Friday, August 28, 2009

ಮತ್ತೆ ಬಂದ ಗಣೇಶ ...

ಬಂತು ಬಂತು ಭಾದ್ರಪದ ಶುಕ್ಲ ಚತುರ್ಥಿ, ಬಡವ ಧನಿಕ ಆಚರಿಸುವ ಪುಣ್ಯ ಚತುರ್ಥಿ...ಭಕ್ತಿಯಿಂದ ಮಾಡುವ ಗಣೇಶ ಚತುರ್ಥಿ, ಮಂಗಳವಾ ತರುತಲಿರುವ ಶುಭದ ಚತುರ್ಥಿ... ಹೌದು, ಮತ್ತೆ ಗಣೇಶ ಚತುರ್ಥಿ ಬಂದಿದೆ. ಗಣೇಶನ ಹಬ್ಬ ಅಂದ್ರೆ ಎಲ್ಲರಿಗೂ ಖುಷಿ ಕೊಡುವ ಹಬ್ಬ. ಹಿರಿಯರಿಂದ ಹಿಡಿದು ಮನೆಯ ಪುಟ್ಟ ಪುಟ್ಟ ಮಕ್ಕಳೂ ಗಣೇಶನ ಹಬ್ಬ ಬಂತೂಂದ್ರೆ ಸಂಭ್ರಮಿಸುತ್ತಾರೆ. ತಮ್ಮ ಮನೆಗೆ ಗಣಪನ ಮೂರ್ತಿ ತರುವುದೇ ಅವರಿಗೆ ಅತಿ ಸಂತಸದ ಸಂಗತಿ. Even ನಂಗೂ ಗಣೇಶನ ಹಬ್ಬ ಅಂದ್ರೆ ತುಂಬಾ ಇಷ್ಟ. ಈಸಲ ಅಂತೂ ನಾನು ಮನೆಯನ್ನು ತುಂಬಾ ಮಿಸ್ ಮಾಡ್ಕೊತಿದೀನಿ. ಬೇರೆ ಹಬ್ಬಗಳಿಗೆ ರಜೆ ಸಿಗದಿದ್ರೆ ಸ್ವಲ್ಪ ಬೇಜಾರಾದ್ರೂ ಸುಮ್ಮನಾಗ್ತಿದ್ದೆ. ಆದ್ರೆ ಈ ಸಲ ಗೌರಿ-ಗಣೇಶ ಹಬ್ಬಕ್ಕೆ ಮನೆಗೆ ಹೋಗೋ ಅವಕಾಶ ಸಿಗದಿದ್ದಕ್ಕೆ ತುಂಬಾ ಫೀಲ್ ಆಗ್ತಿದೆ. ಹಬ್ಬದ ದಿನದಂದು ಬಿಕೋ ಅನ್ನೋ ಆಫೀಸಿನ ವಾತಾವರಣದಲ್ಲಿ ಕೆಲಸ ಮಾಡೋ ಸಂಕಟ ನನಗೆ ಚೆನ್ನಾಗಿ ಗೊತ್ತು.

ಇತರೆ ಎಲ್ಲಾ ಹಬ್ಬಗಳಿಗೂ ಹೋಲಿಸಿದರೆ ಗಣೇಶನ ಹಬ್ಬದ ಖದರ್ರೇ ಬೇರೆ ಬಿಡಿ. ಊರಲ್ಲಂತೂ ಗಣೇಶ ಚತುರ್ಥಿ ಬರಲು ಇನ್ನೂ 15 ದಿನಗಳಿವೆ ಎಂಬಂತೇ ನಮ್ಮ ಏರಿಯಾ ಹುಡುಗರ ತಂಡಗಳು ಸಿದ್ಧತೆಯಲ್ಲಿ ತೊಡಗುತ್ತಿದ್ದವು. ಮನೆ ಮನೆಗಳಿಗೂ ಹೋಗಿ ಗಣೇಶನನ್ನು ಕೂರಿಸಲು ಚಂದಾ ಎತ್ತುತ್ತಿದ್ದರು. ಅಲ್ಲೂ ಪೈಪೋಟಿ. ಯಾಕಂದ್ರೆ ಏರಿಯಾಗೊಂದೇ ಗಣಪತಿ ಆದ್ರೆ ಓಕೆ, ಇಲ್ಲಿ ಹಾಗಲ್ಲವಲ್ಲ. ಏರಿಯಾಗೆ 2ರಿಂದ 3 ಕಡೆ ಗಣೇಶನನ್ನು ಕೂರಿಸ್ತಿದ್ರು. ಎಲ್ಲರಿಗೂ ಚಂದಾ ಕೊಟ್ಟು ಕೊಟ್ಟು ಸಾಕಾಗಿ ಎಷ್ಟೋ ಮನೆಗಳಲ್ಲಿ ಇವರ ಗ್ಯಾಂಗುಗಳು ಬರ್ತಿವೆ ಅಂದ್ರೆ ಸಾಕು ಮಕ್ಕಳ ಹತ್ರ ಮನೇಲಿ ಯಾರೂ ದೊಡ್ಡೋರು ಇಲ್ಲ ಅಂತ ಹೇಳಿಸೋ ಪರಿಪಾಠ ಶುರುವಾಗಿಬಿಡ್ತು! ನಮ್ಮ ಮನೆಯಲ್ಲೂ ಅಪ್ಪ ಇಲ್ಲದ ಸಮಯದಲ್ಲಿ ಇದೇ ಡೈಲಾಗು! ಆದ್ರೆ ನಮಗೆ ಹೀಗೆಲ್ಲಾ ಹೇಳೋಕೋ ಮುಜುಗರ. ಅದಕ್ಕೇ ಅಪ್ಪನಿಗೆ ದಬಾಯಿಸಿ ಮಾಮೂಲಾಗಿ ಚಂದಾ ಕೇಳಲು ಬರ್ತಿದ್ದ ಗುಂಪಿನವರಿಗೆ ಬೆಳಗ್ಗೆಯೇ ವಸೂಲಿ ಮಾಡಿಟ್ಟುಕೊಂಡು ಸಂಜೆ ಬಂದಾಗ ಅವರಿಗೆ ಕೊಡ್ತಿದ್ದೆವು. ಹೀಗೆ ಶುರುವಾಗ್ತಿತ್ತು ಗಣೇಶನ ಹಬ್ಬದ ಅಬ್ಬರ. ನಮಗಂತೂ ಗೌರಿ ಹಬ್ಬದಂದು ಹೊಸ ಬಟ್ಟೆ, ಬಳೆ ತೊಟ್ಟು ಸಂಭ್ರಮಿಸೋದೇ ಖುಷಿ. ನಾನಂತೂ ಅವತ್ತು ಬೆಳ್ಳಂಬೆಳಗೆ ಅಮ್ಮನ ಕೂಗಿಗೆ ಎದ್ದರೆ, ಸ್ನಾನ ಮಾಡಿ ಮಡಿಯುಟ್ಟು ಮಾಡಬೇಕಿದ್ದ ಮೊದಲ ಕಾರ್ಯ ಮನೆ ಮುಂದೆ ರಂಗುರಂಗಿನ ರಂಗೋಲಿ ಬಿಡಿಸೋದು. ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಹಬ್ಬದ ದಿನ ನಾನು ಬಿಡಿಸುತ್ತಿದ್ದ ರಂಗೋಲಿ ಯಾವುದು ಹೇಗೆ ಕಲರ್ ತುಂಬಿಸಿದ್ದೇನೆ ಅಂತ ನೋಡೋಕೆ ಬೆಳಗ್ಗೆ 8ರ ಹೊತ್ತಿಗೆ ನನ್ನ ಗೆಳೆಯರು ಮನೆ ಮುಂದೆ ಜಮಾಯಿಸುತ್ತಿದ್ರು!

ಇನ್ನು ಮನೆಯೊಳಗಿನ ಕೆಲಸದಲ್ಲಿ ಪೂಜೆ ಪುನಸ್ಕಾರವೆಲ್ಲಾ ಅಮ್ಮನ ವಿಭಾಗ. ಅಪ್ಪ ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿದ್ರೆ, ಅಡುಗೆ ಮನೆಯಲ್ಲಿ ಹೂರಣ ರುಬ್ಬಿ ಹೋಳಿಗೆ ಬೇಯಿಸುವುದು ನನ್ನ ಪಾಲು. ನನ್ನ ತಂಗಿಯೂ ಬೇಯಿಸುವುದು ಕಲಿಯಲಿ ಅಂತ ಕೂರಿಸಿದ್ರೆ ಅವಳು ಕೈಯಿಟ್ರೆ ಹೋಳಿಗೆಗಳು ಹರಿದು ಚಿಂದಿ ಚಿಂದಿ ಆಗ್ತಿದ್ವು! ಮತ್ತೆ ಆ ಕೆಲಸ ನನ್ನ ತಲೆಗೇ ಬರ್ತಿತ್ತು. ಅಬ್ಬಾ ಹೋಳಿಗೆ, ಕಾಯಿಹಾಲು, ನಿಂಬೆಹಣ್ಣಿನ ಚಿತ್ರಾನ್ನ, ಪಲ್ಯ, ಹೋಳಿಗೆ ಸಾರು, ನೆನಪಾದ್ರೆ ಬಾಯಲ್ಲಿ ನೀರೂರುತ್ತೆ, ಜೊತೆಗೆ ಕಣ್ಣಲ್ಲೂ ಕೂಡ. ಯಾಕಂದ್ರೆ ಹಬ್ಬದ ದಿನ ನನ್ನ ಪಾಲಿಗೆ ಆಫೀಸೇ ಗತಿ. ಗಣೇಶನ ಹಬ್ಬದಂದು ಚಿಕ್ಕವರಿದ್ದಾಗ ಬಟ್ಟಲಲ್ಲಿ ಅಕ್ಷತೆ ತೆಗೆದುಕೊಂಡು ಮನೆ ಮನೆಗಳಿಗೂ ಹೋಗಿ ನಿಮ್ ಮನೇಲಿ ಗಣಪತಿ ಇಟ್ಟಿದ್ದೀರಾ? ‘ ಅಂತ ಕೇಳಿ ಕೇಳಿ ಅಕ್ಷತೆ ಹಾಕಿ ಬರ್ತಿದ್ವಿ. ಆದ್ರೆ ಮನೆ ಬದಲಾಯಿಸಿ ಹೊಸ ಏರಿಯಾಗೆ ಬಂದ್ಮೇಲೆ ಈ ಕೆಲಸಕ್ಕೆ ಪೂರ್ಣ ವಿರಾಮ ಬಿತ್ತು. ಗಣೇಶ ಚತುರ್ಥಿಯಂದು ನಾನು ನಮ್ಮ ಮನೆ ಮುಂದೆ ಪ್ರತಿವರ್ಷವೂ ಭಿನ್ನ ಭಿನ್ನ ಮಾದರಿಯ ಗಜಮುಖನನ್ನು ರಂಗೋಲಿಯಲ್ಲಿ ಬಿಡಿಸುತ್ತಿದ್ದುದು ನೆನಪು. ಗಣೇಶನ ಹೆಸರಲ್ಲಿ ರುಚಿಯಾದ ಕಾಯಿ ಕಡುಬು, ಪಾಯಸ ಚಪ್ಪರಿಸದ್ದಂತೂ ಮರೆಯೋ ಹಾಗೇ ಇಲ್ಲ. ಇನ್ನು ನಾವಂತೂ ಕಾತರದಿಂದ ಕಾಯ್ತಿದ್ದದ್ದು ಸಂಜೆಗೆ. ಸಂಜೆ ನಮ್ಮೆಲ್ಲರ ಮನೆಗಳಿಗೆ ಬಂದು ಚಂದಾ ಕೇಳ್ತಿದ್ದ ಹುಡುಗರೆಲ್ಲಾ ಸಖತ್ ಗ್ರಾಂಡ್ ಆಗಿ ಗಣೇಶನನ್ನು ಕೂರಿಸಿ 3 ದಿನ ವೈಭವಯುತ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು. ಮಾರುತಿ ಯುವಕರ ಸಂಘ ಅಂದ್ರೆ ನಮ್ಮ ಏರಿಯಾದಲ್ಲಿ ಫೇಮಸ್ಸು. ಚಂದಾ ಪಡೆದು ಎಲ್ಲಿ ಗಣೇಶನನ್ನು ಕೂರಿಸ್ತಿದ್ದೀವಿ ಅಂತ ಹೇಳದೇ ಮಾಯವಾಗ್ತಿದ್ದ ಹುಡುಗರಂತಲ್ಲ ಅವ್ರೆಲ್ಲಾ. ಹಿರಿಯರು ಕಿರಿಯರಿಗೆಲ್ಲಾ ವಿಭಿನ್ನವಾದ ಸ್ಪರ್ಧೆಗಳನ್ನು ಆಯೋಜಿಸಿ ಮೆಚ್ಚುಗೆ ಪಡೆಯುತ್ತಿದ್ರು. ಒಂದಿನ ಮುಂಚೆಯೇ ಬಂದು ಪಾಂಪ್ಲೆಟ್ ಗಳನ್ನು ಹಂಚಿ ಹೋಗ್ತಿದ್ರು. ನಾವು ಯಾವ್ಯಾವ ಕಾಂಪಿಟೇಷನ್ ಗಳಲ್ಲಿ ಭಾಗವಹಿಸೋದು ಅಂತ ಸ್ಕೆಚ್ ಹಾಕ್ತಾ ಕೂರ್ತಿದ್ವಿ. ಪ್ರತಿ ವರ್ಷ ರಂಗೋಲಿ ಕಾಂಪಿಟೇಶನ್ ನಲ್ಲಿ ನನಗೊಂದು ಬಹುಮಾನ ಗ್ಯಾರಂಟಿ. ಇನ್ನು ಹಾಡು, ನೃತ್ಯ, pick n speak ಅಂತೆಲ್ಲಾ ಬೇರೆ ಬೇರೆ ವಿಭಾಗಗಳಲ್ಲೂ ಬಹುಮಾನಗಳು ಬರ್ತಿದ್ವು. ಮೊದಲ ವರ್ಷವಂತೂ ನನ್ನದೂ ತಂಗಿಯದ್ದೂ ಸೇರಿ 8 ಬಹುಮಾನಗಳು ಬಂದಿದ್ದವು. ನನ್ನದೇ 5 ಇದ್ದವು. ಎಲ್ಲರದ್ದೂ ಒಂದೇ ಕಂಪ್ಲೇಂಟು. ನಾವೂ ಚಂದಾ ಕೊಟ್ಟಿರ್ಲಿಲ್ವಾ ನಮ್ಮ ಮಕ್ಕಳಿಗೂ ಪ್ರೈಜ್ ಕೊಡಿ ಅಂತ. ಕಡೆಗೆ ಬರುವ ವರ್ಷದಿಂದ ಒಬ್ಬರಿಗೆ ಮ್ಯಾಕ್ಸಿಮಮ್ ಮೂರೇ ಬಹುಮಾನಗಳು ಅಂತ ಕಾನೂನು ಜಾರಿಯಾಯ್ತು!

ಗಣೇಶನನ್ನು ಬಿಡುವ ಕೊನೆಯ ದಿನವಂತೂ ಇಡೀ ಏರಿಯಾದಲ್ಲಿ ಮೆರವಣಿಗೆ ಮಾಡ್ತಿದ್ದದನ್ನು ನೋಡೋಕೆ ಕಾದು ನಿಲ್ತಿದ್ವಿ. ಪಟಾಕಿ, ಸಿಡಿಮದ್ದುಗಳನ್ನು ಸಿಡಿಸಿ ಗಣೇಶನನ್ನು ಹೂವುಗಳಿಂದ ಅಲಂಕರಿಸಿ ಜಯಘೋಷಗಳೊಂದಿಗೆ ಮೆರವಣಿಗೆ ಮಾಡ್ತಿದ್ರು. ನಾವು ಶಾಲೆಗೆ ಹೋಗಿ ನಿಮ್ ಏರಿಯಾದಲ್ಲಿ ಎಷ್ಟ್ ದೊಡ್ಡ ಗಣಪತಿ ಕೂರ್ಸಿದ್ರು ಅಂತ ಕೇಳಿಕೊಂಡು ಕಡೆಗೆ ನಮ್ಮ ಏರಿಯಾದೇ ದೊಡ್ದು ಅಂತ ಸಾಬೀತು ಮಾಡಿಕೊಳ್ತಿದ್ವಿ! ಈಗ ಈ ನೆನಪುಗಳನ್ನೆಲ್ಲಾ ಆ ದಿನಗಳು ಪ್ರತಿಕ್ಷಣ ನನ್ನ ಒಳಗೆ, ಹಸಿರಾಗಿದೆ.... ಅಂತ ಮೆಲುಕು ಹಾಕಬೇಕು ಅಷ್ಟೇ. ಆಫೀಸಿನಲ್ಲಿ ಹಬ್ಬದ ದಿನ ಅಂತ ಸೀರೆಯುಟ್ಟು ಕೈತುಂಬಾ ಬಳೆ ತೊಟ್ಟು ಸಂಭ್ರಮಿಸಿದ್ರೆ ಅಲ್ಲಿಗೆ ಹಬ್ಬ ಮುಗೀತು. ಮನೆಯಿಂದ as usual ಒಂದು ಫೋನ್ ಕಾಲ್ ಬರುತ್ತೆ. ನಿನ್ನನ್ನ ಮಿಸ್ ಮಾಡ್ಕೊತಿದೀವಿ ಅಂತಾರೆ. ಏನೇನು ಅಡಿಗೆ ಅಂತ ಹೇಳಿ ಒಂದಷ್ಟು ಹೊಟ್ಟೆ ಉರಿಸಿ ಫೋನ್ ಇಟ್ರೆ, ಇಲ್ಲಿ ನನ್ನ ಸಂಕಟ ಅವರಿಗೆಲ್ಲಿ ಅರ್ಥವಾಗ್ಬೇಕು?

ಗಣೇಶನ ಹಬ್ಬದ ಹಿಂದಿನ ರಾತ್ರಿ ಕುಳಿತು ಈ ಎಲ್ಲಾ ನೆನಪುಗಳ ಬುತ್ತಿಯನ್ನು ಬಿಚ್ಚಿಡುತ್ತ ಈ ಲೇಖನವನ್ನು ಬರಿತಿದ್ದೀನಿ. ವಾಹ್ ಹಬ್ಬಗಳಂದ್ರೆ ಎಷ್ಟು ಚೆನ್ನ ಅಲ್ವಾ? ನನ್ನ ಪಿಜಿ ಹಿಂದಿನ ರಸ್ತೆಯೇ ಸಣ್ಣ ಮಾರ್ಕೆಟ್ ಆಗ್ಬಿಟ್ಟಿದೆ. ಬಣ್ಣ ಬಣ್ಣದ ಗಣೇಶನ ಮೂರ್ತಿಗಳು ರಸ್ತೆ ತುಂಬಾ ತುಂಬಿ ಹೋಗಿವೆ. ಅಲ್ಲಿ ಕಾಲಿಟ್ರೆ ಹೂಗಳ ಘಮ ಮನಸ್ಸಿಗೆ ಆಹ್ಲಾದ ನೀಡುತ್ತೆ. ನೂರು ರೂಪಾಯಿ ಗಡಿದಾಟಿರೋ ಹೂಮಾಲೆಗಳು ನಮ್ಮೂರಲ್ಲಿ ಎಷ್ಟು ಕಮ್ಮಿ ಅಲ್ವಾ ಅನ್ಸುತ್ತೆ. ಹಸಿರು ತೋರಣಕ್ಕಿಟ್ಟ ಮಾವಿನ ಎಲೆಗಳು ಮನೆಯಲ್ಲಿ ಅಪ್ಪ ತೋರಣ ಕಟ್ಟುವ ದೃಶ್ಯ ಕಣ್ಮುಂದೆ ತರಿಸುತ್ತವೆ. ಎಲ್ಲಾ ನೆನಪಾದ್ರೆ ಕಣ್ಣಂಚಲ್ಲೊಮ್ಮೆ ನೀರಾಡುವಂತೆ ಮಾಡಿಬಿಡ್ತವೆ. ಅದೇ ನಮ್ಮ ಮನೆಯ ಹಬ್ಬದ ಸೊಬಗಿನಲ್ಲಿರೋ ಸಂಭ್ರಮ ಕಣ್ರೀ. ಯಾರ್ಯಾರು ಗೌರಿ ಗಣೇಶ ಹಬ್ಬವನ್ನು ಮನೆಯಲ್ಲಿ ಕುಟುಂಬದೊಂದಿಗೆ ಆಚರಿಸಿದ್ರೋ ನೀವೇ ಅದೃಷ್ಟವಂತರು ಬಿಡಿ. ನನ್ನ ಅದೃಷ್ಟಕ್ಕೆ ನಮ್ಮ ಪಿಜಿಯಲ್ಲಿ ಕಡೇಪಕ್ಷ ಊಟಕ್ಕೆ ಹೋಳಿಗೆ ಮಾಡಿದ್ರೆ ಹೆಚ್ಚು. ಇಲ್ದಿದ್ರೆ ಇದ್ದೇ ಇದ್ಯಲ್ಲಾ? ಊರಿಂದ ಬರೋವಾಗ ನನ್ನ ಗೆಳತಿ ಅನುಷಾಳ ಅಮ್ಮ ಮರೆಯದೇ ನನಗೋಸ್ಕರ ಸಿಹಿತಿಂಡಿ ಮರೆಯದೇ ಕಳಿಸಿರ್ತಾರೆ. ಅದನ್ನೇ ಚಪ್ಪರಿಸೋದು.

ಬೆನಕ ಬೆನಕ ಏಕದಂತ, ಪಚ್ಚೆ ಕಲ್ಲು ಪಾಣಿ ಮೆಟ್ಲು, ಮುತ್ತಿನುಂಡೆ ಹೊನ್ನಗಂಟೆ ಒಪ್ಪುವ, ಗುಡ್ಡಬೆಟ್ಟದಲ್ಲಿ ತಂಬಿಟ್ಟು ಮುಕ್ಕುವ ಪುಟ್ಟ ವಿಘ್ನೇಶ ದೇವನಿಗೆ 21 ನಮಸ್ಕಾರಗಳನ್ನು ಅರ್ಪಿಸುತ್ತಾ ನನ್ನ ಗಣೇಶನ ಹಬ್ಬದ ನೆನಪಿನ ಬುತ್ತಿಯನ್ನು ಪೂರ್ಣಗೊಳಿಸುತ್ತಿದ್ದೇನೆ. ಗಣೇಶ ನಿಮಗೆ ಶುಭವನ್ನೇ ಮಾಡಲಿ ಅಂತ ಹಾರೈಸುತ್ತೇನೆ.

ವೀಕೆಂಡ್ ಮಸ್ತಿ...

ವೀಕೆಂಡ್ ಮಸ್ತಿಯ ಅಸಲಿತನ ಗೊತ್ತಾಗಬೇಕಂದ್ರೆ ಬೆಂಗಳೂರಿಗೇ ಬರ್ಬೇಕು. ವಾರಾಂತ್ಯ ಆರಂಭವಾಗುವ ಮುನ್ನವೇ ಅದನ್ನು ಹೇಗೆ ಕಳೆಯಬೇಕೆಂದು ಪ್ಲಾನ್ ಮಾಡುವ ನೂರಾರು ಜನ ಇಲ್ಲಿದ್ದಾರೆ. ಅದರಲ್ಲೂ ವಾರವಿಡೀ ಪರರಾಷ್ಟ್ರಗಳಿಗಾಗಿ ಬೆವರು ಹರಿಸುವ ಐಟಿ ಉದ್ಯೋಗಿಗಳೇ ಹೆಚ್ಚು. ಹಾಗಾಗಿ ಇವರ ದೃಷ್ಟಿಯಲ್ಲಿ ಶನಿವಾರ ಮತ್ತು ಭಾನುವಾರಗಳಿಗೆ ಇನ್ನಿಲ್ಲದ ಮಹತ್ವ. ಇನ್ನು ಇತರೆ ಜನರೂ ಇದರಿಂದ ಹೊರತಲ್ಲ. ವಿಶೇಷವಾಗಿ ಬೆಂಗಳೂರಿನ ಎಂ.ಜಿ ರಸ್ತೆ, ಬ್ರಿಗೇಡ್ ಮತ್ತು ಕಮರ್ಷಿಯಲ್ ರಸ್ತೆಗಳು ವೀಕೆಂಡ್ ಸಂಭ್ರಮಕ್ಕೆ ಕೈಬೀಸಿ ಕರೆ ನೀಡುತ್ತವೆ. ನನಗೆ ಬೆಂಗಳೂರಿನ ವೀಕೆಂಡ್ ಪ್ರಪಂಚ ಮೊದಮೊದಲು ಇದೇನಪ್ಪಾ ಹೀಗೆ ಅನ್ನಿಸುತ್ತಿದ್ದಾದ್ರೂ ಈಗ ಮಾಮೂಲು ಅನ್ನಿಸಿಬಿಟ್ಟಿದೆ. ಆದ್ರೆ ಮುಂಚಿನಂತೆ ಪ್ರತಿ ವಾರಾಂತ್ಯದಲ್ಲೂ ಬೆಂಗಳೂರು ಅಲೆಯುವ ಭಾಗ್ಯ ನನಗಿಲ್ಲ. ನಮ್ಮ ಕಚೇರಿಯ ಅವಧಿ ಬೇರೆ ರೀತಿ ಇರುತ್ತಾದ್ದರಿಂದ ನಾನು ಸಾಮಾನ್ಯವಾಗಿ ಭಾನುವಾರ ಮತ್ತು ಶನಿವಾರಗಳಂದೂ ವಾರದ ದಿನದಂತೆ ಕೆಲಸ ಮಾಡಬೇಕಿರುತ್ತದೆ. ಆದ್ರೆ ರಾತ್ರಿ ಪಾಳಿ ಮಾಡಿಬಿಟ್ಟರೆ ವಾರಾಂತ್ಯದಲ್ಲಿ ರಜೆ ಖಾಯಂ.

ಈಸಲವೂ ಅಷ್ಟೇ ಅದೆಷ್ಟೋ ದಿನಗಳ ನಂತರ ನನಗೆ ಭಾನುವಾರ ರಜೆಯಿತ್ತು. ನನ್ನ ರೂಂ ಮೇಟ್ ಅನುಷಾ ಕೂಡ ಅಂದು ಆರಾಮಾಗಿದ್ದಳು. ಮನೆಗೆ ಅನುಷಾಳ ಲ್ಯಾಪ್ ಟಾಪ್ ಬಂದ ಮೇಲಂತೂ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ ಬಹಳ ದಿನಗಳಾಗಿದ್ದವು. ಸರಿ ಇಬ್ರೂ ಸೇರಿ ಕೆಲ ವಾರಗಳ ಹಿಂದಷ್ಟೇ ತೆರೆಕಂಡಿದ್ದ ಹ್ಯಾರಿ ಪಾಟರ್ ಅಂಡ್ ದ ಹಾಫ್ ಬ್ಲಡ್ ಪ್ರಿನ್ಸ್ನೋಡೋಣ ಅಂತಂದುಕೊಂಡ್ವಿ. ಮೊದಲು ಇದ್ದದ್ದರಲ್ಲಿ ಸ್ವಲ್ಪ ಹತ್ತಿರವಿದ್ದ ಪಿವಿಅರ್ ಮಲ್ಟಿಪ್ಲೆಕ್ಸ್ ಗೆ ಹೋದ್ರೆ ಅಲ್ಲಿ ಬೇಕಂದ್ರೂ ಒಂದೇ ಒಂದು ಟಿಕೇಟು ಬಾಕಿಯಿರಲಿಲ್ಲ. ನಾವೆಷ್ಟು ಎಕ್ಸೈಟ್ ಆಗಿದ್ವಿ ಅಂದ್ರೆ ಇವತ್ತು ಹ್ಯಾರಿ ಪಾಟರ್ ನೋಡೇಬಿಟ್ವಿ ಅಂದ್ಕೊಂಡು ಬಂದವ್ರಿಗೆ ಆದ ನಿರಾಶೆ ಅಷ್ಟಿಷ್ಟಲ್ಲ. ಮತ್ಯಾವ್ಯಾವ ಥಿಯೇಟರ್ ಗಳಲ್ಲಿ ಸಿನಿಮಾ ಇದೆ ಅನ್ನೋದೂ ಗೊತ್ತಿಲ್ಲ. ಸ್ನೇಹಿತರಿಗೆ ಫೋನಾಯಿಸಿ ವಿಚಾರಿಸಿದಾಗ ಜಯನಗರದ ಗರುಡಾ ಸ್ವಾಗತ್ ನಲ್ಲಿ 2.30ಕ್ಕೆ ಶೋ ಇದೆ ಅಂತ ತಿಳಿಯಿತು. ತಕ್ಷಣ ಅತ್ತ ದೌಡಾಯಿಸಿದ್ವಿ. ಅಲ್ಲಿ ನಾನು ಗಾಡಿ ಪಾರ್ಕ್ ಮಾಡಿಬರೋವಷ್ಟರಲ್ಲಿ ಟಿಕೇಟ್ ತಗೊಂಡ್ರೆ ಸರಿ, ಅಲ್ಲೂ ಸೋಲ್ಡ್ ಔಟ್ ಆದ್ರೆ ಕಷ್ಟ ಅಂತ ಅನುಷಾ ನನ್ನನ್ನು ಬಿಟ್ಟು ಟಿಕೇಟ್ ಕೌಂಟರ್ ತಲುಪಿದ್ಲು. ಆದ್ರೆ ಪಾಪಿ ಸಮುದ್ರಕ್ಕೆ ಹೋದ್ರೂ ಮೊಳಕಾಲಷ್ಟು ನೀರು ಅನ್ನೋ ಹಾಗೆ ಅಲ್ಲಿ 2.30ಕ್ಕೆ ಹ್ಯಾರಿ ಪಾಟರ್ ನ ಯಾವ್ದೇ ಶೋ ಇರ್ಲಿಲ್ಲ. ಮಾಹಿತಿ ಕೊಟ್ಟ ಪುಣ್ಯಾತ್ಮನಿಗೆ ಫೋನ್ ಮಾಡಿ ಬಾಯಿ ತುಂಬಾ ಬೈಗುಳ ಕೊಟ್ಟಿದ್ದೂ ಆಯ್ತು. ಪಾಪ! ಬೆಂಗಳೂರು ಟೈಮ್ಸ್ ನವರು ಮುದ್ರಿಸಿದ ತಪ್ಪು ಮಾಹಿತಿಗದೆ ಅವರೇನು ತಾನೇ ಮಾಡಿಯಾರು?

ಈಗಾಗ್ಲೇ ಎರಡು ಥಿಯೇಟರ್ ಗಳಿಗೆ ಅಲೆದು ಸಾಕಾಗಿತ್ತು. ಕಡೆಯದಾಗಿ ಫೇಮ್ ಲಿಡೋ ನಲ್ಲಿ 3.30ರ ಶೋ ಇದೆ ಅಂತ ಗೊತ್ತಾಯ್ತು. ಕಡೆಯದಾಗಿ ಅಲ್ಲಿ ಚೆಕ್ ಮಾಡೋಣ ಅಂತ ದೇವರ ಜಪ ಮಾಡುತ್ತಲೇ ಅಲ್ಲಿ ಹೋದ್ವಿ. ನಿಜ ಹೇಳಬೇಕಂದ್ರೆ ಅವತ್ತು ಬೇರೆ ಕೌಂಟರ್ ಗಳಲ್ಲಿ ಟಿಕೇಟ್ ಖರೀದಿ ಮಾಡುತ್ತಿದ್ದವರೆಲ್ಲಾ ಹ್ಯಾರಿ ಪಾಟರ್ ಗಾಗೇ ನಿಂತಂತೆ ನಮಗನ್ನಿಸ್ತಿತ್ತು. ದೇವರೇ ಇಲ್ಲೂ ನಿರಾಸೆ ಮಾಡಬೇಡಪ್ಪಾ ಅಂತ ಬೇಡಿಕೊಂಡೇ ನಮ್ಮ ಸರದಿಗಾಗಿ ಕಾದ್ವಿ. ಅಲ್ಲೋ ನಮ್ಮ ಮುಂದೆ ನಿಂತಿದ್ದ ಹುಡುಗಿಯೂ ಅದೇ ಸಿನಿಮಾಗೆ ಟಿಕೇಟ್ ಖರೀದಿಸುತ್ತಿದ್ದಳೇನೋ, ಸೀಟಿಂಗ್ ವ್ಯವಸ್ಥೆ ಹೊಂದಿಕೆಯಾಗದೇ ಮುಖ ಬಾಡಿಸಿಕೊಂಡು ಹೋದ್ಳು. ಸರಿ ನಾವು ವಿಚಾರಿಸಿದಾಗ 3.30ರ ಶೋಗೂ ಎಳ್ಳುನೀರು ಬಿಡಬೇಕಾಯ್ತು. ಬಾಕಿಯಿದ್ದದ್ದು 6.15ರ ಶೋ. ಅದರಲ್ಲಿ ಮಿಕ್ಕಿದ್ದು ಕೇವಲ ನಾಲ್ಕೇ ಸೀಟುಗಳು. ಅವೂ ನಾಲ್ಕೂ ಒಂದೊಂದು ದಿಕ್ಕಿಗೆ! ವಿಧಿಬರಹ ಘೋರವಾದ್ರೂ ಇಲ್ಲಿ ಪರವಾಗಿಲ್ಲ ಅನ್ನಿಸ್ತು. ಮೊದಲ ಸಾಲಿನಲ್ಲಿ ಎಡ ಮತ್ತು ಬಲಭಾಗದ ಕೊನೆಗಿದ್ದ 2 ಟಿಕೇಟುಗಳೇ ಬೆಸ್ಟು ಅನ್ನಿಸಿ ಖರೀದಿ ಮಾಡಿದ್ವಿ. Atleast ಪಕ್ಕ ಕುಳಿತವರನ್ನು ಜರುಗಲು ಹೇಳಿ adjudst ಮಾಡಿಕೊಳ್ಳಬಹುದೆಂದು ಯೋಚಿಸಿದ್ವಿ.

ಆದ್ರೆ ಶೋ ಇದ್ದದ್ದು ಸಂಜೆ 6.15ಕ್ಕೆ. ಅಲ್ಲಿ ತನಕ ಏನು ಮಾಡೋದು? ಸರಿ ಅಲ್ಲೇ ಸ್ವಲ್ಪ ದೂರದಲ್ಲಿದ್ದ ಸೆಂಟ್ರಲ್ ನತ್ತ ಹೋದ್ವಿ. ಅಲ್ಲಿ ಫುಲ್ ಫ್ರೆಂಡ್ ಶಿಪ್ ಡೇ ಫೀವರ್. ಹರೆಯದ ಹೃದಯಗಳು ಗೆಳೆಯರ ಬಳಗದೊಂದಿಗೆ ಸಂಭ್ರಮಿಸುತ್ತಿದ್ದವು. ಸಾಲದಕ್ಕೆ ಮಾಲ್ ನಲ್ಲಿ ಸಖತ್ ಆಫರ್ ಗಳು ಬೇರೆ. ಇತ್ತ ನಮ್ಮ ಹೊಟ್ಟೆ ಚುರುಗುಟ್ಟಲು ಶುರುಮಾಡಿ ಅದ್ಯಾವುದೋ ಕಾಲವಾಗಿತ್ತು. ಮಾಲ್ ಒಳಗಿದ್ದ ಭರ್ಜರಿ ಫುಡ್ ಕೋರ್ಟ್ ನಲ್ಲಿ ನಮ್ಮ ಹೊಟ್ಟೆಗೆ ಇಷ್ಟದ ತಿಂಡಿಗಳ್ಯಾವೂ ಕಾಣಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅಲ್ಲಿದ್ದ ಕ್ಯೂ ನೋಡಿದ್ರೆ ಕಾಯುವಷ್ಟು ತಾಳ್ಮೆ ನಮಗಿರ್ಲಿಲ್ಲ. ಸರಿ ಮಾಲ್ ಹೊರಗಿದ್ದ ಕ್ಯಾಂಟಿನ್ ಗಳತ್ತ ಬಂದ್ವಿ. ಅಲ್ಲಿ ತಿಂದ ಬಿಸಿಬಿಸಿ ಜಿಲೇಬಿ, ಆಹ್! ನಿಜಾರೀ ಸಖತ್ತಾಗಿತ್ತು. ಬೆಲೆ ಕೊಂಚ ಜಾಸ್ತಿ. ಒಂದ್ ಪ್ಲೇಟ್ ಗೆ ಬರೀ 25ರೂ! ಆದ್ರೆ ರುಚಿ ಮಾತ್ರ ಸೂಪರ್. ಆಗ ತಾನೇ ಸಕ್ಕರೆ ಪಾಕದಿಂದ ಅದ್ದಿ ತೆಗೆದ ಜಿಲೇಬಿಯನ್ನು ಕುರುಕುರು ಅಂತ ಕ್ಷಣಮಾತ್ರದಲ್ಲಿ ಗುಳುಂ ಮಾಡಬಹುದು. ಊಟ ಮುಗಿಸಿ ಅಲ್ಲೇ ನಡೆಸುತ್ತಿದ್ದ ಗೇಮ್ ನೋಡ್ತಾ ನಿಂತಿದ್ವಿ. ಫ್ರೆಂಡ್ ಶಿಪ್ ಡೇ ಆದ್ದರಿಂದ ಇಬ್ಬರು ಫ್ರೆಂಡ್ಸ್ ಒಬ್ಬರಿಗೊಬ್ರು ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟುವ ಆಟ ಆಡಿಸ್ತಿದ್ರು. ಸಮೀಪದಲ್ಲೇ ನಿಂತಿದ್ದ ನಮ್ಮನ್ನೂ ಭಾಗವಹಿಸಲು ನಿರೂಪಕ ಆಹ್ವಾನಿಸಿದ. ಸರಿ, ಅನು ಒಲ್ಲೇ ಅನ್ನುತ್ತಲೇ ಬಂದ್ಲು. 30 ಸೆಕಂಡುಗಳಲ್ಲಿ ಎರಡೆರಡು ಬ್ಯಾಂಡ್ ಕಟ್ಟುವಷ್ಟಕ್ಕೇ ತೃಪ್ತಿಪಟ್ವಿ.

ಇನ್ನೇನು ಸಿನಿಮಾಗೆ ಸಮಯವಾಯ್ತು ಅಂತ ಲಿಡೋ ಮಾಲ್ ನತ್ತ ಹೆಜ್ಜೆ ಹಾಕಿದ್ವಿ. ಸಿನಿಮಾ ಆರಂಭವಾದ್ರೂ ಅನುಷಾಗೆ ಚಡಪಡಿಕೆ. ಯಾಕಂದ್ರೆ ನಮ್ಮ ಸಾಲಿನಲ್ಲಿ ಇನ್ನೆರಡು ಸೀಟುಗಳು ಖಾಲಿ ಇದ್ವು. ಅದೂ ಎಲ್ಲೆಲ್ಲೋ ಮಧ್ಯದಲ್ಲಿ. ಆ ಸೀಟಿಗೆ ಬರಬೇಕಿದ್ದವರು ನಾಪತ್ತೆ. ಮಿಕ್ಕ ಆ ಎರಡು ಸೀಟಿನವರು ಕನ್ಫ್ಯೂಸ್ ಆದ್ರೆ ಅಂತ ಅನ್ಕೊಳ್ಳೋವಷ್ಟರಲ್ಲೇ ಅವರ ಆಗಮನವೂ ಆಯ್ತು. ಸರಿ ಕುಳಿತಿದ್ದವರಿಗೆಲ್ಲಾ ಸ್ವಲ್ಪ ಪಕ್ಕದ ಸೀಟಿಗೆ ಜರುಗಲು ರಿಕ್ವೆಸ್ಟ್ ಮಾಡಿ ಅಂತೂ ಇಂತೂ ನೆಮ್ಮದಿಯಾಗಿ ಸಿನಿಮಾ ನೋಡಲು ಕೂತ್ವಿ. ಹ್ಯಾರಿ ಪಾಟರ್ ಸಿನಿಮಾಗಳು ಒಂದಕ್ಕೊಂದು ಮುಂದುವರಿಕೆ ಇರುತ್ತವಾದ್ದರಿಂದ ನಾವು ನೋಡಿದ ಭಾಗ ತೀರಾ ಕೌತುಕವಲ್ಲದ್ದಿದ್ರೂ ಮುಂದಿನ ಸಿನಿಮಾಗೆ ಲಿಂಕ್ ಕೊಡುವಂತಿತ್ತು. ಹೇಗೋ ವೀಕೆಂಡ್ ನಲ್ಲಿ ಹರಸಾಹಸ ಮಾಡಿ ಒಂದು ಸಿನಿಮಾ ನೋಡೋಹಾಗಾಯ್ತು. ಇಡೀ ದಿನ ಪಟ್ಟ ಅವಸ್ಥೆಗಳನ್ನು ಮೆಲುಕು ಹಾಕುತ್ತಾ ಇಬ್ರೂ ಮನೆ ಸೇರಿದ್ವಿ.