ತಿಗಾಗಲೇ ಬಿಸಿಲು ತನ್ನ ಕಾವು ಹೆಚ್ಚು ಮಾಡಿತ್ತು. ರಸ್ತೆಯಲ್ಲಿ ಕಾಲಿಟ್ರೆ ಸುಡು ಸುಡುವ ಅನುಭವ. ಮಧ್ಯಾಹ್ನ ಊಟಕ್ಕೆ ಹೋದಾಗಲೂ ನಮ್ ತಾತ ಆ ಗುಂಪಿನಲ್ಲಿ ನಮಗಿಂತ ೨-೩ ಸಾಲು ಹಿಂದೇನೆ ಸೇರಿ ಕುಳಿತಿದ್ರು. ಕೈ ತೊಳೆದು ಹೊರಡುವಾಗ ಅವ್ರು ನಮ್ ಜೊತೇನೆ ಇರ್ಬೇಕು ಕಣ್ರೋ. ಹುಷಾರು ಅಂತ ನಾವೆಲ್ಲ ಮೊದ್ಲೇ ತಾತನ ಮೇಲೊಂದು ಕಣ್ಣಿಟ್ಟೇ ಪ್ರಸಾದ ಸ್ವೀಕಾರ ಮುಗಿಸಿದ್ವಿ. ಆದ್ರೆ ನಮ್ ತಾತ ಇದ್ದಾರಲ್ಲ? ಅವ್ರು ಈ ಜಗತ್ತಿನ ಅತಿ ಕಿರಿಕ್ ವ್ಯಕ್ತಿಗಳಲ್ಲಿ ಟಾಪ್ ೧೦ ನಲ್ಲಿ ನಿಸ್ಸಂಶಯವಾಗಿ ಸ್ಥಾನ ಗಿಟ್ಟಿಸೋ ಅರ್ಹತೆ ಇರುವಂತಹವರು! ಅಲ್ಲೂ ಹೊರಗೆ ಹೋಗಲು ಎಲ್ಲರಿಗೂ ಇರುವ ಮಾರ್ಗ ಬಿಟ್ಟು ಕಾವಲಿನವರ ಹತ್ತಿರ ಹೋಗಿ short cut root ನಲ್ಲೆ ಹೊರ ನಡೆದರು. ನಾನು ಓಡಿ ಹೋಗಿ ಅವ್ರು ನಮ್ ತಾತ ಸ್ವಲ್ಪ ನಂಗು ಬಿಡಿ ಇಲ್ದಿದ್ರೆ ಮಿಸ್ ಆಗ್ತಾರೆ ಅಂದ್ರೆ, ಆತ ಇಲ್ರಿ ಆಗಲ್ಲ ಅಂತ ಖಡಕ್ ಆಗಿ ಹೇಳ್ಬಿಟ್ಟ . ಸರಿ ಬೇಗ ಹೊರ ನಡೆದು ತಾತನ್ನ ಕರ್ಕೊಂಡು ನಮ್ vehicle ಇದ್ದ ಕಡೆ ಹೊರಟ್ವಿ.


ಮೊದಲೇ ಚಪ್ಪಲಿ ಧರಿಸದೆ ಕಾಲು ಸುಡುತ್ತಿದ್ವು. ನೆರಳಿರೋ ಕಡೆ ಹಾಗೆ ಎಲ್ರು ಹೊರಟ್ವಿ. ಹಿಂದೇನೆ ಬರ್ತಿದ್ದ ತಾತ ನಾಪತ್ತೆ! ಇನ್ನೇನು ಇಲ್ಲೇ ಎಲ್ಲೋ ಇರ್ತಾರೆ ಅಂತ ಹುಡುಕೋಕೆ ನನ್ನ cousin ಹೋದ. ಎಲ್ಲೂ ಸಿಗ್ಲಿಲ್ಲ
ಅಂತ ಬರೋದಾ?...! ಇದೇನ್ ಹೀಗ್ ಹೇಳ್ತಿದಾನೆ ಅಂತ ನಮಪ್ಪ ಹೊರಟ್ರು ಹುಡ್ಕೋಕೆ. ಅವ್ರ ಕಣ್ಣಿಗೂ ನಮ್ ತಾತ ಕಾಣಲೊಲ್ಲರು!

ಹೇಳಿ ಕೇಳಿ ನಮ್ ತಾತ ಯಾವ್ದಾದ್ರು functions ಅಂತ ಒಟ್ಟಾಗಿ ಹೋದ್ರೆ ಊಟ ಮುಗ್ಸಿ ಕಾಲಿಗೆ ಬುದ್ಧಿ ಹೇಳೋ ಆಸಾಮಿ! ಆದ್ರೆ ತಮ್ಮ commitments ಅಂತ ಏನಾದ್ರು ಇದ್ರೆ ಮರೆಯೋ ಜಾಯಮಾನವೇ ಅಲ್ಲ ಅವ್ರದ್ದು. ಇದು ಕೆಲವೇ ವರ್ಷಗಳ ಹಿಂದಿನ ಮಾತು. ಪಟಪಟ ನಡೆಯುತ್ತಿದ್ರೆ ಬಿಸಿರಕ್ತದ ನಾವೂ ಅವ್ರನ್ನ ನಡಿಗೆಯಲ್ಲಿ ಸೋಲಿಸಲು ಉಸ್ಸಪ್ಪಾ ಅಂತಿದ್ವಿ. ಯಾಕೋ ಅವರನ್ನು ಹುಡುಕುತ್ತಾ ನಮ್ಗೆ ಇವೆಲ್ಲಾ ನೆನಪಾಯ್ತು. ನನ್ನ ಆಂಟಿ ಮಗ ಕಾರ್ತಿಕ್ ಅಂತೂ ಲೇ ಅವ್ರು ಬರೋದಿಲ್ಲಾ ಅಂತ ಎಷ್ಟು ಹೇಳಿದ್ರು ನಾವೇ ಬಲವಂತ ಮಾಡಿ ಕರ್ಕೊಂಡು ಬಂದ್ವಿ. ಈಗ ಹೀಗಾಯ್ತಲ್ಲೇ? ಥೂ ಅಂತ ತಲೆ ಚೆಚ್ಕೊಂಡ್ ಕೂತ! ಇದೆಲ್ಲಾ ಸಾಲ್ದು ಅಂತ ನನ್ನ ಸಹೋದ್ಯೋಗಿ ದಾಮು ತಮ್ಮ ಬೇರೆ ನಮ್ ಸ್ಥಿತಿ ಕೇಳಿ ಓಡೋಡಿ ಬಂದ್ರು ಸಹಾಯ ಮಾಡೋಕೆ. ಅವ್ರು ದೇವಸ್ಥಾನದ ಬಳಿ ಕಳೆದು ಹೋದವ್ರ ಪತ್ತೆಗೆ announce ಮಾಡೋವಲ್ಲಿಗೆ ಹೋಗಿ ಅದನ್ನೂ ಮಾಡ್ಸಿದ್ರು. ಆದ್ರೆ ನಮ್ ತಾತ ಕೇಳಿಸ್ಕೊಂಡ್ರೆ ತಾನೇ ಬರೋಕೆ?

ಸರಿ ನಾವು 3-30ರ ತನಕ ನೋಡಿದ್ವಿ. ನಮ್ ತಾತ ಬಿಲ್ ಕುಲ್ ಸಿಗೋ ಹಾಗೇ ಕಾಣ್ಲಿಲ್ಲ. ಏನೇ ಆಗ್ಲಿ ನಾವು ಅಂಥ ತಾತನ ಮೊಮ್ಮಕ್ಕಳು. ಹುಟ್ಟಿದಾಗಿಂದ ಇಲ್ಲಿವರ್ಗೂ ಅವರ ಇಂಥ ಅದೆಷ್ಟೋ ವರಸೆಗಳನ್ನು ನೋಡಿದ್ದೀವಿ! ಯಾಕೋ ಅವ್ರು ಈ ಧರ್ಮಸ್ಥಳದಲ್ಲಿ ಇರೋದೇ ಡೌಟು ಅನ್ಸೋಕ್ ಶುರುವಾಯ್ತು. ನನ್ cousins ಅಂತೂ ತಾತನ್ನ ನೆನಪು ಮಾಡ್ಕೊಂಡು ಬಿದ್ದು ಬಿದ್ದು ನಗ್ತಾರೆ ಬೇರೆ. ಇನ್ನು ಹುಡ್ಕಿ ಪ್ರಯೋಜನ ಇಲ್ಲಾ ಅನ್ಸಿ ನಾವು ವಾಪಸ್ ಹೊರಟೇ ಬಿಟ್ವಿ. ಅದೂ ಒಲ್ಲದ ಮನಸಲ್ಲಿ. ನಮ್ ಅಪ್ಪನಿಗೆ ಬಂದಿದ್ದ ಕೋಪ ಅಷ್ಟಿಷ್ಟಲ್ಲ. ನಿಮ್ ತಾತ ಕೈಗೆ ಸಿಕ್ರೆ.... ಅಂತ ಗೊಣಗುತ್ತಿದ್ದದ್ದು ಕೇಳಿಸಿದ್ರೂ ತೆಪ್ಪಗೆ ಕೂತಿದ್ವಿ. ಊರಿಗ್ ಹೋದ್ಮೇಲೆ ಅಲ್ಲೂ ನಮ್ ತಾತ ಬಂದಿಲ್ಲ ಅಂದ್ರೆ ಏನ್ ಉತ್ತರ ಕೊಡೋದು ಅಂತ ನಮ್ ಚಿಂತೆ. ಮಾರ್ಗ ಮಧ್ಯೆ ಸುರ್ಯ ದೇವಾಲಯಕ್ಕೊಂದು ವಿಸಿಟ್ ಕೊಟ್ವಿ. ಆದ್ರೆ ಯಾಕೋ ಮನಸ್ಸಿಗೆ ನೆಮ್ಮದಿ ಅನ್ನಿಸದು.

ಅಂತೂ ಸಂಜೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಂದು ದರ್ಶನ ಮುಗಿಸಿ ದೇವಾಲಯದ ಆವರಣದಲ್ಲಿ ಕುಳಿತ್ವಿ. ಯಾಕೋ ಬೇಜಾರು, ಹೀಗಾಯ್ತಲ್ಲಾ ಅಂತ. ಆದ್ರೆ ನನ್ ಕಸಿನ್ಸು ಲೇ ತಲೆ ಕೆಡಿಸ್ಕೋಬೇಡ ಕಣೇ. ನಮ್ ತಾತ ನಮ್ಗಿಂತಾ ಮುಂಚೇನೇ ಮನೆ ಸೇರೋ ಗಿರಾಕಿ. ಕೈಲಿ ದುಡ್ಡಿತ್ತು. ಯಾರಿಗೋ ಅದೇನೋ ತಲುಪಿಸ್ಬೇಕು ಅಂತ ಹಾರಾಡ್ತಿರ್ಲಿಲ್ವಾ? ಎಲ್ಲಿ ತನ್ ವ್ಯವಹಾರ ಕೈ ತಪ್ಪುತ್ತೋ ಅಂತ ಬೇಗ ಹೇಳ್ದೆ ಕೇಳ್ದೆ ಓಡೋಗಿದೆ ಅಷ್ಟೇ ಅಂತ ನಗೋಕೆ ಶುರು ಮಾಡಿ ರಿಲ್ಯಾಕ್ಸ್ ಮಾಡ್ತಿದ್ರು. ಸರಿ ಸಂಜೆ 5-30 ವೇಳೆಗೆ ಸುಮ್ನೆ ಮನೇಗೊಂದು ಕಾಲ್ ಮಾಡು ಅಂತ ಮಾಮನ ಮಗನಿಗೆ ಹೇಳ್ದೆ. ಅವ್ನು ಡೌಟಲ್ಲೇ ಫೋನ್ ಮಾಡಿ ಅವರಮ್ಮನ್ನ ವಿಚಾರಿಸಿದ್ರೆ ನಿಮ್ ತಾತ ಅರ್ಧ ಗಂಟೆ ಮೊದಲೇ ಬಂದು ಆರಾಮಾಗಿ ನಿದ್ರೆ ಮಾಡ್ತಿದ್ದಾರೆ ಅಂತ ಹೇಳಿದ್ರು ಅತ್ತೆ!

ಇದು ತಾನೇ ವರಸೆ? ನಮ್ ಸಂಕಟ ನಮ್ಗೆ, ನಮ್ ತಾತ ಕೊಟ್ಟ ತಾಪತ್ರಯಕ್ಕೆ ಬಂದಿದ್ದ ಕೋಪವೆಲ್ಲ ಮಂಗಮಾಯ! ಆದ್ರೂ ಊರಿಗ್ ಹೋದ್ಮೇಲೆ ನಮ್ದೇ ತಪ್ಪು ಅಂತ ವಾದಿಸೋ ನಮ್ ತಾತನ ಮತ್ತೊಂದು ಮುಖ ನೆನಪಿಸಿಕೊಂಡು ನಾವೆಲ್ಲಾ ಹೊಟ್ಟೆ ಹುಣ್ಣಾಗುವಷ್ಟು ನಕ್ಕುಬಿಟ್ವಿ. ಮತ್ತಿನ್ನೆಲ್ಲೂ ಅವ್ರನ್ನ ಕರ್ಕೊಂಡು ಹೋಗೋ ಉಸಾಬರಿಗೆ ಕೈ ಹಾಕೋದು ಬೇಡ ಅಂತ ಸುಬ್ರಹ್ಮಣ್ಯದಲ್ಲಿ ಆಣೆ ಮಾಡಿಬಿಟ್ವಿ.

Monday, November 9, 2009

ಜೆ.ಕೆ.ರೋಲಿಂಗ್ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ...

Sunday, October 18, 2009

ಹ್ಯಾರಿ ಪಾಟರ್ ಜಾದೂ ಜಗತ್ತಿಗೆ ಸ್ವಾಗತ...

ಮನುಷ್ಯ ಕಲ್ಪನಾಜೀವಿ. ಅವನ ಕಲ್ಪನೆಗಳಿಗೆ ಇತಿಮಿತಿಯೇ ಇಲ್ಲ. ಕಲ್ಪಿಸಿಕೊಂಡಷ್ಟೂ ಹೊಸತನ್ನು ಸೃಷ್ಟಿಸುತ್ತದೆ. ಯಾಕಂದ್ರೆ ಕಲ್ಪನೆ ಎಂಬುದೇ ಹಾಗೆ. ಇಲ್ಲಿ ಸುಂದರವಾದ ಕನಸಿನ ಲೋಕ, ಮಾಯಾ ಕಿನ್ನರಿ, ಊಹೆಗೂ ನಿಲುಕದಂತಹ ವಿಚಿತ್ರ ಮಾದರಿಯ ಜೀವಿಗಳು, ಹಾರುವ, ತೇಲುವ ಗಗನ ನೌಕೆಗಳು, ಮ್ಯಾಜಿಕ್ ಮಹಾಪೂರಗಳಿಂದ ಹಿಡಿದು ಭಯಾನಕ ಸನ್ನಿವೇಶಗಳು, ವಿಷಕಾರುವ ಹಾವುಗಳು, ಕಣ್ಣ ಮುಂದೆ ಕಾಡುವ ರಕ್ಕಸನ ಪ್ರಾಣವನ್ನು ಹಿಡಿದು ಮತ್ತೆಲ್ಲೋ ಅವಿತು ಕೂತ ಹಕ್ಕಿ ಹೀಗೆ ಹರಿಯುವ ಬಗೆಬಗೆಯ ಕಲ್ಪನಾ ಲಹರಿಗೆ ಕೊನೆಮೊದಲಿಲ್ಲ. ಇಂತಹ ಬಹಳಷ್ಟು ಕಥೆಗಳನ್ನು ಎಲ್ಲರೂ ಓದಿರ್ತೀವಿ, ಕೇಳಿರ್ತೀವಿ. ಇವುಗಳನ್ನು ಓದಿದಷ್ಟು ಸರಾಗವಾಗಿ ದೃಶ್ಯರೂಪದಲ್ಲಿ ನಿರೂಪಿಸಿ ಗೆಲ್ಲುವುದು ಸುಲಭವಲ್ಲ. ಆದ್ರೆ ಅದನ್ನು ಕಣ್ಣಿಗೆ ಕಟ್ಟುವಂತೆ ಅಕ್ಷರಗಳಲ್ಲಿ ಸೃಷ್ಟಿಸಿದ್ದನ್ನು ದೃಶ್ಯೀಕರಿಸಿ ಗೆದ್ದು ಮನೆಮಾತಾದ ಸಿನಿಮಾಗಳಲ್ಲಿ ಹ್ಯಾರಿ ಪಾಟರ್ ಗೆ ಅಗ್ರಸ್ಥಾನ. ಮೂಲತಃ ಪುಸ್ತಕ ರೂಪದಲ್ಲಿದ್ದ ಹ್ಯಾರಿ ಪಾಟರ್ ಕಾದಂಬರಿಯನ್ನು, ಅದು ಗಳಿಸಿದ ಜನಪ್ರಿಯತೆಯಿಂದ ದೃಶ್ಯರೂಪಕ್ಕೆ ತರಲಾಯಿತು. ನಿಜ ಹೇಳಬೇಕಂದ್ರೆ ಹ್ಯಾರಿ ಪಾಟರ್ ಮಕ್ಕಳಿಂದ ಹಿಡಿದು ಎಲ್ಲಾ ವಯೋಮಾನದವರಿಗೂ ಅಚ್ಚುಮೆಚ್ಚಿನ ಪಾತ್ರ.


ಹ್ಯಾರಿ ಪಾಟರ್ ಮೇಲೆ ಅಭಿಮಾನಿಗಳ ಪ್ರೀತಿಯನ್ನು ಅಕ್ಷರಗಳಲ್ಲಿ ವಿವರಿಸುವುದು ಕಷ್ಟವೇ. ನನಗೂ ಹ್ಯಾರಿ ಪಾಟರ್ ಬಗ್ಗೆ ತಿಳಿಯುವ ಕುತೂಹಲ ಉಂಟಾಗಿದ್ದು ತೀರಾ ಇತ್ತೀಚೆಗೆ. ಇದಕ್ಕೂ ಮುನ್ನ ಸುದ್ದಿಗಾಗಿ ಸ್ಕ್ರಿಪ್ಟ್ ಬರೆಯಬೇಕೆಂಬ ಕಾರಣಕ್ಕಾಗಿ ಅದೊಂದು ಹಾಲಿವುಡ್ ಮೂವಿ ಅಂತ ಅಲ್ಪಸ್ವಲ್ಪ ತಿಳಿದುಕೊಂಡಿದ್ದೆ. ಆದ್ರೆ ಹ್ಯಾರಿ ಪಾಟರ್ ಎಂಬ ಜಗದ್ವಿಖ್ಯಾತ ಮಾಯಾಲೋಕದ ಬಗ್ಗೆ ನನ್ನ ಜ್ಞಾನ ಅತ್ಯಲ್ಪ ಅಂತ ಗೊತ್ತಾದದ್ದೇ ಆ ಸಿನಿಮಾ ನೋಡಿದ ಮೇಲೆ, ಪ್ರತಿಯೊಂದು ಪಾತ್ರವನ್ನು ಅದರ ಹಿನ್ನೆಲೆಯನ್ನು ತಿಳಿದ ಮೇಲೆ. ಅರೇ ಎರಡೂವರೆ ಗಂಟೆಯ ಸಿನಿಮಾ ವಿಷಯ, ಜ್ಞಾನದವರೆಗೂ ಬಂತಲ್ಲ! ಅದೇನು ಅಷ್ಟೊಂದು ಪ್ರಾಮುಖ್ಯತೆ ಅದಕ್ಕೆ ಅಂತ ನೀವು ಹುಬ್ಬೇರಿಸಬಹುದು. ಆದ್ರೆ ಈ ಹ್ಯಾರಿ ಪಾಟರ್ ಅನ್ನೋ ಕಾದಂಬರಿ/ಸಿನಿಮಾವನ್ನು, ಓದಿದ/ನೋಡಿದ ಮೇಲೆ ನಿಮಗೇ ತಿಳಿಯುತ್ತೆ ಅದೆಂತಹ ಮಾಯಾಲೋಕ ಅಂತ. ಯಾಕಂದ್ರೆ ಇದು ಬರೀ ಎಂಡೂವರೆ ಗಂಟೆ ನೋಡಿ ಎದ್ದು ಹೋಗುವ ಸಿನಿಮಾ ರೀತಿ ಅಲ್ಲ. ನಿಮ್ಮನ್ನು ತನ್ನೊಂದಿಗೇ ಆ ಲೋಕದೊಳಕ್ಕೆ ವಿಹರಿಸುವಂತೆ ಮಾಡುವ ಯಕ್ಷಲೋಕ. ಅಲ್ಲೊಮ್ಮೆ ಹೊಕ್ಕರೆ ಆ ಮಜವೇ ಬೇರೆ ಬಿಡಿ!

ಹ್ಯಾರಿ ಪಾಟರ್ ಬಗ್ಗೆ ಅಂತರ್ಜಾಲದಲ್ಲಿ ಒಮ್ಮೆ ಜಾಲಾಡಿದರೆ ಸುಸ್ತಾಗುವಷ್ಟು ಮಾಹಿತಿ ಮಹಾಪೂರವೇ ನಿಮ್ಮ ಮುಂದೆ ತಡವಿ ಬೀಳುತ್ತವೆ. ಆದ್ರೆ ಎಲ್ಲಾ ಇಂಗ್ಲಿಷ್ ನಲ್ಲೇ ಇರೋದ್ರಿಂದ ಕನ್ನಡದಲ್ಲಿ ತಿಳಿಯಲಿಚ್ಛಿಸುವವರಿಗೆ ಸ್ವಲ್ಪ ನಿರಾಶೆ ಖಂಡಿತ, ಆ ನಿರಾಶೆ ನನಗೆ ಸಾಕಷ್ಟು ಸಲ ಆಗಿದ್ದಕ್ಕೇ ಹೀಗೆ ಬರೆಯಲು ಮನಸ್ಸಾಯಿತು. ನಿಜವಾಗಿ ಹ್ಯಾರಿ ಪಾಟರ್ ಬಗ್ಗೆ ಏನಾದರೂ ಬರೆಯಬೇಕೆಂದು ತುಂಬಾ ಅನ್ನಿಸಿದ್ದು ಇದುವರೆಗೂ ಕನ್ನಡದಲ್ಲಿ ಹೆಚ್ಚಿನವರ್ಯಾರು ಆ ಪ್ರಯತ್ನ ಮಾಡದಿದ್ದದ್ದು. ಬರೆಯೋಕೆ ಇನ್ನೂ ಅತಿಮುಖ್ಯ ಸಂಗತಿಗಳು ಜಗತ್ತಿನಲ್ಲಿ ಸಾಕಷ್ಟಿವೆಯಲ್ಲ ಅನ್ನಿಸಿದ್ರೂ, ಹ್ಯಾರಿ ಪಾಟರ್ ಬಗ್ಗೆಯೂ ತಿಳಿಸುವ ಹಂಬಲ ನನ್ನ ಬ್ಲಾಗ್ ನಲ್ಲಿ ಈಡೇರುತ್ತಿದೆ ಅನ್ನೋ ಖುಷಿ ನನಗುಂಟು. ಈ ಮೂಲಕ ಹ್ಯಾರಿ ಮತ್ತು ಗೆಳೆಯರ ಮಾಯಾಪ್ರಪಂಚವನ್ನು ನಾನು ಅಕ್ಷರ ರೂಪದಲ್ಲಿ ನಿಮ್ಮಲ್ಲಿ ಹಂಚಿಕೊಳ್ಳುತ್ತೇನೆ.

ಈ ಹ್ಯಾರಿ ಪಾಟರ್ ಹುಟ್ಟು ಒಂದು ಕುತೂಹಲಕಾರಿ ಕಥೆ. ನೇರವಾಗಿ ಹ್ಯಾರಿ ಬಗ್ಗೆ ಹೇಳುವ ಮುನ್ನ ಲೇಖಕಿಯ ಬಗ್ಗೆ ಮೊದಲು ತಿಳಿಸುತ್ತೇನೆ. ಬ್ರಿಟನ್ ಮೂಲದ ಜೆ.ಕೆ.ರೋಲಿಂಗ್ ಕನಸಿನ ಕೂಸು ಹ್ಯಾರಿ ಪಾಟರ್. ಜೋನ್ ಜೋ ಮುರ್ರೀ ಇವರ ಪೂರ್ಣ ಹೆಸರು. ಆದ್ರೆ ಎಲ್ರಿಗೂ ಜೆ.ಕೆ.ರೋಲಿಂಗ್ ಅಂತಲೇ ಪರಿಚಿತರು. ರೋಲಿಂಗ್ ಜನಿಸಿದ್ದು 1965ರ ಜುಲೈ 31ರಂದು ಇಂಗ್ಲೆಂಡ್ ನ ಗ್ಲೌಸ್ಟರ್ ಶೈರ್ ಬಳಿಯ ಯೇಟ್ ನಲ್ಲಿ. ಪೀಟರ್ ಜೇಮ್ಸ್ ರೋಲಿಂಗ್ ಮತ್ತು ಆನಿ ರೋಲಿಂಗ್ ಇವರ ತಂದೆ ತಾಯಿ. ಡ್ಯಾನಿ ಎಂಬ ಓರ್ವ ತಂಗಿಯಿದ್ದು ರೋಲಿಂಗ್ ಅವರ ಪ್ರೈಮರಿ ಶಿಕ್ಷಣ ಸೆಂಟ್ ಮೈಕೆಲ್ಸ್ ಪ್ರೈಮರಿ ಶಾಲೆಯಲ್ಲಾಯ್ತು. ಪ್ರೌಢಶಿಕ್ಷಣ ವೀಡೀನ್ ಸ್ಕೂಲ್ ಆಂಡ್ ಕಾಲೇಜ್ ನಲ್ಲಾಯಿತು. ಎಕ್ಸೆಟರ್ ಯೂನಿವರ್ಸಿಟಿಯಲ್ಲಿ ಫ್ರೆಂಚ್ ಮತ್ತು ಸಾಹಿತ್ಯದಲ್ಲಿ ಬಿ.ಎ ಮಾಡಿದರು.