Wednesday, February 16, 2011

'ನಮ್ಮೂರು' ಹುಸ್ಕೂರು....


ಬಹಳ ದಿನಗಳ ಬಳಿಕ ಬೆಂಗಳೂರಿನ ಜಂಜಾಟ-ಜಂಗುಳಿಯಿಂದ ತಪ್ಪಿಸಿಕೊಳ್ಳೋ ಸುವರ್ಣಾವಕಾಶ ಸಿಕ್ಕಿತಪ್ಪಾ...

ನಮ್ಮ ಚಿಕ್ಕಪ್ಪ ತನ್ನ 2ನೇ ಮಗಳಿಗೆ ಮದುವೆ ಮಾಡಿದ್ರು. ಆ ಮದುವೆಗೆ ನನಗೂ ಸಹಜವಾಗಿ ಕರೆಯೋಲೆ ಬಂದಿತ್ತು. ಅದ್ಯಾವ ಪುಣ್ಯವೋ ಆಫೀಸಿನಲ್ಲಿ ಈ ಬಾರಿ ತಕರಾರಿಲ್ಲದೆ 3 ದಿನ ರಜೆ ಸಿಕ್ಕೇಬಿಡ್ತು. ಸರಿ ಇತ್ತ ಉದ್ಯಾನನಗರಿಯಿಂದ ನಮ್ಮ ದಿಬ್ಬಣ ಹೊರಟಿತು ಅಂದ್ಮೇಲೆ ಅತ್ತ ಮೈಸೂರಿಂದ ನಮ್ಮ ಸೈನ್ಯ ಸವಾರಿ ಹೊರಡಲೇಬೇಕಲ್ಲ...?...!!! ಅರ್ಥಾತ್ ನನ್ನ ತಮ್ಮಂದಿರಾದ ಕಾರ್ತಿಕ್, ಪ್ರಭು, ದೀಪು ನನ್ನಾಗಮನಕ್ಕೆ, ಜೊತೆ ಸೇರಿ ಊರು ಅಲೆಯೋಕೆ, ಮಸ್ತ್ ಮಜಾ ಮಾಡೋಕೆ ತುದಿಗಾಲಲ್ಲಿ ನಿಂತಿದ್ರು. ಮದುವೆ ನೆಪದಲ್ಲಿ ಎಲ್ರೂ ನಮ್ಮೂರಿನ ಸೊಬಗು ಸವಿದು ಚಪ್ಪರಿಸಲು ಹೊರಟೆವು. ಊರಿಗೆ ಹೊರಟ ದಿನ ನನ್ನ ತಂದೆಯವರ ಹುಟ್ಟುಹಬ್ಬ ಬೇರೆ. ಎಲ್ರೂ ಗೊರೂರು ಹೇಮಾವತಿ ಹಿನ್ನೀರಿನಲ್ಲಿರೋ ರೆಸಾರ್ಟ್ ಗೆ ಲಗ್ಗೆಯಿಟ್ವಿ. ಅಲ್ಲಿ ಸ್ವಲ್ಪ ಹೊತ್ತು ಬೋಟಿಂಗ್, ಚಾಟಿಂಗ್ ಮುಗಿಸಿ ಅಪ್ಪಾಜಿಗಾಗಿ ಸರ್ಪ್ರೈಸ್ ಆಗಿ ತಂದಿದ್ದ ಕೇಕ್ ಕತ್ತರಿಸಿ ಚಪ್ಪರಿಸಿದೆವು. ಅಪ್ಪಾಜಿಗೆ ನನ್ನ ಗಿಫ್ಟ್ ಟೈಟಾನ್ ವಾಚ್. ಅವ್ರಂತೂ ದಿಲ್ ಖುಷ್. ಅಲ್ಲಿಂದ ನೇರ ಮದುವೆ ಮನೆಗೆ ಹೊರಟ್ವಿ.

ಇದು ಮಲೆನಾಡ ಕಡೆ ಮಾಡೋ ಮಧ್ಯಮ ಬಜೆಟ್ ನ ಮದುವೆ. ಇಲ್ಲಿ ಬ್ಯಾಂಡ್ ಬಾಜಾ ಬಾರಾತ್ ಒಂಥರಾ ಡಿಫ್ರೆಂಟ್. ವಿಶೇಷವಾಗಿ ಇಲ್ಲಿ ಮದುವೆ ಓಲಗದವರು. ಇವರು ಹಳೇ ರೀತಿಯ ಓಲಗ, ತಮಟೆ, ಡೋಲುಗಳನ್ನೇ ಈಗಲೂ ಬಾರಿಸ್ತಾರೆ. ಈ ಬೀಟ್ ಕೇಳ್ತಿದ್ರೆ ಹೋಗಿ ಎರಡು ಸ್ಟೆಪ್ ಹಾಕೋಣ ಅನ್ಸುತ್ತೆ, ಜೊತೆಗೆ ಬನ್ರೋ ಅಂದ್ರೆ ತುಂಬಾ ಸಭ್ಯ ಹುಡುಗರಂತೆ ಪೋಸು ಕೊಡ್ತಿದ್ರು ನನ್ನ ತಮ್ಮಂದ್ರು. ಬೆಂಗಲೂರಿನ ಗಣೇಶನ ಮೆರವಣಿಗೆ ನೋಡಿದ್ರೂ ನನಗೆ ಕುಣಿಯುವ ಆಸೆ. ಆದ್ರೆ ರಸ್ತೇಲಿ ಕುಣಿಯೋರನ್ನೇ ನೋಡಿ ಖುಷಿ ಪಡೋ ಅನಿವಾರ್ಯತೆ. :( ರಾತ್ರಿಯಿಡೀ ಹರಟೆ, ಕಾರ್ಡ್ಸು ಅಂತ ಎಲ್ರೂ ಟೈಮ್ ಪಾಸ್ ಮಾಡ್ತಿದ್ರೆ ನಂಗೆ ಕಣ್ಬಿಡಲಾಗದಷ್ಟು ನಿದ್ರೆ. ನನ್ನ ಅಮ್ಮನ ತಮ್ಮ ಯೋಗೀಶ್ ಮಾಮ ನಿದ್ರೆಗೆ ಜಾರಿ ಯಾವ್ದೋ ಕಾಲವಾಗಿತ್ತು. ಹಳ್ಳಿ ಮದುವೆಗಳಲ್ಲಿ ನಡುರಾತ್ರಿಯೂ ಕೆಲ ಶಾಸ್ತ್ರಗಳು ನಡೀತಲೇ ಇರ್ತವೆ. ಅದರ ಜೊತೆಗೆ ಓಲಗದವರು ಊದೋದು ಬಡಿಯೋದು ಮಾಡ್ತಿರ್ತಾರೆ. ನಮಗೂ ಅವತ್ತು ಇದ್ದಕ್ಕಿದ್ದಂತೆ ಅವರು ಬಾರಿಸಿದ್ದು ಕೇಳಿಸ್ತು. ಅದೇನಾಯ್ತೋ ಈ ಸದ್ದಿಗೆ ಎಚ್ಚರವಾದ ಯೋಗೀಶ್ ಮಾಮ ಧಡಕ್ ಎದ್ದು ಬನ್ರೋ ಒಂದೆರಡ್ ಸ್ಟೆಪ್ ಹಾಕೋಣ ಅಂತಂದು ಹೋರಟೇ ಬಿಟ್ರು. ಮಲಗಿದ್ದವಳನ್ನು ಬಲವಂತವಾಗಿ ಹೊಡೆದು ಎಬ್ಬಿಸಿ ನನ್ನನ್ನೂ ಕರ್ಕೊಂಡ್ ಬಂತು ನಮ್ಮ ಕೋತಿ ಸೈನ್ಯ. ಆಮೇಲೆ ಸರಿಸುಮಾರು ಒಂದು ಗಂಟೆ ಎಲ್ರೂ ತಮಟೆ ಸದ್ದಿಗೆ ಮನಬಂದಂತೆ ಕುಣಿದದ್ದಷ್ಟೇ ನೆನಪು.

ಈ ನಡುವೆ ಒಂದು ಅತಿಮುಖ್ಯ ವಿಷಯ ಹೇಳ್ಲೇಬೇಕು. ನಾವು ನಿಜಕ್ಕೂ ಮದುವೆಗೆ ಹಾಜರಿ ಹಾಕಲು ಬಂದಿರಲಿಲ್ಲ. ನಮ್ಮೂರಿನ ನಿರಾಳ ಹವೆ, ನಿಶ್ಯಬ್ಧ ವಾತಾವರಣದಲ್ಲಿ 3 ದಿನ ಕಳೆಯೋ ಪ್ಲಾನ್ ನಮ್ಮದಾಗಿತ್ತು. ಯಾಕಂದ್ರೆ ನಮ್ಮೂರೇ ಹಾಗೆ. ಈ 'ನಮ್ಮೂರು' ನಮ್ಮ ತಂದೆಯವರ ಹುಟ್ಟಬರು. ಹೆಸರು ಹುಸ್ಕೂರು. ಹಾನ ಜಿಲ್ಲೆ ಆಲೂರು ತಾಲೂಕಿನಲ್ಲಿದೆ. ಟಿವಿಯಲ್ಲಿ ಪೇಪರಲ್ಲಿ ಬರೋ ವಾರ್ತೆಯಲ್ಲಿ ಪದೇ ಪದೇ ನೋಡೋ ಆನೆ ದಾಳಿಗೆ ತುತ್ತಾಗುವ ಸುದ್ದಿಯಿದೆಯಲ್ಲಾ? ಅದಕ್ಕೀಡಾಗೋ ಪ್ರದೇಶಗಳಲ್ಲಿ ಇದೂ ಒಂದು...ಇಲ್ಲಿಗೊಮ್ಮೆ ಕಾಲಿಟ್ರೆ ಮೊಬೈಲ್ ನೆಟ್ವರ್ಕ್ ಕಣ್ಣಾಮುಚ್ಚಾಲೆ ಶುರು. ನಮಗೂ ಅದೇ ಬೇಕು ಬಿಡಿ!!! ಆದ್ರೆ ಮದುವೆ ಮನೆ ಸಂಭ್ರಮದಲ್ಲಿದ್ದ ನಮ್ಮ ಹಿರಿಯರ ಬಳಗವನ್ನು ಊರಿನತ್ತ ಮುಂಚಿತವಾಗಿ ಹೋಗಲು ಅನುಮತಿ ಕೇಳಿ ಅವರನ್ನದಕ್ಕೆ ಒಪ್ಪಿಸುವಲ್ಲಿ ಸಾಕುಬೇಕಾಯ್ತು. ಹಾಗೆ ಮಾಡಲು ನನ್ನನ್ನು ಮುಂದೆ ಬಿಟ್ಟಿದ್ದ ನಮ್ಮ ಕಪಿಸೇನೆ ಇಡೀದಿನ ಮದುವೆಮನೇಲಿ ನಿಷ್ಪ್ರಯೋಜಕವಾಗಿ ಕಳೆದೆವಲ್ಲ ಅಂತ ನನ್ನ ಮೇಲೆ ಹೇರುತ್ತಿದ್ದ ಒತ್ತಡ ಅಷ್ಟಿಷ್ಟಲ್ಲ. ಕಡೇಪಕ್ಷ ಚೆನ್ನಾಗಿ ರೆಡಿ ಆಗಲೂ ಬಿಡಲೊಲ್ಲರು. ನಾನು ಕನ್ನಡಿ ಮುಂದೆ ನಿಂತ್ರೆ ಕೆಂಗಣ್ಣು ಬೀರಿ ಬೇಗ ಮುಗ್ಸೇ. ಧಾರೆ ಮುಹೂರ್ತ ಆದ್ಮೇಲೆ ಊರ ಕಡೆ ಜೈ ಅನ್ನೋಣ ಅಂತ ಚಡಪಡಿಸ್ತಿದ್ರು. ಇಷ್ಟು ದೂರ ಕರೆತಂದು ನಮ್ಮ ಇಡೀ ದಿನ ಹಾಳು ಮಾಡಿದೆ ಅಂತ ಪದೇಪದೇ ಚುಚ್ಚಿ ಮಾತಾಡಿ, ನಾನು ಹಿರಿಯರ ಬಳಿ ಬೇಗ ಹುಸ್ಕೂರಿಗೆ ಕಳಿಸಲು ಮತ್ತಷ್ಟು ಒತ್ತಡ ಹೇರುವಂತೆ ಮಾಡುವಲ್ಲಿ ಯಶಸ್ಸಿಯಾದರು ಪಾಪಿಗಳು. :P ದಲೇ ಪ್ಲಾನ್ ಮಾಡಿ ಊರಿನ ಕೆರೆಯಲ್ಲಿ ತೆಪ್ಪ ತರಿಸಿಡಲು ಅಪ್ಪಾಜಿಯಲ್ಲಿ ವಿನಂತಿಸಿದ್ದರಿಂದ ಎಲ್ಲಾ ರೆಡಿಯಾಗಿತ್ತು. ಆದ್ರೆ ನಂಬಿದ್ರೆ ನಂಬಿ....ನಗು ಬಂದ್ರೆ ನಕ್ಕು ಬಿಡಿ. ನಾವೆಷ್ಟು ಆತುರ ಕಾತರರಾಗಿದ್ವಿ ಅಂದ್ರೆ ಎಷ್ಟು ಬೇಡವೆಂದರೂ ಮದುವೆ ಮನೆಯಿಂದ ಆ ವೇಳೆ ಹುಸ್ಕೂರಿನ ಕಡೆ ಹೊರಡಲಿದ್ದ ಗೂಡ್ಸ್ ಆಟೋವನ್ನೇ ಹತ್ತಿಬಿಟ್ಟೆವು.








ನಜ್ಜುಗುಜ್ಜಾದ ರಸ್ತೆಯಲ್ಲಿ ತಂಪು ಹವೆ ಸೇವಿಸುತ್ತಾ, ಅಕ್ಕಪಕ್ಕದಲ್ಲಿ ಕಾಣ್ತಿದ್ದ ಕಾಫಿ ತೋಟಗಳತ್ತ ಕಣ್ಣು ಹಾಯಿಸ್ತಲೇ ಊರೊಳಗೆ ಪ್ರವೇಶಿಸಿದೆವು. ನಮ್ಮನ್ನೆಲ್ಲಾ ತೆಪ್ಪದಲ್ಲಿ ಕೆರೆ ಸುತ್ತಿಸಬೇಕಿದ್ದ ವ್ಯಕ್ತಿಯನ್ನು ಅಪ್ಪಾಜಿ ಮೊದಲೇ ನಿಗದಿಪಡಿಸಿ ಜೊತೆಗೇ ಕಳಿಸಿದ್ದರು. ಎಷ್ಟು ಬೇಗ ನಮ್ಮನ್ನೆಲ್ಲಾ ಸುತ್ತಿಸಿ ಭೇಷ್ ಅನ್ನಿಸಿಕೊಳ್ತೇನೋ ಎಂಬ ತವಕ ಆ ವ್ಯಕ್ತಿಗೆ. ಅದೆಷ್ಟು ಮಿತಿಮೀರಿತ್ತಂದ್ರೆ ಮದುನೆಮನೆಯಿಂದ ನಮ್ಮ ಜೊತೆ ಕಳಿಸಿಕೊಟ್ಟಿದ್ದ ಲಗೇಜನ್ನು ಮನೆಯೊಳಗಿಡಲೂ ಪುರುಸೊತ್ತು ಕೊಡ್ಲಿಲ್ಲ. ಕಡೆಗೂ ಸ್ವಲ್ಪ ಫ್ರೆಷ್ ಆಗಿ ಬಳಿಕ ನಮ್ಮ ಸವಾರಿ ಹೊರಟಿತು. ಕೈಲಿ ಕೆಮೆರಾ. ನಮ್ಮೂರ ಚೆಂದವನ್ನು ಎಷ್ಟು ಸೆರೆಹಿಡಿದರೂ ಕಮ್ಮೀನೇ ಅನ್ನಿಸಿಬಿಡ್ತು. ಚಿಕ್ಕವರಿದ್ದಾಗ ಬಂದದ್ದು. ಆಮೇಲೆ ಇತ್ತ ತಲೇನೇ ಹಾಕಿರ್ಲಿಲ್ಲ. ಆದ್ರೀಗ ಆ ಪರಿಸರವನ್ನು ಎಷ್ಟು ಮಿಸ್ ಮಾಡ್ಕೊಂಡೆ ಅನ್ನಿಸೋಕೆ ಶುರುವಾಗಿತ್ತು. ತೆಪ್ಪದಲ್ಲಿ ಪಯಣ ನನಗೆ ಮೊದಲಾಸಲ :) ಹೇಗಂದ್ರೆ ಹಾಗೆ ಅದರಲ್ಲಿ ಕೂರೋ ಹಾಗೇ ಇಲ್ಲ. ಇಬ್ಬರೋ ಮೂವರೋ...ಎಷ್ಟು ಮಂದಿ ಕೂತ್ರೂ ಬ್ಯಾಲೆನ್ಸ್ ಮಾಡಿ ಒಂದೇ ಕಡೆ ವಾಲದಂತೆ ಕೂರಬೇಕು. ಬರುಬರುತ್ತಾ ತೆಪ್ಪ ಕೆರೆಯ ನಡುವಿಗೆ ಬಂತು.

ವಾವ್...!!! ಸುತ್ತ ಹಸಿರ ಸ್ವರ್ಗ ಎದ್ದು ನಿಂತು ನಮ್ಮನ್ನು ನೋಡುತ್ತಿದ್ದ ಹಾಗೇ ಭಾಸ. ಸಂಜೆ 5 ದಾಟಿದ್ರಿಂದ ನೆತ್ತಿ ಮೇಲಿನ ಸೂರ್ಯನೂ ಮನೆಗೆ ಹೊರಡೋ ಆತುರದಲ್ಲಿದ್ದ. ಹಾಗಾಗಿ ನೀರ ಮೇಲೆ ತನ್ನ ಹೊನ್ನ ರಶ್ಮಿಯನ್ನು ಪ್ರತಿಬಿಂಬಿಸಿ ಫಳಫಳಿಸುತ್ತಿದ್ದ. ಕಣ್ಣುಕೋರೈಸುವಂತಿತ್ತು. ಆಚೆ ದಡದಲ್ಲಿ ನನ್ನ ತಂಗಿ ಮತ್ತು ದೀಪು ನಮ್ಮತ್ತ ಕೈಬೀಸುತ್ತಾ ನಿಂತಿದ್ರು. ಆಚೆ ದಡಕ್ಕೆ ಬಿಟ್ಟು ಮತ್ತೊಂದು ದಡದಲ್ಲಿದ್ದ ದೀಪು ಮತ್ತು ಸಿಂಧುವನ್ನು ಕರೆತರಲು ತೆಪ್ಪದ ವ್ಯಕ್ತಿ ಹೊರಡಬೇಕಿತ್ತು. ಆದ್ರೆ ಆತ ಸುಲಭದಲ್ಲಿ ನಮ್ಮನ್ನು ಬಿಡೋ ಹಾಗೆ ಕಾಣ್ಲಿಲ್ಲ. ನನ್ನ ಕೈಲಿದ್ದ ಪುಟ್ಟ ಕೆಮೆರಾದಲ್ಲಿ ತಾನು ಮಾತಾಡಿದ್ರೆ ರೆಕಾರ್ಡ್ ಆಗುತ್ತಾ ಅಂದ. ಹೌದು ಅಂದಿದ್ದೇ ತಡ...ನಮ್ಮೂರ ಹಿನ್ನೆಲೆ, ಆನೆ ಕಾಟ, ಮುಳುಗಡೆ ಪ್ರದೇಶದ ಸಮಸ್ಯೆಗಳ ಬಗ್ಗೆ ಮಾತಾಡತೊಡಗಿದ. ನಾನು ಸುಮ್ಮನೆ ಹ್ಲಾಂ...ಹ್ಲೂ ಅಂತ ಕೇಳ್ತಿದ್ರೆ ಪಕ್ಕದಲ್ಲಿದ್ದ ನನ್ನ ಕಂತ್ರಿ ಬ್ರದರ್ಸ್ ನನಗೆ 'ಲೇ ರೆಕಾರ್ಡ್ ಅಲ್ದಿದ್ರೂ ಫೋಟೋನಾದ್ರೂ ತೆಗಿಯೇ' ಅಂತ ಕಿಚಾಯಿಸತೊಡಗಿದ್ರು. ಕಡೆಗೂ ತೆಪ್ಪದ ಮಾತು ಮುಗಿಸಿ ಆಚೆ ದಡದಲ್ಲಿ ಸರ್ಕಾರದ ಪರಿಹರಕ್ಕೆ ಕಾಯುವ ನಿರಾಶ್ರಿತರಂತೆ ನಿಂತಿದ್ದ ಸಿಂಧು ಮತ್ತು ದೀಪೂನ ಕರ್ಕೊಂಡು ಬರೋ ಮನಸ್ಸು ಮಾಡಿದ!!


ಬಹುಶಃ ದೀಪು ಮತ್ತು ಪ್ರಭು ತಮ್ಮ ಜೀವನದಲ್ಲಿ ಕಂಡ ಪ್ರಪ್ರಥಮ ಹಳ್ಳಿ, ಕಾಡುಪ್ರದೇಶ ಅದಾಗಿತ್ತು. ಅದಕ್ಕೆ ಕಂಡದ್ದನ್ನೆಲ್ಲಾ ಚೆನ್ನಾಗಿದೆ ಅಲ್ವಾ ಅಂತ ಅಚ್ಚರಿಪಡ್ತಿದ್ರು. ಮನದಣಿಯೆ ತೋಟವೆಲ್ಲಾ ಸುತ್ತಿ, ಹಕ್ಕಿಗಳ ಹಾಡು ಕಿಚಿಪಿಚಿ ಸದ್ದು ಕೇಳುತ್ತಾ ಸಮಯ ಸರಿದದ್ದೇ ಗೊತ್ತಾಗಲಿಲ್ಲ. ಕಡೆಗೆ ಆ ತೆಪ್ಪದಾತ ನಮ್ಮನ್ನು ಹುಡುಕುತ್ತಾ ಬಂದು ಅಷ್ಟು ದೊರದಿಂದ ಶಿಳ್ಳೆ ಹಾಕಿದಾಗ್ಲೇ ಗೊತ್ತಾದದ್ದು ಹೊತ್ತಾಯ್ತು ಅಂತ. ಸೂರ್ಯನ ಚೆಲ್ಲಾಟ ಮಿತಿಮೀರಿತ್ತು. ಕೆರೆಯ ತಿಳಿನೀರಿನ ಮೇಲೆ ಚಿನ್ನದ ಪುಡಿ ಸುರಿದಂತೆ ಕಾಣ್ತಿತ್ತು. ನಡು ನಡುವೆ ಬೆಳ್ಳಕ್ಕಿಗಳ ಟಾಟಾ ಬಾಯ್ ಬಾಯ್...ದೂರದ ಬೆಟ್ಟ ನಿಶ್ಚಲ ನೀರ ಮೇಲೆ ಪ್ರತಿರೂಪವಿಳಿಸಿ ಹೊಸ ಜಗತ್ತನ್ನು ಸೃಷ್ಟಿಸಿತ್ತು. ಅದನ್ನೆಲ್ಲಾ ನೋಡುತ್ತಾ ಖುಷಿಖುಶಿಯಾಗೇ ಮತ್ತೆ ಆಚೆ ದಡ ಸೇರಿದ್ವಿ. ಮತ್ತೆ ಶುರುವಾಯ್ತಪ್ಪ ನನ್ನ ತಮ್ಮಂದ್ರ ಕಾಟ. ಅವರಿಗೋ ಬಂದ 3 ದಿನವೂ ಒಂದ್ನಿಮಿಷವೂ ನಿಷ್ಪ್ರಯೋಜಕವಾಗದಂತೆ ಮಜಾ ಉಡಾಯಿಸಬೇಕು. ಆದ್ರೆ ಹೇಗೆ ಅನ್ನೋದನ್ನು ನಿರ್ಧರಿಸಬೇಕಿದ್ದು ಮಾತ್ರ ನಾನು. ಎಂಥಾ ಸಂಕಟದ ಕೆಲ್ಸಾವಪ್ಪಾ :(

ಈಗ ಅವರ ಬೇಡಿಕೆ ರಾತ್ರಿ ಆ ಕೊರೆಯೋ ಚಳಿಯಲ್ಲಿ ಕ್ಯಾಂಪ್ ಫೈರ್ ಮಾಡ್ಬೇಕು ಅಂತ. ಮೊದಲೇ ಹಠ ಮಾಡಿ ಕೇಳಿದ್ದಕ್ಕೆ ಓಕೆ ಅನ್ನಿಸಲು ಸಾಕುಬೇಕಾಗಿತ್ತು. ಯಾಕಂದ್ರೆ ಅಪರೂಪಕ್ಕೆ ಎಲ್ರೂ ಊರಿಗೆ ಬರೋದ್ರಿಂದ ದೊಡ್ಡವರಿಗೂ ನಮ್ಮೊಂದಿಗೆ ಸಮಯ ಕಳೆಯೋ ಮನಸ್ಸು. ಆದ್ರೆ ನಮಗೋ ಮತ್ತೆತ್ತಲೋ ಮನಸ್ಸು. ಹೇಗೋ ಒಪ್ಪಿಸಿ ಮನೆ ಪಕ್ಕದ ಪುಟ್ಟ ಅಂಗಳದಲ್ಲೇ ಫೈರ್ ಮಾಡೋದು ಅಂತ ನಿರ್ಧಾರವಾಯ್ತು. ಅದಕ್ಕೂ ಮುನ್ನ ನಮ್ಮ ಸೈನ್ಯದ ಮತ್ತೊಂದು ತಿಕ್ಕಲು ಬೇಡಿಕೆ! ಮದುವೆಮನೇಯಿಂದ ಬಂದ್ಮೇಲೆ ಸಹಜವಾಗಿ ರಾತ್ರಿಯೂಟವೂ ಮನೆಯಲ್ಲಿ ಸಿದ್ಧವಾಗಿರುತ್ತೆ ತಾನೇ. ಇವ್ರಿಗೆ ಒಲೆ ಹಚ್ಚಿ ಅಡುಗೆ ಮಾಡಿ ತಿನ್ನೋ ಆಸೆ. ದೇವರೇ...!! ಮನೇಲಿ ಬಿಟ್ರೂ ಬಿಡ್ತಾರ? ಅದಕ್ಕೂ ನಾನೇ ಬಲಿಪಶು. ಅದಕ್ಕೊಂದು ಬೇಡಿಕೆ ಅರ್ಜಿ ಕೊಟ್ಟು ಸಮ್ಮತಿ ಪಡೆದು ಒಲೆ ಹಚ್ಚಿದೆವು. ಪ್ಯಾಟೆ ಮಂದಿಯ ಅರ್ಜೆಂಟ್ ಅಡುಗೆ ಮ್ಯಾಗಿಯನ್ನು ಮೊದಲೇ ತಂದಿದ್ರು ಇವ್ರೆಲ್ಲಾ.

ಒಲೆ ಮುಂದೆ ನಾನು ದೊಡ್ಡದಾಗಿ ಮ್ಯಾಗಿ ಸಿದ್ಧಪಡಿಸ್ತಿದ್ರೆ ಮನೇಲಿದ್ದ ನೆಂಟರೆಲ್ಲಾ ಯಾವ್ದೋ ಮಹಾನ್ ಭೂರಿ ಭೋಜನ ಮಾಡ್ತಿದ್ದೀನಿ ಅನ್ನೋ ಥರ ಸುತ್ತ ನಿಂತುಬಿಟ್ರಪ್ಪಾ. ನಮಗೂ ಟೇಸ್ಟ್ ಮಾಡೋಕೆ ಕೊಡಿ ಅಂತ ಬೇರೆ ನಡುನಡುವೆ ರಾಗ. ಅಯ್ಯೋ ಪಾಪ ನನ್ನ ತಂಗಿ ತಮ್ಮಂದ್ರ ಪ್ರೈವೆಸಿ ಗತಿ ಏನಾಗ್ಬೇಡ!! pheeeee ;) ಅಂತೂ ಟೂ ಮಿನಟ್ಸ್ ಮ್ಯಾಗಿ ರೆಡಿಯಾಯ್ತು. ಎಲ್ಲರಿಗೂ ಹಂಚಿ ನಾವೂ ತಟ್ಟೆಗೆ ಸುರಿದು ಬಾಯಿಗಿಡ್ಬೇಕು ಅಷ್ಟರಲ್ಲಿ ಪ್ರಭು ನಖರಾ ಶುರು. ನನಗೆ ಸ್ಪೂನ್ ಬೇಕಂತ. ಅವರದ್ದೇ ರಗಳೆಗಳಲ್ಲಿ ಮುಳುಗಿದ್ದವರ ಹತ್ತ ಅಷ್ಟಬ ಜನಕ್ಕೆ ಸ್ಪೂನ್ ಕೇಳಿ ಯಾಕ್ ತೊಂದರೆ ಅಂತ ನಾವಿದ್ರೆ ಇವನದ್ದೊಂದೇ ವರಾತ. ಕಡೆಗೂ ಸ್ಪೂನಲ್ಲೇ ತಿಂದ.


ರಾತ್ರಿಯಿಡೀ ಬೆಂಕಿ ಕಾಯಿಸಿ ಮಜಾ ಮಾಡೋದು ಇವರ ಮುಂದಿನ ಪ್ಲಾನ್. ಊಟ ಮುಗಿಸಿ ಹೊರಬಂದ್ರೆ ಚಳಿಯ ತೀವ್ರತೆ ಮತ್ತೂ ಹೆಚ್ಚು. ಸುತ್ತಲೂ ಎತ್ತ ಕಣ್ಣು ಹಾಯಿಸಿದ್ರೂ ಕಾರ್ಗತ್ತಲು. ಏನೇನೂ ಕಾಣದು. ನಮ್ಮ ಮುಂದಿದ್ದ ಬೆಂಕಿಯ ಜ್ವಾಲೆ ಬಿಟ್ಟು. ಫೈರ್ ಮುಂದೆ ಕುಳಿತು ಏನಾದ್ರೂ ಆಟ ಆಡೋ ಹುಮ್ಮಸ್ಸು ಇವ್ರಿಗೆಲ್ಲಾ. ಸರಿ ಒಂದು ಸಿನಿಮಾ ಹೆಸ್ರು ಗುಟ್ಟಲ್ಲಿ ಹೇಳಿ ಎದುರಿನ ಪಾರ್ಟಿಯವ್ರು ಅದಕ್ಕೆ ಮೂಕಾಭಿನಯಿಸಿ ಕಂಡುಹಿಡಿಯೋ ಆಟ ಅದು. ಇವ್ರು ಹೇಳೋ ಸಿನಿಮಾ ಹೆಸ್ರುಗಳು ಹೇಗಿರ್ತಿದ್ವು ಅಂದ್ರೆ ಹೇಳಿದೋರ್ಗೆ ಬಿಟ್ಟು ಮತ್ಯಾರಿಗೂ ಅರ್ಥ ಆಗ್ತಿರ್ಲಿಲ್ಲ. ವೇಕ್ ಅಪ್ ಸಿದ್, ಬೀಯಿಂಗ್ ಸೈರಸ್, ರತ್ನಗಿರಿ ರಹಸ್ಯ....ಇತ್ಯಾದಿ. ಥೂ...ಕಡೆಗೆ ಅಂತಾಕ್ಷರಿಯೇ ಬೆಸ್ಟ್ ಅಂತ ನಿರ್ಧರಿಸಿಬಿಟ್ವಿ. ಇವ್ರೆಲ್ಲಾ ಎಂಥ ಸೋಮಾರಿಗಳು ಅಂದ್ರೆ ಎರಡೂ ಬದಿಯ ಆಟವನ್ನು ನಿದ್ದೆ ಬರೋ ತನಕ ನಾನೊಬ್ಬಳೇ ಆಡಬೇಕಾಯ್ತು!! :( ರಾತ್ರಿ ಎಷ್ಟೊತ್ತಾಗಿತ್ತೊ ಗೊತ್ತಿಲ್ಲ. ಮೊದಲೇ ಅಲ್ಲಿ ಆನೆಕಾಟ. ಬನ್ರೋ ಮಲಗೋಣ ಅಂದ್ರೆ ಏಳಲು ಮನಸಿಲ್ಲ ಅವ್ರಿಗೆ.

ಕಾಡಿನ ನಿಶ್ಯಬ್ಧ ಒಂಥರಾ ಅನುಭವ. ನಮ್ಮ ಗಲಾಟೆ ಹಾಡುಪಾಡುಗಳ ನಡುವೆ ಅಂಥ ಸದ್ದಿಲ್ಲದ ವಾತಾವರಣ ತೀರಾ ಹೊಸ ಮತ್ತು ವಿಚಿತ್ರ ಅನುಭವ ಕೊಡುತ್ತಿತ್ತು. ಅರೆಕ್ಷಣ ಮೌನವೂ ಅಲ್ಲಿ ಮನಸ್ಸು ಮತ್ತೆಲ್ಲೋ ಕದಲುವಂತೆ ಮಾಡುತ್ತಿತ್ತು. ಯಾವ ಮೂಲೆಯಿಂದಾದ್ರೂ ಆನೆ ಬಂದುಬಿಟ್ರೆ ಅನ್ನೋ ಹಾಗೆ!! ಮರವೊಂದ್ರಿಂದ ಎಲೆ ಉದುರಿಬಿದ್ರೆ ಆ ಸದ್ದು ಎಷ್ಟು ಜೋರಾಗಿ ಕೇಳ್ತಿತ್ತು ಅಂದ್ರೆ ಮನಸಲ್ಲಿ ಬರೋ ಪೆದ್ದು ಪೆದ್ದು ಸಂಶಯ ನಿಜವೇ ಅನ್ನಿಸಿಬಿಡೋದು. ಆದ್ರೆ ಗಡಗಡ ನಡುಗೋ ಚಳಿಗೆ ಎದುರಿಗಿದ್ದ ಬೆಂಕಿಯ ಕಾವು ಒಂಥರಾ ಮುದ ನೀಡ್ತಿತ್ತು. ನಿದ್ರೆ ಬರೋತನಕ ಕೂತೆ. ಕಡೆಗೆ ಕಾಡೊಳಗಿನ ಸದ್ದು ಕೇಳಿ 'ನೋಡ್ರೋ ಆನೆ ಬಂದ್ರೆ ನಾನಲ್ಲ ಹೊಣೆ' ಅಂತ್ಹೇಳಿ ಹೊರಟೆ. ಎಲ್ರೂ ರೂಮು ಸೇರಿ ಸ್ವಲ್ಪ ಹೊತ್ತು ಹರಟಿ ಹಾಗೇ ನಿದ್ರೆಗೆ ಜಾರಿದೆವು.

ಅಲ್ಲಿ ಬೆಳಗಿನ ಮುಂಜಾವು ಅತ್ಯದ್ಭುತ. ತೆಳುವಾಗಿ ಲೇಪಿಸಿದ ಮಂಜಿನ ಹನಿ ನಿಮಗೆ ಗುಡ್ ಮಾರ್ನಿಂಗ್ ಹೇಳುತ್ತೆ. ಬೆಂಗಳೂರಲ್ಲಿ ನೋಡಿರದ ಕೇಳಿರದ ಹಕ್ಕಿಗಳ ಚಿಲಿಪಿಲಿಯೇ ಸುಪ್ರಬಾತ. ಇದೆಲ್ಲವನ್ನೂ ಸೆರೆಹಿಡಿಯೋ ತವಕ ನನಗೆ. ಬೆಳಗ್ಗೆ ಯಾವಾಗಾಗುತ್ತೋ ಅಂತ ಕಾಯುತ್ತಲೇ ನಿದ್ರೆಗೆ ಜಾರಿದೆ. ನೆಂಟರ ಹಿಂಡು ಹೆಚ್ಚಿದ್ರಿಂದ ಜಾವದಲ್ಲೇ ಎದ್ದು ತಿಂಡಿಯ ಸಿದ್ಧತೆಯಲ್ಸಿದ್ದು ಹೆಂಗಳೆಯರು. ಪಕ್ಕದಲ್ಲೇ ಕೆಮೆರಾ ಇಟ್ಕೊಂಡು ಮಲಗಿದ್ದವಳು ಎಚ್ಚರವಾದೆ. ನನ್ನ ತಮ್ಮ ತಂಗನ ಕರೆದೆ ಬರ್ತೀರಾ ಅಂತ ಪಾಪಿಗಳು 'ಇಷ್ಟು ಬೇಗಾನಾ?' ಅಂತ ರಾಗ ಎಳೆದ್ರು. ಇವ್ರಿಗೆ ಕಾದ್ರೆ ನನ್ನ ಕೆಲ್ಸ ಹಾಳು ಅಂದವಳೇ ಸುಮ್ಮನೇ ಕೆಮೆರಾ ಜೇಬಿಗಿಳಿಸಿ ಹೊರಟೆ. ಸದ್ಯ ನಾನು ಎದ್ದದ್ದಕ್ಕೆ ನನ್ನದೊಂದು ಕಂಬಳಿ ಹೊದೆಯಲು ಎಕ್ಸ್ಟ್ರಾ ಸಿಕ್ತು ಅಂತ ಹೊದ್ದು ಮಲಗಿದ್ವು ಕಪಿಗಳು.

ಮುಂಜಾನೆ...! ಆಹಾ!!! ಆ ಚಳಿಚಳಿ ಹವೆಯಲ್ಲಿ ಮೆಲ್ಲಗೆ ಎಲ್ಲರ ಕಣ್ತಪ್ಪಿಸಿ ಹಿಂದಿನ ದಿನ ತೆಪ್ಪ ಸವಾರಿ ಮಾಡಿದ್ದ ಕಡೆ ಹೊರಟೆ. ಆಗ ತಾನೇ ಸೂರ್ಯನೂ ಮಂಜಿನ ತೆರೆ ಸರಿಸಿ ಹೊರಬರಲು ಸಜ್ಜಾಗುತ್ತಿದ್ದ. ಅಸಲಿಗೆ ಕಣ್ಣಿಗೆ ಅಲ್ಲೇನೂ ಕಾಣದಷ್ಟು ಮಂಜು. ಸಮಯ ಉರುಳಿದಂತೆ ಪ್ರತಿಕ್ಷಣವೂ ಅಲ್ಲಿ ಹೊಸ ಹೊಸ ದೃಶ್ಯಾವಳಿ ಕಟ್ಟಿಕೊಡ್ತಿತ್ತು. ಮನದಣಿಯೆ ಫೋಟೋ ಕ್ಲಿಕ್ಕಿಸಿದೆ. ನಿಜ ಹೇಳ್ಬೇಕಂದ್ರೆ ನನ್ನ ಜೀವನದಲ್ಲಿ ನಾನು ತೆಗೆದ ಮೊದಲ ಪರಿಸರ ಚಿತ್ರಗಳು ಅವು. ಹಾಗಾಗಿ ಅದನ್ನು ಫೋಟೋಗ್ರಫಿ ಅಂತ ಹೇಳಿಕೊಳ್ಲೋ ಯೋಗ್ಯತೆ ನಂಗಿನ್ನೂ ಖಂಡಿತ ಇಲ್ಲ. ಆದ್ರೆ ನನ್ನ ಊಹೆ, ತಿಳುವಳಿಕೆ, ಅಭಿರುಚಿಗೆ ನಿಲುಕಿದ ಹಾಗೆ ಒಂದಷ್ಟು ಸುಂದರ ಚಿತ್ರ ಸೆರೆಹಿಡಿಯೋ ಪ್ರಯತ್ನವನ್ನಂತೂ ಖಂಡಿತಾ ಮಾಡಿದೆ.

ಮನೆಯತ್ತ ಬರುವಂತೆ ನನ್ನಪ್ಪಾಜಿ ಫೋನ್ ಮಾಡಿದ್ರು. ನಾನಿದ್ದ ಜಾಗದಲ್ಲಿ ಫುಲ್ ನೆಟ್ವರ್ಕು. ಭಲೇ ತಂತ್ರಜ್ಞಾನವೇ ಅನ್ನಿಸಿದ್ರೂ ಥೂ ಇದ್ರಜ್ಜಿ...ಯಾಕಪ್ಪಾ ಜಗತ್ತು ಇಷ್ಟು ಮುಂದುವರಿದಿದೆ ಅಂತಲೂ ಅನ್ನಿಸ್ತು. ಮನೇಗೆ ಹೋದ್ರೆ ಹಸಿರು ಬಾಳೆ ಎಲೆ ಮೇಲೆ ಬಿಸಿ ಬಿಸಿ ಬಿಸಿಬಿಸಿ ಟೊಮಾಟೋ ಪುಲಾವ್ ಕಾದಿತ್ತು. ತಿಂದಷ್ಟೂ ಇನ್ನೂ ಬೇಕು ಅನ್ನಿಸ್ತಿತ್ತು. ಚಳಿ ಬೇರೆ ;) ಈಗ ವಾಪಾಸ್ ಹಾಸನಕ್ಕೆ ಹೊರಡೋ ಸಮಯ. ಮನಸ್ಸೇ ಬಾರದು. ಇನ್ನೂ ಈ ಹಸಿರ ಕಾನನದಲ್ಲೇ ಇರೋಣ ಅನ್ನೋ ಆಸೆ. ನನಗಷ್ಟೇ ಅಲ್ಲ. ಟ್ರಾಫಿಕ್, ಕಾಲೇಜ್, ಓದು, ಪರೀಕ್ಷೆ, ಮನೇವ್ರ ಬೈಗುಳ ಅಂತಲ್ಲಾ ಬೇಸತ್ತಿದ್ದ ಕಾರ್ತಿಕ್, ದೀಪು, ಪ್ರಭು, ಸಿಂಧೂ ಎಲ್ಲರದ್ದೂ ಇದೇ ಫೀಲಿಂಗು. ಆದ್ರೆ ನನ್ನ ರಜೆ ಅವತ್ತಿಗೆ ಕೊನೆ. ವಾಪಾಸ್ ಬೆಂಗಳೂರಿಗೆ ಬರೋದು ನೆನಸಿಕೊಂಡ್ರೆ ಹೊಟ್ಟೆಯೊಳಗೆ ಒಂಥರಾ ಸಂಕಟ. ಎಷ್ಟು ಸಾಧ್ಯವೋ ಅಷ್ಟು ತಡ ಮಾಡುತ್ತಲೇ ಎಲ್ರೂ ಹೊರಟ್ವಿ!! ಆದ್ರೆ ದೊಡ್ಡವರಿಗೆ ಬೇಗ ಊರು ಸೇರೋ ಆತುರ.

ಹಳ್ಳ ದಿಣ್ಣೆ, ಕಲ್ಲು ರಸ್ತೆಯ ಮೇಲೆ ಕಾರು ಎತ್ತಿನ ಗಾಡಿಗಿಂತಲೂ ಕಡೆಯಾಗಿ ಮುಂದುವರೀತಿದ್ರೆ ಮನಸ್ಸಿಲ್ಲದ ಮನಸ್ಸಲ್ಲಿ ನಾವೆಲ್ಲಾ ಬೆಟ್ಟ, ಸುತ್ತಲಿನ ತೋಟ ವೀಕ್ಷಿಸುತ್ತಾ ಕುಳಿತಿದ್ವಿ. ಡ್ರೈವರ್ ಅಂಕಲ್ ಆನೆಕಾಟ ಅಲ್ವಾ? ಅಕಸ್ಮಾತ್ ಈಗ ಎದುರು ಬಂದ್ರೆ ಏನ್ ಮಾಡೋದು ಅದು ಇದು ಅಂತ ತಲೆ ಕೊರೀತಿದ್ರು. ಟಾಪ್ ಮೇಲೆ ಕಟ್ಟಿರೋ ಲಗೇಜು ಬಿದ್ರೆ ಹೇಳ್ರೋ ಹುಡುಗ್ರಾ... ಅಯ್ಯಯ್ಯೋ ಆಗೇನಾದ್ರೂ ಆನೆ ಬಂದ್ರೆ? ಇಲ್ಲಪ್ಪಾ ನನ್ನ ಕಾರ್ ನಿಲ್ಸಲ್ಲಾ. ನಿಮ್ ಲಗೇಜು ನೀವೇ ಜವಾಬ್ದಾರಿ ಯಾಕ್ ಬೇಕು ಗ್ರಹಚಾರ ಅಂತ ಬಡಬಡಿಸ್ತಿದ್ರು. ನಾನು ಹಾಗೇ ನಿದ್ರೆಗೆ ಜಾರಿದವಳು ಎದ್ದಾಗ ಕಂಡದ್ದು ಹಾಸನದ ಧೂಳುಮಯ ಟ್ರಾಫಿಕ್ಕು :(

Tuesday, November 2, 2010

‘ಬೆಟ್ಟದ ಮೇಲೊಂದು ಟ್ರೆಕ್ಕಿಂಗ್ ಮಾಡಿ...’

ಆವತ್ತು ಹೀಗೇ ಇಮೇಲ್ ಚೆಕ್ ಮಾಡ್ತಿದ್ದೆ ಗೆಳತಿ ನೀತು ಯಾವ್ದೋ ಮೇಲ್ ಕಳಿಸಿದ್ಲು. ಫ್ರೆಂಡ್ಸ್ ಪ್ಲೀಸ್ ನನಗೆ ತುರ್ತಾಗಿ ಹಣದ ಅಗತ್ಯವಿದೆ. ಕಡೇ ಪಕ್ಷ 1 ಸಾವಿರ ರೂಪಾಯಿ. I want to go for this night trekking, ನೀವೂ ಇಂಟ್ರೆಸ್ಟ್ ಇದ್ರೆ ಬನ್ನಿಅಂತ ಆ ಟ್ರೆಕ್ಕಿಂಗ್ ಗೆ ಸಂಬಂಧಿಸಿದ ಲಿಂಕ್ ಕಳಿಸಿದ್ಲು. ಅಷ್ಟೇ... ಅವಳಿಗೆ ತಕ್ಷಣ ಫೋನಾಯಿಸಿದೆ. ಯಾವಾಗ? ಎಲ್ಲಿ? ರಿಜಿಸ್ಟ್ರೇಷನ್ ಗೆ ಲಾಸ್ಟ್ ಡೇಟ್ ಆಯ್ತಾ?’ ಅಂತೆಲ್ಲಾ ನನ್ನಿಂದ ಪ್ರಶ್ನೆಗಳ ಸುರಿಮಳೆ. ಆ ಕಡೆಯಿಂದ ನೀತು ನಿನ್ನೆ ಕಳಿಸಿದ ಮೇಲ್ ಅದು. ಇಷ್ಟ ಇದ್ರೆ ಬಾ ಅಂದದ್ದೇ ತಡ ನಾನು ಓಕೆ ಅಂದಾಗಿತ್ತು ಈ ಕಡೆಯಿಂದ. ಅಕ್ಟೋಬರ್ 31 ಯಾವಾಗ ಬರುತ್ತಪ್ಪಾ ಅಂತ ಕಾದಿದ್ದೇ ಕಾದಿದ್ದು. ಬಂದೇ ಬಿಡ್ತು ಆ ದಿನ. ಇನ್ನು ಮದ್ಯಾಹ್ನ 3 ಗಂಟೆ ಯಾವಾಗ ಆಗುತ್ತೆ ಅನ್ನೋದೇ ಧ್ಯಾನ! ಮದ್ಯಾಹ್ನ 3ರ ವೇಳೆಗೆ ಕೆಂಪು ಬಣ್ಣದ ಕಾರಲ್ಲಿ ನೀತು ಕೈ ಬೀಸುತ್ತಾ ಇದೇ ಕಾರು come on’ ಅಂತಿದ್ಲು. ಕಾರು ಹತ್ತಿ ಡ್ರೈವಿಂಗ್ ಸೀಟಿನಲ್ಲಿ ಕುಳಿತಿದ್ದ ಕವಿತಾ ರೆಡ್ಡಿ ಅವರಿಗೆ ಕೇಳಿದೆ, ನೀವೇನಾ ಕವಿತಾ?’ ಅಂತ. ಆಕೆ ‘yes’ ಅಂದಾಗ ಇಬ್ರಲ್ಲೂ ಮೊದಲ ಭೇಟಿಯ ನಗು ವಿನಿಮಯವಾಗಿತ್ತು.

Base camp adventures ವತಿಯಿಂದ ಪ್ರತಿ ತಿಂಗಳೂ ಆಯೋಜಿಸುವ ಟ್ರೆಕ್ಕಿಂಗ್ ನ ಮಜಾ ನಮಗೂ ಆವತ್ತು ಸಿಗಲಿತ್ತು. ಬೆಂಗಳೂರಿಂದ ಸುಮಾರು 50ಕಿ.ಮೀ ದೂರದಲ್ಲಿರೋ ಬಿಳಿಕಲ್ಲು ರಂಗಸ್ವಾಮಿ ಬೆಟ್ಟಕ್ಕೆ ನಮ್ಮ ಸವಾರಿ ಹೊರಡಲಿತ್ತು. ಕನಕಪುರ ಮಾರ್ಗವಾಗಿ ಹೊರಟು ಹಾರೋಹಳ್ಳಿ ಮೂಲಕ ಕೋಣ್ಯಾಳದೊಡ್ಡಿ ಹಳ್ಳಿ ತಲುಪಿದಾಗ ಸಮಯ ಸಂಜೆ 5.30. ನಮಗಿಂತ ಮುಂಚೆಯೇ ಅಲ್ಲಿಗೆ ಬಂದಿದ್ದ ಅನುಷಾ ಮತ್ತು ಸುಮಂತ್ ಇದ್ದ ತಂಡ ಮುಗುಳ್ನಗೆಯೊಂದಿಗೆ ನಮಗೆ ಹಾಯ್ ಮಾಡಿದ್ರು. ಸ್ವಲ್ಪ ಹೊತ್ತು ವಿರಮಿಸಿ, ಹೊಸದಾಗಿ ಬಂದಿದ್ದವರೊಂದಿಗೆ ಪರಿಚಯ ಮಾಡ್ಕೊಂಡ್ವಿ. ಕೆಲವೇ ಕ್ಷಣಗಳಲ್ಲಿ ಯುದ್ಧಕ್ಕೆ ಸನ್ನದ್ಧರಾದ ಯೋಧರಂತೆ ನಮ್ಮ ದಂಡು ದೂರದಲ್ಲಿ ಕಾಣ್ತಿದ್ದ ಬೆಟ್ಟದ ತಪ್ಪಲು ತಲುಪಿತ್ತು. ಮಾರ್ಗ ಮಧ್ಯೆ ಕೋಣ್ಯಾಳದೊಡ್ಡಿಯ ಹಿರಿಯಜ್ಜಿಯರು, ಯುವಕರು, ಅಯ್ಯೋ ಎತ್ ಕಡೆ? ಬೆಟ್ಟವಾ? ಅಲ್ ಆನೆ ಐತ್ರೋ? ಈಗ್ ತಾನೇ 10 ನಿಮ್ಷ ಮುಂಚೆ ಘೀಳಿಡ್ತಿದ್ವು. ಅಲ್ ಯಾಕ್ ಹೊಂಟೋವೋ ಬಡೆತ್ತೋವುಅಂತ ಬಡಬಡಿಸುತ್ತಿದ್ರು. ಅಷ್ಟರಲ್ಲಾಗ್ಲೇ ನಾವು ಬೆಟ್ಟದ ಪಾದ ಸೇರಿದ್ವಿ. ದೊಡ್ಡ ಟ್ರೆಕ್ಕಿಂಗ್ ಬ್ಯಾಗ್ ಹೊತ್ತು ಹಣೆಯ ಬಳಿ ಟಾರ್ಚ್ ಧರಿಸಿದ್ದ ಕವಿತ ಎಲ್ಲರಿಗೂ ಟ್ರೆಕ್ಕಿಂಗ್ ನಲ್ಲಿ ಅನುಸರಿಸಬೇಕಾದ ಮುನ್ನಚ್ಚರಿಕೆ ಕ್ರಮಗಳು, ಒಬ್ಬರಿಗೊಬ್ಬರು ಹೊಂದಿಕೊಳ್ಳಬೇಕಾದ ಬಗೆ ಮೊದಲಾದ ಮಾರ್ಗದರ್ಶನ, ಮುನ್ಸೂಚನೆಗಳನ್ನು ಕೊಟ್ಟು ಮುಂದಡಿಯಿಡಲು ಹಸಿರು ನಿಶಾನೆ ನೀಡಿದ್ರು. ಸೇನೆಯ ದಂಡನಾಯಕಿಯಂತೆ ಕವಿತಾ ಮುನ್ನುಗ್ಗುತ್ತಿದ್ರೆ ಹಿಂದೆ ನಾನು ನೀತು, ಅನುಷಾ, ಸುಮಂತ್ ನಮ್ಮ ಹಿಂದೆ ಬೇಸ್ ಕ್ಯಾಂಪ್ ನ ಕೃಷ್ಣ, ಅವರ ಹಿಂದೆ ಮತ್ತೆ ಮಿಕ್ಕವರಿದ್ರೆ ಕಡೆಯಲ್ಲಿ ಬೇಸ್ ಕ್ಯಾಂಪ್ ಅಡ್ವೆಂಚರ್ಸ್ ನ ಜಿಗ್ನಾ ಕೇರ್ ಟೇಕರ್ ರೀತಿ ಚಕಚಕ ಹೆಜ್ಜೆ ಹಾಕ್ತಿದ್ರು.
ಮೊದಲ 20 ನಿಮಿಷ ಉತ್ಸಾಹದಿಂದ ಬೆಟ್ಟವೇರಿದ್ವಿ. ಆದ್ರೆ ಆ ಪರ್ವತ ಏರುಮುಖವಾಗಿತ್ತು. ನಡುನಡುವೆ ಸಮತಟ್ಟು ಅನ್ನೋ ಪ್ರಶ್ನೆಯೇ ಇರ್ಲಿಲ್ಲ. ಸಹಜವಾಗಿ ಹಾರ್ಡ್ ಕೋರ್ ಟ್ರೆಕ್ಕರ್ಸ್ ಅಲ್ಲದವರಿಗೆ ಏದುಸಿರು ಬರುತ್ತೆ. ಅಲ್ಲಿ ನಮ್ಮ ಮೊದಲ ಪುಟ್ಟ ವಿರಾಮ. ನಿಜವಾಗ್ಲೂ ಹೇಳ್ತೀನಿ, ಬೆಟ್ಟದಲ್ಲಿ ಆನೆ, ಕರಡಿ ಮತ್ತು ಲೆಪರ್ಡ್ಸ್ ಇರುತ್ತವೆ ಅಂತ ಹೇಳಿದ್ರಿಂದ ನನ್ನ ಕಿವಿ ಆಗಾಗ ಅಂಥ ಜೀವಿಗಳ ಸದ್ದೇನಾದ್ರೂ ಕೇಳುತ್ತಾ ಅಂತ ಗಮನಿಸ್ತಾನೇ ಇದ್ವು. ಅದೃಷ್ಟವೇ...ನಾವು ವಿರಾಮಕ್ಕೆ ಕುಳಿತ ಜಾಗದಲ್ಲೇ ಯಾವುದೋ ಪ್ರಾಣಿ ಗುರ್ ರ್ ರ್ ರ್ ಅಂತಿದ್ದು ಕೇಳಿಸ್ತು. ಕ್ರಮೇಣ ಹಿಂದಿದ್ದವರೂ ಎಲ್ಲರೂ ಅಲ್ಲಿ ಸೇರಿದ್ರಿಂದ ಅದರ ಸದ್ದಡಗಿತು. ಮತ್ತೆ ಶುರುವಾಯ್ತು ನಮ್ಮ ನಡಿಗೆ. ಕಗ್ಗತ್ತಲಲ್ಲಿ ಟಾರ್ಚ್ ಬೆಳಕು ಹೊಮ್ಮಿಸ್ತಾ ಇದ್ರೆ ನಮ್ಮ ಹೆಜ್ಜೆ ಮುಂದಕ್ಕೆ ಸಾಗುತ್ತಿತ್ತು. ಸಣ್ಣ ದೊಡ್ಡ ಕಲ್ಲುಗಳು, ಮುಳ್ಳಿನ ಗಿಡಗಳು, ಹುಲ್ಲು ಎಲ್ಲವನ್ನೂ ಸವರುತ್ತಾ ಮುಂದಕ್ಕೆ ನಡೆದೆವು. ಮಾರ್ಗ ಮಧ್ಯೆ ಸುಮಂತ್ ಕೊಡ್ತಿದ್ದ ಕಾಮಿಡಿ ಡೋಸ್ ನಗುವಿನ ಬುಗ್ಗೆ ಚಿಮ್ಮಿಸ್ತಿತ್ತು. ಅದರಲ್ಲೂ ನೀತೂನಾ ಅವ್ನು ರೇಗಿಸ್ತಿದ್ದ ಪರಿಗೆ ಎಷ್ಟು ನಗು ಬರ್ತಿತ್ತಂದ್ರೆ ಕೆಲವೊಮ್ಮೆ ಹೆಜ್ಜೆ ತಪ್ಪುವಷ್ಟು ರೇಗಿಸಿಬಿಡ್ತಿದ್ದ. ನಡು ನಡುವೆ ಸುಸ್ತಾದಾಗೆಲ್ಲಾ ಕವಿತಾ ಬ್ರೇಕ್ಅಂತ ಕೂಗಿ ಏದುಸಿರು ಬಿಡ್ತಾ ದಣಿವಾರಿಸಿಕೊಳ್ತಿದ್ವಿ. ಎಲ್ಲರೂ ಬರೋವರ್ಗೂ ಕಾದು ತಂಪಾದ ನೀರು ಹೀರಿ ಮತ್ತೆ ‘let’s move’.

ಇನ್ನೂ ಎಷ್ಟ್ ದೂರ ಅಂತ ಕೇಳಿದ್ರೆ ಮುಂದಿದ್ದ ಕವಿತಾ, ಹಿಂದೆ ಬರ್ತಿದ್ದ ಕೃಷ್ಣ ಬಾಯಿಂದ ಬರ್ತಿದ್ದ ಒಂದೇ ಮಾತು. ಏನ್ ಒಂದ್ 15 ನಿಮಿಷ ಅಷ್ಟೇ !’ ಹದಿನೈದಲ್ಲ ಅರ್ಧ ಗಂಟೆಯಾದ್ರೂ ತಲುಪಬೇಕಾದ ಜಾಗ ಸಿಗ್ತಿರ್ಲಿಲ್ಲ. ನನ್ನಿಂದ ಮತ್ತದೇ ರಾಗ. ಇನ್ನೂ ಎಷ್ಟ್ ದೂರ?!’ ಇನ್ನು 10-15 ನಿಮಿಷ ಅಂತ ಹೇಳೋದು, ಸುಸ್ತಾಗದಂತೆ ನಮ್ಮನ್ನು ಉತ್ತೇಜಿಸಲು ಅವರು ಹೇಳ್ತಿದ್ದ ಸುಳ್ಳು ಅಂತ ಕಡೆಗೊಮ್ಮೆ ಕೃಷ್ಣ ಬಾಯ್ಬಿಟ್ಟಾಗ್ಲೇ ಸತ್ಯ ಗೊತ್ತಾದದ್ದು. ಆಮೇಲೆ ನಗು ಜೊತೆಗೆ ಹುಸಿಕೋಪ. ಮಾರ್ಗ ಮಧ್ಯೆ ಒಂದು ದೊಡ್ಡ ಹಾಸು ಬಂಡೆ ಸಿಗ್ತು. ಅದನ್ನು ನೋಡಿದ್ರೆ ಯಾರಿಗಾದ್ರೂ ಅಲ್ಲೊಮ್ಮೆ ವಿರಮಿಸೋಣ ಅನ್ನಿಸದಿರದು. ಎಲ್ಲರಿಗಿಂತ ಮೊದಲು ಬಂಡೆಯ ಮೇಲೆ ಸಾಕ್ಷಾತ್ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಸ್ಟೈಲಲ್ಲಿ ನಮ್ ನೀತೂ ಆಸೀನಳಾಗೇ ಬಿಟ್ಲು. ಸುತ್ತ ನೋಡಿದ್ರೆ ದೂರದ ಪಟ್ಟಣಗಳಲ್ಲಿ ಹೊತ್ತಿಸಿದ ದೀಪಗಳು ಮಿಣಮಿಣ ಅಂತ ಕಣ್ಣಿಗೆ ಹಬ್ಬ ತಂದಿದ್ದವು. ಅಲ್ಲಿಂದ ಹೊರಟು ಮತ್ತೆ ಬಿರಬಿರನೆ ಹೆಜ್ಜೆ ಹಾಕಿದ್ವಿ.


ಮಾರ್ಗ ಮಧ್ಯೆ ನನ್ನ ರಿಬಾಕ್ ಶೂಗಳು ಬಾಯಿ ತೆರೆದ ಮೊಸಳೆಯಂತಾದ್ವು. ಥೂ ಇದ್ರಜ್ಜಿ ಅಂತ ಶಪಿಸಿದೆ. ಅದ್ಯಾಕೋ ಏನೋ ಅದೊಂದು ದೊಡ್ಡ ಸಮಸ್ಯೆ ಅಂತ ಅನ್ನಿಸ್ಲಿಲ್ಲ. ಅರ್ಧ ಲೇಸ್ ಬಿಚ್ಚಿ ಅಡಿಯಿಂದ ಒಂದು ಸುತ್ತು ತಂದು ಟೈಟ್ ಆಗಿ ಅಲ್ಲಾಡದಂತೆ ಬಿಗಿದೆ. ಇನ್ನರ್ಧ ಗಂಟೆ ಬಿಟ್ಟು ಮತ್ತೊಂದು ಕಾಲಿನ ಶೂ ಕೂಡ ನಾನು ಮೊಸಳೆ ಥರ ಬಾಯಿ ಬಿಡ್ಬೇಕು ಅಂತಿದ್ದು ಗೊತ್ತಾಯ್ತು. ಮೊದಲ ಶೂಗೆ ಮಾಡಿದ್ದ ತಂತ್ರವನ್ನೇ ಇದಕ್ಕೂ ಮಾಡಿ ನಡೆದ್ದದ್ದಷ್ಟೇ ಗೊತ್ತು. ಅಲ್ಲಿಗೆ ಟ್ರೆಕ್ಕಿಂಗ್ ಶೂ ಧರಿಸಬೇಕಿತ್ತು ಅಂತ ಬುದ್ಧಿ ಕಲಿತ ಹಾಗಾಯ್ತು. ರಾತ್ರಿ ಸಮಯ ಸುಮಾರು 8-45. ಬೆಟ್ಟದ ತುತ್ತ ತುದಿಯಲ್ಲಿ ಪುಕಪುಕ ಅಂತಿದ್ದ ಟ್ಯೂಬ್ ಲೈಟೊಂದು ನೀವು ಪರ್ವತ ತುದಿಯಲ್ಲಿದ್ದೀರಿ ಅಂತ ಸಾರಿ ಹೇಳ್ತಿತ್ತು. ‘Yehhhhhhhhh ಏಏಏಏಏಏ ಹೂಊಊಊಊಊ ಅನ್ನೋ ಸಂಭ್ರಮೋದ್ಘಾರಗಳು ಎಲ್ಲರ ಬಾಯಿಂದ ಹೊರಟವು. ನಾವು ತಂಗಲಿದ್ದ ಜಗುಲಿಯ ಮೇಲೆ ಹೊತ್ತಿದ್ದ ಬ್ಯಾಗ್ ಪ್ಯಾಕ್ ಇಳಿಸಿದಾಗ ಉಸ್ಸಪ್ಪಾ...ಹೆಗಲೇರಿದ್ದ ಬೆಟ್ಟವೊಂದನ್ನು ಧರೆಗಿಟ್ಟಷ್ಟು ನಿರಾಳತೆ. ನಂತರ ಒಂದೆರಡು ಫೋಟೋ ಕ್ಲಿಕ್ಕಿಸಿದ್ವಿ. ಅತ್ತ ಕವಿತ ಮತ್ತು ಜಿಜ್ಞಾ ಬಿಸಿಬಿಸಿ ಕಾಫಿ ಟೀ ರೆಡಿ ಮಾಡಿದ್ರು. ಆ ದಣಿವು, ತಣ್ಣಗೆ ಬೀಸುತ್ತಿದ್ದ ಚಳಿಗಾಳಿಗೆ ಮಗ್ ತುಂಬಿದ್ದ ಕಾಫಿ ತುಂಬಾ ಹಿತವಾಗಿತ್ತು. ಕೊನೆಯ ಸಿಪ್ ಹೀರಿ, ನೋಡುವಷ್ಟರಲ್ಲಿ ಸುಡು ಸುಡುವ ಸೂಪ್ ರೆಡಿ. ಕವಿತಾ ಮತ್ತವರ ಟೀಂನ ಎನರ್ಜಿ ಲೆವೆಲ್ ಗೆ ಎಷ್ಟು ಹೊಗಳಿಕೆಯೂ ಕಮ್ಮಿ. ಸೂಪ್ ನಿಜಕ್ಕೂ ವೆರಿ ವೆರಿ ಟೇಸ್ಟಿಯಾಗಿತ್ತು. ಅದಕ್ಕೇ ಎರಡೆರಡು ಸಲ ಸೂಪ್ ಹೀರಿ ಖುಷಿ ಪಟ್ವಿ! ಹತ್ತಿರದಲ್ಲಿದ್ದ ಚಿಲುಮೆ ಬಳಿ ನೀರು ತರೋಕೆ ಕೃಷ್ಣ ಹೊರಟಾಗ ನಾವೂ ಟಾರ್ಚ್ ಹಿಡಿದು ಹಿಂಬಾಲಿಸಿದ್ವಿ. ಚಿಲುಮೆ ಸುತ್ತ ಕಟ್ಟಿದ್ದ ಕಾಂಪೌಂಡ್ ಏರಿ ಕುಳಿತ್ರೆ ಕಾಡಿನ ಆಚೆ ಈಚೆ ಇರುವ ಕನಕಪುರ, ಕಬ್ಬಾಳ ದುರ್ಗ, ಸಾವನ ದುರ್ಗ ಮೊದಲಾದ ಊರುಗಳೆಲ್ಲಾ ದೀಪಾವಳಿ ಮಾಡ್ತಿದ್ದ ಹಾಗೆ ಕಾಣ್ತಿದ್ವು. ವರ್ಣಿಸಲಸದಳ ಆ ದೃಶ್ಯ. ಆದ್ರೆ ಕಣ್ಣು ಮನಸ್ಸುಗಳಿಗೆ ಉಲ್ಲಾಸ ನೀಡುವ ದೃಶ್ಯ ಅಂತ ಮಾತ್ರ ಹೇಳಬಲ್ಲೆ. ಆದ್ರೆ ಅತ್ತ ಊಟಕ್ಕೆ ಕವಿತಾ ಅಂಡ್ ಟೀಂ ಕಾಯ್ತಿದ್ರು. ಊಟ ಮುಗಿಸಿ ಮತ್ತೆ ಬರುವಾ ಅಂತ ಎಲ್ಲರೂ ಹೊರಟ್ವಿ.

ಆಗಾಗ್ಲೇ ನಮ್ಮ ಬ್ಯಾಗ್ ಸೇರಿದ್ದ ಮೆತ್ತನೆಯ ಚಪಾತಿಗಳು ಹೊರಬಂದ್ವು. ಎಂಟಿಆರ್ ರೆಡಿ ಟೂ ಈಟ್ ದಾಲ್ ಕುದಿಯುವ ನೀರಲ್ಲಿ ಬಿಸಿಯಾಗ್ತಿತ್ತು. ಬಳಿಕ ಎಲ್ಲರೂ ಊಟ ಮುಗಿಸಿ, ಬೆಚ್ಚನೆ ಜಾಕೆಟ್ ಟೊಪ್ಪಿ ತೊಟ್ಟು ಮತ್ತೆ ಚಿಲುಮೆ ಕಡೆ ಹೆಜ್ಜೆ ಹಾಕಿದ್ವಿ. ಈಗ ದೃಶ್ಯ ಬದಲಾಗಿತ್ತು. ಬೆಟ್ಟದ ಕೆಳಗಿದ್ದ ಊರವರೆಲ್ಲಾ ಲೈಟ್ ಆಫ್ ಮಾಡಿ ಮಲಗಿದ್ದಂತಿತ್ತು! ಸಾಲದ್ದಕ್ಕೆ ರಾತ್ರಿಯ ಮುಖಕ್ಕೆ ಮಬ್ಬಾದ ಪರದೆಯನ್ನು ಮುಚ್ಚಿದ ಹಾಗೆ ಮಂಜು ಆವರಿಸಲು ಶುರುವಾಗಿತ್ತು. ಕಾಲೇಜು, ಆಫೀಸು, ಮನೆ, ಸ್ನೇಹಿತರು, ಹೀಗೆ ನಾವು ಮಾತಾಡಿದ ಟಾಪಿಕ್ ಗಳೆಲ್ಲಾ ಮುಗಿಯದಂಥವು. ಆದ್ರೆ ಎಂದಿನಂತೆ ತೂಕಡಿಕೆ, ನಿದ್ರೆಯ ಜೋಂಪು ನಮ್ಮ ನೀತೂಗೆ ಮೊದಲು ಹತ್ತಿದ್ದು. ಜಗತ್ತಿನ ಸಕಲ ಕಷ್ಟ ಕಾರ್ಪಣ್ಯಗಳನ್ನೂ ಸಾಧುವಾಗಿ ಸಹಿಸೋ ನೀತು ನಿದ್ರೆ ಜೊತೆ ಮಾತ್ರ ನೋ ಕಾಂಪ್ರಮೈಸ್!! ಅದು ಅವಳ ವೀಕ್ನೆಸ್ ಕೂಡ!. ನನ್ನ ವಾಚ್ ನಲ್ಲಿ ದೊಡ್ಡ ಮುಳ್ಳು ಮತ್ತು ಸಣ್ಣ ಮುಳ್ಳು 12ರ ಬಳಿ ಮಿಲನವಾಗಿದ್ವು. ಕ್ಯಾಂಪ್ ಫೈರ್ ಗೆ ಹಾಕಿದ್ದ ಬೆಂಕಿ ಕೆಂಡ ಇನ್ನೂ ಹಾಗೆ ಬಿದ್ದಿತ್ತು. ನಾವೆಲ್ಲಾ ನಮ್ ಟೆಂಟ್ ಒಳಹೊಕ್ಕೆವು. ನನ್ನ ಎಡ ಬಲಗಳಲ್ಲಿ ನೀತು ಅನುಷಾ ಮಲಗಿದ್ರು. ನಡುವೆ ನಾನು. ಅದು ಇದೂ ಅಂತ ಒಬ್ಬರಿಗೊಬ್ರು ಕಿಚಾಯ್ಸುತ್ತಾ ನಿದ್ದೆಗೆ ಜಾರಿದ್ರು ನೀತೂ ಅನುಷ. ಮಾರ್ನಿಂಗ್ ಶಿಫ್ಟ್ ಮುಗಿಸಿ ಟ್ರೆಕ್ಕಿಂಗ್ ಗೆ ಬಂದಿದ್ರೂ ನನಗೆ ನಿದ್ದೆಯ ಸುಳಿವೇ ಇಲ್ಲ. ನನ್ನ ಕಿವಿಗಳು ಟೆಂಟ್ ಬಳಿ ಯಾವ್ದಾದ್ರೂ ಪ್ರಾಣಿಯ ಸಪ್ಪಳ ಕೇಳುತ್ತಾ ಅಂತ ನಿರೀಕ್ಷಿಸುತ್ತಿದ್ವು. ಸಾಲದ್ದಕ್ಕೆ ಚಳಿ ಜೋರಾಗ್ತಿತ್ತು. ಅತ್ತ ಬೆಂಗಳೂರಿಂದ ಕರೆ ಮಾಡಿದ್ದ ನೀತು ಅಮ್ಮ ನನ್ನ ಜೊತೆ ಮಾತಾಡ್ತಾ ನೀತು ಹೊದಿಕೆ ತಂದಿಲ್ಲ ಅವಳಿಗೆ ನೀನೂ ಕೊಡ್ಬೇಡ, ಚಳಿ ಅಂದ್ರೇನು ಅಂತ ಗೊತ್ತಾಗ್ಲಿ ಅಂದಿದ್ರು. ನೆನಪಾಯ್ತು. ಈ ಕಡೆ ಅವ್ಳು ಗಡಗಡ ನಡುಗುತ್ತಾ ಮಲಗಿದ್ರೆ ನನಗೆ ತಡೆಯಲಾರದಷ್ಟು ನಗು. ಈ ಕಡೆ ಅನುಷಾ. ಅವಳಿಗೆ ಸ್ವಲ್ಪ ಚಳಿಯಿದ್ರೂ ಕೈಕಾಲು ತಣ್ಣಗಿರುತ್ತೆ. ಆಹಾ...ಏನ್ ಮಜಾನಪ್ಪಾ ಇವ್ರದ್ದು ಅನ್ನಿಸ್ತು. ಸರಿ ನನ್ ಹತ್ರಾ ಇದ್ದ ಒಂದೇ ಒಂದು ಸಿಂಗಲ್ ಬ್ಲಾಂಕೆಟ್ ನ ನೀತು ಕಾಲಿಗೆ, ಅನುಷ ಕೈಗೆ ಕವರ್ ಮಾಡಿ ಒಳಗೊಳಗೇ ನಗುತ್ತಾ ಟೆಂಟ್ ಮೇಲೆ ಕಣ್ಣಾಡಿಸ್ತಾ ಮಲಗಿದೆ. ಅಕ್ಕಪಕ್ಕದ ಎರಡೂ ಟೆಂಟುಗಳಿಂದ ಬರ್ತಿದ್ದ ಗೊರಕೆಯ ಹಿಮ್ಮೇಳ ನಮ್ಮಪ್ಪನನ್ನು ನೆನಪಿಸಿತ್ತು!

ಇದ್ದಕ್ಕಿದ್ದ ಹಾಗೇ ನೀತೂ ಎದ್ದು ಟೆಂಟ್ ಝಿಪ್ ತೆಗೇತಿದ್ರೆ ನಾನು ಅನುಷಾ ಬಾಯಿಗೆ ಕೈ ಅಡ್ಡ ಇಟ್ಟು ನಗು ತಡೀತಿದ್ವಿ. ಆ ಚಳಿಯಲ್ಲಿ ನಿದ್ದೆಗಣ್ಣಲ್ಲಿ ಇದೇನ್ ಮಾಡ್ತಿದ್ದಾಳೆ ಅಂತ. ಮತ್ತೆ ಇಬ್ರೂ ನಿದ್ದೆಗೆ ಶರಣು. ಬೆಳಗ್ಗೆ 6ಕ್ಕೆ alarm ಇಟ್ಟದ್ದು ನೆನಪಾಗಿ ಟೈಮ್ ಎಷ್ಟು ಅಂತ ನೋಡಿದ್ರೆ ಇನ್ನೂ 2-45. ದೇವರೇ ಇನ್ನೂ ಎಷ್ಟೊತ್ ಮಲಗ್ಬೇಕು ಅಂತ ನೆನಪಾಗಿ ಅಳು ಬಂತು. ಚಳಿಯ ತೀವ್ರತೆ ಅಷ್ಟಿತ್ತು. ಕಡೆಗೆ ನನ್ನ ದಪ್ಪನೇ ಜಾಕೆಟ್ ತೊಟ್ಟು ಮಲಗಿದಾಗ್ಲೇ ನೆಮ್ಮದಿ. ಮುಂಜಾನೆ 6ಕ್ಕೆ ಎದ್ದು ನೀತೂಗೆ ಎದ್ದೇಳೇ 6 ಗಂಟೆ ಅಂದ್ರೆ, ಆರೂಊಊಊಊವರೆ ಅಂತ ನಿದ್ದೆಗಣ್ಣಲ್ಲೇ ಹೇಳುತ್ತಾ ಮಗ್ಗಲು ಬದಲಿಸಿದ್ಲು. ನಾನು ಅನುಷಾ ಕೊಟ್ಟ ಟಾರ್ಚರ್ ಗೆ ಅವಳು ಏಳಲೇಬೇಕಾಯ್ತು. ಬಿಸಿಬಿಸಿ ಕಾಫಿ ಮತ್ತೆ ರೆಡಿಯಿತ್ತು. ಅಷ್ಟೊತ್ತಿಗಾಗ್ಲೇ ಸುಮಂತ್ ಕೃಷ್ಣ ಒಂದ್ ರೌಂಡ್ ಪೋಟೋ ಸೆಷನ್ ಮುಗಿಸಿ ಬಂದಿದ್ರು. ಮುಂಜಾವಿನ ಮಂಜಿನ ತೆರೆ ದಟ್ಟವಾಗಿತ್ತು. ನೋಡಿ ಕಣ್ತುಂಬಿಕೊಂಡಷ್ಟು ಅದರ ಚೆಲುವು ಹೇಗಿದೆ ಅಲ್ವಾ ಅಂತ ಖುಷಿಯಾಗ್ತಿತ್ತು. ಹುಲ್ಲು, ಗಿಡ, ಮರಗಳೆಲ್ಲಾ ಇಬ್ಬನಿಯ ಹನಿಯ ಆಭರಣ ತೊಟ್ಟಂತೆ ಕಾಣ್ತಿದ್ವು. ಚಿಲುಮೆ ಬಳಿ ಹಲ್ಲುಜ್ಜಿ, ಮುಖ ತೊಳೆದೆವು. ನೀರು ಖಾಲಿ ಅಂತ ಮತ್ತೆ ಚಿಲುಮೆ ಮೆಟ್ಟಿಲು ಇಳೀವಾಗ ಯಾವ್ದೋ ಪ್ರಾಣಿ ಉಸಿರಾಡೋ ಸದ್ದು! ಕರಡಿ ಇರಬಹುದಾ? ಗೊತ್ತಿಲ್ಲ. ನೀತೂ ಮಾತ್ರ ಕರಡಿ ಅಟ್ಯಾಕ್ ಮಾಡಿದ್ರೆ ಪಾರಾಗೋದು ಕಷ್ಟ ಬೇಗ ಬಾ ಅಂತ ಎಚ್ಚರಿಸಿದ್ಲು. ನಾನು ನಮ್ಮಜ್ಜಿ ಮೇಲೆ ಕರಡಿ ಮಾಡಿದ ದಾಳಿ ಕಥೆ ಹೇಳ್ತಾ ಕ್ಯಾಂಪ್ ಇದ್ದ ಕಡೆ ತಲುಪಿದ್ವಿ. ಬಿಸಿಬಿಸಿ ನೂಡಲ್ಸ್ ನಮಗಾಗಿ ಕಾದಿತ್ತು. ಚೆನ್ನಾಗಿ ಬ್ಯಾಟಿಂಗ್ ಮಾಡಿ ಮತ್ತೆ ಪ್ಯಾಕಪ್. ಒಂದೆರಡು ಗ್ರೂಪ್ ಫೋಟೋ ಕ್ಲಿಕ್ಕಿಸಿ ಬಿಳಿಕಲ್ಲು ರಂಗಸ್ವಾಮಿ ಬೆಟ್ಟದ ಸೊಬಗಿಗೆ ಮಾರು ಹೋಗಿದ್ದನ್ನು ಮನಸ್ಸಲ್ಲೇ ಅನುಭವಿಸುತ್ತಾ ವಾಪಾಸ್ಸಾಗಲು ಅಣಿಯಾದೆವು.


ಪರ್ವತಾವರೋಹಣ ಮಾಡುವಾಗ ಪಾದಗಳನ್ನು ಹುಷಾರಾಗಿ ಇಡಬೇಕು. ಆತುರಪಟ್ಟು ಹೆಜ್ಜೆ ಇಟ್ಟರೆ ಕಾಲು ಉಳುಕಬಹುದು ಅಥವಾ ನಾವೇ ಉರುಳಿ ಬೀಳಬಹುದು. ಮೊದಲೇ ನನ್ನ ಶೂ ಕೈ ಕೊಟ್ಟಿದ್ರಿಂದ 2-3 ಸಲ ನಾನು ಬಿದ್ದದ್ದೂ ಆಯ್ತು! ರಾತ್ರಿ ಕಾಣದ ಪರ್ವತದ ಸೊಬಗನ್ನು ಬೆಳಗಿನಲ್ಲಿ ಕಣ್ತುಂಬಾ ಸವಿಯುತ್ತಾ ಸಾಗಿದೆವು. ಕೆಲವೇ ನಿಮಿಷದಲ್ಲಿ ಬಿಳಿಕಲ್ಲು ರಂಗಸ್ವಾಮಿ ಬೆಟ್ಟದ ಕೆಳಗೆ ಬಂದಿಳಿದಿದ್ದೆವು. ಕೆಳಗಿಳಿದು ಒಮ್ಮೆ ಮೇಲೆ ಕಣ್ಣು ಹಾಯ್ಸಿದಾಗ್ಲೇ ಗೊತ್ತಾದದ್ದು ನಾವೆಷ್ಟು ಮೇಲೇರಿದ್ವಿ ಅಂತ. ಅಲ್ಲೇ ಇದ್ದ ಇಬ್ಬರು ಕೊಟ್ಟ ಆಗ ತಾನೇ ಕಿತ್ತಿದ್ದ ನೆಲಗಡಲೆ ರುಚಿ ಮಾತ್ರ ಮರೆಯಲಾಗದು. ...ದರ್ಶನ ಕ್ರಿಯೆ, ದಾಲ್ ಜೋಕುಗಳು ಮರೆಯಲಾಗವು. ಟ್ರೆಕ್ಕಿಂಗ್ ಶುರುವಾದಾಗಿಂದ ಕೊನೆತನಕವೂ ಕವಿತಾಗಿದ್ದ ಎನರ್ಜಿ, ನಮ್ಮ ಉತ್ಸಾಹ ಕುಗ್ಗದಂತೆ ನೋಡಿಕೊಂಡ ಕೃಷ್ಣ, ಜಿಜ್ಞಾ ನಿಮ್ಮ ಸಹಕಾರಕ್ಕೆ ಎಷ್ಟು ಥ್ಯಾಂಕ್ಸ್ ಹೇಳಿದ್ರೂ ಸಾಲದು. ನಿಗದಿಪಡಿಸಿದ ಹಣ ಕೊಟ್ರೆ ಯಾರು ಬೇಕಾದ್ರೂ ಇಂಥ ಸಾವಿರ ಟ್ರೆಕ್ಕಿಂಗ್ ಆಯೋಜಿಸಬಲ್ಲರೇನೋ. ಆದ್ರೆ ಆಯೋಜಕರು ಆ ಜವಾಬ್ದಾರಿ ಹೊರುವ ರೀತಿ, ಜೊತೆಗಾರರೊಂದಿಗೆ ಬೆರೆಯುವ ಬಗೆ, ಟ್ರೆಕ್ಕಿಂಗ್ ಮಾಡ್ತಿರೋ ಜಾಗದ ಬಗ್ಗೆ ಕೊಡೋ ಮಾಹಿತಿ, ತಮ್ಮ ಅನುಭವಗಳ ಬುತ್ತಿಯನ್ನು ರುಚಿಕಟ್ಟಾಗಿ ಜೊತೆಗಾರರಿಗೆ ಉಣಬಡಿಸುತ್ತಾ ದಾರಿಯುದ್ದಕ್ಕೂ ದಣಿವಾಗದಂತೆ ಮಾಡುವ ಕಲೆ ಬೇಸ್ ಕ್ಯಾಂಪ್ ಅಡ್ವೆಂಚರ್ಸ್ ನ ಕವಿತಾ ರೆಡ್ಡಿ ಮತ್ತವರ ತಂಡಕ್ಕೆ ಕರಗತ. ಇದೆಲ್ಲಾ ಅತಿಶಯದ ಮಾತಲ್ಲ. ಖುದ್ದು ಅನುಭವಿಸಿದ ಅನುಭವ.


ಬಹಳ ದಿನಗಳ ಮೇಲೆ ನನ್ನ ಬ್ಲಾಗ್ ಅಪ್ ಡೇಟ್ ಆಗೋಕೂ ಈ ಟ್ರೆಕ್ಕಿಂಗೇ ಕಾರಣ. ;) J ಬಿಡುವಿದ್ದಾಗ, ಈ ಜಾಗದ ಬಗ್ಗೆ ಯಾರಾದ್ರೂ ಅನುಭವಿಗಳ ಸಾಥ್ ಇದ್ರೆ , ಒಮ್ಮೆ ಭೇಟಿ ಕೊಟ್ರೆ ಒಳ್ಳೆ ಅನುಭವವಂತೂ ಗ್ಯಾರಂಟಿ. ಆದ್ರೆ ಊಟ ತಿಂಡಿ ಮತ್ತೆ ನಿಮ್ಮ ಸಂಪೂರ್ಣ ಜವಾಬ್ದಾರಿ ನಿಮ್ಮದೇ!!!







Thursday, September 9, 2010

ಮತ್ತೊಂದ್ ಆಕ್ಸಿಡೆಂಟು... :(

ಬೆಂಗಳೂರಲ್ಲಿ ಗಾಡಿ ಓಡಿಸೋದು ಒಂದು ಸವಾಲಿನ ಕೆಲ್ಸ ಬಿಡೀಪ್ಪಾ. ನಾವೆಷ್ಟೇ ಹುಷಾರಾಗಿ ರೈಡ್ ಮಾಡಿದ್ರೂ ಅಪಘಾತಗಳು ಬೆಂಬತ್ತಿ ಬರ್ತವೆ. ಕಳೆದ ಲೇಖನದಲ್ಲಿ ಯಾರೋ ಹುಚ್ಚು ಹುಚ್ಚಾಗಿ ಬೈಕ್ ಓಡಿಸಿ ಪಾಪದ ವ್ಯಕ್ತಿಗೆ ಪೆಟ್ಟು ಮಾಡಿ ಹಿಡಿ ಶಾಪ ಹಾಕಿಸಿಕೊಂಡಿದ್ದು, ನನಗೇ ಹಿಂದೊಮ್ಮೆ ಆದ ಅಪಘಾತದ ಬಗ್ಗೆ ಬರ್ದಿದ್ದೆ. ಆದ್ರೆ ಮತ್ತದೇ ಆಕ್ಸಿಡೆಂಟ್ ಬಗ್ಗೆ ಮುಂದಿನ ಲೇಖನ ಇರುತ್ತೆ ಅಂತ ನಾನ್ ಅಂದ್ಕೊಂಡೇ ಇರ್ಲಿಲ್ಲ!

ನೈಟ್ ಶಿಫ್ಟ್ ಗೆ ತಯಾರಾಗಿ ಮೊನ್ನೆ ಆಫೀಸಿಗೆ ಹೊರಟೆ. ಆದ್ರೆ ಸಿದ್ಧಳಾಗೋ ಹೊತ್ತಲ್ಲಿ ಅವತ್ಯಾಕೋ ಮನಸ್ಸು ಅಷ್ಟು ಖುಷಿಯಿಂದ ಇದ್ದ ಹಾಗೆ ಇರ್ಲಿಲ್ಲ. ಏನೋ ಒಂಥರಾ ಬೇಸರ ಅನ್ನಿಸ್ತಿತ್ತು. ಒಳಗೊಳಗೇ ಕಾರಣವಿಲ್ಲದೆ ದುಗುಡ. ಯಾಕೇ ಇವತ್ ಈ ಥರಾ ಅನ್ಕೊಂಡೆ. ಕೆಲವೊಮ್ಮೆ ಹೀಗಾಗುತ್ತೆ ಅಂತ ನನ್ನನ್ನ ನಾನೇ ಸಮಾಧಾನಿಸಿಕೊಂಡೇ ಹೊರಟಿದ್ದೆ. ಆಫೀಸಿಂದ ಅಬ್ಬಬ್ಬಾ ಅಂದ್ರೆ ಅರ್ಧ ಕಿ.ಮೀ ದೂರವಿದ್ದ ಸಿಗ್ನಲ್ ಬಳಿ ಕೆಂಪು ದೀಪ ನಿಲ್ಲು ಅಂತ ಆಜ್ಞಾಪಿಸಿತ್ತು. ಬ್ರೇಕ್ ಹಾಕಿ ಹಸಿರು ನಿಶಾನೆಗೆ ಕಾಯುತ್ತಾ ನಿಂತೆ. ಸಿಗ್ನಲ್ ಬೀಳಲು ಇನ್ನೂ ಹತ್ತಿಪ್ಪತ್ತು ಸೆಕಂಡ್ ಗಳು ಬಾಕಿಯಿದ್ದವು. ಕಬ್ಬನ್ ಪಾರ್ಕ್ ಬಳಿಯ ಮಂಜುಳ ಮಂಟಪದ ಪಕ್ಕದ ಸಿಗ್ನಲ್ ಬಳಿ ನಾನಿದ್ದೆ. ನಮಗೂ, ನಮ್ ಎದುರಿಗಿದ್ದ ಕಡೆಯ ಸಿಗ್ನಲ್ ಬೀಳೋದೂ ಏಕಕಾಲಕ್ಕೇ ಆದ್ರೂ ಹತ್ತೋ ಹದಿನೈದೋ ಸೆಕೆಂಡ್ ಅಂತರವಿರುತ್ತೆ. ಸುಂದರಂ ಮೋಟಾರ್ಸ್ ಕಡೆಯಿಂದ ಬಂದ ವಾಹನಗಳಲ್ಲಿ, ಕಬ್ಬನ್ ಪಾರ್ಕ್ ಕಡೆ ಬಲ ತಿರುವು ತೆಗೆದುಕೊಳ್ಳೋರಿಗೆ ಅವಕಾಶ ಸಿಗಲೆಂದೋ ಏನೋ ಈ ರೀತಿ ಮಾಡಿರಬಹುದು. ಹಾಗಾಗಿ ನಾನಿದ್ದ ಕಡೆ ಹಿಂದಿನವರು ಮುಂದೆ ನಿಂತಿರೋ ವಾಹನ ಚಾಲಕರಿಗೆ ಮುಂದೆ ಚಲಿಸುವಂತೆ ಜೋರಾಗಿ ಹಾರ್ನ್ ಬಜಾಯಿಸೋದು ಇದ್ದದ್ದೇ.

ಆವತ್ತೂ ಅದೇ ನಡೆದಿತ್ತು. ಟೈಮ್ ರಾತ್ರಿ 9-45 ಇರ್ಬಹುದು. ನನ್ ಹಿಂದಿನ ವೆಹಿಕಲ್ ಗಳವರು ಕೆಟ್ಟದಾಗಿ ಹಾರ್ನ್ ಹೊಡೀತಿದ್ರೂ ನಾನು ಗ್ರೀನ್ ಸಿಗ್ನಲ್ ಗಾಗಿ ಪ್ರಾಮಾಣಿಕಳಾಗಿ ಕಾಯ್ತಿದ್ದೆ. ಅಫ್ಕೋರ್ಸ್ ನಾನ್ಯಾವಾಗ್ಲೂ ಅದನ್ನೇ ಮಾಡೋದು. ಅಷ್ಟರಲ್ಲೇ ಕೆಂಡದ ಮೇಲೆ ನಿಂತವರಂತೆ ಎಷ್ಟೋ ಮಂದಿ ಸುಂಯ್ ಅಂತ ಸಿಗ್ನಲ್ ಜಂಪ್ ಮಾಡಿ ಮುಂದೆ ಹೋಗಿಯಾಗಿತ್ತು. ನಾನು ಹಸಿರು ನಿಶಾನೆ ಬಿದ್ದದ್ದು ಖಾತ್ರಿ ಮಾಡ್ಕೊಂಡೇ ಮುಂದಕ್ಕೆ ಹೊರಟೆ. ಅದೇನು ಗ್ರಹಚಾರವೋ ಯುಬಿ ಸಿಟಿ ಕಡೆಯಿಂದ ರೆಡ್ ಸಿಗ್ನಲ್ ಇದ್ರೂ ವಾಯುವೇಗದಲ್ಲಿ ಬಂದ ಬೈಕೊಂದು ಡಿಕ್ಕಿ ಕೊಟ್ಟೇ ಬಿಡ್ತು. ನಾನು ಬ್ರೇಕ್ ಹಿಡಿಯೋವಷ್ಟರಲ್ಲಿ ಅವರೇ ನನ್ನ ಗಾಡಿಗೊಂದು ಗತಿ ಕಾಣಿಸಿದ್ರು. ಅಷ್ಟು ವೇಗದಲ್ಲಿ ನುಗ್ಗಿದ್ರು. ಕ್ಷಣಮಾತ್ರದಲ್ಲಿ ನನ್ನ ವೆಹಿಕಲ್ ಒಂದ್ಕಡೆ ನಾನೊಂದ್ಕಡೆ. ಬಿದ್ದ ರಭಸಕ್ಕೆ ತಲೆ ನೆಲಕ್ಕೆ ಜೋರಾಗಿ ಬಡಿಯಿತು. ಸತ್ಯವಾಗಿಯೂ ನನ್ನ ಆವತ್ತು ಕಾಪಾಡಿದ್ದು ನಾನು ತೊಟಿದ್ದ ಒಳ್ಳೆ ಗುಣಮಟ್ಟದ ಹೆಲ್ಮೆಟ್. ತಕ್ಷಣ ಸಾವರಿಸಿಕೊಂಡು ಎದ್ದು ನಿಂತೆ. ಸುತ್ತಲೂ ಜನ ಜಮಾಯಿಸಿದ್ರು. ಢಿಕ್ಕಿ ಕೊಟ್ಟಿದ್ದ ಭೂಪರೂ sorry sorry ಅನ್ನುತ್ತಾ ಅಲ್ಲೇ ನಿಂತಿದ್ರು. ಒಂದಷ್ಟು ಹೊತ್ತು ವಾದ ನಡೀತು. ಇಷ್ಟೆಲ್ಲಾ ಆಗ್ತಿದ್ರೂ ಹುಡುಕಿದ್ರೂ ಒಬ್ಬೇ ಒಬ್ಬ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಇರ್ಲಿಲ್ಲ ಅನ್ನೋದು ಪಾಯಿಂಟ್ ಟು ಬಿ ನೋಟೆಡ್!

ಕೋಪದಿಂದ ಕೆಲವರು ಆ ಹುಡುಗರನ್ನು ಬೈಯ್ಯೋರು ಬೈದ್ರು. ನನಗೇನಾದ್ರೂ ಗಾಯ ಅಥವಾ ಫ್ರಾಕ್ಚರ್ ಆಗಿದ್ಯಾ ನೋಡ್ಕೊಳ್ಳಿ ಅಂತ ಇದ್ದವರೆಲ್ಲಾ ಹೇಳಿದ್ರು. ನನಗೆ ಸ್ವಲ್ಪ ತರಚು ಗಾಯವಾಗಿತ್ತಷ್ಟೇ. ಏನಿಲ್ಲ ಬಿಡಿ ಅಂದೆ. ಆದ್ರೆ ಒಳಗೊಳಗೇ ಸಖತ್ತಾಗೇ ಪೆಟ್ಟಾಗಿತ್ತು. ನನಗೆ ತಡ್ಕೊಳಕ್ ಆಗ್ಲೇ ಇಲ್ಲ, ಕಣ್ಣಲ್ಲಿ ನೀರು ಗಳಗಳ ಸುರಿಯಲಾರಂಭಿಸಿತು. ನಂಗೆ ನೋವಾಯ್ತಂತಲ್ಲ. ನಾನು ಅಷ್ಟು ಪ್ರೀತಿಯಿಂದ ಕಾಳಜಿ ಮಾಡೋ ನನ್ನ ಟೂ ವ್ಹೀಲರ್ ನ ಒಂದು ಬ್ರೇಕ್ ಮುರಿದು ನೇತಾಡ್ತಿತ್ತು. ವೆಹಿಕಲ್ ನ ಒಂದು ಬದಿ ಉಜ್ಜಿ ಹೋಗಿತ್ತು. Funny ಅನ್ನಿಸಿದ್ರೂ ನನಗೆ ನನ್ನ ವೆಹಿಕಲ್ ಮೇಲೆ ಅಷ್ಟು ಸೆಂಟಿಮೆಂಟ್. ನಾನಂತಲ್ಲ, ಬಹುತೇಕರಿಗೆ ಇಂತಹ ಭಾವವಿರುತ್ತೆ. ತಮ್ಮ ವಾಹನಗಳನ್ನು ಮಕ್ಕಳಂತೆ ನಾಜೂಕಾಗಿ ನೋಡಿಕೊಳ್ತಾರೆ. ಅದಕ್ಕೊಂದು ಸ್ಕ್ರ್ಯಾಚ್ ಆದ್ರೆ ನಮಗೇ ಯಾರೋ ಗೀರಿದಂತೆ ಫೀಲ್ ಆಗುತ್ತೆ. ನನಗೂ ಆವತ್ತು ಹಾಗೇ ಅನ್ನಿಸ್ತಿತ್ತು. ಎಷ್ಟು ನೋವಾಯ್ತೋ ಇದಕ್ಕೆ ಅಂತ. ಅಲ್ಲಿದ್ದವರು ನಿಮ್ಗೇನೂ ಆಗ್ಲಿಲ್ವಲ್ಲ ಬಿಡಿ ಮೇಡಂ, ಗಾಡಿ ಹೋದ್ರೆ ಹೋಗ್ಲಿ ಇಂಥ 10 ಗಾಡಿ ತಗೋಬಹುದು ಅಂತ ಬುದ್ಧಿ ಹೇಳೋಕ್ ಶುರುವಿಟ್ಕೊಂಡ್ರು. ಅವ್ರು ಹೇಳೋದೂ ಸರಿಯಾಗೇ ಇತ್ತು. ಆದ್ರೂ ಗಾಡಿ ಅವಸ್ಥೆ ನೋಡಿ ನಿಜವಾಗ್ಲೂ ಸಂಕಟ ಅನ್ನಿಸ್ತಿತ್ತು.

ಛೇ...ಎಂಥಾ ಜನ. ನಿಧಾನವಾಗಿ ವಾಹನ ಚಲಾಯಿಸಿದ್ರೆ ಅಥವಾ ಸಿಗ್ನಲ್ ಬೀಳೋ ತನಕ ಕಾಯೋ ಒಂದೆರಡು ನಿಮಿಷದಲ್ಲಿ ಕಳೆದುಕೊಳ್ಳೋದಾದ್ರೂ ಏನು? ಇಂಥ ಅನಾಹುತಗಳನ್ನು ತಡೆಗಟ್ಟಲು ನಮ್ಮ ಟ್ರಾಫಿಕ್ ಪೊಲೀಸ್ನೋರು ಏನೇನೋ ಸರ್ಕಸ್ ಮಾಡ್ತಾರೆ. ಆದ್ರೂ ತಲೆಕೆಟ್ಟವರಂತೆ ವಾಹನ ಚಲಾಯಿಸೋ ಇಂಥ ಜನಕ್ಕೆ ಅದೆಷ್ಟ್ ರೂಲ್ಸ್ ತಂದ್ರೂ ಬುದ್ಧಿ ಕಲಿಯೋಲ್ವೇನೋ ಅನ್ಸುತ್ತೆ.

Saturday, June 26, 2010

Speed....ಆಕ್ಸಿಡೆಂಟ್....ಅಬ್ಬಾ!




ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಚಾಲನೆ ಮಾಡೋದಂದ್ರೆ ಅದೊಂದು ಸವಾಲೇ ಸರಿ. ಸದಾ ಗಿಜಿಗುಡುವ ರಸ್ತೆಗಳಲ್ಲಿ ಹುಷಾರಾಗಿ ಚಲಿಸುವುದಂದ್ರೆ ಹರಸಾಹಸ ಮಾಡಿದ ಹಾಗೆ. ನಾನು ಬೆಂಗಳೂರಿಗೆ ಬಂದ ಕೆಲ ತಿಂಗಳುಗಳ ಬಳಿಕ ಊರಿನಲ್ಲಿದ್ದ ನನ್ನ ಟೂ ವ್ಹೀಲರ್ ನ ಬೆಂಗಳೂರಿಗೆರಿಸಿಕೊಂಡೆ. ಮೊದಮೊದಲು ನನ್ನ ಅಕ್ಕಪಕ್ಕದಲ್ಲಿ ಯಾರಾದ್ರೂ ಸರ್್್್ ಅಂತ ಹಾದುಹೋಗ್ತಿದ್ರೆ ಬೆಚ್ಚುವಂತಾಗ್ತಿತ್ತು. ನಾನೆಷ್ಟೇ ಸೇಫಾಗಿ ಕಡಿಮೆ ಸ್ಪೀಡಲ್ಲಿ ಡ್ರೈವ್ ಮಾಡಿದ್ರೂ ಯಾಕೇ ಹೀಗೆ? ಅಂತ ಅನ್ಕೊಳ್ತಿದ್ದೆ. ಕ್ರಮೇಣ ಈ ರೀತಿ ಅಡ್ಡಾದಿಡ್ಡಿ ಹೋಗೋ ಸವಾರರ ಮಧ್ಯೆ ಡ್ರೈವ್ ಮಾಡೋದು ಅಭ್ಯಾಸ ಆಯ್ತು. ಒಂದ್ಸಲ ಅಂತೂ ನನ್ನ ಸಹೋದ್ಯೋಗಿ ಸುಕನ್ಯಾಳನ್ನ ಹಿಂದೆ ಕೂರಿಸಿಕೊಂಡು ಡ್ರೈವ್ ಮಾಡ್ತಿದ್ದೆ. ಅವಳೋ ಗಾಡಿ ಹತ್ತಿ ನನ್ನ ಭುಜವನ್ನು ಗಟ್ಟಿಯಾಗಿ ಹಿಡಿದು ಕೂತ್ರೆ ಇಳೀವಾಗಲೇ ಕೈ ತೇಗೀತಿದ್ದು! ಅಷ್ಟು ಹೆದರಿಕೆ ಅವಳಿಗೆ. ಆ ದಿನ ಸಂಜೆ ಇಬ್ರೂ ಆಫೀಸಿಂದ ವಾಪಸ್ಸಾಗ್ತಿದ್ವಿ. ಓಕಳಿಪುರಂ ಬ್ರಿಡ್ಜ್ ಕೆಳಗೆ ಹಾದುಹೋಗುವಾಗ ನನ್ನ ಪಕ್ಕ ಒಂದು ಅಂಬಾಸಿಡರ್ ಕಾರು, ಈ ಪಕ್ಕದಲ್ಲಿ ಒಬ್ಬ ಬುಲೆಟ್ ಸವಾರ. ಆ ಬುಲೆಟ್ ಸವಾರನಿಗೆ ಅದೆಂಥಾ ಆತುರವಿತ್ತೋ ದೇವರೇ ಬಲ್ಲ.



ನನ್ನ ಲೋ ಸ್ಪೀಡಿಗೆ ಅವನಿಗೆ ಅದೆಷ್ಟು ಕೋಪ ಬಂದಿತ್ತೋ, ನನ್ನನ್ನೇ ಗುರಾಯಿಸಿಕೊಂಡು ಹೋದ. ಇವ್ನಿಗೇನಾಯ್ತು ಹೀಗೆ ನೋಡೋಕೆ? ಅಂತ ಈ ಕಡೆ ತಿರುಗುವಷ್ಟರಲ್ಲಿ, ನಂಬಿದ್ರೆ ನಂಬಿ ನಮ್ಮ ಗಾಡಿಗೆ ಪಕ್ಕದ ಕಾರು ತಗುಲಿ ನಾವಿಬ್ರೂ ಬಿಎಂಟಿಸಿ ಬಸ್ಸೊಂದರ ಅಡಿಯಲ್ಲಿದ್ದೆವು. ನಾನು ಸತ್ತೆ ಅನ್ಕೊಂಡೇ ಬಿದ್ದೆ. ಅದೃಷ್ಟವಶಾತ್ ಹೆಲ್ಮೆಟ್ ಹಾಕಿದ್ರಿಂದ ತಲೆಗೆ ಪೆಟ್ಟಾಗಲಿಲ್ಲ. ಸುಕನ್ಯಳ ಕಾಲಿಗೆ ಸಣ್ಣ ಪೆಟ್ಟಾಯ್ತು. ಅವಳು ಬಂದು ನನ್ನ ಎತ್ತುತ್ತಿದ್ರೆ, ಆಗ ಉಸಿರು ಬಿಟ್ಟೆ, ಬ್ಬಾ! ಬದುಕಿದ್ದೀನಾ ಅಂತ. ಕೈ-ಕಾಲಿಗೆ ಸಣ್ಣದಾಗಿ ತರಚಿದ ಗಾಯವಾಗಿತ್ತು. ಮರುದಿನ ಇಬ್ರೂ ಆಫೀಸಿಗೆ ಚಕ್ಕರ್ ಹೊಡೆದು, ನಿಂಗೆಷ್ಟ್ ನೋವಾಗಿದೆ? ಗಾಯ ದೊಡ್ಡದಾಗಿದ್ಯಾ? ಅಂತೆಲ್ಲಾ ಫೋನಲ್ಲಿ ಉಭಯಕುಶಲೋಪರಿ ವಿಚಾರಿಸಿದ್ದೆವು! ಅದು ಸ್ವಂತ ವೆಹಿಕಲ್ ಕೊಂಡ 4 ವರ್ಷಗಳಲ್ಲಿ ನಾನು ಮಾಡಿದ್ದ ಮೊಟ್ಟ ಮೊದಲ ಅಪಘಾತವಾಗಿತ್ತು. ಸುಕನ್ಯ ನರಳಾಟಕ್ಕೆ ನನಗಂತೂ ಯಾಕಾದ್ರೂ ಇವ್ಳಿದ್ದಾಗ ಆಕ್ಸಿಡೆಂಟ್ ಆಯ್ತೋ ಅನ್ನಿಸಿಬಿಡ್ತು.



ಮೊನ್ನೆ ಬೆಳಗಿನ ಶಿಫ್ಟ್ ಇತ್ತು. ನಾನು ಬರೋ ದಾರಿಯಲ್ಲಿ ಬೆಳ್ಳಂಬೆಳಗ್ಗೆ ಆದ್ದರಿಂದ ಅಷ್ಟೊಂದು ವಾಹನ ಸಂಚಾರ ಇರ್ಲಿಲ್ಲ. ಆರಾಮವಾಗಿ ಬರ್ತಿದ್ದೆ. ಹಿಂದಿನಿಂದ ಯಾರೋ ಒಬ್ಬ ತನ್ನ ಕಿತ್ತು ಹೋದ ಬೈಕ್ ನಿಂದ ಕೆಟ್ಟ ಸೌಂಡ್ ನಲ್ಲಿ ಹಾರ್ನ್ ಬಜಾಯಿಸುತ್ತಲೇ ಇದ್ದ. ಅವನಿಗೆ ಮುಂದೆ ಹೋಗೋಕೆ ದಾರಿ ಇತ್ತು. ಆದ್ರೂ ಎದುರಲ್ಲಿ ಒಂದು ಹುಲ್ಲುಕಡ್ಡಿ ಇದ್ರೂ ಹಾರ್ನ್ ಹೊಡ್ಕೊಂಡೇ ಹೋಗೋ ಜಾಯಮಾನದವ್ರೂ ಇರ್ತಾರಲ್ಲ? ಇವ್ನು ಆ ವರ್ಗಕ್ಕೆ ಸೇರಿದವ್ನಿರ್ಬೇಕು ಅನ್ಕೊಂಡು ನನ್ನ ಪಾಡಿಗೆ ನಾನು ಮುಂದುವರಿದೆ. ಬಿರುಗಾಳಿ ಥರ ಮುನ್ನುಗ್ಗಿದ ಆ ಹುಡ್ಗ. ಥೂ ಇವ್ನ ಅಂತ ಬಯ್ಕೊಂಡೆ. ಎದುರಿದ್ದ ಸಿಗ್ನಲ್ ಜಂಪ್ ಮಾಡಿ ಬಿರುಗಾಳಿ ಥರ ಹೋಗೇಬಿಟ್ಟ. ಅಲ್ಲಿಂದ ಮುಂದಕ್ಕೊಂದು ಸಿಗ್ನಲ್. ಅವನಾಗ್ಲೇ ಆ ಸಿಗ್ನಲ್ಲೂ ದಾಟಿ ಪಕ್ಕದ ರಸ್ತೆಯಿಂದ ಮತ್ತಿನ್ನೆರಡು ಮಂಗಗಳನ್ನು ಹಿಂದೆ ಕೂರಿಸಿಕೊಂಡು ಮತ್ತದೇ ದರಿದ್ರ ವೇಗದಲ್ಲಿ ಹೋದ. ನಾನು ಮನಸಲ್ಲೇ ಅವನಿಗೆ ಶಪಿಸುತ್ತಾ ಗ್ರೀನ್ ಸಿಗ್ನಲ್ ಬಿದ್ಮೇಲೆ ಮುಂದಕ್ಕೆ ಹೋದೆ. ಮಲ್ಯ ಆಸ್ಪತ್ರೆ ಮುಂಭಾಗದಿಂದ ಹಾದು, ಕಂಠೀರವ ಕ್ರೀಡಾಂಗಣದ ಬಳಿ ಬರ್ಬೇಕು, ಅಲ್ಲೊಂದು ಬೈಕು ಉಲ್ಟಾ ಹೊಡೆದು ಬಿದ್ದಿತು. ತಕ್ಷಣ ಆ ಹುಡುಗ ನೆನಪಾ. ಓಹ್ ಇವನೇನಾ? ಅನ್ಕೊಂಡು ಹತ್ತಿರ ಹೋಗೋವಷ್ಟರಲ್ಲೇ ಅವ್ನು ಅಲ್ಲೇ ಪಕ್ಕದಲ್ಲಿ ಕಂಡ.



ಪಾಪಿ. ಯಾರೋ ಸಭ್ಯ ವ್ಯಕ್ತಿ ಹುಷಾರಾಗಿ ಹೋಗ್ತಿದ್ರೆ ಈ ತಲೆಕೆಟ್ಟ ಹುಡುಗ ಹಂಪ್ ಹಾರಿಸಿ ಡಿಕ್ಕಿ ಕೊಟ್ಟು ಬೀಳಿಸಿದ್ದಾನೆ. ಸಾಲದಕ್ಕೆ ಪಕ್ಕದಲ್ಲಿ ನಿಂತು ಕೆಟ್ಟದಾಗಿ ನಗುತ್ತಿದ್ದ. ನಾನು ಬೇಗ ಅತ್ತ ಹೋಗಿ ರಸ್ತೆ ಬದಿಯಲ್ಲಿ ಗಾಡಿ ನಿಲ್ಲಿಸಿದೆ. ಅಷ್ಟರಲ್ಲಿ ಅವ್ನು ತನ್ನ ಲಟಕಾಸಿ ಗಾಡಿ ಸ್ಟಾರ್ಟ್ ಮಾಡ್ಕೊಂಡು ಮತ್ತದೇ ವೇಗದಲ್ಲಿ ಹೊರಟ. ಪಾಪ ಬೈಕ್ ನಿಂದ ಬಿದ್ದ ವ್ಯಕ್ತಿಗೆ ಕೈ ತರಚಿ ಗಾಯವಾಗಿತ್ತು. ಬೈಕ್ ನ ಮಿರರ್ ಒಡೆದಿತ್ತು. ಆ ವ್ಯಕ್ತಿಯ ತಪ್ಪೇನೂ ಇಲ್ಲದೆ ಈ ಘಟನೆ ನಡೆದದಕ್ಕೋ ಏನೋ ಅವ್ರು ದಂಗಾಗಿ ನಡುರಸ್ತೆಯಲ್ಲಿ ಬಿದ್ದಿದ್ದ ಬೈಕನ್ನೇ ನೋಡುತ್ತಾ ನಿಂತಿದ್ದರು. ನಾನು ಗಾಡಿ ನಿಲ್ಲಿಸಿ ಅವ್ರನ್ನು ಮಾತಾಡಿಸಿದೆ. ಯಾಕೆ ಅವ್ನನ್ನ ಹಾಗೇ ಬಿಟ್ರಿ? ತೆಗೆದು ನಾಲ್ಕು ತಟ್ಟಬಾರ್ದಾ? ಅಂತ ಕೇಳಿದೆ. ಅವ್ರು "ನೋಡಿ ಮೇಡಮ್ ನನ್ನ ಮಕ್ಳು ಈ ಸ್ಟೇಡಿಯಂನಲ್ಲಿ ಪ್ರಾಕ್ಟೀಸ್ ಮಾಡೋಕೆ ಬರ್ತಾರೆ. ಅವರನ್ನು ವಾಪಾಸ್ ಕರ್ಕೊಂಡ್ ಹೋಗೋಣ. ಪಾಪ ಮಕ್ಕಳು ಕಾಯ್ತಿರ್ತಾರೇನೋ, ಏನ್ ಮಾಡ್ತಿದ್ದಾರೋ ಅಂತೆಲ್ಲಾ ಕಾಳಜಿಯಿಂದ ಬರ್ತಿದ್ರೆ ಈ ಹುಡುಗ ಹೀಗಾ ಮಾಡೋದು?" ಅಂತ ಒಂದೇ ಸಮ ಅಲವತ್ತುಕೊಂಡರು. ಪದೇ ಪದೇ "ನನ್ನ ಮಕ್ಕಳನ್ನು ಹುಷಾರಾಗಿ ಕರ್ಕೊಂಡ್ ಹೋಗೋಣ ಅಂತ ಬಂದಿದ್ದೆ ಮೇಡಮ್" ಅಂತ ಬೇಸರದಿಂದ ಹೇಳುತ್ತಿದ್ದರು. ಸರಿ ಸರ್ ಮೊದಲು ನಿಮ್ಮ ಬೈಕನ್ನು ಎತ್ತಿ ಸೈಡಿಗೆ ಹಾಕಿ ಅಂತ ಹೇಳಿದೆ. ನೀವು ಅವನು ಬಂದು ಗುದ್ದಿದಾಗ ಅವ್ನ ಮೂತಿಗೆರಡು ಗುದ್ದಿ ಕಳಿಸೋದು ಬಿಟ್ಟು ಹಾಗೇ ಬಿಟ್ರಲ್ಲಾ ಅಂದೆ. ಬೈಕ್ ಪಕ್ಕಕ್ಕಿಟ್ಟು ಮತ್ತೆ ವ್ಯಥೆಯಿಂದ ಮಾತನಾಡಿದ್ರು. ಆ ಕಮಂಗಿ ಆಗ್ಲೇ ಜಾಗ ಖಾಲಿ ಮಾಡಿದ್ದ. ಸರಿ ಇನ್ನೇನು ಮಾಡೋದು? ಅವರಿಗೆ ಸಮಾಧಾನ ಮಾಡಿ ಆಫೀಸಿನ ಕಡೆ ಹೊರಟೆ.



ಬೆಂಗಳೂರಲ್ಲಂತೂ ಈ ಟೂ ವ್ಹೀಲರ್ ನಲ್ಲಿ ಹೋಗೋ ಕೆಲವು ಪುಂಡರಿಗೆ ಲಗಾಮು ಹಾಕೋರೇ ಇಲ್ಲ. ಈ ಕಬ್ಬನ್ ಪಾರ್ಕ್ ಕಂಠೀರವ ನಡುವಿನ ಕಸ್ತೂರ ಬಾ ರಸ್ತೆ ಬಳಿ ಕೆಲವೊಮ್ಮೆ ಟ್ರಾಫಿಕ್ ಪೊಲೀಸರ ಇಂಟರ್ಸೆಪ್ಟರ್ ನಿಂತಿರೋದನ್ನ ನೋಡಿರ್ತೀರಿ. ಅತಿ ವೇಗದಲ್ಲಿ ಬರೋ ವಾಹನಗಳನ್ನ ಸುಮಾರು 1 ಕಿಮೀ ದೂರದಿಂದಲೇ ಪತ್ತೆ ಹಚ್ಚಿಬಿಡುತ್ತೆ ಇದು. ಅಂತಹ ವಾಹನಗಳು ಸಮೀಪಕ್ಕೆ ಬಂದಾಗ ಪೊಲೀಸರು ಈ ಸವಾರರನ್ನು ನಿಲ್ಲಿಸಿ ಫೈನ್ ಹಾಕಿ ಬುದ್ಧಿ ಹೇಳಿ ಕಳಿಸ್ತಾರೆ. ಅದೊಂದು ದಿನ ಕಂಠೀರವ ಸ್ಟೇಡಿಯಂ ರಸ್ತೆ ಬಳಿ ತಿರುವಿನಲ್ಲಿ ಹೋಗುವಾಗ ಕಾರ್ಪೊರೇಷನ್ ಕಡೆಯಿಂದ ಆರೆಕ್ಸ್ ಬೈಕ್ ನಲ್ಲೊಬ್ಬ ಬಿರುಗಾಳಿ ವೇಗದಲ್ಲಿ ಭರ್್್್ ಅಂತ ಹೋದ. ಯಾರಪ್ಪಾ ಇವ್ನು ಅನ್ಕೊಂಡು ಮುಂದೆ ನೋಡಿದೆ. ಸ್ವಲ್ಪ ಮುಂದಕ್ಕೆ ಹೋದ್ರೆ ಅಲ್ಲೇ ಇಂಟರ್ಸೆಪ್ಟರ್ ನಿಂತಿತ್ತು. ಪಕ್ಕದಲ್ಲೇ ಆ ಆರೆಕ್ಸ್ ರಾಜನ ಹತ್ರ ಫೈನ್ ಕಲೆಕ್ಷನ್ ಮಾಡ್ತಿದ್ರು! ನನಗಾದ ಪರಮಾನಂದ ಅಷ್ಟಿಷ್ಟಲ್ಲ!


ಆದ್ರೆ, ''spiid ill ಅಂದ್ರೆ ಲೈಫಲ್ಲಿ ಥ್ರಿಲ್ಲೇ ಇಲ್ಲ'' ಅನ್ನೋ ಭಂಡ ಸ್ಟೇಟ್ಮೆಂಟ್ ಕೊಡೋ ಇಂಥವ್ರು ಒಂದೋ ಹೀಗೆ ಫೈನ್ ತೆರ್ತಾರೆ, ಇಲ್ಲಾ ಕಂಡವರ ಜೀವಕ್ಕೆ ಎರವಾಗ್ತಾರೆ, . ಇಂತಹವರಿಗೆ ಬುದ್ಧಿ ಹೇಳಿ ತಿದ್ದೋರು ಯಾರು?



ಓ ಮಳೆಯೇ ನಿನಗೆ ನಮನ...



ಎಷ್ಟೋ ದಿನಗಳ ಹಿಂದೆ ಸ್ನೇಹಿತ ಶ್ರೀನಿಧಿ ಬರೆದ ಲಲಿತ ಪ್ರಬಂಧವೊಂದನ್ನು ಓದಿದ್ದೆ. ತೋಡು ಎಂಬ ಪದದ ಬಗ್ಗೆ ಅದೆಷ್ಟು ಸೊಗಸಾಗಿ ಬರೆದಿದ್ದರು. ತೋಡು ಹೇಳೋಕೆ ಸಣ್ಣ ಸಣ್ಣ ಕಾಲುವೆಗಳೇ ಆದ್ರೂ ಅವುಗಳ ಮಹಿಮೆ ಅದೆಷ್ಟು ದೊಡ್ಡದಪ್ಪಾ ಅನ್ನಿಸಿತು. ಮಳೆಗಾಲದ

ಲ್ಲಿ ಗೋಚರ

ವಾಗುವ ಇವು ನಂತರ ಅದ್ಹೇಗೆ ಅಜ್ಞಾತವಾಗಿ ಬಿಡುತ್ತವೆ ಅಲ್ವಾ ಅನ್ನಿಸಿತು. ಲೇಖನ ಓದುತ್ತಾ ಓದುತ್ತಾ ನಾನು ಮಳೆ

ಗಾಲದಲ್ಲಿ ಹಸಿರ ರಾಶಿ ನಡುವೆ

ಯೇ ಕುಳಿತಂತೆ ಭಾಸವಾಯಿತು. ಜೊತೆಗೆ ಮಳೆ ಕುರಿತಂತೆ ನನ್ನ ನೆನಪಿನಂಗಳ ಸಣ್ಣದಾಗಿ ತೆರೆದುಕೊಳ್ಳತೊಡಗಿತು. ಮಳೆ ಅಂದ್ರೆ ನನಗೆಷ್ಟು ಇಷ್ಟ ಅಂತ ಬಹುಶಃ ನಾನು ಬರಹದಲ್ಲಿ ಹೇಳುವುದು ಕಷ್ಟಾನೇ...ಹಾಂ...ಮಳೆ ಅಂದ್ರೆ ಅತಿವೃಷ್ಟಿ ಬಗ್ಗೆ ಅಲ್ಲ ನಾನು ಹೇಳಹೊರಟಿರೋದು. ಹನಿಹನಿ ಚೆಲ್ಲಿ ಮನದಲ್ಲಿ ತನ್ನದೇ ಸೊಗಸಾದ ನೆನಪಿನ ಬುತ್ತಿಕಟ್ಟಿಕೊಟ್ಟಿರುವ ಮಳೆ ಬಗ್ಗೆ ನಾನು ಹೇಳ್ತಿರೋದು.


ಹಿಂದೆಲ್ಲಾ ಮಳೆ

ಅಂದ್ರೆ ನಂಗೊಂತರಾ ಅಸಹನೆ. ಯಾಕಂದ್ರೆ ಮಳೆಗಾಲ ಶುರುವಾದ್ರೆ ಹೊರಗೆ ಕಾಲಿಡೋದು ಕಷ್ಟ. ಚಪ್ಪಲಿಯೆಲ್ಲಾ ತೋಯ್ದು ಹೋಗ್ತವೆ. ಬಟ್ಟೆಯೂ ಒದ್ದೆ. ಸಾಲದ್ದಕ್ಕೆ ಚಳಿಚಳಿ ಅಂತ ನಡುಗುವ ಅವಸ್ಥೆ. ಹಾಗಾಗಿ ಮಳೆ ಅಂದ್ರೆ ಇಷ್ಟಾನೇ ಆಗ್ತಿರ್ಲಿಲ್ಲ. ಅದರಲ್ಲೂ ಮನೆಯಲ್ಲಿ ಯಾವ್ದಾದ್ರೂ ಶುಭ ಸಮಾರಂಭಗಳಿದ್ದಾಗ ಮಳೆ ಸುರಿಯಲಾರಂಭಿಸಿತಂದ್ರೆ, ಥೂ ಯಾಕಪ್ಪಾ ಮಳೆ ಬರುತ್ತೆ ಅಂತ ಶಪಿಸುತ್ತಿದ್ದೆ. ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿನ ಬಹುತೇಕ ಶುಭ ಸಮಾರಂಭಗಳು ನಡೆದದ್ದು ನನ್ನ ಅಜ್ಜಿ ಮನೆಯಲ್ಲಿ.

ಜ್ಜಿ ಮನೆಯ ಮಹಡಿ ಏರುವುದು ಇಳಿಯುವುದು ಅಂದ್ರೆ ಸಂಭ್ರಮ. ಅವತ್ತು ಹೊಸ ಬಟ್ಟೆ ತೊಟ್ಟು ಮಿಂಚೋ

ದಂತೂ ಗ್ಯಾರಂಟಿ. ಇಷ್ಟೆಲ್ಲಾ ಸಂತಸದ ಮಧ್ಯೆ ಮಳೆ ಬಂದ್ರೆ ಕೇಳ್ಬೇಕಾ? ಹೊರಗೆ ಹೋಗೋದಕ್ಕೆ ಅಮ್ಮನ ಕಡಿವಾಣ, ಇನ್ನು ಊಟಕ್ಕೆ ಹಾಕಿದ ಶಾಮಿಯಾನದಿಂದ ನೀರು ತೊಟ್ಟಿಕ್ಕುತ್ತಿದ್ರೆ ನನ್ನ ಊಟದೆಲೆಗೇ ಉದ್ದೇಶಪೂರ್ವಕವಾಗಿ ನೀರು ಸುರೀತಿದೆ ಅಂತ ಸಂಶಯ, ಮತ್ತೆ ಕೋಪ.

ನಗೆ ನೆನಪಿರೋ ಹಾಗೆ ನನ್ನ ಮಾಮನ ಮದುವೆ

ನಡೆದ ಸಂದರ್ಭ. ಅದು ನೆರವೇರಿದ್ದು ಹಸಿರ ಮಡಿಲಲ್ಲಿ ಹುಟ್ಟಿದಂತಿರುವ ಸಕಲೇಶಪುರದಲ್ಲಿ. ಮದುವೆಗೆ ಮಾಮ ಬೆಂಗಳೂರಿಂದ ತಂದುಕೊಟ್ಟಿದ್ದ ನಸುಗೆಂಪು ಬಣ್ಣದ ಫ್ರಾಕ್ ತೊಟ್ಟು ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಆದ್ರೆ ಮದುವೆ ಮನೆ ಅಂದ್ಮೇಲೆ ಮಕ್ಕಳೆಲ್ಲಾ ಇಡೀ ಛತ್ರದ ತುಂ

ಬಾ ಅಡ್ಡಾದಿಡ್ಡಿ ಆಟ ಆಡುತ್ತಾ ಮಜಾ ಮಾಡೋಣಂದ್ರೆ ಮತ್ತೆ ಅಮ್ಮನ ನಿಷೇಧಾಜ್ಞೆ. ಇನ್ನು ಬಲೂನು, ಪೀಪಿ ಕೊಳ್ಳಲು ಅದರ ಖುಷಿ ಅನುಭವಿಸಲು ಆಗ್ಲೇ ಇಲ್ಲ. ಹೊರಡುವ ಘಳಿಗೆವರೆಗೂ ಜಿಟಿಜಿ

ಟಿ ಸುರಿಯುತ್ತಿದ್ದ ಮಳೆಯನ್ನು ಶಪಿಸಿದ್ದೇ ಬಂತು.



ಆದ್ರೆ ಆಗ ನಾನು ತುಂಬಾ ಚಿಕ್ಕವಳು. ಮಳೆ ಎಂಬ ಪದ ಶಾಲೆಯ ಪಠ್ಯದಲ್ಲಿನ 3 ಕಾಲಗಳಲ್ಲೊಂದು ಅಂತ ಓದಿ ಅಷ್ಟೇ ಗೊತ್ತಿತ್ತು. ಹೈಸ್ಕೂಲಿಗೆ ಬಂದಾಗ ನನ್ನ ಹತ್ರ ಸೈಕಲ್ಲಿತ್ತು. ಶಾಲೆಗೆ ಸೈಕಲಲ್ಲಿ ಹೋಗಿಬರೋದು ಅಂದ್ರೆ ಭಾರೀ ಖುಷಿ. ಆದ್ರೆ ಮಳೆಗಾಲದಲ್ಲಿ ಮಾತ್ರ ಬೆಳಬೆಳಗ್ಗೇ ಒದ್ದೆಯಾಗಿ ಹೋಗೋದಂದ್ರೆ ಕಿರಿಕಿರಿ. ಆಗ ನಮ್ಮಪ್ಪನಿಗೆ ನಂಗೊಂದು ರೈನ್ ಕೋಟ್ ಕೊಡಿಸಿ ಅಂತ ಪೀಡಿಸುತ್ತಿದ್ದೆ. ಮುಂಚಿ
ನಿಂದಲೂ ಆಟೋದಲ್ಲೇ ಶಾಲೆಗೆ ಹೋಗುತ್ತಿದ್ರಿಂದ ನಂಗೆ ರೇನ್ ಕೋಟ್ ಕೊಡಿಸುವ ಉಸಾಬರಿ ಇರ್ಲಿಲ್ಲ. ನನ್ ಕಾಟ ತಡೀಲಾರದೆ ನಮ್ಮಪ್ಪ ಅಂತೂ ಒಂದು ರೇನ್ ಕೋಟನ್ನು
ತಂದ್ರು.. ತಂದ್ರು ಸರಿ. ಆದ್ರೆ ನನ್ ಸೈಜಾ ಅದು? ಅದನ್ನ ಹಾಕ್ಕೊಂಡ್ರೆ ನಾನು ಮಳೆಯಲ್ಲಿ ನೆನೆಯೋದು ಒಂದ್ಕಡೆ ಇರ್ಲಿ, ಸೈಕಲ್ ಪೆಡಲ್ಲೇ ಕಾಲಿಗೆ ಸಿಗದಷ್ಟು ಉದ್ದವಾಗಿತ್ತು ರೈನ್ ಕೋಟ್. ಹೆ
ಚ್ಚು ಕಡಿಮೆ ನನ್ನ ಪಾದಕ್ಕಿಂತ 2 ಇಂಚಷ್ಟೇ ಮೇಲಿರ್ತಿತ್ತು. ಅದನ್ನ ಹಾಕ್ಕೊಂಡು ಹೋದ್ರೆ ನನ್ನ ಫ್ರೆಂಡ್ಸು ಗೇಲಿ ಮಾಡ್ತಿದ್ರು. ನಿಂಗಿಂತ ನಿನ್ ರೇನ್ ಕೋಟೆ ಉದ್ದ ಅಲ್ಲೇ ಅಂತ ನಗ್ತಿದ್ರು. ಕಡೆಗೆ ಮಳೆ ಬರ್ತಿದ್ರೂ, ಆದಷ್ಟು ರೇನ್ ಕೋಟ್ ಮರೆತು ಶಾಲೆಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದೆ!


ಒಂದ್ಸಲಾ ಅಂತೂ ನಮ್ಮನೆ ಹತ್ರ ಸಣ್ಣಗೆ ಮಳೆ ಶುರುವಾದದ್ದೇ ತಡ ನಮ್ಮಮ್ಮ ಬಲವಂತವಾಗಿ ರೇನ್ ಕೋಟ್ ಹಾಕಿಸಿ ಶಾಲೆಗೆ ಕಳಿಸಿದ್ರು. ಆದ್ರೆ ನನ್ನ ಸ್ಕೂಲ್ ಹತ್ರ ಬರೋವಷ್ಟರಲ್ಲಿ ಸೂರ್ಯ ನನ್ನನ್ನು ಗೇಲಿ ಮಾಡುತ್ತಿರುವಷ್ಟು ಜೋರಾಗಿ ಪ್ರಜ್ವಲಿಸುತ್ತಿದ್ದ. ಪರೀಕ್ಷೆಯ ದಿನವಾಗಿದ್ದರಿಂದ ಶಾಲೆಯ ಬಹುತೇಕ ಹುಡುಗೀರು ಶಾಲೆ

ಆವರಣದಲ್ಲೇ ಇದ್ರು. ಎಲ್ಲಾ ನನ್ನನ್ನೇ ನೋಡ್ತಿದ್ರೆ ನಾನು ಕಕ್ಕಾಬಿಕ್ಕಿ. ಒಳ್ಳೆ ಕೋಯಿ ಮಿಲ್ ಗಯಾ ಸಿನಿಮಾದ ಏಲಿಯನ್ ಜಾದೂ ಥರಾ ಕಾಣ್ತಿದ್ದೆ ಅನ್ಸುತ್ತೆ. ಥೂ ನಂಗಂತೂ ಬಾಲ್ಯದಲ್ಲಿ ಮಳೆಗಾಲದ ಸವಿನೆನಪುಗಳು ತುಂಬಾನೇ ಕಮ್ಮಿ.

ಆದ್ರೆ ಮಳೆ ಬಂದಾಗ ರಜೆ ಇತ್ತು ಅಂದ್ರೆ ನಮ್ಮ ಏರಿಯಾದಲ್ಲಿದ್ದ ನಮ್ಮ ಗ್ಯಾಂಗು ಏನೇನೋ ನಿರುಪಯುಕ್ತ ಅನ್ವೇಷಣೆಗಳಲ್ಲಿ ತೊಡಗುತ್ತಿದ್ದದ್ದು

ನೆನಪು. ಎಲ್ಲರೂ ಮಳೆ ನಿಲ್ಲೋದನ್ನೇ ಕಾಯ್ತಿದ್ವಿ. ಚಪ್ಪಲಿ ಧರಿಸಿ ಹೊರಗೆ ಬಂದ್ರೆ ಮುಗೀತು. ಹಳೇ ನೋಟ್ಸಿನ ಹಾಳೆ ಹರಿದು ದೋಣಿ ಬಿಡೋದೇ ಬಿಡೋದು. ಮನೆ ಪಕ್ಕದ ದೊಡ್ಡ ಚರಂಡಿ ತುಂಬಿ ಹರೀತಿದ್ರೆ ನಮಗೆ ಯಾವುದೋ ಭೋರ್ಗರೆಯುವ ನದಿ ಮುಂದೆ ನಿಂತಷ್ಟು ಹೆಮ್ಮೆ! ಚರಂಡಿ ನೀರು ಹರಿಯುತ್ತಾ ನಡುನಡುವೆ ಸುರುಳಿ ಸುರುಳಿಯಾಗುತ್ತಿದ್ದರೆ ನಾವು ಅದನ್ನು ನೋಡಿ ಹೊಳೆಗಳಲ್ಲಿ ಕಾಣುವ ಸುಳಿ ಥರಾನೇ ಇದೂನು ಅಂತ ಭಾವಿಸಿ ಪೇಪರ್ ತುಂಡು, ಹೂವು ,ಎಲೆ ಅದು ಇದು ಎಸೆದು ಅದು

ಸುಳಿಯೊಳಗೆ ಮಾಯವಾಗ್ತಿದ್ರೆ

ಅಚ್ಚರಿಪಡ್ತಿದ್ವಿ.


ಸ್ಕೂಲಿನ ದಿನಗಳು ಕಳೆದದ್ದೇ ಗೊತ್ತಾಗಲಿಲ್ಲ. ಕಾಲೇಜಿನ ಮೆಟ್ಟಿಲು ಹತ್ತಿಯಾಗಿತ್ತು. ಮನಸ್ಸಿನ ಅರಿವಿಗೂ ನಿಲುಕದ ಉಲ್ಲಾಸ ನೀಡುವ ವಯಸ್ಸು ಅದು. ಅದಕ್ಕೇ ಇರ್ಬೇಕು ಹರೆಯದ ಹೃದಯಗಳಿಗೆ ಮಳೆ ಅಂದ್ರೆ ಭಾರೀ ಪ್ರೀತಿ. ನನಗಂತೂ ಮಳೆ ಬರ್ತಿದ್ರೆ ಇನ್ನಿಲ್ಲದ ಸಂಭ್ರಮ. ಅಯ್ಯೋ ಮಳೆ...ನೆಂದು ತೊಪ್ಪೆ ಆಗೋ ಮೊದಲು ಎಲ್ಲಾದ್ರೂ ನಿಲ್ಲೋಣ ಅನ್ನೋ ಮಾತು ನನ್ನ ಬಾಯಿಂದ ಬಂದದ್ದು ನೆನಪೇ ಇಲ್ಲ. ನನ್ನ ಟೂ ವ್ಹೀಲರ್ ಏರಿ ಮಳೆಯಲ್ಲಿ ನೆನೆಯುತ್ತಾ ಹನಿಹನಿಯನ್ನೂ ಫೀಲ್ ಮಾಡಿಕೊಂಡು ಆದಷ್ಟು ನಿಧಾನವಾಗಿ ಡ್ರೈವ್ ಮಾಡೋದಂದ್ರೆ ನಂಗೇ

ನೋ ಖುಷಿ. ವಾವ್ ಮಳೆಯಲ್ಲಿ ನೆನೆಯೋಕೆ ಎಲ್ಲ ಯಾಕೆ ಇಷ್ಟ ಪಡ್ತಾರೆ ಅಂತ ಅರಿವಾಗಿದ್ದೇ ಆಗ. ಮಳೆಯಲ್ಲಿ ನೆನೆಯೋದಂದ್ರೆ ಅದೊಂದು ಹೇಳಲಾಗದ ವಿಶಿಷ್ಟ ಅನುಭೂತಿ.



ಬಹುಶಃ ವಯಸ್ಸೇ ಹಾಗಾ ಅಂತ...? ಸುತ್ತ ಇರುವ ನಿಸರ್ಗವನ್ನೇ ತನ್ನ ಆಪ್ತಸಂಗಾತಿಯಂತೆ ನೋಡುವ ಮನಸ್ಸು ತಾನಾಗೇ ಹುಟ್ಟಿಕೊಳ್ಳುತ್ತಾ? ಗೊತ್ತಿಲ್ಲ. ಸಂಜೆಯ ತಂಗಾಳಿ, ಕೆಂಪೇರಿದ ಆಕಾಶ, ಗೂಡು ಸೇರುವ ಹಕ್ಕಿಗಳು, ಮತ್ತೆ ಮುಂಜಾವಿನ ಸೂರ್ಯ, ತಣ್ಣನೆ ಬೆಳಗಿಗೆ ಸುಪ್ರಭಾತ ಹಾಡುವ ಬಾನಾಡಿಗಳ ಚಿಲಿಪಿಲಿ ಇವೆಲ್ಲಾ ನಿಜಕ್ಕೂ ನನಗೆ ಪ್ರಿಯವಾ

ಗುತ್ತಿದ್ದುದೇ ಕಾಲೇಜಿಗೆ ಬಂದ ದಿನಗಳಲ್ಲಿ.

ಮ್ಮ ಮನೆ ಹೊರಗೆ ಕುಳಿತು ಇವನ್ನೆಲ್ಲಾ ನೋಡಿ, ಕೇಳಿ ಆಸ್ವಾದಿಸುವುದು ನನಗೆ ತುಂಬಾ ಇಷ್ಟವಾದ ಸಂಗತಿ. ಹಾಗೇ ಪ್ರಕೃತಿಯ ಎಲ್ಲಾ ವಿಸ್ಮಯಗಳ ನಡುವೆ ನನಗೇ ಅರಿವಿಲ್ಲದೆ ಮಳೆಹನಿಗಳೂ ನನ್ನ ಸಂಗಾತಿಯಾದವು ಅಂತ ಬಿಡಿಸಿ ಹೇಳಬೇಕಿಲ್ಲ.


ಮಳೆಗಾಲದ ಹೊತ್ತು ಕಾಲೇಜಿದ್ರೆ ಸಾಮಾನ್ಯವಾಗಿ ನನ್ನ ಕ್ಲಾಸು ಸಂಜೆ 4ವರೆಗೆ ಬಿಡುವ ಹೊತ್ತಿಗೆ ಸರಿಯಾಗಿ ಸಂಜೆ ಮಳೆ ಶುರುವಾಗ್ತಿತ್ತು. ಎಲ್ಲಾ ಹುಡುಗೀರೂ ಕಾಲೇಜಿನ ಛಾವಣಿ ಕೆಳಗೋ ಮರದ ಕೆಳಗೋ ನಿಂತ್ರೆ ನನ್ನ ದಾರಿ ಸೀದಾ ಪಾರ್ಕಿಂಗ್ ಸ್ಟಾಂಡ್ ಹತ್ರ. ನಂತರ ಗಾಡಿ ಸ್ಟಾರ್ಟ್ ಮಾಡಿದ್ರೆ ನಿಧಾನವಾಗಿ ಮನೆ ಕಡೆ. ಇನ್ನು ಮನೆ ಬಾಗಿಲಲ್ಲಿ ಅಮ್ಮ as usual ಕೈಲೊಂದು ಟವೆಲ್ ಹಿಡಿದು ನನ್ನ ತಲೆ ಒರೆಸೋಕೆ ರೆಡಿಯಾಗಿ
ರ್ತಿದ್ರು. ಎಷ್ಟೋ ಸಲ ಅಮ್ಮ ಬೇಗ ಒಳೆಗ ಬಾ ಅಂತ ಕೂಗ್ತಿದ್ರೆ, ಗೇಟ್ ತೆರೆಯುತ್ತಾ ನಿಧಾನವಾಗಿ ಗಾಡಿ ತಳ್ಳಿಕೊಂಡು ಮನೆಬಾಗಿಲನ್ನು ಸಮೀಪಿಸಿ ಅವರಿಂದ ಬೈಗುಳ ತಿಂದದ್ದಿದೆ. ಆದ್ರೂ ಅದೆಲ್ಲಾ ಎಷ್ಟ್ ಚೆನ್ನಾಗಿತ್ತು ಅನ್ಸುತ್ತೆ.


ಆದ್ರೆ ಮಳೆಯಲ್ಲಿ ಆಚೆಗೆ ಬರಲೇಬಾರ್ದು ಅಥವಾ ನಾನು ತಲುಪಬೇಕಾದ ಸ್ಥಳ ಸೇರುವವರೆಗೂ ಮಳೆ ಸುರಿಯಬಾರ್ದು ಅಂತ ನನಗೆ ಮೊದಲ ಸಲ ಅನ್ನಿಸಿದ್ದು ನಾನು ಚೆನ್ನೈನಲ್ಲಿ ಖಾಸಗಿ ಚಾನೆಲೊಂದರಲ್ಲಿ ಕೆಲಸ ಮಾಡುವಾಗ. ಆಫೀಸು ಬಹಳ ಹತ್ತಿರವೇ ಇದ್ರೂ 25 ರೂ ತೆತ್ತು ಮಳೆ

ಬಂತು ಅಂತ ಆಟೋ ಏರಿದ್ದಿದೆ. ಅಲ್ಲಂತೂ ಬಿಡಿ, ಮಳೆ ಬಂದ್ರೆ ಇಡೀ ರಸ್ತೆಯೆಲ್ಲಾ ಕರಿ ಬಣ್ಣದ ನೀರು. ಸಾಲದಕ್ಕೆ ಅದೆಲ್ಲೆಲ್ಲೋ ಅಡಗಿರುತ್ತಿದ್ದ ಹೆಗ್ಗಣಗಳು ನಮ್ಮ ಕಣ್ಣೆದುರೇ ಸ್ವಿಮ್ಮಿಂಗ್ ಮಾಡುತ್ತಾ ಮೋಜು ಮಾಡ್ತಿದ್ರೆ....ಅಬ್ಬಬ್ಬಾ ಯಾವಾಗಪ್ಪಾ ಮಳೆ ನಿಲ್ಲೋದು ಅನ್ನಿಸ್ತಿತ್ತು. ನಾನೊಮ್ಮೆ ಹೊಸ ಶೂ ಕೊಂಡಿದ್ದೆ. ಅವತ್ತು ಆಫೀಸಿಗೆ ಧರಿಸಿದ್ದೆ. ವಾಪಸ್ಸಾಗುವ ಮುನ್ನ ಊಟಕ್ಕೆ ಹೊಟೇಲ್ ಗೆ ಹೋಗಿದ್ವಿ. ಊಟ ಮುಗಿಸಿ ಬರುವಷ್ಟರಲ್ಲಿ ಇಡೀ ರಸ್ತೆ ಹೆಚ್ಚು ಕಡಿಮೆ ಕೊಚ್ಚೆ ಗುಂಡಿ ಥರ ತುಂಬಿತ್ತು. ಶಿಟ್! ನಾನೊಂದ್ಸಲಾ ನನ್ನ ಶೂ ನೋಡ್ಕೊಂಡೆ ಅಳು ಬರೋದೊಂದು ಬಾಕಿ. ಕಣ್ಮುಚ್ಚಿ ನೀರಿಗಿಳಿದು ಮನೆ ಸೇರಿದ್ದಾಯ್ತು.


ಬೆಂಗಳೂರಲ್ಲೂ ನಾನು ಮಳೆಯಲ್ಲಿ ನೆನೆಯುತ್ತ ವಾಹನ ಸವಾರಿ ಮಾಡಿ ಮನಸಾರೆ ಮಜಾ ಮಾಡಿದ್ದಿದೆ. ಆದ್ರೆ ಒಂದಿನ ರಾತ್ರಿ 9 ಸಮಯದಲ್ಲಿ ಸಣ್ಣಗೆ ಮಳೆ ಶುರುವಾಯ್ತು. ವಾಹ್ ನೆನೆಯುತ್ತಾ ಆರಾಮಾಗಿ ಹಾಸ್ಟೆಲ್ ಸೇರಬಹುದು ಅನ್ನೋ ಅತಿಯಾಸೆ, ನನಗೆ ಅವತ್ತು ಎಂಥ ಅವಾಂತರ ತಂದಿತ್ತಂದ್ರೆ? ಉಫ್, ನನ್ನ ಪ್ರೀತಿಯ ಗಾಡಿ ಅರ್ಧ ದೂರದಲ್ಲೇ ಕೆಟ್ಟು ನಿಂತು ಬೇಡ ಫಜೀತಿ. ಯಾವುದೋ ಪೆಟ್ರೋಲ್ ಬಂಕ್ ನಲ್ಲಿ ಸಹಾಯ ಪಡೆಯೋ ಪ್ರಯತ್ನ ಮಾಡಿದೆ. ಗಾಡಿ ಸ್ಟಾರ್ಟ್ ಆಯ್ತು. ಆದ್ರೆ ಮುಂದಿನ ರಸ್ತೆ ಸೇರುವಷ್ಟರಲ್ಲಿ ಮತ್ತೆ ಆಫ್! ರಸ್ತೆಯಲ್ಲಿ ಜನಸಂಚಾರ ಅಷ್ಟಕ್ಕಷ್ಟೆ . ಅವತ್ತು ರಾತ್ರಿ ನಾನು ಹಾಸ್ಟೆಲ್ ಸೇರುವಷ್ಟರಲ್ಲಿ

ಬೇಡ ನನ್ನ ಪಾಡು. ಮಳೆಯಲ್ಲಿ ನೆನೆಯೋದಿರ್ಲಿ ಚಳಿಯಲ್ಲೂ ಸಣ್ಣಗೆ ಬೆವರಿದ್ದೆ.


ಇತ್ತೀಚೆಗೆ ಮಳೆಯಲ್ಲಿ ಮನದಣಿಯೆ ನೆಂದದ್ದು ಬಿಸಿಲೆ ಘಾಟಿಯಲ್ಲಿ. ನಾವೆಲ್ಲಾ ಫ್ರೆಂಡ್ಸು ಸೇರ್ಕೊಂಡು ಬಿಸಿಲೆಗೆ ಟ್ರೆಕ್ಕಿಂಗ್ ಗೆ ಅಂತ ಹೋಗಿದ್ವಿ. ಕಾಡಿನೊಳಕ್ಕೆ ಬರುವವರೆಗೂ ಮಳೆ ಇರ್ಲಿಲ್ಲ. ಹಿಂದಿನ ದಿನ ಚೆನ್ನಾಗಿ ಮಳೆ ಸುರಿದಿತ್ತು. ಆದ್ರೆ ಕಾಡಿನ ತುಂಬಾ ಬರೀ ಜಿಗಣೆಗಳದ್ದೇ ಸಾಮ್ರಾಜ್ಯ. ಕಾಲಿಟ್ಟ ಕಡೆ ಎಲ್ಲೆಲ್ಲೂ ನಾವೇ ಅಂತ ಕಾಲೇರಿ ರಕ್ತ ಹೀರಲು ಶುರುಮಾಡ್ತಿದ್ವು. ಆದ್ರೆ ಮದ್ಯಾಹ್ನ ನಾವು ಕಾಡಿನಿಂದ ಹೊರಡುವ ಸಮಯ. ಶುರುವಾಯ್ತು ನೋಡಿ ಮಳೆ. ಸರಿಸುಮಾರು 5-6 ಕಿಮೀ ನಾವು ಮಳೆಯಲ್ಲಿ ನೆನೆಯುತ್ತಲೇ ನಡೆದಿದ್ದೀವಿ. ಮಳೆ ಅಂದ್ರೆ ಅದೇನು ಕಡಿಮೆ ಪ್ರಮಾಣವಾ? ಬಿಸಿಲೆಯಂಥ ಬಿಸಿಲೇ ಬೀಳದ ಕಾಡೊಳಗೂ ಅಷ್ಟು ಜೋರಾಗಿ ಚೆಚ್ಚಿತ್ತು ಮಳೆ. ನಾವು ನಡೆದು ಬರುತಿದ್ದ ದಾರಿ ಏರು ಪ್ರದೇಶವಾಗಿದ್ದರಿಂದ ಬಲುಬೇಗ ಸುಸ್ತಾಗ್ತಿತ್ತು. ಆದ್ರೆ ಆವತ್ತು ಮಳೆ

ಸುರಿದ ರೀತಿ ಹೇಗಿತ್ತಂದ್ರೆ ಉಫ್ ಅದನ್ನ ಅಲ್ಲಿ ಫೀಲ್ ಮಾಡಿದ್ನಲ್ಲಾ? ನಂಗೆ ಮಾತ್ರ ಗೊತ್ತು ಖುಷಿ. ಸದ್ಯ ಅಷ್ಟು ಜೋರು ಮಳೆಗೆ ಜಿಗಣೆಗಳೆಲ್ಲಾ ಮಾಯ. ಸಾಲದಕ್ಕೆ ಇಡೀ ಕಾಡು ಮಳೆಗೆ ತೊಯ್ದು ಒಂಥರಾ ಘಮ್ ಅನ್ನೋ ಮಣ್ಣಿನ ಸುವಾಸನೆ. ಆಹ್..ಅದನ್ನು ಖಂಡಿತ ನಾನು ಮಾತಿನಲ್ಲಾಗಲೀ ಬರಹದಲ್ಲಾಗಲೀ ಹೇಳೋಕೆ ತುಂಬಾ ಕಷ್ಟ. ಅದು ಅಂತಹ ಅದ್ಭುತ ನಿಸರ್ಗದ ಮಡಿಲಲ್ಲಿ ಮಾತ್ರ ಸಿಗೋಕೆ ಸಾಧ್ಯ.


ಮೊದಲೇ ಹೇಳಿದ್ನಲ್ಲಾ ಅದು ಏರು ಪ್ರದೇಶ ಅಂತ. ಮಳೆ ಬೇರೆ ತುಂಬಾ ಅಂದ್ರೆ ತುಂಬಾ ಜೋರಾಗಿ ಬೀಳ್ತಿತ್ತು. ಹಾಗಾಗಿ ಮಳೆ ನೀರೆಲ್ಲಾ ನಾವು ಬರ್ತಿದ್ದ ಕಾಲುದಾರಿಯಲ್ಲೇ ಹರಿದು ಬರ್ಬೇಕಿತ್ತು. ನಿಜಕ್ಕೂ ಯಾವುದೋ ಸಣ್ಣ ಜಲಪಾತದ ಕಾಲಡಿ ನಾವು ನಡೆದುಬರ್ತಿದ್ದೀವೇನೋ ಅನ್ನೋ ಭಾವನೆ. ನಿಜ ಹೇಳ್ತೀನಿ ಈಗಲೂ ನಂಗೆ ಅಲ್ಲಿ ನಡೆದು ಬಂದ ಅನುಭವ ನೆನಪಾದ್ರೆ ಹಮ್್್್್್ am so lucky ಅನ್ಸುತ್ತೆ. ಕಾಡಿಂದ ಹೊರಗೆ ಬಂದ್ವಲ್ಲಾ. ರಸ್ತೆ ಮೇಲೆ ಬಂದಾಗ ಅಲ್ಲಿ ಮತ್ತೊಂಥರಾ ಅನುಭವ. ಸುತ್ತ ಇದ್ದ ಇಡೀ ಗಿಡಮರಗಳು ಬಿದ್ದ ವರ್ಷಧಾರೆಗೆ ತೊಳೆದ ಕನ್ನಡಿಯಂತೆ ಲಕಲಕ ಮಿನುಗುತ್ತಿದ್ದವು. ಅಲ್ಲೇ ಪಕ್ಕದಲ್ಲೇ ಒಂದು ಪುಟ್ಟ ಝರಿ! ಬಹುಶಃ ನಿಸರ್ಗದ ಪರಿಚಯ ಅದರೊಂದಿಗೆ ನಿಕಟ ಒಡನಾಟ ಇದ್ದವರಿಗೇ ಗೊತ್ತು, ಇಂತಹ ಝರಿಗಳ ಮಹಿಮೆ. ಬಾಯಾರಿದ್ದ ನಮಗೆ ಅಲ್ಲಿ ಸುರೀತಿದ್ದ ನೀರು ಕುಡೀಬೇಕು ಅಂತ ಅನ್ನಿಸ್ದಿದ್ರೂ ಅವತ್ತು ಕುಡಿದೇ ಬಿಟ್ವಿ. ಈಗಂತೂ ಸಿಟಿ ಜನ ಹೊರಗಿನ ನೀರು ಕುಡಿಯಲೇ ಹಿಂದುಮುಂದು ನೋಡೋ ಪರಿಸ್ಥಿತಿ. ಆದ್ರೆ ಅವತ್ತು ಕುಡಿದ್ದದು ಯಾವುದೋ ಬೆಟ್ಟ, ಕಾಡುದಾರಿ, ಬಂಡೆಯನ್ನು ಬಳಸಿ, ಗಿಡಮರಗಳನ್ನು ತಣಿಸಿ, ಸಣ್ಣದಾಗಿ ಝರಿಯಾಗಿ ಹರಿಯುತ್ತಿದ್ದ ನೀರನ್ನು. ವಾಹ್... ಸ್ವಾದ! ಖಂಡಿತ....ಖಂಡಿತ ಅದರ ರುಚಿಗೆ ಸರಿಸಾಟಿ ಎಲ್ಲೂ ಇಲ್ಲ. ಇಡೀ ಪ್ರಪಂಚದಲ್ಲೆಲ್ಲೂ ಸಿಗದ ಅಮಿತಾನಂದ ನೀರು ಕುಡಿದ್ರೆ. ಅದರಲ್ಲೂ ಅನುಭವಕ್ಕೆ ಸಿಗದ ಒಂದು ವಿಶಿಷ್ಟ ರುಚಿ ಇತ್ತಲ್ಲಾ? ಬಿಡಿ, ಸುಮ್ಮನೆ ಇದನ್ನು ಓದುತ್ತಿರುವವರ ಹೊಟ್ಟೆಯಲ್ಲಿ ಹೆಚ್ಚು ಕಿಚ್ಚು ಹೊತ್ತಿಸೋದು ಬೇಡ!


ಹೌದು ಮಳೆ.... ಮಳೆ ಎಷ್ಟ್ ಚೆಂದ ಅಲ್ವಾ....ಬರೆದಷ್ಟು ಮುಗಿಯದ, ಮೊಗೆದಷ್ಟು ಖಾಲಿಯಾಗದ ಅನುಭವಗಳನ್ನು, ಮಳೆ ನನಗಷ್ಟೇ ಅಲ್ಲ ಪ್ರತಿಯೊಬ್ಬರಿಗೂ ಕಟ್ಟಿಕೊಟ್ಟಿರುತ್ತದೆ. ಮಳೆ ಅಂದ್ರೆ ವೈರಲ್ ಫೀವರ್, ಜ್ವರ ನೆಗಡಿ ಕೆಮ್ಮು ಅಂತೆಲ್ಲಾ ಸಬೂಬು ಹೇಳಿ ಮನೆ ಸೇರುವವರನ್ನು ಕಂಡ್ರೆ ನನಗೆ ನಗು ಬರುತ್ತೆ. ಇವರೆಂಥಾ ದುರದೃಷ್ಟವಂತರು. ಅನನುಭವಿಗಳು ಅನ್ಸುತ್ತೆ. ನಮ್ಮ ಮೈ ಸೋಕುವ ಮಳೆಯ ಹನಿಹನಿಯನ್ನೂ ಫೀಲ್ ಮಾಡುತ್ತಾ ಪಡುವ ಖುಷಿ ನಿಜಕ್ಕೂ ಅವರ್ಣನೀಯ. ಮಳೆಯೇ ನಿನಗೆ ನನ್ನ ನಮನ.